ಮರು ಜಾರಿಯಾಯ್ತು ಮೀನುಗಾರರಿಗೆ ಹೆಚ್ಚುವರಿ ಪರಿಹಾರಧನ ನೀಡುವ ಆದೇಶ
ಕಾರವಾರ, ಡಿಸೆಂಬರ್ 13: ಈ ಬಾರಿ ಆಗಸ್ಟ್, ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳಲ್ಲಿ ಅತಿವೃಷ್ಟಿ, ಪ್ರವಾಹದಿಂದ ಹಾನಿಯಾದ ಮೀನುಗಾರರ ದೋಣಿ ಮತ್ತು ಬಲೆಗಳಿಗೆ ಪರಿಹಾರ ನೀಡುವ ಕುರಿತು ಹೊರಡಿಸಲಾದ ಡಿ.2ರ ಆದೇಶವನ್ನು ಮರು ಜಾರಿಗೆ ತರಲು ಆದೇಶಿಸಲಾಗಿದೆ.
ಆದೇಶವನ್ನು ಡಿ.3ರಂದು ತಡೆಹಿಡಿಯಲಾಗಿತ್ತು. ಆದರೆ, ಇದೇ ಆದೇಶವನ್ನು ಮರು ಜಾರಿಗೆ ತರಲು ಇದೀಗ ಕಂದಾಯ ಇಲಾಖೆಯ ಜಂಟಿ ಕಾರ್ಯದರ್ಶಿ ಕೆ.ಉಮಾಪತಿಯವರು ಇಂದು ಆದೇಶ ಹೊರಡಿಸಿದ್ದಾರೆ.
'ಚೌರಿ’ ಹಾಕಿ ಕಪ್ಪೆ ಬೊಂಡಾಸ್ ಅವ್ಯಾಹತ ಬೇಟೆ; ಮಾಯವಾಗುತ್ತಿದೆ ಕಡಲ ತೀರ
ಆಗಸ್ಟ್ ತಿಂಗಳಿನಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಉಂಟಾದ ಅತಿವೃಷ್ಟಿ, ಪ್ರವಾಹದಿಂದಾಗಿ ಕರಾವಳಿ ಭಾಗದಲ್ಲಿನ ಮೀನುಗಾರರ 170 ದೋಣಿಗಳು ಪೂರ್ತಿಯಾಗಿ, 93 ದೋಣಿಗಳು ಭಾಗಶಃ ಹಾನಿಯಾಗಿದ್ದವು. 244 ಬಲೆಗಳು ಪೂರ್ತಿಯಾಗಿ, 161 ಬೆಲೆಗಳು ಭಾಗಶಃ ಹಾನಿಗೊಳಗಾಗಿತ್ತು. ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಲ್ಲಿ ಉಂಟಾದ ಪ್ರವಾಹದಿಂದಾಗಿ 10 ದೋಣಿಗಳು ಪೂರ್ತಿಯಾಗಿ, 157 ದೋಣಿಗಳು ಭಾಗಶಃ ಹಾನಿಯಾಗಿದ್ದವು. 116 ಬಲೆಗಳು ಪೂರ್ತಿಯಾಗಿ, 141 ಬಲೆಗಳು ಭಾಗಶಃ ಹಾನಿಗೊಳಗಾಗಿರುವುದಾಗಿ ಮೀನುಗಾರಿಕೆ ಇಲಾಖೆಯ ಉಪ ನಿರ್ದೇಶಕರು ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಿದ್ದರು.
ಅದರಂತೆ, ಜಿಲ್ಲೆಯಲ್ಲಿ ಪ್ರವಾಹದಿಂದ ಹಾನಿಗೊಳಗಾದ ಮೀನುಗಾರರಿಗೆ ಎನ್ ಡಿಆರ್ ಎಫ್, ಎಸ್ ಡಿಆರ್ ಎಫ್ ನಿಂದ ನೀಡುವ ಪರಿಹಾರ ಧನವನ್ನು ಹೊರತುಪಡಿಸಿ ಹೆಚ್ಚುವರಿಯಾಗಿ ಪರಿಹಾರ ನೀಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ನ.16ರಂದು ಜಿಲ್ಲೆಯಲ್ಲಿ ಕೈಗೊಂಡ ಪ್ರವಾಸ ಸಂದರ್ಭದಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದರು. ಅದರಂತೆ 1,52,20,000 ರೂಗಳನ್ನು ಮಂಜೂರು ಮಾಡುವಂತೆ ಕೋರಿ ವಿವರಗಳೊಂದಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು.
ಮತ್ಸ್ಯ ಪ್ರಿಯರಿಗೆ ಗುಡ್ ನ್ಯೂಸ್ ಕೊಟ್ಟ ಸಚಿವ ಕೋಟ ಶ್ರೀನಿವಾಸ್
ಜಿಲ್ಲಾಧಿಕಾರಿಗಳ ಪ್ರಸ್ತಾವನೆಯನ್ನು ಪರಿಶೀಲಿಸಿದ ಸರ್ಕಾರ, ಪ್ರಸ್ತಾವನೆಯಲ್ಲಿ ಸಲ್ಲಿಸಲಾದ ಹೆಚ್ಚುವರಿ ಪರಿಹಾರ ಧನವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಕೆಲವು ಷರತ್ತುಗಳಿಗೆ ಒಳಪಟ್ಟು ಬಿಡುಗಡೆ ಮಾಡಲು ಡಿಸೆಂಬರ್ 2ರಂದು ಆದೇಶಿಸಿದ್ದು, ಇದೀಗ ಮರು ಜಾರಿಗೆ ತಂದಿದೆ.