ವಜ್ರ ವೈಡೂರ್ಯ ಧರಿಸಿದ ಶ್ರೀಮಂತ ಗಣೇಶ; ಉತ್ತರ ಕನ್ನಡ ಜಿಲ್ಲೆಯಲ್ಲೊಂದು ವಿಶೇಷ
ಕಾರವಾರ, ಸೆಪ್ಟೆಂಬರ್, 07: ದೇಶದಲ್ಲಿಯೇ ಗಣೇಶ ಚತುರ್ಥಿ ಆಚರಣೆ ಜೋರಾಗಿಯೇ ನಡೆಯುತ್ತಿದೆ. ಅದರಲ್ಲಿಯೂ ಮುಂಬೈನ ಲಾಲ್ಭಾಗ್ ಚಾ ರಾಜ ಗಣಪತಿ ದೇಶದಲ್ಲಿಯೇ ಅತೀ ಶ್ರೀಮಂತ ಗಣಪ ಎಂದೇ ಪ್ರಖ್ಯಾತಿ ಪಡೆದುಕೊಂಡಿರುವ ಬಗ್ಗೆ ಬಹುತೇಕರಿಗೆ ಗೊತ್ತೇ ಇದೆ. ಹಾಗೆಯೇ ಉತ್ತರ ಕನ್ನಡ ಜಿಲ್ಲೆಯಲ್ಲಿಯೂ ಇದೇ ರೀತಿ ಕುಟುಂಬವೊಂದು ಬೆಳ್ಳಿ, ಬಂಗಾರ, ವಜ್ರ ವೈಡೂರ್ಯವನ್ನು ಧರಿಸಿರುವ ಶ್ರೀಮಂತ ಗಣಪನನ್ನು ಪ್ರತಿಷ್ಠಾಪಿಸಿದ್ದು, ಎಲ್ಲರ ಗಮನ ಸೆಳೆದಿದೆ.
ಬಿಬಿಎಂಪಿ: ಒಂದೇ ದಿನ 97,477 ಗಣೇಶ ಮೂರ್ತಿ ವಿಸರ್ಜನೆ
ಹೌದು, ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಪಟ್ಟಣದಲ್ಲಿ ಇಂತಹದೊಂದು ಶ್ರೀಮಂತ ಗಣಪ ಇದೆ. ಮಹಾಲೆ ಮನೆ ಕುಟುಂಬದವರು ಸ್ಥಾಪಿಸಿರುವ ಈ ಗಣಪ, ಲಾಲ್ ಭಾಗ್ ಚಾ ರಾಜ ಗಣಪತಿಯಷ್ಟು ಶ್ರೀಮಂತನಲ್ಲದಿದ್ದರೂ, ಉತ್ತರ ಕನ್ನಡ ಜಿಲ್ಲೆಯ ಮಟ್ಟಿಗೆ ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳು ಪ್ರತಿಷ್ಠಾಪಿಸುವ ಗಣೇಶನಿಗಿಂತ ಶ್ರೀಮಂತನಾಗಿದ್ದಾನೆ. ಮಹಾಲೆ ಮನೆ ವಿನಾಯಕ ಎಂದೇ ಪ್ರಸಿದ್ಧಿ ಪಡೆದಿರುವ ಈ ಗಣಪನಿಗೆ ಚಿನ್ನದ ಕಿರೀಟ, ಚಿನ್ನದ ಗಧೆ, ಚಿನ್ನದ ತ್ರಿಶೂಲ, ಚಿನ್ನದ ಪಾದುಕೆ ಸೇರಿದಂತೆ ಹತ್ತಾರು ಚಿನ್ನದ ಉಂಗುರಗಳು, ಬಂಗಾರದ ಮಾಲೆ, ವಜ್ರ ವೈಡೂರ್ಯಗಳಿಂದ ಅಲಂಕಾರ ಮಾಡಲಾಗಿದೆ. ಬೇಡಿದ ವರವವನ್ನು ಕರುಣಿಸುತ್ತಾನೆಂಬ ನಂಬಿಕೆ ಇರುವ ಕಾರಣದಿಂದ ಭಕ್ತರು ನಿತ್ಯವೂ ಇಲ್ಲಿಗೆ ಬಂದು ತಮ್ಮ ಇಷ್ಟಾರ್ಥಗಳನ್ನು ಈಡೇರಿಸುವಂತೆ ಹರಕೆ ಹೊತ್ತು ತೆರಳುತ್ತಿದ್ದಾರೆ.
ಹಣ್ಣುಗಳಿಂದ ಅಲಂಕಾರಗೊಂಡ ಗಣಪನನ್ನು ಕಣ್ತುಂಬಿಕೊಂಡ ಭಕ್ತರು
ಮಹಾಲೆ ಮನೆ ಗಣಪತಿ ಬಗ್ಗೆ ಅಭಿಪ್ರಾಯಗಳು?
ಹೀಗೆ ಹರಕೆ ಹೊತ್ತವರು ತಮ್ಮ ಇಷ್ಟಾರ್ಥಗಳು ಈಡೇರಿದ ಬಳಿಕ ಈ ಗಣಪನಿಗೆ ವಿಶೇಷ ಪೂಜೆಯನ್ನು ಸಲ್ಲಿಸುತ್ತಾರೆ. ಜೊತೆಗೆ ಚೌತಿಯ ಸಮಯದಲ್ಲಿ ಹರಕೆಯ ರೂಪದಲ್ಲಿ ಚಿನ್ನಾಭರಣಗಳನ್ನು ನೀಡುವುದು ರೂಡಿಯಲ್ಲಿದೆ. ಗಣಪತಿಗೆ ಪ್ರತಿ ವರ್ಷವೂ ಉಂಗುರ, ಸರ ಸೇರಿದಂತೆ ಬೆಳ್ಳಿ, ಬಂಗಾರದ ವಸ್ತುಗಳನ್ನು ಹರಕೆ ರೂಪದಲ್ಲಿ ನೀಡುತ್ತಾರೆ. ಇದರಿಂದಾಗಿ ಈ ಮಹಾಲೆ ಮನೆ ಗಣಪ ಜಿಲ್ಲೆಯಲ್ಲಿಯೇ ಅತೀ ಶ್ರೀಮಂತ ಗಣೇಶನಾಗಿ ಗುರುತಿಸಿಕೊಂಡಿದ್ದಾನೆ ಎಂದು ಸ್ಥಳೀಯರಾದ ಚೈತ್ರಾ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಮಹಾಲೆ ಮನೆ ಗಣಪತಿಯ ಮತ್ತೊಂದು ಹೆಸರು?
ಇನ್ನೂ ಈ ಮಹಾಲೆ ಮನೆ ಗಣಪತಿಗೆ ನೂರಾರು ವರ್ಷಗಳ ಇತಿಹಾಸ ಇದೆ. ಬ್ರಿಟಿಷರ ಕಾಲದಲ್ಲೇ ಈ ಮಹಾಲೆ ಮನೆ ಗಣಪತಿ, ಸಾರ್ವಜನಿಕ ಗಣಪತಿಗಿಂತಲೂ ಪಟ್ಟಣದಲ್ಲಿ ದೊಡ್ಡ ಗಣಪತಿ ಎಂದು ಗುರುತಿಸಿಕೊಂಡಿದ್ದ. ಪುಂಡಲಿಕ ಮಹಾಲೆ ಅವರು 1920ರಲ್ಲಿ ತಮ್ಮ ಮನೆಯಲ್ಲಿ ಆರು ಅಡಿಗೂ ಹೆಚ್ಚು ಎತ್ತರದಲ್ಲಿ ಈ ಗಣಪತಿಯನ್ನು ಪ್ರತಿಷ್ಠಾಪಿಸಿದ್ದರು. ಅಂದಿನಿಂದ ಇಂದಿನವರೆಗೂ ಪ್ರತಿ ಬಾರಿ ಚತುರ್ಥಿ ವೇಳೆಗೆ ಇದೇ ರೀತಿ ಗಣಪತಿಯನ್ನು ಪ್ರತಿಷ್ಠಾಪಿಸಲಾಗುತ್ತಿದೆ. ಸ್ವಾತಂತ್ರ್ಯ ಸಂಗ್ರಾಮದ ವೇಳೆಯೂ ಒಗ್ಗಟ್ಟು ಪ್ರದರ್ಶಿಸಲು ಈ ಗಣಪತಿ ಮೂರ್ತಿ ಸಹಕಾರಿ ಆಗಿತ್ತು ಎಂದು ಇಲ್ಲಿನ ಸ್ಥಳೀಯರ ಅಭಿಪ್ರಾಯ ಆಗಿದೆ.
ಗಣಪನ ಮೈಬಣ್ಣ ಬದಲಾವಣೆಗೆ ಸಂಶೋಧನೆ
ಮೊದಲು ಈ ಗಣಪತಿ ಮೂರ್ತಿಗೆ ಸಿಂಧೂರ ಬಣ್ಣವನ್ನು ಉಪಯೋಗಿಸಲಾಗುತಿತ್ತು. ನಂತರ ಮನುಷ್ಯನ ಮೈಬಣ್ಣದಂತೆ ಮೂರ್ತಿಯನ್ನು ಮೂಡಿಸಬೇಕು ಎನ್ನುವ ಬಗ್ಗೆ ಚರ್ಚೆಗಳನ್ನು ಮಾಡಲಾಯಿತು. ಸಾಕಷ್ಟು ಸಂಶೋಧನೆಗಳನ್ನು ನಡೆಸಿ ಇದೀಗ ಮನುಷ್ಯನ ಮೈಬಣ್ಣ ಹೋಲುವಂತೆ ಈ ಗಣಪನ ಮೂರ್ತಿಯನ್ನು ತಯಾರಿಸುತ್ತಿದ್ದಾರೆ. ನೂರಾರು ವರ್ಷಗಳೇ ಕಳೆದರೂ ಈ ಬಣ್ಣದಲ್ಲಿ, ಗಣಪನ ಮೂರ್ತಿಯ ತೇಜಸ್ಸಿನಲ್ಲಿ ಬದಲಾವಣೆ ಕಾಣದಿರುವುದು ಅಚ್ಚರಿಯ ಸಂಗತಿ ಆಗಿದೆ ಎಂದು ಗಣಪನನನ್ನು ಪೂಜಿಸುತ್ತಿರುವ ಕುಟುಂಬದವರು ಹೇಳುತ್ತಿದ್ದಾರೆ. ಗಣೇಶ ಮೂರ್ತಿಯನ್ನು ಪೂಜಿಸುತ್ತಿರುವ ಕುಟುಂಬದ ಪ್ರಮುಖರಾದ ವಸಂತ್ ಮಹಾಲೆ ಅವರು ಗಣಪತಿ ಬಣ್ಣದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ.
ಗಣೇಶ ಮೂರ್ತಿ ವಿಸರ್ಜಜನೆಯ ನಿಯಮಗಳು
ಇನ್ನು ಸ್ವಾತಂತ್ರ್ಯ ಪೂರ್ವದಿಂದಲೂ ಈ ಮಹಾಲೆ ಕುಟುಂಬದವರು ತಾವೇ ಮಣ್ಣಿನಿಂದ ಗಣೇಶ ಮೂರ್ತಿಯನ್ನು ತಯಾರಿಸುತ್ತಿದ್ದಾರೆ. ಚತುರ್ಥಿಯ ಸಮಯದಲ್ಲಿ 11 ದಿನಗಳ ಕಾಲ ಗಣೇಶನ ಮೂರ್ತಿಗೆ ಪೂಜೆ ಮಾಡುತ್ತಾರೆ. ಆದರೆ ಈ ಬಾರಿ ಹುಣ್ಣಿಮೆ ಎದುರಾಗಿರುವ ಕಾರಣ ಹತ್ತೇ ದಿನಕ್ಕೆ ಗಣೇಶ ಮೂರ್ತಿಯನ್ನು ವಿಸರ್ಜಿಸಲಾಗುತ್ತಿದೆ. ವಿಸರ್ಜನಾ ಸಮಯದಲ್ಲಿ ಈ ಗಣೇಶನ ಹಬ್ಬಕ್ಕೆ ಪೊಲೀಸ್ ಭದ್ರತೆಯನ್ನೂ ನೀಡಿರುವುದು ವಿಶೇಷವಾಗಿದೆ ಎಂದು ಅಲ್ಲಿನ ಸ್ಥಳೀಯರು ಹೇಳುತ್ತಿದ್ದಾರೆ.