ಶಾಸಕಿ ರೂಪಾಲಿ ಸೇರಿ ನಾಲ್ವರಿಗೆ ಜಾತಿ ಆಧಾರದಲ್ಲಿ ಡಿಸಿಎಂ ಸ್ಥಾನ?
ಕಾರವಾರ, ಜುಲೈ 26; ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರ ಅಂತಿಮ ಹಂತಕ್ಕೆ ಬಂದು ತಲುಪಿದೆ. ಇಂದು ಎಲ್ಲಾ ಗೊಂದಲಗಳಿಗೆ ಉತ್ತರ ಸಿಗುವ ಸಾಧ್ಯತೆ ಇದೆ. ಹೈಕಮಾಂಡ್ ಸೂಚನೆ ಮೇರೆಗೆ ಯಡಿಯೂರಪ್ಪ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆಯೇ? ಕಾದು ನೋಡಬೇಕಿದೆ.
ಯಡಿಯೂರಪ್ಪ ರಾಜೀನಾಮೆ ನೀಡಿದರೆ ನಂತರ ಸಚಿವ ಸಂಪುಟ ಹೊಸದಾಗಿ ರಚನೆಯಾಗಲಿದ್ದು, ಕಾರವಾರ- ಅಂಕೋಲಾ ವಿಧಾನಸಭಾ ಕ್ಷೇತ್ರದ ಶಾಸಕಿ ರೂಪಾಲಿ ನಾಯ್ಕಗೆ ದೊಡ್ಡ ಹುದ್ದೆಯೊಂದನ್ನು ನೀಡುವ ಸಾಧ್ಯತೆ ಇದೆ ಎನ್ನುವ ಸುದ್ದಿ ಹಬ್ಬಿದೆ.
ಸಿಎಂ ಬದಲಾವಣೆ ಮಾಡಬಾರದು; ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ
ಯಡಿಯೂರಪ್ಪ ರಾಜೀನಾಮೆ ನಂತರ ಬಿಜೆಪಿಯಲ್ಲಿ ಯಾರು ಮುಖ್ಯಮಂತ್ರಿ ಪದವಿಗೆ ಏರಲಿದ್ದಾರೆ? ಎನ್ನುವ ಚರ್ಚೆ ಈಗಾಗಲೇ ನಡೆಯುತ್ತಿದೆ. ಸದ್ಯ ಸಚಿವ ಮುರಗೇಶ್ ನಿರಾಣಿ, ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ, ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಹುಬ್ಬಳ್ಳಿಯ ಶಾಸಕ ಅರವಿಂದ್ ಬೆಲ್ಲದ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ. ರವಿ ಹೆಸರುಗಳು ಸಂಭಾವ್ಯರ ಪಟ್ಟಿಯಲ್ಲಿ ಕೇಳಿ ಬರುತ್ತಿದೆ.
ಪಕ್ಷ ಯಡಿಯೂರಪ್ಪಗೆ ಸಾಕಷ್ಟು ಅವಕಾಶ ನೀಡಿದೆ; ಸಿ. ಟಿ. ರವಿ
ಈ ನಡುವೆ ಖಾಸಗಿ ಸುದ್ದಿ ಸಂಸ್ಥೆ ಇಂಡೋ- ಏಷ್ಯನ್ ನ್ಯೂಸ್ ಸರ್ವಿಸ್ (ಐಎಎನ್ಎಸ್) ವರದಿಯೊಂದನ್ನು ಪ್ರಕಟಿಸಿದ್ದು, ಯಡಿಯೂರಪ್ಪ ಉತ್ತರಾಧಿಕಾರಿಯಾಗಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ. ಎಲ್. ಸಂತೋಷ್ ಹೆಸರನ್ನು ಬಿಜೆಪಿಯ ರಾಷ್ಟ್ರೀಯ ನಾಯಕರುಗಳು ಶಿಫಾರಸ್ಸು ಮಾಡುವ ಸಾಧ್ಯತೆ ಇದೆ ಎಂದು ಹೇಳಿದೆ.
ರಾಜ್ಯ ಬಿಜೆಪಿ ನಾಯಕತ್ವ ಬದಲಾವಣೆ ಮುಗಿದ ಅಧ್ಯಾಯ
ಯಾರಾಗಲಿದ್ದಾರೆ ಮುಖ್ಯಮಂತ್ರಿ?
ಬಿಜೆಪಿಯಲ್ಲಿ ತನ್ನದೇ ಆದ ಹಿಡಿತವನ್ನು ಸಾಧಿಸಿರುವ ಬಿ. ಎಲ್. ಸಂತೋಷ್ ಹೆಸರು ಮುಖ್ಯಮಂತ್ರಿ ಪಟ್ಟಿಯಲ್ಲಿ ಈ ಹಿಂದಿನಿಂದಲೂ ಕೇಳಿ ಬಂದಿತ್ತು. ಯಡಿಯೂರಪ್ಪ ರಾಜೀನಾಮೆ ನೀಡಿದರೆ ಪಕ್ಷ ನಿಷ್ಠರಿಗೆ ಸಿಎಂ ಹುದ್ದೆ ಕೊಡಬೇಕೆಂದು ಬಿಜೆಪಿಯ ಹೈಕಮಾಂಡ್ ತೀರ್ಮಾನಿಸಿದೆ. ಪಕ್ಷ ಸಂಘಟನೆ ದೃಷ್ಟಿಯಿಂದ ಬಿ. ಎಲ್. ಸಂತೋಷ್ ಹೆಸರು ಸೂಚಿಸುವ ಸಾಧ್ಯತೆ ಇದೆ ಎಂದು ಸಂಸ್ಥೆ ಐಎಎನ್ಎಸ್ ವರದಿ ಮಾಡಿದೆ.
ನಾಲ್ವರಿಗೆ ಉಪಮುಖ್ಯಮಂತ್ರಿ ಪಟ್ಟ
ಉಪಮುಖ್ಯಮಂತ್ರಿ ಹುದ್ದೆಯನ್ನು ಜಾತಿ ಆಧಾರದ ಮೇಲೆ ನಾಲ್ವರಿಗೆ ಕೊಡುವ ಸಾಧ್ಯತೆ ಇದೆ. ಈಗಿರುವ ಮೂವರು ಉಪಮುಖ್ಯಮಂತ್ರಿಗಳಲ್ಲಿ ಇಬ್ಬರನ್ನು ಕೈ ಬಿಡಲಾಗುತ್ತದೆ. ಲಕ್ಷ್ಮಣ ಸವದಿಯನ್ನು ಲಿಂಗಾಯತ ಕೋಟಾದಲ್ಲಿ ಮುಂದುವರೆಸುವ ಸಾಧ್ಯತೆ ಇದೆ ಎಂದು ಐಎಎನ್ಎಸ್ ಹೇಳಿದೆ. ಪರಿಶಿಷ್ಟ ಪಂಗಡ ಕೋಟಾದಲ್ಲಿ ಶ್ರೀರಾಮುಲು, ಒಕ್ಕಲಿಗ ಕೋಟಾದಲ್ಲಿ ಡಿ. ವಿ. ಸದಾನಂದ ಗೌಡ ಹಾಗೂ ಒಬಿಸಿ (ಮರಾಠ ಹಾಗೂ ಮಹಿಳಾ) ಕೋಟಾದಲ್ಲಿ ಕಾರವಾರ ಕ್ಷೇತ್ರದಿಂದ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದ ರೂಪಾಲಿ ನಾಯ್ಕಗೆ ಉಪಮುಖ್ಯಮಂತ್ರಿ ಹುದ್ದೆ ಕೊಡುವ ಸಾಧ್ಯತೆ ಇದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಕಾರ್ಕಳ ಶಾಸಕ ಸುನೀಲ್ ಕುಮಾರ್
ಇದಲ್ಲದೇ ಕಾರ್ಕಳ ಶಾಸಕ ಸುನೀಲ್ ಕುಮಾರ್ ಹೆಸರು ಸಹ ಕೇಳಿ ಬಂದಿದೆ. ಮೊಟ್ಟೆ ಹಗರಣದಲ್ಲಿ ಆರೋಪ ಎದುರಿಸುತ್ತಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆಯನ್ನು ಸಂಪುಟದಿಂದ ಕೈಬಿಟ್ಟರೆ, ಉಪಮುಖ್ಯಮಂತ್ರಿ ಹುದ್ದೆ ನೀಡದಿದ್ದರೆ ಮಂತ್ರಿ ಹುದ್ದೆಯನ್ನಾದರೂ ರೂಪಾಲಿ ನಾಯ್ಕಗೆ ಕೊಡುವ ಬಗ್ಗೆ ಹೈಕಮಾಂಡ್ ಮಟ್ಟದಲ್ಲಿ ಚರ್ಚೆ ನಡೆದಿದೆ ಎನ್ನುವ ಸುದ್ದಿ ಹಬ್ಬಿದೆ. ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ರಾಜೀನಾಮೆ ನೀಡಿದ ನಂತರ ಈ ಎಲ್ಲಾ ಗೊಂದಲಗಳಿಗೆ ಉತ್ತರ ಸಿಗಲಿದೆ.
Recommended Video
ನನಗ್ಯಾವುದೇ ಮಾಹಿತಿ ಇಲ್ಲ
"ನನಗೆ ಉಪಮುಖ್ಯಮಂತ್ರಿ ಸ್ಥಾನ ನೀಡುವ ಬಗ್ಗೆ ಯಾವುದೇ ಮಾಹಿತಿ ನನಗೆ ಬಂದಿಲ್ಲ. "ನಾನಿನ್ನೂ ಮೊದಲ ಬಾರಿ ಶಾಸಕಿಯಾಗಿದ್ದೇನೆ. ಉಪಮುಖ್ಯಮಂತ್ರಿ ಎನ್ನುವುದು ದೊಡ್ಡ ಹುದ್ದೆ. ಪಕ್ಷ ಕೊಡುವ ಯಾವುದೇ ಜವಬ್ದಾರಿಯನ್ನೂ ನಿಭಾಯಿಸಲು ಸಿದ್ಧನಿದ್ದೇನೆ. ಆದರೆ ಇಂತಹ ಚರ್ಚೆ ಆಗಿರುವ ಬಗ್ಗೆ ನನಗಂತೂ ಯಾವುದೇ ಮಾಹಿತಿ ಇಲ್ಲ" ಎಂದು ಶಾಸಕಿ ರೂಪಾಲಿ ನಾಯ್ಕ ಹೇಳಿದ್ದಾರೆ.
"ಸದ್ಯ ನನ್ನ ಕ್ಷೇತ್ರದ ಜನರು ನೆರೆ ಹಾವಳಿಯಿಂದ ಸಂಕಷ್ಟಕ್ಕೆ ಸಿಲುಕಿದ್ದು, ಅವರ ನೆರವಿಗಾಗಿ ಕೆಲಸ ಮಾಡುತ್ತಿದ್ದೇನೆ. ಯಾವ ಸುದ್ದಿ ಸಂಸ್ಥೆ, ನನ್ನ ಹೆಸರನ್ನು ಏಕೆ ಪ್ರಸ್ತಾಪಿಸಿದೆ ಎನ್ನುವ ಮಾಹಿತಿ ನನಗೆ ತಿಳಿದಿಲ್ಲ" ಎಂದು ಅವರು ಆಶ್ಚರ್ಯದಿಂದಲೇ ಪ್ರತಿಕ್ರಿಯೆ ನೀಡಿದರು.