ಶಿವರಾಮ್ ಹೆಬ್ಬಾರ್ ಆರೋಪಕ್ಕೆ ಸ್ಪಷ್ಟನೆ ಕೊಟ್ಟ ಆರ್.ವಿ.ದೇಶಪಾಂಡೆ
ಉತ್ತರ ಕನ್ನಡ, ಜುಲೈ 16 : ಉತ್ತರ ಕನ್ನಡ ಜಿಲ್ಲೆಯ ಇಬ್ಬರು ಕಾಂಗ್ರೆಸ್ ನಾಯಕರ ನಡುವೆ ಆರೋಪ, ಪ್ರತ್ಯಾರೋಪ ನಡೆಯುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವ ಆರ್. ವಿ. ದೇಶಪಾಂಡೆ ವಿರುದ್ಧ ಯಲ್ಲಾಪುರ ಶಾಸಕ ಶಿವರಾಮ್ ಹೆಬ್ಬಾರ್ ಹಲವು ಆರೋಪ ಮಾಡಿದ್ದರು.
ಶಾಸಕ ಸ್ಥಾನಕ್ಕೆ ಜುಲೈ 6ರಂದು ರಾಜೀನಾಮೆ ನೀಡಿರುವ ಶಿವರಾಮ್ ಹೆಬ್ಬಾರ್ ಮುಂಬೈನ ಹೋಟೆಲ್ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಫೇಸ್ಬುಕ್ನಲ್ಲಿ ಜುಲೈ 14ರಂದು ಪೋಸ್ಟ್ ಹಾಕಿದ್ದ ಅವರು, ಕ್ಷೇತ್ರದ ಜನರ ಕ್ಷಮೆ ಹೇಳಿದ್ದರು.
ಆರ್.ವಿ.ದೇಶಪಾಂಡೆ ಅಲ್ಲ, ಅವರು ಕಮಿಷನ್ ಪಾಂಡೆ: ಸುನೀಲ್ ಹೆಗ್ಡೆ ವಾಗ್ದಾಳಿ
ಸುಧೀರ್ಘ ಪತ್ರವನ್ನು ಬರೆದಿದ್ದ ಶಿವರಾಮ್ ಹೆಬ್ಬಾರ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಕಾರಣವೇನು? ಎಂದು ವಿವರಿಸಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಆರ್. ವಿ. ದೇಶಪಾಂಡೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು, ಆರೋಪಗಳನ್ನು ಮಾಡಿದ್ದರು.
ಅತೃಪ್ತ ಶಾಸಕ ಶಿವರಾಮ್ ಹೆಬ್ಬಾರ್ ಮತದಾರರಿಗೆ ಬರೆದ ಕ್ಷಮಾಪಣಾ ಪತ್ರದಲ್ಲಿ ಏನಿದೆ?
ಮಂಗಳವಾರ ಆರ್. ವಿ. ದೇಶಪಾಂಡೆ ಅವರು ಫೇಸ್ ಬುಕ್ನಲ್ಲಿ ಪತ್ರದ ಮೂಲಕವೇ ಶಿವರಾಮ್ ಹೆಬ್ಬಾರ್ ಅವರಿಗೆ ಉತ್ತರ ಕೊಟ್ಟಿದ್ದಾರೆ. 'ತಮ್ಮ ವೈಯಕ್ತಿಕ ಆಸೆ, ಆಕಾಂಕ್ಷೆಗಳಿಂದ ಪ್ರೇರಿತರಾಗಿ ಕೈಗೊಂಡ ಯಾವುದೇ ತೀರ್ಮಾನಗಳಿಗೆ ಪಕ್ಷವನ್ನಾಗಲಿ ಅಥವ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಲಿ ಹೊಣೆಗಾರರನ್ನಾಗಿಸುವುದು ಸರ್ವಥಾ ಸೂಕ್ತವಲ್ಲ' ಎಂದು ಅವರು ಹೇಳಿದ್ದಾರೆ...
ಶಿವರಾಮ್ ಹೆಬ್ಬಾರ್ ಪೋಸ್ಟ್
ಯಲ್ಲಾಪುರ ಶಾಸಕ ಶಿವರಾಮ್ ಹೆಬ್ಬಾರ್ ಅವರು, "ನನ್ನ ಆತ್ಮೀಯ ಕಾರ್ಯಕರ್ತರಲ್ಲಿ ಮತ್ತು ಮತದಾರ ಬಾಂಧವರಲ್ಲಿ ಇತ್ತೀಚಿನ ಹಠಾತ್ ರಾಜಕೀಯ ಬೆಳವಣಿಗೆ ಹಾಗೂ ಗೊಂದಲಗಳ ಕುರಿತು ಕ್ಷಮೆ ಯಾಚಿಸುತ್ತಾ, ಇಂಥ ಕಠಿಣ ನಿರ್ಧಾರಕ್ಕೆ ಬರಲೇಬೇಕಾದ ನನ್ನ ಅನಿವಾರ್ಯತೆ ಅಥವಾ ಅಸಹಾಯಕತೆಯ ಬಗ್ಗೆ ನಿಮ್ಮಲ್ಲಿ ಹಂಚಿಕೊಳ್ಳಲು ಬಯಸುತ್ತೇನೆ", ಎಂದು ಸುಧೀರ್ಘ ಪತ್ರವನ್ನು ಬರೆದಿದ್ದರು.
"ಮಾನ್ಯರೇ, ಅಭಿವೃದ್ಧಿಯನ್ನೇ ಮಾನದಂಡವಾಗಿರಿಸಿಕೊಂಡು ಎರಡನೇ ಬಾರಿಗೆ ಶಾಸಕನಾಗಿ ಆಯ್ಕೆಯಾದ ನಾನು, ಈ ಮೈತ್ರಿ ಸರ್ಕಾರದಲ್ಲಿ ಸತತ 15 ತಿಂಗಳಲ್ಲಿ ತೀವ್ರ ಪ್ರಯತ್ನದ ಹೊರತಾಗಿಯೂ, ನನ್ನ ಕ್ಷೇತ್ರಕ್ಕೆ ಯಾವ ಹೊಸ ಯೋಜನೆಗಳನ್ನೂ ತರವಲ್ಲಿ ಯಶಸ್ಸು ಕಾಣಲಿಲ್ಲ" ಎಂದು ಬೇಸರ ವ್ಯಕ್ತಪಡಿಸಿದ್ದರು.
ದೇಶಪಾಂಡೆ ವಿರುದ್ಧ ಆಕ್ರೋಶ
ಶಿವರಾಮ್ ಹೆಬ್ಬಾರ್ ತಮ್ಮ ಪೋಸ್ಟ್ನಲ್ಲಿ ಆರ್. ವಿ. ದೇಶಪಾಂಡೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು, "ಸರ್ಕಾರದ ತಾರತಮ್ಯ ನೀತಿ ಒಂದೆಡೆಯಾದರೆ, ಪಕ್ಷದ ಹಿರಿಯ ನಾಯಕರೂ ಕೂಡ ನಮ್ಮ ಕ್ಷೇತ್ರದ ಸಮಸ್ಯೆಗೆ ಸ್ಪಂದಿಸುವ ವ್ಯವಧಾನ ತೋರಿಸಲಿಲ್ಲ ಹಾಗೂ ಮುಂದೆ ನಿಂತು ಸಮಸ್ಯೆ ಬಗೆರಿಹರಿಸಬೇಕಾಗಿದ್ದ ಜಿಲ್ಲಾ ಮಂತ್ರಿಗಳಿಗಂತೂ ಜಿಲ್ಲೆಯಿಂದ ಆರಿಸಿಬಂದ ಪಕ್ಷದ ಇನ್ನೊಬ್ಬ ಶಾಸಕನಾದ ನನ್ನ ಕ್ಷೇತ್ರದ ಸಮಸ್ಯೆಗಳನ್ನು ಕೋಳಿಸಿಕೊಳ್ಳುವ ಕನಿಷ್ಠ ಕಾಳಜಿಯನ್ನು ತೋರಲಿಲ್ಲ," ಎಂದು ಹೇಳಿದ್ದರು.
ಸಚಿವ ದೇಶಪಾಂಡೆ ಸ್ಪಷ್ಟನೆ
"ಕ್ಷೇತ್ರದ ಜನಪ್ರತಿನಿಧಿಯಾಗಿ, ಜಿಲ್ಲಾ ಉಸ್ತುವಾರಿ ಸಚಿವನಾಗಿ ಕ್ಷೇತ್ರದ ಹಾಗೂ ಜಿಲ್ಲೆಯ ಅಭಿವೃದ್ಧಿ ಕಾರ್ಯಗಳಿಗೆ ನನ್ನ ಇತಿಮಿತಿಯಲ್ಲಿ ಶಕ್ತಿಮೀರಿ ಶ್ರಮಿಸಿದ್ದೇನೆ. ತತ್ಪರಿಣಾಮ ಜಿಲ್ಲೆಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ಆಗಿವೆ. ಇದು ಜಿಲ್ಲೆಯ ಎಲ್ಲಾ ಜನಸಾಮಾನ್ಯರಿಗೂ ತಿಳಿದಿದೆ. ಅಲ್ಲದೆ ಇದು ಮಾನ್ಯ ಶಾಸಕರಿಗೂ ತಿಳಿದಿದೆ. ಮೇಲಾಗಿ ತಮ್ಮ ಕ್ಷೇತ್ರದಲ್ಲಿ ನೀರಾವರಿ ಯೋಜನೆಗಳೂ ಒಳಗೊಂಡಂತೆ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ಆಗಿವೆ ಎಂಬುದನ್ನು ಸ್ವತಃ ಶಾಸಕರಾದ ಶಿವರಾಮ್ ಹೆಬ್ಬಾರ್ ಅವರೇ ಹಲವಾರು ಸಂದರ್ಭಗಳಲ್ಲಿ ಸಾರ್ವಜನಿಕವಾಗಿಯೇ ಹೇಳಿದ್ದಾರೆ" ಎಂದು ಸಚಿವ ದೇಶಪಾಂಡೆ ಪತ್ರದಲ್ಲಿ ಸ್ಪಷ್ಟನೆ ನೀಡಿದ್ದಾರೆ.
ಸಕಾರಾತ್ಮಕವಾಗಿ ಸ್ಪಂದಿಸಿದ್ದೇನೆ
"ನಾನು ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳ ಭಾವನೆಗಳಿಗೂ ಸಹ ಸಕರಾತ್ಮಕವಾಗಿ ಸ್ಪಂದಿಸಿದ್ದೇನೆ. ಹಾಗಾಗಿ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕರು ತಮ್ಮ ವೈಯಕ್ತಿಕ ಆಸೆ, ಆಕಾಂಕ್ಷೆಗಳಿಂದ ಪ್ರೇರಿತರಾಗಿ ಕೈಗೊಂಡ ಯಾವುದೇ ತೀರ್ಮಾನಗಳಿಗೆ ಪಕ್ಷವನ್ನಾಗಲಿ ಅಥವ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಲಿ ಹೊಣೆಗಾರರನ್ನಾಗಿಸುವುದು ಸರ್ವಥಾ ಸೂಕ್ತವಲ್ಲ ಎಂದು ಈ ಸಂದರ್ಭದಲ್ಲಿ ನಾನು ಹೇಳಲು ಇಚ್ಚಿಸುತ್ತೇನೆ' ಎಂದು ಆರ್. ವಿ. ದೇಶಪಾಂಡೆ ಸ್ಪಷ್ಟನೆ ನೀಡಿದ್ದಾರೆ.