ಉತ್ತರ ಕನ್ನಡ ಪ್ರವಾಹ: 737.54 ಕೋಟಿ ರೂ. ಮೂಲ ಸೌಕರ್ಯಗಳಿಗೆ ಹಾನಿ
ಕಾರವಾರ, ಜುಲೈ 31: ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ವಾರ ಸುರಿದ ಭಾರೀ ಮಳೆಯಿಂದ ಸೃಷ್ಟಿಯಾಗಿದ್ದ ಪ್ರವಾಹದಿಂದ ಉಂಟಾದ ಹಾನಿಗಳ ವಿವರವನ್ನು ಜಿಲ್ಲಾಡಳಿತ ದಾಖಲಿಸಿದೆ. ಸುಮಾರು 737.54 ಕೋಟಿ ರೂಪಾಯಿಯಷ್ಟು ರಸ್ತೆ, ಸೇತುವೆ, ಮೂಲಭೂತ ಸೌಕರ್ಯಗಳ ಹಾನಿಯಾಗಿರುವ ಬಗ್ಗೆ ಸರ್ಕಾರಕ್ಕೆ ಜಿಲ್ಲಾಡಳಿತ ವರದಿ ಸಲ್ಲಿಸಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿಯ ಕಾರಣ ಉತ್ತರ ಕನ್ನಡ ಜಿಲ್ಲಾಡಳಿತ ಅಂದಾಜು ಹಾನಿಯ ಕುರಿತು ವಿವಿಧ ಇಲಾಖೆಗಳಿಂದ ಮಾಹಿತಿ ಕ್ರೋಢೀಕರಿಸಿ, ಒಟ್ಟಾರೆ ನಷ್ಟದ ಮಾಹಿತಿ ನೀಡಿದೆ. ಅದರಂತೆ, ಜಿಲ್ಲೆಯಲ್ಲಿ 202.65 ಕಿ.ಮೀ.ನಷ್ಟು ರಾಜ್ಯ ಹೆದ್ದಾರಿ, 576.77 ಕಿ.ಮೀ.ನಷ್ಟು ಜಿಲ್ಲಾ ಮುಖ್ಯ ರಸ್ತೆ, 627.45 ಕಿ.ಮೀ.ನಷ್ಟು ಗ್ರಾಮೀಣ ಮುಖ್ಯ ರಸ್ತೆ ಹಾಗೂ ನಗರಾಭಿವೃದ್ಧಿ ಇಲಾಖೆ ವ್ಯಾಪ್ತಿಯ 43.41 ಕಿ.ಮೀ. ರಸ್ತೆ ಹಾನಿಗೊಳಗಾಗಿದೆ. ಇವುಗಳ ಅಂದಾಜು ಮೊತ್ತ 387.80 ಕೋಟಿಯಷ್ಟಾಗಿವೆ. ಇವುಗಳಷ್ಟೇ ಅಲ್ಲದೇ 95 ಕೋಟಿ ಅಂದಾಜು ಮೊತ್ತದ ರಾಷ್ಟ್ರೀಯ ಹೆದ್ದಾರಿಗೂ ಹಾನಿಯಾಗಿವೆ.
ಪ್ರವಾಹದಿಂದ ಹಾನಿಗೊಳಗಾದ ರಸ್ತೆಗಳಿಗೆ 200 ಕೋಟಿ ರೂ. ಭರವಸೆ ನೀಡಿದ ಸಿಎಂ
ಇನ್ನು ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆ ವ್ಯಾಪ್ತಿಯಲ್ಲಿ ಬರುವ 59 ಸೇತುವೆಗಳಿಗೆ ಹಾನಿಯಾಗಿದ್ದು, ಇವುಗಳ ಅಂದಾಜು ಹಾನಿಯ ಮೊತ್ತ 10.37 ಕೋಟಿ ರೂ., ಲೋಕೋಪಯೋಗಿ ಇಲಾಖೆಗೆ ಸೇರಿದ 139.46 ಕೋಟಿ ರೂ. ಅಂದಾಜು ವೆಚ್ಚದ 247 ಸೇತುವೆಗಳಿಗೆ ನೆರೆಯಿಂದ ಹಾನಿಯಾಗಿದೆ.
ಶಾಲೆ, ಆರೋಗ್ಯ ಕೇಂದ್ರಗಳಿಗೆ ಹಾನಿ
95 ಶಾಲಾ ಕಟ್ಟಡಗಳು, 33 ಅಂಗನವಾಡಿ, 4 ಸಮುದಾಯ ಭವನ ಹಾಗೂ 3 ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಹಾನಿಯಾಗಿದ್ದು, ಇವುಗಳ ಅಂದಾಜು ಹಾನಿಯ ವೆಚ್ಚ 4.93 ಕೋಟಿ. ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ 74, ನಗರಾಭಿವೃದ್ಧಿ ಇಲಾಖೆಯ 1 ಹಾಗೂ ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆಯ ಕುಡಿಯುವ ನೀರಿನ ಯೋಜನೆಗಳಿಗೆ ಹಾನಿಯಾಗಿದ್ದು, ಇವುಗಳ ಅಂದಾಜು ಹಾನಿಯ ಮೊತ್ತ 5.54 ಕೋಟಿಯಾಗಿದೆ. ಇದರೊಂದಿಗೆ ಸಣ್ಣ ನೀರಾವರಿ ಯೋಜನೆಗಳಲ್ಲಿ ಬರುವ 53 ಕಾಲುವೆ, 160 ಬಾಂದಾರು, 16 ಏತ ನೀರಾವರಿ ಯೋಜನೆಗೆ ಪ್ರವಾಹದಿಂದಾಗಿ ಹಾನಿಯುಂಟಾಗಿ 89.92 ಕೋಟಿ ನಷ್ಟ ಸಂಭವಿಸಿದೆ. ಹೆಸ್ಕಾಂಗೆ ಸಂಬಂಧಿಸಿದಂತೆ 2046 ವಿದ್ಯುತ್ ಕಂಬಗಳು, 94 ಟ್ರಾನ್ಸ್ಫಾರ್ಮರ್ಸ್, 107 ಕಿ.ಮೀ. ವಿದ್ಯುತ್ ಲೈನ್, ಒಟ್ಟು ಅಂದಾಜು 4.49 ಕೋಟಿಯಷ್ಟು ಮೊತ್ತದ ಸೌಕರ್ಯಗಳಿಗೆ ಹಾನಿಯಾಗಿವೆ.
8984 ಮನೆಗಳಿಗೆ ನೀರು ನುಗ್ಗಿ ಹಾನಿಯಾಗಿದೆ
ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರವಾಹದಿಂದ ಸುಮಾರು 8984 ಮನೆಗಳಿಗೆ ನೀರು ನುಗ್ಗಿ ಹಾನಿಯಾಗಿದ್ದು, 1123.28 ಹೆಕ್ಟೇರ್ ಕೃಷಿ ಹಾಗೂ 562.65 ಹೆಕ್ಟೇರ್ ತೋಟಗಾರಿಕಾ ಭೂಮಿಗಳು ಹಾನಿಗೊಳಗಾಗಿವೆ. ಇದಲ್ಲದೇ ನೆರೆಯಿಂದ 51 ಜಾನುವಾರು ಮೃತಪಟ್ಟಿದ್ದು, 310 ಮನೆಗಳು ಪೂರ್ಣ ಕುಸಿದು ಬಿದ್ದಿವೆ. 348 ಮನೆಗಳು ತೀವ್ರತರ ಹಾಗೂ 816 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಶಿರಸಿಯಲ್ಲಿ 9, ಜೊಯಿಡಾದಲ್ಲಿ 2 ಹಾಗೂ ಯಲ್ಲಾಪುರದ ನಾಲ್ಕು, ಒಟ್ಟು 15 ಕಡೆಗಳಲ್ಲಿ ಗುಡ್ಡ ಕುಸಿತಗಳಾಗಿವೆ.
ಶೀಘ್ರ ಪರಿಹಾರ ವಿತರಣೆ
ಇಷ್ಟೆಲ್ಲ ಹಾನಿಗೊಳಗಾದ 8984 ಪ್ರಕರಣಗಳ ಪೈಕಿ ಈಗಾಗಲೇ 1027 ಮನೆಗಳಿಗೆ ಒಟ್ಟು 39 ಲಕ್ಷ ರೂ.ಗಳನ್ನು ತುರ್ತಾಗಿ ಬಟ್ಟೆ, ಪಾತ್ರೆ ಇನ್ನಿತರ ಗೃಹಬಳಕೆಯ ವಸ್ತುಗಳ ಖರೀದಿಗೆ ಪರಿಹಾರ ವಿತರಣೆ ಮಾಡಲಾಗಿದೆ. ಇನ್ನೂ 7957 ಪ್ರಕರಣಗಳಲ್ಲಿ ಪರಿಹಾರ ವಿತರಣೆ ಬಾಕಿ ಇರುವುದಾಗಿ ಜಿಲ್ಲಾಡಳಿತ ತಿಳಿಸಿದೆ. ಪ್ರವಾಹದಲ್ಲಿ ಮೃತಪಟ್ಟ 6 ಮಂದಿಯ ಕುಟುಂಬಕ್ಕೂ ತಲಾ 5 ಲಕ್ಷದಂತೆ 30 ಲಕ್ಷ ರೂ. ಪರಿಹಾರವನ್ನೂ ತಕ್ಷಣವೇ ತಲುಪಿಸಲಾಗಿದೆ.
Recommended Video
ಸಮೀಕ್ಷಾ ಕಾರ್ಯ ಪ್ರಾರಂಭ
ಈಗಾಗಲೇ ಹಾನಿ ವಿವರಗಳ ಮಾಹಿತಿ ಕಲೆ ಹಾಕುವ ಸಮೀಕ್ಷಾ ಕಾರ್ಯ ಪ್ರಾರಂಭವಾಗಿದ್ದು, ಸಮೀಕ್ಷೆ ಮುಕ್ತಾಯವಾದ ನಂತರ ಫಲಾನುಭವಿಗಳ ಪಟ್ಟಿಯನ್ನು ಗ್ರಾಮ ಸಭೆಯಲ್ಲಿ ಮಂಡಿಸಿ, ಯಾವ ಫಲಾನುಭವಿಯೂ ಬಿಟ್ಟು ಹೋಗದಂತೆ ಪರಿಶೀಲಿಸಿ ಶೀಘ್ರದಲ್ಲಿ ಪರಿಹಾರ ವಿತರಣೆ ಮಾಡಲಾಗುತ್ತದೆ. ಮುಳುಗಡೆಯಾದ ಗ್ರಾಮಗಳಲ್ಲಿ ಜನರ ದಾಖಲಾತಿಗಳನ್ನು ಮರು ಸೃಜಿಸಿಕೊಡಲು ಆಯಾ ಗ್ರಾಮಗಳಲ್ಲೇ ಶಿಬಿರಗಳನ್ನು ಏರ್ಪಡಿಸುವುದಾಗಿ ಜಿಲ್ಲಾಡಳಿತ ಹೇಳಿದೆ.