"ಜಿಲ್ಲಾಧಿಕಾರಿಗಳೇ ಹಳ್ಳಿಗೆ ನಡೆಯಿರಿ' ಎಂದ ಆರ್.ಅಶೋಕ್
ಕಾರವಾರ, ಜನವರಿ 22: "ದೇಶದ ಎಲ್ಲೆಡೆ ಜಿಲ್ಲಾಧಿಕಾರಿಯನ್ನು ಕಲೆಕ್ಟರ್ ಅಂತಲೇ ಕರೆಯುತ್ತಾರೆ. ಹೀಗಾಗಿ ಜಿಲ್ಲಾಧಿಕಾರಿ ಎಂಬ ಹೆಸರನ್ನು ಕಲೆಕ್ಟರ್ ಎಂದು ಬದಲಿಸುವ ಪ್ರಸ್ತಾವ ನಮ್ಮ ಮುಂದಿದೆ. ಇದರ ಜತೆಗೆ, ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ ಹಾಗೂ ತಹಶೀಲ್ದಾರರು ತಿಂಗಳಿಗೆ ಒಮ್ಮೆ ಹಳ್ಳಿಗಳಿಗೆ ತೆರಳಿ, ಅಲ್ಲಿನ ಸಮಸ್ಯೆಗಳನ್ನು ಅರಿಯಬೇಕು. ಇದಕ್ಕಾಗಿ "ಜಿಲ್ಲಾಧಿಕಾರಿಗಳೇ ಹಳ್ಳಿಗೆ ನಡೆಯಿರಿ' ಎಂಬ ಕಾರ್ಯಕ್ರಮ ರೂಪಿಸಲು ಸೂಚಿಸಲಾಗುವುದು ಎಂದು ಕಂದಾಯ ಹಾಗೂ ಪೌರಾಡಳಿತ ಸಚಿವ ಆರ್.ಅಶೋಕ್ ಹೇಳಿದರು.
ಕುಮಟಾದಲ್ಲಿ ಮಿನಿ ವಿಧಾನಸೌಧದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, "ಜನರ ತೆರಿಗೆಯಿಂದಲೇ ಜಿಲ್ಲಾಧಿಕಾರಿ, ಜಿಲ್ಲಾಧಿಕಾರಿ ಕಚೇರಿ ನಡೆಯುವುದು. ಜಿಲ್ಲಾಧಿಕಾರಿಗಳೇ ಹಳ್ಳಿಗೆ ನಡೆಯಿರಿ ಎಂಬ ಕಾರ್ಯಕ್ರಮ ಆಯೋಜಿಸಲು ಸೂಚಿಸಲಾಗುವುದು. ಪ್ರತಿ ತಿಂಗಳು ಒಮ್ಮೆ ಜಿಲ್ಲಾಧಿಕಾರಿ, ಉಪವಿಭಾಗಧಿಕಾರಿ, ತಹಶೀಲ್ದಾರರು ಒಂದು ಗ್ರಾಮ ಪಂಚಾಯತಿಗೆ ಭೇಟಿ ನೀಡಬೇಕು" ಎಂದು ಹೇಳಿದರು.
ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ ಅಶೋಕ್
ಬೆಳಿಗ್ಗೆ 11 ಗಂಟೆಗೆ ಹಳ್ಳಿಯಲ್ಲಿದ್ದು, ಸಂಜೆ 5 ಗಂಟೆಯವರೆಗೆ ಅಲ್ಲಿನ ಸಮಸ್ಯೆಗಳನ್ನು ಪರಿಶೀಲಿಸಬೇಕು. ದಲಿತರ, ರೈತರ ಮನೆಯಲ್ಲಿ ಊಟ ಮಾಡಬೇಕು. ಇದನ್ನು ಇಡೀ ರಾಜ್ಯದ ಜಿಲ್ಲಾಧಿಕಾರಿಗಳು ಅನುಸರಿಸಬೇಕು. ಶಾಲೆ, ಅಂಗನವಾಡಿಗಳು ಸೇರಿದಂತೆ ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡಿ, ಭೇಟಿಯ ಸಮಯದಲ್ಲಿ ಸರ್ಕಾರಿ ಸಮಸ್ಯೆಗಳು, ಹಿರಿಯರ ಪಿಂಚಣಿ, ಖಾತಾ ಸಮಸ್ಯೆ, ರೈತರ ಸಮಸ್ಯೆಗಳ ಬಗ್ಗೆ ಪರಿಶೀಲಿಸಬೇಕು. ಸರ್ಕಾರ, ಕಂದಾಯ ಇಲಾಖೆ ಮನೆಗೆ ಬಂದಿದೆ ಎಂದು ಜನ ಹೇಳಬೇಕು. ಅರ್ಜಿಗಳು ಹೆಚ್ಚು ಬರುವಲ್ಲಿ ಜಿಲ್ಲಾಧಿಕಾರಿ ಹೋಗಬೇಕು. ಒಂದಿನ ಪೂರ್ತಿ ಇದ್ದು, ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯಬೇಕು. ಕಚೇರಿಯಲ್ಲಿ ಕುಳಿತುಕೊಂಡಿದ್ದರೆ ಜನರ ಸಮಸ್ಯೆಗಳ ಆಳ ಅರ್ಥವಾಗುವುದಿಲ್ಲ. ಸಮಸ್ಯೆ ಅರಿತರೆ ಮಾತ್ರ ಪರಿಹಾರ ಕಂಡುಹಿಡಿಯಲು ಸಾಧ್ಯ" ಎಂದು ಅವರು ಹೇಳಿದರು.
ಕಾರವಾರ ಬಂದರು ವಿಸ್ತರಣೆ ಯೋಜನೆ ಮರುಪರಿಶೀಲನೆ; ಬೆಂಗಳೂರಿನಲ್ಲಿ ಸಚಿವ, ಶಾಸಕರ ಸಭೆ
ಕಂದಾಯ ಹಾಗೂ ಅರಣ್ಯ ಭೂಮಿಯ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸುತ್ತೇನೆ. ರಾಜ್ಯಮಟ್ಟದಲ್ಲಿ ಸಭೆ ನಡೆಸಿ, ಚರ್ಚಿಸುತ್ತೇವೆ. ಹಿರಿಯ ನಾಗರಿಕರಿಗೆ 60 ವರ್ಷ ಆಗುತ್ತಿದ್ದಂತೆ ಅವರಿಗೆ ಪಿಂಚಣಿ ಬರುವಂತಾಗಲು ಕಾರ್ಯಕ್ರಮವೊಂದನ್ನು ರೂಪಿಸಿದ್ದು, ಶೀಘ್ರದಲ್ಲೇ ಉಡುಪಿಯಲ್ಲಿ ಇದಕ್ಕೆ ಚಾಲನೆ ನೀಡಲಾಗುವುದು. ಹಿರಿಯ ನಾಗರಿಕರು ಪಿಂಚಣಿಗಾಗಿ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಲಾಗುವುದು ಎಂದು ಭರವಸೆ ನೀಡಿದರು.
ಪ್ರವಾಹ ಸಂತ್ರಸ್ಥರಿಗೆ ಶೀಘ್ರದಲ್ಲೇ ಪರಿಹಾರ
"ಪ್ರವಾಹ ಸಂತ್ರಸ್ತರಿಗೆ ಸರ್ಕಾರದಿಂದ ತೊಂದರೆಯಾಗಬಾರದು. ಕೂಡಲೇ ಅವರು ಮನೆಗಳನ್ನು ಕಟ್ಟಿಕೊಳ್ಳಬೇಕು. ಮೊದಲೆಲ್ಲ ಜಿಲ್ಲಾಧಿಕಾರಿಗಳು ಕಂದಾಯ ಇಲಾಖೆಗೆ ಅರ್ಜಿ ಬರೆದು, ಹಣ ಖಾಲಿಯಾಗಿದೆ, ಕಳುಹಿಸಿ ಎನ್ನುತ್ತಿದ್ದರು. ಈ ಅರ್ಜಿ ಬಂದು ತಲುಪಲು ಮೂರು ತಿಂಗಳು, ವಾಪಸ್ ಅವರಿಗೆ ಹಣ ಮಂಜೂರಾಗಲು ಮೂರು, ಒಟ್ಟು ಆರು ತಿಂಗಳು ಸಮಯ ಹಿಡಿಯುತ್ತಿತ್ತು. ಈಗ ವ್ಯವಸ್ಥೆಯನ್ನು ಬದಲಾಯಿಸಿದ್ದೇವೆ. ಪ್ರತಿ ಜಿಲ್ಲಾಧಿಕಾರಿ ಖಾತೆಯಲ್ಲಿ ಕನಿಷ್ಠ ಐದು ಕೋಟಿ ಇರಲೇಬೇಕು. ಉತ್ತರ ಕನ್ನಡ ಜಿಲ್ಲಾಧಿಕಾರಿ ಖಾತೆಯಲ್ಲಿ 50 ಕೋಟಿ ಇದೆ. ಪ್ರವಾಹ ಸಂತ್ರಸ್ತರಿಗೆ ಮನೆ ಕಟ್ಟಿಕೊಡಬೇಕು, ಸಹಾಯ ನೀಡಬೇಕು. ಹಣದ ಉಪಯೋಗ ಆಗಬೇಕು. ಹೀಗಾಗಿ ಜನರ ಬಗ್ಗೆ ಹೆಚ್ಚಿನ ಗಮನ ನೀಡಲು ತಿಳಿಸಿದ್ದೇವೆ ಎಂದರು.
ಇದೇ ಮುಂದುವರೆದರೆ ಜೆಡಿಎಸ್ ನ್ನು ಅಣುಕು ಪಕ್ಷ ಎನ್ನಬಹುದು
ಮಂಗಳೂರಿನ ಏರ್ ಪೋರ್ಟ್ ನಲ್ಲಿ ಬಾಂಬ್ ಇಟ್ಟಿದ್ದ ಪ್ರಕರಣದಲ್ಲಿ ಪೊಲೀಸರ ಅಣಕು ಪ್ರದರ್ಶನ ಎಂದ ಕುಮಾರಸ್ವಾಮಿ ಹೇಳಿಕೆಗೆ ಇದೇ ಸಂದರ್ಭದಲ್ಲಿ ಆಕ್ರೋಶ ವ್ಯಕ್ತಪಡಿಸಿದ ಅವರು, ಮುಖ್ಯಮಂತ್ರಿಯಾಗಿ ಕೆಲಸ ಮಾಡಿದವರು ಈ ರೀತಿ ಹೇಳಿಕೆ ನೀಡುವುದು ಸರಿಯಲ್ಲ. ಪೊಲೀಸರ ಆತ್ಮಸ್ಥೈರ್ಯ ಕುಗ್ಗಿಸುವಂತಹ ಹೇಳಿಕೆಗಳು ಅವರಿಗೆ ಶೋಭೆ ತರಲ್ಲ. ಬಾಂಬ್ ಇಡುವಂತಹ ಕೃತ್ಯ ಯಾರೇ ಮಾಡಿರಲಿ ಭಯೋತ್ಪಾದಕ ಭಯೋತ್ಪಾದಕರೇ. ಪೊಲೀಸರ ಮೇಲೆ ಗೂಬೆ ಕೂರಿಸುವಂತದ್ದು ಅಕ್ಷಮ್ಯ ಅಪರಾಧ.
ಹಸು ದಾಳಿಯಿಂದ ತಮ್ಮನನ್ನು ಕಾಪಾಡಿದ್ದ ಹೊನ್ನಾವರದ ಆರತಿಗೆ ರಾಷ್ಟ್ರೀಯ ಶೌರ್ಯ ಪ್ರಶಸ್ತಿ
ಇಂತಹ ಹೇಳಿಕೆಗಳಿಂದ ಮುಂದೊಂದು ದಿನ ಜೆಡಿಎಸ್ ಪಕ್ಷವನ್ನ ಜನ ಅಣಕು ಪಕ್ಷ ಎಂದು ತೀರ್ಮಾನ ಮಾಡುತ್ತಾರೆ ಎಂದು ಕಿಡಿಕಾರಿದರು. ಅಲ್ಪಸಂಖ್ಯಾತರ ಓಲೈಕೆಗಾಗಿ ಇಂತಹ ಹೇಳಿಕೆಗಳನ್ನ ನೀಡುವುದು ಸಮಾಜಕ್ಕೆ ಒಳ್ಳೆಯದಲ್ಲ. ಕಾನೂನು ಸುವ್ಯವಸ್ಥೆ ಬಗ್ಗೆ ಲಘು ಹೇಳಿಕೆಗಳನ್ನ ನೀಡುವುದು ಸರಿಯಲ್ಲ ಎಂದ ಅವರು, ಬಾಂಗ್ಲಾ ವಲಸಿಗರ ಕುರಿತು ಸಿದ್ದರಾಮಯ್ಯ ನೀಡಿದ್ದ ಹೇಳಿಕೆಗೂ ಖಾರವಾಗಿ ಪ್ರತಿಕ್ರಿಯೆ ನೀಡಿದರು.
ಬೇರೆ ದೇಶಗಳಿಂದ ಬಂದವರಿಗೆಲ್ಲಾ ಆಶ್ರಯ ಕೊಡಲು ಭಾರತ ಧರ್ಮಛತ್ರವಲ್ಲ
ಇಡೀ ಜಗತ್ತಿಗೆ ಗೊತ್ತಿದೆ ಬಾಂಗ್ಲಾ ವಲಸಿಗರು ಕಳೆದ 30 ವರ್ಷಗಳಿಂದ ವಲಸೆ ಬಂದಿದ್ದಾರೆ. ಅಂತಹವರಿಗೆ ಶೆಡ್ ಹಾಕಿಕೊಟ್ಟು, ರೇಷನ್ ಕಾರ್ಡ್ ನೀಡಿ ವೋಟ್ ಹಾಕಿಸಿಕೊಂಡಿದ್ದು ಕಾಂಗ್ರೆಸ್ ಚಾಳಿ. ಸಿದ್ದರಾಮಯ್ಯ ಹೇಳಿಕೆ ಅವರ ಅಭ್ಯಾಸ ಬಲವನ್ನು ತೋರಿಸುತ್ತಿದೆ.
ಯಾರು ಬೇರೆ ದೇಶಗಳಿಂದ ಬಂದಿದ್ದಾರೆ, ಪೌರತ್ವ ಇಲ್ಲದವರು ವಾಪಸ್ ಹೋಗಬೇಕು. ಭಾರತ ಧರ್ಮಛತ್ರ ಅಲ್ಲ. ಸಿದ್ದರಾಮಯ್ಯ ಭಾರತವನ್ನ ಬಾಂಗ್ಲಾ, ಪಾಕಿಸ್ತಾನ ಮಾಡಲು ಹೊರಟಿದ್ದಾರಾ? ಭಾರತ ಭಾರತವಾಗಿಯೇ ಉಳಿಯಬೇಕು ಎಂದರು.
ಕುಮಟಾ ಶಾಸಕ ದಿನಕರ ಶೆಟ್ಟಿ, ಭಟ್ಕಳ ಶಾಸಕ ಸುನೀಲ್ ನಾಯ್ಕ, ಕಾರವಾರ ಶಾಸಕಿ ರೂಪಾಲಿ ನಾಯ್ಕ, ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್, ಜಿಲ್ಲಾ ಪಂಚಾಯತಿ ಸಿಇಒ ಮೊಹಮ್ಮದ್ ರೋಶನ್, ಜಿಲ್ಲಾ ಪಂಚಾಯತಿ ಸದಸ್ಯರಾದ ರತ್ನಾಕರ್ ನಾಯ್ಕ, ಶ್ರೀಕಲಾ ಶಾಸ್ತ್ರಿ, ತಾಲೂಕು ಪಂಚಾಯತಿ ಅಧ್ಯಕ್ಷೆ ವಿಜಯಾ ಪಟಗಾರ ಸೇರಿದಂತೆ ಅನೇಕರು ಇದ್ದರು.