‘ತೆನೆ’ ಇಳಿಸಿ ‘ಕೈ’ ಹಿಡಿಯ ಹೊರಟರೆ ರವೀಂದ್ರ ನಾಯ್ಕ?
ಕಾರವಾರ, ನವೆಂಬರ್ 21: ಈಗಾಗಲೇ ಯಲ್ಲಾಪುರ- ಮುಂಡಗೋಡ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ನಾಮಪತ್ರ ಸಲ್ಲಿಕೆ ಮುಗಿದಿದೆ. 11 ಅಭ್ಯರ್ಥಿಗಳು ಸದ್ಯ ಕಣದಲ್ಲಿದ್ದಾರೆ. ಇವರಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ನೇರಾನೇರ ಹಣಾಹಣಿ ಏರ್ಪಟ್ಟಿದೆ. ಈ ನಡುವೆ ಸಾರಿಗೆ ನಿಗಮದ ಅಧ್ಯಕ್ಷ ವಿ.ಎಸ್.ಪಾಟೀಲ ಪುತ್ರ ಕಾಂಗ್ರೆಸ್ ಸೇರುವ ಇಂಗಿತ ವ್ಯಕ್ತಪಡಿಸಿದ ಬಳಿಕ ಮತ್ತೊಂದು ಮಹತ್ವದ ಬೆಳವಣಿಗೆಗೆ ಕ್ಷೇತ್ರ ಸಾಕ್ಷಿಯಾಗುತ್ತಿದೆ.
ಅರಣ್ಯ ಅತಿಕ್ರಮಣದಾರರ ಪರವಾಗಿ ಕಳೆದ ಮೂರು ದಶಕಗಳಿಂದ ಜಿಲ್ಲೆಯಲ್ಲಿ ಹೋರಾಟ ನಡೆಸುವ ಮೂಲಕ ಜನತೆಗೆ ಚಿರಪರಿಚಿತರಾಗಿರುವ ಜೆಡಿಎಸ್ ಮುಖಂಡ ರವೀಂದ್ರ ನಾಯ್ಕ ಕಾಂಗ್ರೆಸ್ ಸೇರ್ಪಡೆಗೊಳ್ಳಲು ಮುಂದಾಗಿದ್ದಾರೆಂಬ ವಿಚಾರ ಕೆಲವು ಮೂಲಗಳಿಂದ ತಿಳಿದುಬಂದಿದೆ. ಇದರ ಹಿಂದೆ ಕಾಂಗ್ರೆಸ್ನ ಮುತ್ಸದ್ಧಿ ರಾಜಕಾರಣಿ, ಮಾಜಿ ಸಚಿವ ಹಾಗೂ ಹಳಿಯಾಳ ಶಾಸಕ ಆರ್.ವಿ.ದೇಶಪಾಂಡೆ ತಂತ್ರ ಅಡಗಿದೆ ಎನ್ನಲಾಗುತ್ತಿದೆ. ಕ್ಷೇತ್ರದಲ್ಲಿ ಹೆಚ್ಚಾಗಿರುವ ಅರಣ್ಯ ಅತಿಕ್ರಮಣದಾರರ ಹಾಗೂ ಕ್ಷೇತ್ರದ ಮತದಾರರಿಗೆ ಪರಿಚಿತರೂ ಆಗಿರುವ ಕಾರಣ, ನಾಮಧಾರಿ ಸಮುದಾಯದ ಮತಗಳನ್ನೂ 'ಕೈ'ವಶ ಮಾಡಿಕೊಳ್ಳಲು ರವೀಂದ್ರ ನಾಯ್ಕ ಅವರನ್ನು ಕಾಂಗ್ರೆಸ್ಗೆ ಸೇರ್ಪಡನೆ ಮಾಡಿಕೊಳ್ಳಲು ಸಕಲ ಸಿದ್ಧತೆ ನಡೆದಿದೆ ಎನ್ನಲಾಗಿದೆ.
ಕಾಂಗ್ರೆಸ್ಗೆ ಏನು ಲಾಭ?
ಯಲ್ಲಾಪುರ- ಮುಂಡಗೋಡ ಕ್ಷೇತ್ರದಲ್ಲಿ ಸುಮಾರು 20 ಸಾವಿರಕ್ಕೂ ಅಧಿಕ ಅರಣ್ಯ ಅತಿಕ್ರಮಣದಾರರಿದ್ದಾರೆ. ಜತೆಗೆ, ಅಷ್ಟೇ ಪ್ರಮಾಣದಲ್ಲಿ ನಾಮಧಾರಿಗಳ ಮತವೂ ಇದೆ. ರವೀಂದ್ರ ನಾಯ್ಕ ಅವರು ಅರಣ್ಯ ಅತಿಕ್ರಮಣದಾರರಿಗೆ ಬಹಳ ಹತ್ತಿರದವರು. ಮೂರು ದಶಕಗಳಿಂದ ನಡೆಸುತ್ತಿರುವ ಅರಣ್ಯ ಹಕ್ಕು ಹೋರಾಟದ ಹಿನ್ನೆಲೆಯಲ್ಲಿ ಅತಿಕ್ರಮಣದಾರರು ರವೀಂದ್ರ ನಾಯ್ಕರ 'ಕೈ' ಹಿಡಿಯುವ ಸಾಧ್ಯತೆ ಹೆಚ್ಚಿದೆ.
ಇದರೊಂದಿಗೆ, ರವೀಂದ್ರ ನಾಯ್ಕರದ್ದೇ ಆದ ಬೆಂಬಲಿಗರ ಪಡೆಯೊಂದಿದೆ. ಅವರ ಅಭಿಮಾನಿಗಳು ಕೂಡ ಸಾಕಷ್ಟು ಜನರಿದ್ದಾರೆ. ಶಾಸಕತ್ವದಿಂದ ಅನರ್ಹರಾಗಿ ಕಾಂಗ್ರೆಸ್ ತೊರೆದು, ಬಿಜೆಪಿ ಸೇರಿ ಇದೀಗ ಉಪಚುನಾವಣೆಯಲ್ಲಿ ಅಭ್ಯರ್ಥಿಯಾಗಿರುವ ಶಿವರಾಮ ಹೆಬ್ಬಾರ್ ಅವರಿಗೆ ಪಾಠ ಕಲಿಸಲು ರವೀಂದ್ರ ನಾಯ್ಕ ಅವರ ಸೇರ್ಪಡೆಯೂ ಒಂದು ದಾರಿ ಎಂಬುದು ಆರ್ವಿಡಿಯವರ ಯೋಚನೆಯಾಗಿದೆ ಎನ್ನುತ್ತಾರೆ 'ಕೈ'ಪಾಳಯದ ಕೆಲವರು.
ಉಪಚುನಾವಣೆಗಾಗಿ ಯಲ್ಲಾಪುರದಲ್ಲಿ 'ಶತ್ರು'ಗಳಾದ ಅಪ್ಪ- ಮಗ
ಅರಣ್ಯ ಹಕ್ಕು ಹೋರಾಟದಲ್ಲಿ ಸಕ್ರಿಯ
2018ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ನಿಂದ ಸ್ಪರ್ಧಿಸಿದ್ದ ರವೀಂದ್ರ ನಾಯ್ಕ, ಸೋಲನನುಭವಿಸಿದ್ದರು. ಹೀಗಾಗಿ ರಾಜಕೀಯ ಚಟುವಟಿಕೆಗಳಿಂದ ತಟಸ್ಥವಾಗಿದ್ದ ಅವರು, ಅರಣ್ಯ ಹಕ್ಕು ಹೋರಾಟದಲ್ಲಿ ಸಕ್ರಿಯರಾಗಿದ್ದರು. ಜೆಡಿಎಸ್ ಸೇರಿದ್ದ ಅವರು, ಜಿಲ್ಲೆಯಲ್ಲಿ ಮುಂದಿನ ದಿನಗಳಲ್ಲಿ ಜೆಡಿಎಸ್ ಗೆ ನೆಲೆ ಇಲ್ಲ ಎಂಬುದನ್ನು ಮನಗಂಡು ಹಾಗೂ ದೇಶಪಾಂಡೆ ಅವರೊಂದಿಗೆ ಸೇರಿ ರಾಜಕೀಯದಲ್ಲಿ ಸಕ್ರಿಯರಾಗುವ ಕಾರಣ ಕಾಂಗ್ರೆಸ್ ಸೇರ್ಪಡೆಗೊಳ್ಳಲು ಮುಂದಾಗಿದ್ದಾರೆ ಎನ್ನಲಾಗಿದೆ. ಕೆಲವೇ ದಿನಗಳಲ್ಲಿ ಅವರು ದೇಶಪಾಂಡೆ ನೇತೃತ್ವದಲ್ಲೇ ಕಾಂಗ್ರೆಸ್ ಸೇರ್ಪಡೆಗೊಳ್ಳಲಿದ್ದಾರೆ ಎಂಬುದು ಮೂಲಗಳಿಂದ ತಿಳಿದುಬಂದಿದೆ.
ಬದ್ಧ ವೈರಿಗಳು ಮಿತ್ರರಾಗುವರೇ?
ಈ ಹಿಂದಿನ ಬಹುತೇಕ ಚುನಾವಣೆಗಳಲ್ಲಿ ರವೀಂದ್ರ ನಾಯ್ಕ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ ಬದ್ಧ ವೈರಿಗಳಾಗಿದ್ದರು. ರವೀಂದ್ರ ಚುನಾವಣೆಗೆ ನಿಂತಾಗ ಭೀಮಣ್ಣ, ಭೀಮಣ್ಣ ನಿಂತಾಗ ರವೀಂದ್ರ ಪರಸ್ಪರ ವಿರೋಧ ತೋರ್ಪಡಿಸಿಕೊಳ್ಳುತ್ತಿದ್ದರು. ಈ ಹಿಂದೆ ಕಾಂಗ್ರೆಸ್ನಲ್ಲಿದ್ದ ಸಂದರ್ಭ ರವೀಂದ್ರ ನಾಯ್ಕ ಮಾರ್ಗರೇಟ್ ಆಳ್ವಾ ಬಣದಲ್ಲಿದ್ದರೆ, ಭೀಮಣ್ಣ ದೇಶಪಾಂಡೆ ಬಣದಲ್ಲಿದ್ದರು. ಈ ಹಿನ್ನೆಲೆಯಲ್ಲಿ ನಾಮಧಾರಿ ಮತಗಳು ಕೂಡ ಒಡೆಯುತ್ತಿದ್ದವು. ಇದೀಗ ರವೀಂದ್ರ ನಾಯ್ಕ ಅವರು ಕಾಂಗ್ರೆಸ್ ಸೇರ್ಪಡೆಗೊಳ್ಳುವ ಮೂಲಕ ಬದ್ಧ ವೈರಿಗಳು ಮಿತ್ರರಾಗುವರೇ ಎನ್ನುವುದನ್ನು ಕಾದು ನೋಡಬೇಕಿದೆ.
"ಲೈಟ್ ಕಂಬ ನಿಲ್ಲಿಸಿದರೂ ಕಾಂಗ್ರೆಸ್ ಗೆಲ್ಲುತ್ತದೆ ಅಂತಿದ್ದರು, ಈಗ ರಾಹುಲ್ ಗಾಂಧಿ ನಿಂತರೂ ಗೆಲ್ಲಲ್ಲ"
ರವೀಂದ್ರ ನಾಯ್ಕಗೆ ಕಾಂಗ್ರೆಸ್ ಹೊಸತಲ್ಲ
ರವೀಂದ್ರ ನಾಯ್ಕ ಅವರಿಗೆ ಕಾಂಗ್ರೆಸ್ ಪಕ್ಷ ಹೊಸದಲ್ಲ. 1990ರ ಸಂದರ್ಭದಲ್ಲಿ ಅವರು ಕಾಂಗ್ರೆಸ್ನಲ್ಲಿ ಸಕ್ರಿಯರಾಗಿ ಕಾರ್ಯನಿರ್ವಹಿಸಿದ್ದಾರೆ. ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ (ಎನ್ಎಸ್ಯುಐ) ಜಿಲ್ಲಾಧ್ಯಕ್ಷ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ, ಜಿಲ್ಲಾ ಕಾಂಗ್ರೆಸ್ ಕಾನೂನು ಘಟಕದ ಅಧ್ಯಕ್ಷ, ಕಾಂಗ್ರೆಸ್ ಹಿಂದುಳಿದ ಘಟಕದ ಅಧ್ಯಕ್ಷ... ಹೀಗೆ ಕಾಂಗ್ರೆಸ್ನ ಹಲವು ವಿಭಾಗಗಳಲ್ಲಿ ಅವರು ಕಾರ್ಯನಿರ್ವಹಿಸಿದ್ದಾರೆ. ಹೀಗಾಗಿ, ಅವರು ಒಂದು ವೇಳೆ ಕಾಂಗ್ರೆಸ್ ಸೇರ್ಪಡೆಗೊಂಡರೆ ಮರಳಿ ಮಾತೃ ಪಕ್ಷಕ್ಕೆ ಬಂದಂತೆ ಆಗುತ್ತದೆ.