ರಂಗೋಲಿಗಳೇ ಈ ಜಾತ್ರೆಯ ಸ್ಪೆಷಲ್; ಅನ್ಯ ರಾಜ್ಯದವರಿಂದಲೂ ವೀಕ್ಷಣೆ
ಕಾರವಾರ, ಡಿಸೆಂಬರ್ 25: ಜಾತ್ರೆ ಅಂತಂದರೆ ಅಲ್ಲಿ ವಿದ್ಯುತ್ ದೀಪಗಳ ಝಗಮಗ, ಸಿಹಿ ತಿನಿಸುಗಳ ಮಾರಾಟ, ಬಣ್ಣಬಣ್ಣದ ಉಡುಪು ಧರಿಸಿದ ಯುವಕ- ಯುವತಿಯರ ತಿರುಗಾಟ ಕಾಣ ಸಿಗುವುದು ಸಾಮಾನ್ಯ. ಆದರೆ, ಕಾರವಾರದ ಮಾರುತಿ ಮಂದಿರದ ಜಾತ್ರಾ ಸಂಭ್ರಮ ಒಂದಷ್ಟು ವಿಭಿನ್ನ. ಈ ಜಾತ್ರೆಯ ಅಂಗಳ ತುಂಬಾ ತುಂಬಿದ್ದ ರಂಗೋಲಿಗಳು ಎಲ್ಲರ ಗಮನ ಸೆಳೆಯುತ್ತವೆ.
ಅರೆ, ಇದೇನಪ್ಪಾ..! ಫ್ಲೆಕ್ಸ್, ಬ್ಯಾನರ್ ಗಳ ಕಾಲದಲ್ಲಿ ರಂಗೋಲಿನಾ ಅಂತ ಆಶ್ಚರ್ಯ ಪಡಬೇಡಿ. ಈ ಜಾತ್ರೆಯ ವಿಶೇಷವೇ ಹಾಗೆ. ಜಾತ್ರೆ ಪ್ರಯುಕ್ತ ರಂಗೋಲಿಗಳನ್ನು ಹಾಕುತ್ತಾರೆ. ಪ್ರತಿ ವರ್ಷದಂತೆ ಈ ವರ್ಷ ಸಹ ರಂಗೋಲಿ ಸ್ಪರ್ಧೆಯನ್ನು ಏರ್ಪಡಿಸಿದ್ದರು.
ಚಿತ್ರ; ಶೃಂಗೇರಿ ದೇಗುಲದಲ್ಲಿ ಚಿತ್ತ ಸೆಳೆಯುತ್ತಿದೆ ಈ ಬೃಹತ್ ರಂಗವಲ್ಲಿ...
ಇತ್ತೀಚೆಗೆ ತೆರೆಕಂಡ ಬಾಲಿವುಡ್ನ ಪ್ರಸ್ಥಾನಮ್ ಚಿತ್ರದಲ್ಲಿನ ನಟ ಸಂಜಯ್ ದತ್ರ ಖಡಕ್ ಲುಕ್, ಬಿಗ್ ಬಿ ಅಮಿತಾಬ್ ಬಚ್ಚನ್, ಶಿವಾಜಿ ಮಹಾರಾಜ್ ಸೇರಿದಂತೆ ರಂಗೋಲಿಯಲ್ಲಿ ಮೂಡಿದ ಅನೇಕರ ಭಾವಚಿತ್ರಗಳು ನೋಡುಗರ ಕಣ್ಮನ ಸೆಳೆದವು.
ವ್ಯಕ್ತಿಗಳ ಚಿತ್ರಗಳು ಇದ್ದವು
ರಾಜ್ಯವನ್ನೇ ತತ್ತರಿಸುವಂತೆ ಮಾಡಿದ ನೆರೆ ಹಾವಳಿ, ರಕ್ಷಣಾ ಕಾರ್ಯಾಚರಣೆ, ಕಂಬಳಿ ಹೊದ್ದು ಭಿಕ್ಷೆ ಕೇಳುತ್ತಿರುವ ಅಜ್ಜ ಹಾಗೂ ತಿಂಡಿ ತುಂಬಿದ ತಟ್ಟೆ ಹಿಡಿದು ನಿಂತಿರುವ ವಯೋವೃದ್ಧನ ಭಾವಚಿತ್ರಗಳು ಎಲ್ಲರನ್ನು ಆಕರ್ಷಿಸಿದವು. ಪ್ರತಿ ವರ್ಷದಂತೆ ನೂರಾರು ಮಂದಿ ಜಾತ್ರೆ ಪ್ರಯುಕ್ತ ತಮ್ಮ ತಮ್ಮ ಮನೆಯ ಮುಂದೆ ರಂಗೋಲಿಗಳನ್ನ ಬಿಡಿಸಿ ಪ್ರದರ್ಶನಕ್ಕೆ ಇಡುವ ಮೂಲಕ ಜನರ ಮೆಚ್ಚುಗೆ ಗಳಿಸಿದರು.
ಕಾರವಾರದ ಮಾರುತಿ ಜಾತ್ರೆಯಲ್ಲಿ ಕೇವಲ ಖ್ಯಾತ ವ್ಯಕ್ತಿಗಳ ಭಾವಚಿತ್ರ ಮಾತ್ರ ಬಿಡಿಸದೇ ಚುಕ್ಕಿ ರಂಗೋಲಿ, ಹೂವಿನಿಂದ ಹಾಕಿದ ರಂಗೋಲಿ, ವಿವಿಧ ಧಾನ್ಯಗಳು ಹಾಗೂ ಬೆಲೆ ಏರಿಕೆಯಿಂದ ಜನರಿಗೆ ಕಣ್ಣೀರು ತರಿಸಿದ ಈರುಳ್ಳಿಯಿಂದ ಮಾಡಿ ರಂಗೋಲಿಯನ್ನೂ ಹಾಕಿ ಪ್ರದರ್ಶಿಸಲಾಯಿತು.
ಅನ್ಯ ರಾಜ್ಯಗಳಿಂದಲೂ ಜನರ ಆಗಮನ
'ಈ ಹಿಂದೆ ಮಾರುತಿ ದೇವಾಲಯದ ಜಾತ್ರೆ ವೇಳೆ ಪ್ರತಿಯೊಬ್ಬರೂ ತಮ್ಮ ತಮ್ಮ ಮನೆಯ ಮುಂದೆ ರಂಗೋಲಿ ಹಾಕಿ ದೇವರನ್ನು ಸ್ವಾಗತಿಸುತ್ತಿದ್ದರು. ಆದರೆ, ಇದು ವರ್ಷದಿಂದ ವರ್ಷಕ್ಕೆ ರಂಗೋಲಿ ಸ್ಪರ್ಧೆಯಾಗಿ ಮಾರ್ಪಟ್ಟಿದ್ದು, ಜನರೂ ಪ್ರೇಕ್ಷಕರನ್ನು ಆಕರ್ಷಿಸುವ ನಿಟ್ಟಿನಲ್ಲಿ ಸ್ಪರ್ಧೆಯಲ್ಲಿ ವಿಭಿನ್ನ ರೀತಿಯಲ್ಲಿ ರಂಗೋಲಿಗಳನ್ನು ಹಾಕಲು ಪ್ರಾರಂಭಿಸಿದರು" ಎನ್ನುತ್ತಾರೆ ಸ್ಥಳೀಯರಾದ ವಿದ್ಯಾ ಕಾಮತ್.
ಮಾರುತಿ ಜಾತ್ರೆಯಲ್ಲಿ ರಂಗೋಲಿಗಳೇ ಆಕರ್ಷಣೆ ಆಗಿರುವುದರಿಂದ ಕೇವಲ ಕಾರವಾರದಿಂದ ಮಾತ್ರವಲ್ಲದೇ ಗೋವಾ, ಮಹಾರಾಷ್ಟ್ರ, ಮುಂಬೈಯಿಂದ ಸಹ ಜನರು ಆಗಮಿಸಿ ರಂಗೋಲಿಗಳನ್ನು ನೋಡಿ ಖುಷಿಪಡುತ್ತಾರೆ. ಅನೇಕರು ತಮ್ಮ ತಮ್ಮ ಮೊಬೈಲ್ ಗಳಲ್ಲಿ ಸಹ ರಂಗೋಲಿಗಳ ಫೊಟೋಗಳನ್ನ ಸೆರೆಹಿಡಿಯೋ ಮೂಲಕ ಸಂತಸಪಟ್ಟರು.
ಬಹಹುಮಾನ ವಿತರಣೆ
ಮಾರುತಿ ದೇವರ ಜಾತ್ರೆಯಲ್ಲಿ ಮುಂಜಾನೆವರೆಗೂ ಜನರು ರಂಗೋಲಿ ಪ್ರದರ್ಶನ ಮಾಡಿದರು. ಸಾವಿರಾರು ಜನರು ಬೆಳಿಗ್ಗೆಯವರೆಗೂ ಆಕರ್ಷಕ ರಂಗೋಲಿ ನೋಡಲು ಆಗಮಿಸುತ್ತಿದ್ದರು.
ಜಾತ್ರೆಯ ಸಂಘಟಕರು ಪ್ರಸಿದ್ದ ವ್ಯಕ್ತಿಗಳ ಭಾವಚಿತ್ರಕ್ಕೆ, ಚುಕ್ಕಿ ರಂಗೋಲಿ, ಧಾನ್ಯದ ರಂಗೋಲಿ ಹಾಗೂ ಹೂವಿನ ರಂಗೋಲಿಗೆ ಪ್ರತ್ಯೇಕವಾಗಿ ಬಹುಮಾನ ನೀಡಿದರು. ಅಲ್ಲದೇ ಸ್ಪರ್ಧೆಯಲ್ಲಿ ಪಾಲ್ಗೊಂಡ ಪ್ರತಿ ಸ್ಪರ್ಧಾಳುಗಳಿಗೂ ಸಮಾಧಾನಕರ ಬಹುಮಾನ ನೀಡಲಾಯಿತು.
ಕಲಾವಿದರಿಗೆ ಶ್ಲಾಘನೆ
ಕಳೆದ 40 ವರ್ಷಗಳಿಂದ ಕಾರವಾರದ ಉಡುಪಿ ಶ್ರೀಕೃಷ್ಣ ವಿಲಾಸ (ಯುಎಸ್ ಕೆವಿ) ಹೋಟೆಲ್ ನಲ್ಲಿ ಸಪ್ಲೈಯರ್ ಆಗಿ ಕೆಲಸ ಮಾಡುತ್ತಿರುವ ಹಿರಿಯ ರಾಮ ಪೂಜಾರಿ ಅವರ ಭಾವಚಿತ್ರವನ್ನೂ ಜಾತ್ರೆಯಲ್ಲಿ ಕಲಾವಿದ ನಿಖಿಲ್ ರಾಯ್ಕರ್ ಎನ್ನುವವರು ಚಿತ್ರಿಸಿದ್ದರು.
ಇದು ಭಾರೀ ಮೆಚ್ಚುಗೆಗೆ ಪಾತ್ರವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ ಕಲಾವಿದನಿಗೆ ನೆಟ್ಟಿಗರಿಂದ ಶ್ಲಾಘನೆ ವ್ಯಕ್ತವಾಗಿದೆ.