ಉತ್ತರಕನ್ನಡದಲ್ಲಿ ಮುಂದುವರಿದ ಮಳೆ ಆರ್ಭಟ: ಜು.6ರಂದು ಶಾಲಾ-ಕಾಲೇಜುಗಳಿಗೆ ರಜೆ
ಕಾರವಾರ,ಜು5: ಉತ್ತರಕನ್ನಡ ಜಿಲ್ಲೆಯಲ್ಲಿ ಮುಂದುವರೆದ ಭಾರೀ ಮಳೆ ಹಿನ್ನಲೆ ಜುಲೈ 6ರಂದು ಸಹ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಜಿಲ್ಲೆಯಲ್ಲಿ ಕಳೆದ ಮೂರುಗಳಿಂದ ಧಾರಾಕಾರ ಮಳೆ ಸುರಿಯುತ್ತಿದೆ. ಅಲ್ಲದೆ, ಮುಂದಿನ ಮೂರು ದಿನಗಳ ಕಾಲ ಭಾರಿ ಮಳೆ ಇದೆ ಎಂಬ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಮಕ್ಕಳ ಹಿತದೃಷ್ಟಿಯಿಂದ ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮುಲೈ ಮುಹಿಲನ್ ಆದೇಶದಲ್ಲಿ ಹೇಳಿದ್ದಾರೆ.
ಉತ್ತರ ಕನ್ನಡದಲ್ಲಿ ವ್ಯಾಪಕ ಮಳೆ; ಶಾಲಾ ಕಾಲೇಜಿಗೆ ರಜೆ ಘೋಷಿಸಿದ ಜಿಲ್ಲಾಧಿಕಾರಿ
ಉತ್ತರಕನ್ನಡ ಜಿಲ್ಲೆಯಲ್ಲಿ ಮಂಗಳವಾರವೂ ಮಳೆ ಆರ್ಭಟ ಮುಂದುವರಿದಿದ್ದು, ಬಿಡುವಿಲ್ಲದೆ ಸುರಿಯುತ್ತಿರುವ ಮಳೆಯಿಂದಾಗಿ ನದಿಗಳು ಉಕ್ಕಿ ಹರಿದು ತಗ್ಗು ಪ್ರದೇಶಗಳು ಜಲಾವೃತಗೊಳ್ಳತೊಡಗಿವೆ.
ಹೌದು, ಜಿಲ್ಲೆಯ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಕಳೆದ ಎರಡು ದಿನದಿಂದ ಬಿಡುವಿಲ್ಲದೆ ಸುರಿಯುತ್ತಿರುವ ಮಳೆಯಿಂದಾಗಿ ಗಂಗಾವಳಿ, ಅಘನಾಶಿನಿ, ಶರಾವತಿ ನದಿಗಳು ತುಂಬಿ ಹರಿಯಲಾರಂಭಿಸಿವೆ. ಇದರಿಂದ ನದಿ ತೀರದಲ್ಲಿರುವ ತಗ್ಗು ಪ್ರದೇಶಗಳು ಜಲಾವೃತಗೊಳ್ಳತೊಡಗಿದ್ದು ಇದೇ ರೀತಿ ಮಳೆ ಮುಂದುವರಿದಲ್ಲಿ ನದಿ ನೀರು ಇನ್ನಷ್ಟು ಪ್ರದೇಶಗಳಿಗೆ ನುಗ್ಗುವ ಆತಂಕ ಎದುರಾಗಿದೆ. ಉತ್ತರಕನ್ನಡ ಜಿಲ್ಲೆಯಲ್ಲಿ ಮುಂದುವರೆದ ಭಾರೀ ಮಳೆ ಹಿನ್ನೆಲೆ ಬುಧವಾರ ಶಾಲಾ ಕಾಲೇಜುಗಳಿಗೆ ರಜೆ ನೀಡುವಂತೆ ಜಿಲ್ಲಾಧಿಕಾರಿ ಮುಲೈ ಮುಹಿಲನ್ ಆದೇಶಿಸಿದ್ಧಾರೆ. ಜಿಲ್ಲೆಯಲ್ಲಿ ಮೂರು ದಿನಗಳ ಕಾಲ ಮಳೆ ಮುಂದುವರೆಯುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಶಾಲಾ ಮಕ್ಕಳ ಹಿತದೃಷ್ಟಿಯಿಂದ ರಜೆ ಘೋಷಣೆ ಮುಂಜಾಗ್ರತಾ ಕ್ರಮವಾಗಿ ಶೈಕ್ಷಣಿಕ ಸಂಸ್ಥೆಗಳಿಗೆ ನಾಳೆಯೂ ರಜೆ ಮುಂದುವರಿದಿದೆ.
ಜನವಸತಿ ಪ್ರದೇಶಗಳಿಗೆ ನುಗ್ಗಿದ ನೀರು
ಇನ್ನೊಂದೆಡೆ ನೌಕಾನೆಲೆ ಹಾಗೂ ರಾಷ್ಟ್ರೀಯ ಹೆದ್ದಾರಿ 66 ಅಗಲೀಕರಣ ಕಾಮಗಾರಿ ಗುತ್ತಿಗೆ ಪಡೆದಿರುವ ಐಆರ್ ಬಿ ಕಂಪನಿಯ ಅವೈಜ್ಞಾನಿಕ ಕಾಮಗಾರಿಗಳಿಂದ ಕಾರವಾರದ ವಿವಿಧೆಡೆ ಕೃತಕ ನೆರೆ ಸೃಷ್ಟಿಯಾಗಿದೆ. ತಾಲ್ಲೂಕಿನ ಚೆಂಡೀಯಾ, ಅರಗಾದಲ್ಲಿ ಹೆದ್ದಾರಿ ಸಂಪೂರ್ಣ ಜಲಾವೃತಗೊಂಡಿದ್ದು ಇಲ್ಲಿನ ಸುತ್ತಮುತ್ತಲಿನ ಮನೆಗಳಿಗೆ ನೀರು ನುಗ್ಗಿ ಹಾನಿಯಾಗಿದೆ. ಇನ್ನು ನೀರು ಹರಿದುಹೋಗುವ ಪ್ರದೇಶದಲ್ಲಿ ನೌಕಾನೆಲೆ ಕಂಪೌಂಡ್ ನಿರ್ಮಾಣ ಮಾಡಿದ್ದು ಇದರಿಂದ ಸರಿಯಾಗಿ ಹರಿದುಹೋಗದೇ ಪ್ರತಿ ವರ್ಷವೂ ಜನವಸತಿ ಪ್ರದೇಶಗಳಿಗೆ ನೀರು ನುಗ್ಗಿ ಹಾನಿಯಾಗತೊಡಗಿದೆ. ಇನ್ನು ಸ್ಥಳಕ್ಕೆ ಶಾಸಕಿ ರೂಪಾಲಿ ರೂಪಾಲಿ ನಾಯ್ಕ, ಎಸಿ ಜಯಲಕ್ಷ್ಮಿ ರಾಯಕೋಡ್, ತಹಸೀಲ್ದಾರ್, ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ಪರಿಶೀಲನೆ ನಡೆಸಿದ್ದು ಪರಿಹಾರ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಉತ್ತರಕನ್ನಡದಲ್ಲಿ ಮಳೆ ಆರ್ಭಟ; ಮರ ಮನೆಮೇಲೆ ಬಿದ್ದು 6 ಮಂದಿಗೆ ಗಾಯ
ಗುಡ್ಡ ಕುಸಿತದಿಂದ ಸಂಪರ್ಕ ಕಡಿತ
ಇನ್ನು ಅಂಕೋಲಾ ತಾಲೂಕು ವ್ಯಾಪ್ತಿಯ ಗಂಗಾವಳಿ ನದಿ ಅಪಾಯದ ಮಟ್ಟದಲ್ಲಿ ಉಕ್ಕಿ ಹರಿಯುತ್ತಿದೆ. ನದಿ ಪಾತ್ರದ ಮೋಟನಕುರ್ವೆ, ದಂಡೆಬಾಗ, ಕುರ್ವೆ ನಡುಗಡ್ಡೆಯ ಭಾಗದಲ್ಲಿ ನೀರಿನ ಪ್ರಮಾಣ ಹೆಚ್ಚಾಗುತ್ತಿದೆ. ಇದಲ್ಲದೆ ಕಲ್ಲೇಶ್ವರ- ಡೊಂಗ್ರಿ- ರಾಮನಗುಳಿ ಭಾಗದಲ್ಲಿಯು ನೀರಿನ ಮಟ್ಟ ಏರಿಕೆಯಾಗಿ, ಗುಳ್ಳಾಪುರದಿಂದ ಕಲ್ಲೇಶ್ವರ- ಶೇವಕಾರ ಕೈಗಡಿಗೆ ಹೋಗುವ ತಾತ್ಕಾಲಿಕ ಸೇತುವೆ ಕೂಡ ನೀರಿನಲ್ಲಿ ಮುಳುಗಡೆಯಾಗಿದೆ. ಹೀಗಾಗಿ ಈ ಭಾಗದ ಸಂಪರ್ಕ ಕಡಿತಗೊಂಡಿದೆ. ಮಂಜುಗುಣಿ ಮತ್ತು ಕೊಡ್ಸಣಿ ಬಳಿ ಸೇತುವೆ ನಿರ್ಮಾಣ ಮಾಡಲು ಗಂಗಾವಳಿ ನದಿಯಲ್ಲಿ ಹಾಕಲಾಗಿರುವ ಭಾರಿ ಪ್ರಮಾಣದ ಮಣ್ಣಿನಿಂದ ಈ ವರ್ಷ ಕೃತಕ ನೆರೆ ಸೃಷ್ಟಿಯಾಗುತ್ತಿದೆ.
ಕಾರವಾರ- ಜೊಯಿಡಾ ಸಂಪರ್ಕಿಸುವ ಅಣಶಿ ಘಟ್ಟದಲ್ಲಿ ಮತ್ತೆ ಈ ಬಾರಿಯೂ ಗುಡ್ಡ ಕುಸಿತದ ಭೀತಿ ಎದುರಾಗಿದೆ. ಕಳೆದ ವರ್ಷದ ಮಳೆಗೆ ಇಲ್ಲಿ ಭಾರೀ ಪ್ರಮಾಣದಲ್ಲಿ ಗುಡ್ಡ ಕುಸಿತವಾಗಿ ಸಂಪರ್ಕ ಕಡಿತಗೊಂಡಿತ್ತು. ಈ ಬಾರಿ ಕೂಡ ಎರಡು ದಿನಗಳ ಹಿಂದೆ ಸಣ್ಣ ಪ್ರಮಾಣದಲ್ಲಿ ಕಲ್ಲು- ಮಣ್ಣು ರಸ್ತೆಗೆ ಬಿದ್ದಿದ್ದು, ಮಂಗಳವಾರ ಕೂಡ ಬೃಹತ್ ಕಲ್ಲು ರಸ್ತೆಗೆ ಉರುಳಿಬಿದ್ದಿದೆ. ಹೀಗಾಗಿ ಈ ಭಾಗದಲ್ಲಿ ಜೀವಭಯದಲ್ಲೇ ಸಂಚರಿಸಬೇಕಾದ ಅನಿವಾರ್ಯತೆ ಎದುರಾಗಿದೆ.
ಶಿರಸಿ- ಕುಮಟಾ ಹೆದ್ದಾರಿ ಸಂಚಾರ ಅಸ್ತವ್ಯಸ್ತ
ಇತ್ತ ಶಿರಸಿ ಕುಮಟಾ ರಸ್ತೆ ಹೀಪನಳ್ಳಿ ಕತ್ರಿ ಹತ್ರಿರ ಮರ ಬಿದ್ದ ಕಾರಣ ಸಂಚಾರಕ್ಕೆ ತೊಂದರೆಯಾಗಿದೆ. ಮರ ತೆರವು ಕಾರ್ಯಾಚರಣೆ ನಡೆಯುತ್ತಿದ್ದು, ಇದರಿಂದಾಗಿ ವಾಹನಗಳು ರಸ್ತೆಯ ಮೇಲೆ ಸಾಲುಗಟ್ಟಿ ನಿಂತಿವೆ. ಶಿರಸಿ- ಕುಮಟಾ ಹೆದ್ದಾರಿ ಸಂಚಾರ ಅಸ್ತವ್ಯಸ್ತಗೊಂಡಿದೆ. ಶಿರಸಿಯ ಓಣಿಕೇರಿ ಗ್ರಾಮದ ದೇವತೆಮನೆಯ ಗಣಪತಿ ಭಟ್ ಎಂಬುವವರ ಮನೆ ಮಳೆಯಿಂದಾಗಿ ಕುಸಿದಿದೆ. ಶಿರಸಿ ನಗರದ ಮುಸ್ಲೀಂಗಲ್ಲಿಯ ಹನಿಫಾಬಿ ಅಬ್ದುಲ್ ಎಂಬುವವರ ಮನೆಯ ಚಾವಣಿ ಕುಸಿದು ಹಾನಿ ಸಂಭವಿಸಿದೆ.
ಪದವಿ ಕಾಲೇಜುಗಳ ವಿದ್ಯಾರ್ಥಿಗಳಿಗೆ ರಜೆ ಘೋಷಣೆ
ಇಷ್ಟೆಲ್ಲ ಮಳೆಯ ಅವಾಂತರಗಳಿಂದಾಗಿ ಎಚ್ಚೆತ್ತ ಜಿಲ್ಲಾಡಳಿತ, ಮಂಗಳವಾರ ಬೆಳಿಗ್ಗೆ 8.30ರ ಸುಮಾರಿಗೆ ಅಂಗನವಾಡಿಯಿಂದ ಪದವಿ ಕಾಲೇಜುಗಳ ವಿದ್ಯಾರ್ಥಿಗಳಿಗೆ ರಜೆ ಘೋಷಿಸಿದೆ. ಮಳೆಯ ಮುನ್ಸೂಚನೆ ಇದ್ದರೂ, ಸೋಮವಾರದ ಮಳೆಯ ರೌದ್ರಾವತಾರ ಕಂಡಿದ್ದರೂ ತಡವಾಗಿ ರಜೆ ಘೋಷಿಸಿದ್ದರಿಂದ ಪಾಲಕರು ತೊಂದರೆ ಅನುಭವಿಸುವಂತಾಯಿತು. ಜಿಲ್ಲಾಡಳಿತ ರಜೆ ಘೋಷಿಸುವುದರೊಳಗೆ ಅನೇಕರು ಮಕ್ಕಳನ್ನ ಶಾಲೆಗೆ ಕರೆದೊಯ್ದಿದ್ದರು. ರಜೆಯ ಕಾರಣ ಮಳೆಯಲ್ಲೇ ಮತ್ತೆ ಮನೆಗಳಿಗೆ ಮಕ್ಕಳನ್ನು ವಾಪಸ್ಸು ಕರೆತಂದಿದ್ದಾರೆ.