ಕುಡಿದ ಅಮಲಿನಲ್ಲಿ ಸೋದರನ ಮಗನ ಕೊಲೆ ಮಾಡಿದ ನಿವೃತ್ತ ಸೈನಿಕ
ಅಂಕೋಲಾ (ಉತ್ತರ ಕನ್ನಡ), ಜುಲೈ 28: ಆಸ್ತಿ ಕಲಹದ ವಿಷಯವಾಗಿ ಜಗಳಕ್ಕಿಳಿದ ನಿವೃತ್ತ ಸೈನಿಕ, ಬಂದೂಕಿನಿಂದ ಗುಂಡು ಹಾರಿಸಿ, ಸೋದರನ ಮಗನನ್ನು ಕೊಲೆ ಮಾಡಿದ್ದಾನೆ. ಸೋದರನ ಪತ್ನಿಯ ಮೇಲೂ ಗುಂಡು ಹಾರಿಸಿದ್ದು, ಆಕೆ ಗಂಭೀರವಾಗಿ ಗಾಯಗೊಂಡಿದ್ದಾರೆ.
ಅಂಕೋಲಾ ತಾಲೂಕಿನ ಮಠಕೇರಿಯ ನಿವಾಸಿ ಅಮಿತ್ ಪ್ರಭು ಅವರ ಪುತ್ರ ಅನೋಜ್ (9) ಮೃತ ಬಾಲಕ. ಈತ ಜೈಹಿಂದ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಎರಡನೇ ತರಗತಿಯಲ್ಲಿ ಓದುತ್ತಿದ್ದ. ಘಟನೆಯಲ್ಲಿ ಅಮಿತ್ ಅವರ ಪತ್ನಿ ಮೇಧಾ ಪ್ರಭು (40) ಗಂಭೀರವಾಗಿ ಗಾಯಗೊಂಡಿದ್ದು, ಮಣಿಪಾಲಕ್ಕೆ ಹೆಚ್ಚಿನ ಚಿಕಿತ್ಸೆಗಾಗಿ ಕರೆದುಕೊಂಡು ಹೋಗಲಾಗಿದೆ.
ಅಕ್ರಮ ಸಂಬಂಧದ ಗಲಾಟೆಯಲ್ಲಿ 75 ವರ್ಷದ ವೃದ್ಧರ ಕೊಲೆಯಾಯಿತಾ?
ಸೇನೆಯಲ್ಲಿ ಹವಾಲ್ದಾರರಾಗಿ ನಿವೃತ್ತಿ ಹೊಂದಿರುವ ಅಜಯ ಪ್ರಭು (ಸುಬ್ರಾಯ) (45) ಗುಂಡು ಹಾರಿಸಿದ ಆರೋಪಿ. ಅಮಿತ್ ಹಾಗೂ ಅಜಯ್ ಇಬ್ಬರೂ ಒಂದೇ ಮನೆಯಲ್ಲಿ ವಾಸ ಮಾಡುತ್ತಿದ್ದರು. ನೆಲ ಅಂತಸ್ತಿನಲ್ಲಿದ್ದ ತಮ್ಮ ಮನೆಯಲ್ಲಿ ಶನಿವಾರ ಸಂಜೆ ಮೇಧಾ ಅವರು ಮಗ ಅನೋಜ್ ಗೆ ಪಾಠ ಮಾಡುತ್ತಿದ್ದರು. ಈ ವೇಳೆ ಅವರ ಪತಿ ಅಮಿತ್ ಇರಲಿಲ್ಲ.
ಕುಡಿದ ಮತ್ತಿನಲ್ಲಿ ಮೇಲಿನ ತನ್ನ್ ರೂಮಿನಿಂದ ಡಬಲ್ ಬ್ಯಾರೆಲ್ ಗನ್ ಹಿಡಿದು ಬಂದ ಅಜಯ್, ಏಕಾಏಕಿ ಮೇಧಾ ಹಾಗೂ ಅನೋಜ್ ಮೇಲೆ ಗುಂಡು ಹಾರಿಸಿದ್ದಾನೆ. ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಅಂಕೋಲಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.