ಕಾರವಾರವನ್ನೂ ಬಿಡುತ್ತಿಲ್ಲ ಮಳೆ, ತೆರೆದುಕೊಂಡಿವೆ ಗಂಜಿ ಕೇಂದ್ರಗಳು
ಕಾರವಾರ, ಆಗಸ್ಟ್ 6: ಉತ್ತರ ಕನ್ನಡ ಜಿಲ್ಲೆಯಲ್ಲೂ ಮಳೆ ಮುಂದುವರಿದಿದೆ. ಹೆದ್ದಾರಿಗಳಲ್ಲೂ ನೀರು ತುಂಬಿದ ಕಾರಣ ಜಿಲ್ಲೆಯ ಕರಾವಳಿ ಹಾಗೂ ಮೆನಾಡು ಭಾಗಗಳ ರಸ್ತೆ ಸಂಪರ್ಕ ಕಡಿತಗೊಂಡಿದೆ.
ನಿನ್ನೆಯಿಂದ ಎಡೆಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಜಿಲ್ಲೆಯ ಹಳ್ಳ- ಕೊಳ್ಳ, ನದಿಗಳು ತುಂಬಿ ಅಪಾಯದ ಮಟ್ಟದಲ್ಲಿ ಹರಿಯಲಾರಂಭಿಸಿವೆ. ನಿನ್ನೆ ಸಂಜೆಯಿಂದ ರಾಷ್ಟ್ರೀಯ ಹೆದ್ದಾರಿಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗುತ್ತಿದೆ. ಶಿರಸಿ, ಹುಬ್ಬಳ್ಳಿ, ಹಾವೇರಿ ಭಾಗದವರು ಕುಮಟಾ, ಕಾರವಾರಕ್ಕೆ ಬರಲಾಗದ ಪರಿಸ್ಥಿತಿ ಇದೆ.
ಎಲ್ಲೆಲ್ಲೂ ಮಳೆಯೋ ಮಳೆ, ಆದ್ರೆ ಇಲ್ಲಿ ಕಥೆ ಕೇಳೋರೇ ಇಲ್ಲ...
ನಿನ್ನೆ ಸಂಜೆಯಿಂದ ಸುಮಾರು ಆರು ಖಾಸಗಿ ಪ್ರಯಾಣಿಕ ಬ್ ಗಳನ್ನು ಒಳಗೊಂಡು ಹಲವು ವಾಹನಗಳು ಯಾವ ಕಡೆಗೂ ಹೋಗಲಾರದೆ ಕುಮಟಾ ಕತಗಾಲ ಬಳಿ ಸಿಕ್ಕಿ ಹಾಕಿಕೊಂಡಿದ್ದವು. ಬೆಂಗಳೂರು ಭಾಗಗಳಿಗೆ ತೆರಳಬೇಕಿದ್ದ ಇನ್ನೂರಕ್ಕೂ ಹೆಚ್ಚು ಪ್ರಯಾಣಿಕರು ರಾತ್ರಿಯವರೆಗೆ ಮಳೆಯ ನಡುವೆ ಬಸ್ ನಲ್ಲೇ ಕುಳಿತು ಭಯಭೀತರಾಗಿದ್ದರು.
ಈ ಬಗ್ಗೆ ಮಾಹಿತಿ ಪಡೆದ ಜಿಲ್ಲಾಡಳಿತ, ಕೂಡಲೇ ಸ್ಥಳೀಯ ಪೊಲೀಸರ ಸಹಕಾರದಿಂದ ವಾಹನಗಳು ಮುಂದಕ್ಕೆ ಸಾಗುವಂತೆ ಅನುವು ಮಾಡಿಕೊಟ್ಟಿತು. ಇನ್ನು ಯಲ್ಲಾಪುರದ ಸುಂಕಸಾಳ ಭಾಗದಲ್ಲೂ ಇದೇ ರೀತಿಯ ಪರಿಸ್ಥಿತಿ ಇತ್ತು. ಕತಗಾಲ ಭಾಗಕ್ಕಿಂತಲೂ ಹೆಚ್ಚು ನೀರು ಸುಂಕಸಾಳ ಭಾಗದಲ್ಲಿ ತುಂಬಿದ್ದರಿಂದ ಅಲ್ಲಿ ಸಿಕ್ಕಿ ಹಾಕಿಕೊಂಡಿದ್ದ ವಾಹನಗಳನ್ನು ಹೊರ ತರಲು ಅಧಿಕಾರಿಗಳೂ ತಲೆ ಕೆಡಿಸಿಕೊಂಡರು. ಕೊನೆಗೆ ವಾಹನಗಳಲ್ಲಿದ್ದ ಪ್ರಯಾಣಿಕರಿಗೆ ಜಿಲ್ಲಾಡಳಿತ ತಿಂಡಿ- ತಿನಿಸುಗಳ ಪೊಟ್ಟಣ ಪೂರೈಸಿ, ಮಧ್ಯರಾತ್ರಿ ಸುಮಾರು ಒಂದೂವರೆ ಗಂಟೆಗೆ ವಾಹನಗಳು ಹೋಗಲು ವ್ಯವಸ್ಥೆ ಮಾಡಿದರು.
ಮಳೆಯಿಂದಾಗಿ ಅಂಕೋಲಾ, ಕುಮಟಾ ಸೇರಿದಂತೆ ಕಾರವಾರದ ಕದ್ರಾ ಭಾಗಗಳಲ್ಲಿ ಹಲವು ಗ್ರಾಮಗಳು ಜಲಾವ್ರತಗೊಂಡಿವೆ. ಹೀಗಾಗಿ ಜಿಲ್ಲಾಡಳಿತ ಅವರಿಗೆ ವಿವಿಧೆಡೆ ಗಂಜಿ ಕೇಂದ್ರಗಳನ್ನು ತೆರೆದು ಊಟ, ವಸತಿ ವ್ಯವಸ್ಥೆ ಮಾಡಲಾಗಿದೆ.
ಕರಾವಳಿ ಭಾಗದಲ್ಲಿ ತೀವ್ರ ಮಳೆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಉತ್ತರ ಕನ್ನಡ ಜಿಲ್ಲೆಯ ಯಾವುದೇ ಕಡಲತೀರಗಳಿಗೆ ಪ್ರವಾಸಿಗರು ಹಾಗೂ ಸಾರ್ವಜನಿಕರು ಮುಂದಿನ 48 ಗಂಟೆ ತೆರಳದಂತೆ ನಿಷೇಧಿಸಿ ಜಿಲ್ಲಾಧಿಕಾರಿ ಡಾ.ಹರೀಶಕುಮಾರ್ ಕೆ. ಆದೇಶಿಸಿದ್ದಾರೆ.