ಮೋದಿ ಬಸವಣ್ಣನವರ ತತ್ವಗಳನ್ನೇ ಮರೆಯುತ್ತಾರೆ: ರಾಹುಲ್ ಟೀಕೆ
ಕಾರವಾರ ಏಪ್ರಿಲ್ 26 : ಮೋದಿಯವರು ಬಸವಣ್ಣನವರಿಗೆ ನಮಸ್ಕರಿಸುತ್ತಾರೆ. ಅವರ ಪುತ್ಥಳಿಗೆ ಮಾಲೆ ಹಾಕುತ್ತಾರೆ. ಆದರೆ ಅವರ ತತ್ವಗಳನ್ನೇ ಮರೆಯುತ್ತಾರೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಟೀಕಿಸಿದರು. ಉತ್ತರಕನ್ನಡ ಜಿಲ್ಲೆಯ ಹೊನ್ನಾವರದ ಶರಾವತಿ ಸರ್ಕಲ್ ಬಳಿ ರೋಡ್ ಶೋ ನಡೆಸಿ ಅವರು ಮಾತನಾಡಿದರು.
ಯಡಿಯೂರಪ್ಪ ಸಹಿತ ಬಿಜೆಪಿಯ ನಾಲ್ವರು ಭ್ರಷ್ಟಾಚಾರದ ಆರೋಪ ಹೊತ್ತಿರುವವರನ್ನು ತಮ್ಮೊಂದಿಗೆ ವೇದಿಕೆಯ ಮೇಲೆ ಮೋದಿ ಕೂರಿಸಿಕೊಳ್ಳುತ್ತಾರೆ. ಹಾಗೆಯೇ ನೀರವ ಮೋದಿ 15 ಸಾವಿರ ಕೋಟಿ ರೂಪಾಯಿ, ಲಲಿತ್ ಮೋದಿ ಇನ್ನೊಂದಿಷ್ಟು ಕೋಟಿ ದೇಶಕ್ಕೆ ಮೋಸ ಮಾಡಿ ಹೋದರೂ ಅದನ್ನು ನರೇಂದ್ರ ಮೋದಿ ತಡೆಯಲು ವಿಫಲಾಗಿದ್ದಾರೆ ಎಂದು ಆರೋಪಿಸಿದರು.
ರಾಹುಲ್ ಗಾಂಧಿ ಆಕ್ಷೇಪಕ್ಕೆ 10 ಪ್ರಶ್ನೆಗಳ ಬಾಣ ಎಸೆದ ಬಿಜೆಪಿ
ಉದ್ಯಮಿಗಳಿಗೆ ಲಕ್ಷಾಂತರ ಕೋಟಿ ರೂಪಾಯಿ ಸಾಲ ಮನ್ನಾ ಮಾಡುತ್ತಾರೆ. ಆದರೆ ರೈತರಿಗಾಗಿ ಕೇವಲ ಭರವಸೆ ಮಾತ್ರ ನೀಡುತ್ತಿದ್ದಾರೆ. ಅವರು ಬಸವಣ್ಣನ ತತ್ವದಂತೆ ನಡೆದಿದ್ದಾರೆಯೇ? ಎಂದು ಪ್ರಶ್ನಿಸಿದರು. ತಮ್ಮ ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಜನತೆಗೆ ನೀಡಿದ ಭರವಸೆಯನ್ನು ಈಡೇರಿಸಿದೆ. ನುಡಿದಂತೆ ನಡೆದಿದೆ. ಇನ್ನೂ ಹೆಚ್ಚು ದಕ್ಷತೆಯಿಂದ ಕೆಲಸ ಮಾಡಲು ಜನತೆಯ ಹಿತಕ್ಕಾಗಿ ಕಾಂಗ್ರೆಸ್ ಸರ್ಕಾರ ರಚಿಸಲು ಮತಹಾಕಿ ಎಂದು ಕೋರಿದರು.
ನಂತರ ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರದಲ್ಲಿ ರಾಹುಲ್ ಕಾಂಗ್ರೆಸ್ ಪರ ಮತಯಾಚನೆ ನಡೆಸಿ ಭೃಷ್ಟಾಚಾರದ ಕಾರಣದಿಂದ ಜೈಲುವಾಸ ಅನುಭವಿಸಿದ ಬಿಜೆಪಿಗರು ಇಂದು ಭೃಷ್ಟಾಚಾರ ವಿರೋಧಿ ಸರ್ಕಾರ ರಚಿಸುವ ಕುರಿತು ಮಾತನಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಕರ್ನಾಟಕದಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದೆ. ದಲಿತ, ಅಲ್ಪ ಸಂಖ್ಯಾತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಉತ್ತಮ ಆಡಳಿತ ಕೊಟ್ಟಿದೆ. ಎಲ್ಲಾ ವರ್ಗದವರಿಗೂ ಸಮಾನ ಹಕ್ಕು ಹಾಗೂ ನ್ಯಾಯ ಒದಗಿಸಲಾಗಿದೆ. ಕೇಂದ್ರದಲ್ಲಿರುವ ಕೋಮುವಾದಿ ಪಕ್ಷವನ್ನು ಬುಡ ಸಮೇತ ಕಿತ್ತೆಸೆಯಲು ರಾಹುಲ್ ಗಾಂಧಿಯವರ ಕೈ ಬಲಪಡಿಸಬೇಕು ಎಂದು ಕರೆ ನೀಡಿದರು.
ರಾಹುಲ್ ಸುಡುಬಿಸಿಲಿನಲ್ಲೂ ಉತ್ಸಾಹದಿಂದಲೇ ಹೆಜ್ಜೆ ಹಾಕಿ ಜನರೊಂದಿಗೆ ಬೆರೆತರು. ಪದೇ ಪದೆ ರಾಹುಲ್ ಮೋದಿಯವರನ್ನು ಟೀಕಿಸಿದಾಗ ಒಂದು ಮೂಲೆಯಿಂದ ಯುವಕರು ಮೋದಿ ಮೋದಿ ಎಂದು ಕೂಗುತ್ತಿದ್ದರು. ಅದನ್ನು ಕೇಳಿದ ಕಾಂಗ್ರೆಸ್ಸಿಗರು ತಕ್ಷಣ ದೊಡ್ಡದಾಗಿ ರಾಹುಲ್... ರಾಹುಲ್ ಎಂದು ಕೂಗಿ ಪರಿಸ್ಥಿತಿ ನಿಯಂತ್ರಿಸಿದರು.