ಕಾರವಾರ: ಮರಳು ರಾಶಿ ಸಂಗ್ರಹವಾಗಿ ಹಿಂದಕ್ಕೆ ಸರಿದ ಸಮುದ್ರ
ಕಾರವಾರ, ಅಕ್ಟೋಬರ್ 27: ಕಾರವಾರ ನಗರದ ಕೋಡಿಭಾಗ ಸಮೀಪದ ಸಮುದ್ರ ಹಾಗೂ ಕಾಳಿ ನದಿ ಸಂಗಮಿಸುವ ಪ್ರದೇಶದ ಬಳಿ ಹೆಚ್ಚು ಪ್ರಮಾಣದಲ್ಲಿ ಮರಳು ಸಂಗ್ರಹವಾಗಿದ್ದು, ಇದರಿಂದ ತೀರ ಪ್ರದೇಶ ಹೆಚ್ಚಾಗಿ ಸಮುದ್ರ ಹಿಂದಕ್ಕೆ ಸರಿದಂತಾಗಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ವರ್ಷದಂತೆ ಈ ವರ್ಷವೂ ಭಾರಿ ಮಳೆಯಾಗಿದ್ದು, ಬಹುತೇಕ ನದಿಗಳು ಉಕ್ಕಿ ಹರಿದ ಪರಿಣಾಮ ಕೆಲವೆಡೆ ಪ್ರವಾಹದ ಪರಿಸ್ಥಿತಿ ಕೂಡ ನಿರ್ಮಾಣವಾಗಿತ್ತು. ಕಾರವಾರದಲ್ಲಿಯೂ ಘಟ್ಟದ ಮೇಲ್ಭಾಗದಿಂದ ಹರಿದು ಬರುವ ಕಾಳಿ ನದಿಗೆ ಹೆಚ್ಚು ನೀರು ಹರಿದು ಬಂದ ಪರಿಣಾಮ ತಗ್ಗು ಪ್ರದೇಶಗಳು ಮುಳುಗಡೆಯಾಗಿ ನೆರೆಹಾವಳಿ ಸೃಷ್ಟಿಯಾಗಿತ್ತು. ಇನ್ನು ಸಮುದ್ರದ ದಡದಲ್ಲಿ ಈ ಪ್ರಮಾಣದಲ್ಲಿ ಮರಳು ಸಂಗ್ರಹವಾಗಿರುವುದರಿಂದ ನದಿ ಸಂಗಮ ಪ್ರದೇಶ ಕಿರಿದಾಗುತ್ತಾ ಸಾಗಿದೆ.
ಕಾರವಾರ; ಅಪರೂಪಕ್ಕೆ ಬಲೆಗೆ ಬಿದ್ದ ರಾಶಿ ರಾಶಿ ಮೀನುಗಳು
ಒಂದು ಕಿಲೋ ಮೀಟರ್ನಷ್ಟು ಹಿಂದೆ ಸರಿದಿದೆ
ಸದ್ಯ ಮಳೆ ಕಡಿಮೆಯಾಗಿದ್ದು, ಮಳೆಗಾಲದ ಆರಂಭದಿಂದಲೂ ಭಾರಿ ಮಳೆಯಾದ ಕಾರಣ, ಕಾಳಿ ನದಿ ತುಂಬಿ ಹರಿಯುತ್ತಲೇ ಇದೆ. ಪರಿಣಾಮ ನದಿಯ ಹರಿವಿನೊಂದಿಗೆ ಭಾರೀ ಪ್ರಮಾಣದಲ್ಲಿ ಮರಳು ಹರಿದು ಬಂದು ಅಲೆಗಳ ಅಬ್ಬರದಿಂದ ಸಮುದ್ರ ತೀರದಲ್ಲಿ ರಾಶಿಯಾಗ ತೊಡಗಿದೆ. ಇದರಿಂದಾಗಿ ಸಮುದ್ರ ಸೇರುವ ಕಾಳಿ ಸಂಗಮ ಪ್ರದೇಶದಲ್ಲಿ ಕಡಲತೀರ ಒಂದು ಕಿಲೋ ಮೀಟರ್ನಷ್ಟು ಹಿಂದೆ ಸರಿದಿದೆ.
ಸ್ಥಳೀಯರು ಆತಂಕಗೊಂಡಿದ್ದಾರೆ
ನದಿ ಪಾತ್ರದುದ್ದಕ್ಕೂ ಸಾಕಷ್ಟು ಮಂದಿ ಮೀನುಗಾರರು ಮೀನುಗಾರಿಕೆಯನ್ನು ನಡೆಸಿಕೊಂಡು ಜೀವನ ಸಾಗಿಸುತ್ತಿದ್ದು, ಸಂಗಮದ ಮಾರ್ಗದಿಂದ ತಮ್ಮ ದೋಣಿಗಳನ್ನು ಕೊಂಡೊಯ್ಯುತ್ತಿದ್ದರು. ಆದರೆ ಇದೀಗ ಸಂಗಮ ಕಿರಿದಾದ ಹಿನ್ನಲೆ ದೋಣಿಗಳ ಸಂಚಾರಕ್ಕೆ ಅಡ್ಡಿಯುಂಟಾಗಿದೆ. ಇದು ಹೀಗೆ ಮುಂದುವರೆದಲ್ಲಿ ನದಿ ಹರಿವಿನ ಮಾರ್ಗ ಕಿರಿದಾಗಿ ದೋಣಿ ಸಂಚರಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ನದಿಯ ಹರಿವಿನೊಂದಿಗೆ ಮರಳು ಕೊಚ್ಚಿಕೊಂಡು ಬರುತ್ತಿದೆ
ಇನ್ನು ಕಳೆದೆರಡು ವರ್ಷಗಳಿಂದ ಕಾಳಿ ನದಿಯನ್ನು ಪರಿಸರ ಸೂಕ್ಷ್ಮ ವಲಯವನ್ನಾಗಿ ಘೋಷಿಸಿದ ಪರಿಣಾಮ, ಮರಳುಗಾರಿಕೆಗೆ ನಿಷೇಧ ಹೇರಲಾಗಿತ್ತು. ಇದರಿಂದ ಮರಳಿನ ದಿಬ್ಬಗಳು ಹೆಚ್ಚಿದ್ದು, ಇದೀಗ ಧಾರಾಕಾರವಾಗಿ ಸುರಿದ ಮಳೆಗೆ ನದಿಯ ಹರಿವಿನೊಂದಿಗೆ ಮರಳು ಕೊಚ್ಚಿಕೊಂಡು ಬರುತ್ತಿದೆ ಎನ್ನುವುದು ಕಡಲ ಜೀವವಿಜ್ಞಾನ ಕೇಂದ್ರದ ಮುಖ್ಯಸ್ಥ ಜಗನ್ನಾಥ ರಾಠೋಡ್ ಅಭಿಪ್ರಾಯವಾಗಿದೆ.
Recommended Video
ಮರಳುಗಾರಿಕೆಗೆ ಅವಕಾಶ ನೀಡಿ
ಇನ್ನು ಇದೇ ರೀತಿ ಭಟ್ಕಳ ಹಾಗೂ ಹೊನ್ನಾವರದ ಅಳಿವೆ ಪ್ರದೇಶದಲ್ಲಿ ಮರಳು ರಾಶಿಯಾದ ಪರಿಣಾಮ, ಬೋಟ್ ಅವಘಡಗಳ ಸಂಖ್ಯೆ ಹೆಚ್ಚುತ್ತಿವೆ. ಹೀಗಾಗಿ ಇಲ್ಲಿ ಸಮಸ್ಯೆ ಎದುರಾಗುವ ಮೊದಲೇ ಮರಳುಗಾರಿಕೆಗೆ ಅವಕಾಶ ನೀಡಿ ಮರಳು ಸಂಗ್ರಹವಾಗುವುದನ್ನು ತಪ್ಪಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.