ಪ್ರಚಾರ ಭಾಷಣದ ವೇಳೆ ಕಾಂಗ್ರೆಸ್- ಬಿಜೆಪಿ ಕಾರ್ಯಕರ್ತರ ನಡುವೆ ಜಟಾಪಟಿ
ಶಿರಸಿ, ನವೆಂಬರ್ 27: ಉಪ ಚುನಾವಣೆ ಪ್ರಚಾರದ ವೇಳೆ ತಾಲೂಕಿನ ರಾಮಾಪುರ ಗ್ರಾಮದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಗದ್ದಲ ಉಂಟಾದ ಘಟನೆ ನಡೆದಿದೆ.
ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ ಪರ ಪ್ರಚಾರಕ್ಕೆ ಆಗಮಿಸಿದ ಮಾಜಿ ಸಚಿವ ಆರ್.ವಿ.ದೇಶಪಾಂಡೆಯವರು, ಕಾರಿನಲ್ಲಿ ವಾಪಸ್ ತೆರಳುವಾಗ ಬಿಜೆಪಿ ಕಾರ್ಯಕರ್ತರು ಬಿಜೆಪಿ ಅಭ್ಯರ್ಥಿ ಶಿವರಾಮ್ ಹೆಬ್ಬಾರ್ ಪರ ಘೋಷಣೆ ಕೂಗಿದ್ದಾರೆ. ಬಿಜೆಪಿ ಕಾರ್ಯಕರ್ತರು ಘೋಷಣೆ ಕೂಗುತ್ತಿದ್ದಂತೆ ಸ್ಥಳಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಬಂದಿದ್ದಾರೆ. ಇಬ್ಬರೂ ತಮ್ಮ ತಮ್ಮ ನಾಯಕರ ಪರ ಘೋಷಣೆ ಕೂಗಿ ಗದ್ದಲ ಹಾಗೂ ನೂಕು ನುಗ್ಗಾಟ ನಡೆಯಿತು.
ಉಪಚುನಾವಣೆ ಪ್ರಚಾರಕ್ಕೆ ದೇವೇಗೌಡ ಎಂಟ್ರಿ: ಅನರ್ಹರಿಗೆ ಗಡ-ಗಡ
ಎರಡೂ ಪಕ್ಷದ ಕಾರ್ಯಕರ್ತರನ್ನು ಸಮಾಧಾನ ಪಡಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.
ಇದೇ ವೇಳೆ ಪ್ರಚಾರ ಭಾಷಣದಲ್ಲಿ ಮಾತನಾಡಿದ ದೇಶಪಾಂಡೆ, 'ಚುನಾವಣೆಯಲ್ಲಿ ಪಕ್ಷಾಂತರಿಗಳ ವಿರುದ್ಧ ಮತದಾರರು ತಿರುಗಿ ಬಿದ್ದಿದ್ದಾರೆ. ಜನರು ಪಕ್ಷಾಂತರದ ಹಾವಳಿ ಮುಗಿಯಬೇಕು ಎಂದು ತೀರ್ಮಾನಕ್ಕೆ ಬಂದಿದ್ದಾರೆ. ದೇಶದಲ್ಲಿ ವಿವಿಧ ರಾಜ್ಯದಲ್ಲಿ ನಡೆದ ಚುನಾವಣೆಯಲ್ಲಿ ಪಕ್ಷಾಂತರಿಗಳು ಸೋಲನ್ನು ಕಂಡಿದ್ದಾರೆ. ರಾಜ್ಯದಲ್ಲೂ ಅದೇ ಪರಿಸ್ಥಿತಿ ನಿರ್ಮಾಣವಾಗಲಿದೆ' ಎಂದಿದ್ದಾರೆ.
'ಬಿಜೆಪಿ ಅಭ್ಯರ್ಥಿ ಶಿವರಾಮ್ ಹೆಬ್ಬಾರ್ ನನ್ನ ಶತ್ರುವಲ್ಲ. ಅವರು ನನ್ನ ಸ್ನೇಹಿತರು. ಆದರೆ ಹೆಬ್ಬಾರ್ ಪಕ್ಷಾಂತರ ಮಾಡಿದ್ದು ಸರಿಯಲ್ಲ. ನಾನು ಪಕ್ಷಾಂತರ ಮಾಡಿದೆ. ಆದರೆ ಅಧಿಕಾರ ಬಿಟ್ಟು ಸಿದ್ಧಾಂತಕ್ಕೆ ಪಕ್ಷಾಂತರ ಮಾಡಿದೆ. ಹೆಬ್ಬಾರ್ ಬೇರೆ ಉದ್ದೇಶದಿಂದಲೇ ಪಕ್ಷಾಂತರ ಮಾಡಿದ್ದಾರೆ. ಶಿವರಾಮ್ ಹೆಬ್ಬಾರ್ ಹತಾಶೆಯಾಗಿದ್ದಾರೆ. ಇದು ಸ್ಪಷ್ಟವಾಗಿ ಕಾಣುತ್ತಿದೆ. ನಾನು ಯಾವ ಶಾಸಕರ ಸೋಲಿಗೆ ಕಾರಣವಾಗಿರಲಿಲ್ಲ. ಯಾರು ಕೂಡ ಈ ಬಗ್ಗೆ ಧ್ವನಿ ಎತ್ತಿಲ್ಲ. ಹೆಬ್ಬಾರ್ ಈಗ ಹೇಳುತ್ತಿದ್ದಾರೆ' ಎಂದಿದ್ದಾರೆ.
'ನನ್ನ ಮಗ ಲೋಕಸಭಾ ಚುನಾವಣೆ ನಿಂತು ಸೋತಿದ್ದರು. ನನ್ನ ಮಗನ ಚುನಾವಣೆಯಲ್ಲಿ ಯಾರ್ಯಾರು ಏನೇನು ಮಾಡಿದ್ದಾರೆಂದು ಉತ್ತರ ಕೊಡಲಿ' ಎಂದು ಸವಾಲೆಸೆದಿದ್ದಾರೆ.