ನಾಳೆ ಉತ್ತರಕನ್ನಡದಲ್ಲಿ ರಾಹುಲ್ ಗಾಂಧಿ ರೋಡ್ ಶೋ
ಕಾರವಾರ ಏಪ್ರಿಲ್ 25 : ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಉತ್ತರ ಕನ್ನಡದಲ್ಲಿ ನಾಳೆ (ಏ.26) ಕಾಂಗ್ರೆಸ್ ಪರ ಚುನಾವಣಾ ಪ್ರಚಾರ ನಡೆಸಲಿದ್ದಾರೆ.
ಬೆಳಗ್ಗೆ 11.45ಕ್ಕೆ ದೆಹಲಿಯಿಂದ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾಕ್ಕೆ ಬರುವ ರಾಹುಲ್, ಮಧ್ಯಾಹ್ನ 12.30ಕ್ಕೆ ಬಹಿರಂಗ ಸಮಾವೇಶದಲ್ಲಿ ಪಾಲ್ಗೊಂಡು ಭಾಷಣ ಮಾಡಲಿದ್ದಾರೆ. ಬಳಿಕ ಅಂಕೋಲಾದ ಬದಿಕಟ ರಸ್ತೆ, ಗಣಪತಿ ದೇವಸ್ಥಾನ ರಸ್ತೆ ಹಾಗೂ ಕಾಮತ್ ಹೋಟೆಲ್ ರಸ್ತೆಗಳಲ್ಲಿ ರೋಡ್ ಶೋ ನಡೆಸಿ, ಕಾಂಗ್ರೆಸ್ ಅಭ್ಯರ್ಥಿಗಳ ಪರ ಮತಯಾಚನೆ ಮಾಡಲಿದ್ದಾರೆ.
ಹೆಣ್ಣುಮಕ್ಕಳನ್ನು ಬಿಜೆಪಿಗರಿಂದ ರಕ್ಷಿಸಿ: ಮೋದಿ ವಿರುದ್ಧ ಹರಿಹಾಯ್ದ ರಾಹುಲ್ ಗಾಂಧಿ
ಮಧ್ಯಾಹ್ನ 3 ಗಂಟೆಗೆ ಕುಮಟಾ ಹಾಗೂ ಮಾಸ್ತಿಕಟ್ಟೆ ವೃತ್ತದಿಂದ ಗಿಬ್ ಹೈಸ್ಕೂಲು ವೃತ್ತದವರೆಗೆ ರೋಡ್ ಶೋ ನಡೆಸಿ, ಸಂಜೆ 4 ಗಂಟೆಗೆ ಹೊನ್ನಾವರದ ಶರಾವತಿ ವೃತ್ತದಲ್ಲಿ ಬಹಿರಂಗ ಸಭೆಯಲ್ಲಿ ಭಾಷಣ ಮಾಡಲಿದ್ದಾರೆ. 5.30ಕ್ಕೆ ಭಟ್ಕಳದಲ್ಲಿ ಬಹಿರಂಗ ಸಭೆಯಲ್ಲಿ ಪಾಲ್ಗೊಂಡು ಮುರುಡೇಶ್ವರದಲ್ಲಿ ವಾಸ್ತವ್ಯ ಹೂಡಲಿದ್ದಾರೆ.
ಏಪ್ರಿಲ್ 27ರಂದು ಬೆಳಗ್ಗೆ 11ಕ್ಕೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಸಭೆ ನಡೆಸಲಿದ್ದಾರೆ. ಬಳಿಕ ಮಧ್ಯಾಹ್ನ 1.30ಕ್ಕೆ ಧರ್ಮಸ್ಥಳದ ಶ್ರೀಮಂಜುನಾಥೇಶ್ವರ ದೇವಸ್ಥಾನಕ್ಕೆ ರಾಹುಲ್ ಭೇಟಿ ಕೊಡಲಿದ್ದಾರೆ. ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿ.ಪರಮೇಶ್ವರ್, ಮಲ್ಲಿಕಾರ್ಜುನ ಖರ್ಗೆ, ಡಿ.ಕೆ ಶಿವಕುಮಾರ್, ದಿನೇಶ್ ಗುಂಡುರಾವ್ ಸೇರಿ ಹಲವು ನಾಯಕರು ರಾಹುಲ್ ಗೆ ಸಾಥ್ ಕೊಡಲಿದ್ದಾರೆ.