ಉ.ಕನ್ನಡ: ಡಾಕ್ಯುಮೆಂಟರಿ ಬಿಡುಗಡೆಗೆ 2 ದಿನ ಇರುವಾಗ ಅಗಲಿದ ಪುನೀತ್!
ಕಾರವಾರ, ಅಕ್ಟೋಬರ್ 29; ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ (46) ಶುಕ್ರವಾರ ನಿಧನರಾಗಿದ್ದಾರೆ. ಅವರ ಸಾವನ್ನು ಯಾರೂ ಊಹೆ ಕೂಡ ಮಾಡಿರಲಿಲ್ಲ. ಲಕ್ಷಾಂತರ ಅಭಿಮಾನಿಗಳನ್ನು ಪುನೀತ್ ಅಗಲಿದ್ದಾರೆ. ಈ ನಡುವೆ ಪುನೀತ್ ಉತ್ತರ ಕನ್ನಡ ಜಿಲ್ಲೆಯಲ್ಲಿ ಚಿತ್ರೀಕರಿಸಿದ್ದ ಡಾಕ್ಯುಮೆಂಟರಿಯ ಬಿಡುಗಡೆಗೆ ಎರಡೇ ದಿನ ಇರುವಾಗ ಅವರ ಅಗಲಿಕೆಯಿಂದ ಜಿಲ್ಲೆಯ ಜನತೆಗೂ ಬರ ಸಿಡಿಲು ಬಡಿತಂದಾಗಿದೆ.
ಪುನೀತ್ಗೆ ಉತ್ತರ ಕನ್ನಡವೆಂದರೆ ಬಹಳ ಪ್ರೀತಿ. ಇಲ್ಲಿನ ನಿಸರ್ಗ ಸೌಂದರ್ಯ, ಕಡಲತೀರ- ಜಲಪಾತಗಳ ಸೊಬಗನ್ನು ಪುನೀತ್ ನೆಚ್ಚಿಕೊಂಡಿದ್ದರು. ಈ ಬಗ್ಗೆ ಜಿಲ್ಲೆಗೆ ಭೇಟಿ ನೀಡಿದ್ದ ವೇಳೆ ಪುನೀತ್ ಹೇಳಿಕೊಂಡಿದ್ದರು. ಹೀಗಾಗಿ ಈ ವರ್ಷದ ಜನವರಿ- ಫೆಬ್ರುವರಿಯಲ್ಲಿ ಪುನೀತ್ ಹೆಚ್ಚಿನ ಸಮಯ ಉತ್ತರ ಕನ್ನಡದಲ್ಲೇ ಕಳೆದಿದ್ದರು.
ಸಂಭಾವನೆಯಲ್ಲಿ ಒಂದು ಭಾಗ ಅನಾಥಾಶ್ರಮಗಳಿಗೆ ನೀಡುತ್ತಿದ್ದ ಪುನೀತ್!
ಜಿಲ್ಲೆಗೆ ಭೇಟಿ ನೀಡಿದ್ದ ಅವರು ಕುಮಟಾ, ಗೋಕರ್ಣ, ಮುರುಡೇಶ್ವರ, ಜೊಯಿಡಾ ತಾಲೂಕಿನಲ್ಲಿ ತಮ್ಮ ತಂಡದೊಂದಿಗೆ ತಿರುಗಾಡಿ ಡಾಕ್ಯುಮೆಂಟರಿಗಾಗಿ ಚಿತ್ರೀಕರಣ ನಡೆಸಿದ್ದರು. ಕಡಲತೀರಗಳಲ್ಲಿ ಓಡಾಡಿ, ಸ್ಟಂಟ್ ಗಳನ್ನೂ ಮಾಡಿದ್ದರು. ಗೋಕರ್ಣಕ್ಕೆ ಡಾಕ್ಯುಮೆಂಟರಿ ಚಿತ್ರೀಕರಣಕ್ಕಾಗಿ ಭೇಟಿ ನೀಡಿದ್ದ ಪುನೀತ್ ಸಾಮಾನ್ಯರಂತೆ ಕಡಲತೀರದಲ್ಲಿ ಅಡ್ಡಾಡಿದ್ದರು. ತೀರದ ಹೋಟೆಲ್ಗಳಲ್ಲಿ ಖಾದ್ಯಗಳನ್ನು ಸವಿಯುತ್ತಾ ಕಾಲ ಕಳೆದಿದ್ದರು. ಗೋಕರ್ಣದ ಪುರಾಣ ಪ್ರಸಿದ್ಧ ಶ್ರೀಮಹಾಬಲೇಶ್ವರ ದೇವಾಲಯಕ್ಕೂ ಭೇಟಿ ನೀಡಿ ಆತ್ಮಲಿಂಗಕ್ಕೆ ಪೂಜೆ ಸಲ್ಲಿಸಿದ್ದರು.
ಹಳೆಯ ಫೋಟೋ ಜೊತೆ ಪುನೀತ್ಗೆ ನಿಧನಕ್ಕೆ ಸಂತಾಪ ಸೂಚಿಸಿದ ಎಚ್ಡಿಕೆ
ತದನಂತರ ಮುರುಡೇಶ್ವರಕ್ಕೆ ಭೇಟಿ ನೀಡಿದ್ದ ಅವರು ನೇತ್ರಾಣಿ ದ್ವೀಪ ಪ್ರದೇಶದಲ್ಲಿ ಡಾಕ್ಯುಮೆಂಟರಿಗಾಗಿ ಹೆಚ್ಚಿನ ಭಾಗದ ಚಿತ್ರೀಕರಣ ನಡೆಸಿ, ಮುರುಡೇಶ್ವರ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿ ತೆರಳಿದ್ದರು. ನೇತ್ರಾಣಿಯಲ್ಲಿ ನಡೆದ ಚಿತ್ರೀಕರಣದ ಒಂದು ತುಣುಕನ್ನು ಪುನೀತ್ ಹತ್ತು ದಿನಗಳ ಬಳಿಕ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಗೋಕರ್ಣ ಕಡಲತೀರದಲ್ಲಿ ಮಾಡಿದ್ದ ಬ್ಯಾಕ್ ಫ್ಲಿಪ್ ಸ್ಟಂಟ್ ಗಳನ್ನೂ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಅಭಿಮಾನಿಗಳನ್ನು ರಂಜಿಸಿದ್ದರು.
ಪುನೀತ್ ರಾಜ್ಕುಮಾರ್ ನಿಧನಕ್ಕೆ ಕೇಂದ್ರ ನಾಯಕರ ಸಂತಾಪ
ಜಿಲ್ಲೆಯ ಜನರ ಮನ ಗೆದ್ದಿದ್ದರು
ಕುಮಟಾ ಪಟ್ಟಣದ ದೇವರಹಕ್ಕಲ ಸಭಾಭವನದಲ್ಲಿ ಪುನೀತ್ ರಾಜ್ಕುಮಾರ್ ಅವರ ಕಚೇರಿಯ ಅಕೌಂಟ್ ವಿಭಾಗದಲ್ಲಿ ಕೆಲಸ ನಿರ್ವಹಿಸುವ ಗುರುರಾಜ್ ಎಂಬುವವರ ಮದುವೆ ನಿಮಿತ್ತ ಆಗಮಿಸಿ, ನೂತನ ವಧು-ವರರಿಗೆ ಶುಭಕೋರಿ ತೆರಳಿದ್ದರು ಪುನೀತ್. ಈ ವೇಳೆ ಪುನೀತ್ ಅಭಿಮಾನಿಗಳು ಕಿಕ್ಕಿರಿದು ಸೇರಿದ್ದರು. ಅವರೊಂದಿಗೆ ಸೆಲ್ಫಿಗಾಗಿ ಮುಗಿಬಿದ್ದಿದ್ದರು. ಪುನೀತ್ ತಾಳ್ಮೆಯಿಂದ ಎಲ್ಲರೊಂದಿಗೆ ಸೆಲ್ಫಿ ತೆಗೆದುಕೊಳ್ಳುತ್ತಾ, ನಗುಮುಖದಲ್ಲೇ ಮಾತನಾಡುತ್ತಾ ಜಿಲ್ಲೆಯ ಜನರ ಮನ ಗೆದ್ದಿದ್ದರು.
ವಿಡಿಯೋ ಹಂಚಿಕೊಂಡಿದ್ದರು
ನೇತ್ರಾಣಿಯಲ್ಲಿ ನಡೆದ ಚಿತ್ರೀಕರಣದ ಒಂದು ತುಣುಕನ್ನು ಪುನೀತ್ 10 ದಿನಗಳ ಬಳಿಕ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಗೋಕರ್ಣ ಕಡಲತೀರದಲ್ಲಿ ಮಾಡಿದ್ದ ಬ್ಯಾಕ್ ಫ್ಲಿಪ್ ಸ್ಟಂಟ್ ಗಳನ್ನೂ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಅಭಿಮಾನಿಗಳನ್ನು ರಂಜಿಸಿದ್ದರು. ಈ ಸಣ್ಣ ಝಲಕ್ ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಉತ್ತರ ಕನ್ನಡ ಜಿಲ್ಲೆಯಲ್ಲಿನ ಚಿತ್ರೀಕರಣದ ಕುರಿತು ಅಭಿಮಾನಿಗಳಿಗೆ ಹಾಗೂ ಸಿನಿರಂಗಕ್ಕೆ ಚಿಕ್ಕ ಮಾಹಿತಿ ನೀಡಿದ್ದರು.
ನವೆಂಬರ್ 1ರಂದು ಬಿಡುಗಡೆ ಇತ್ತು
ಉತ್ತರ ಕನ್ನಡ ಜಿಲ್ಲೆಯಲ್ಲಿ ಚಿತ್ರಿಕರಣ ನಡೆದಿದ್ದ ಡಾಕ್ಯುಮೆಂಟರಿ ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವದಂದು ಬಿಡುಗಡೆಯಾಗಬೇಕಿತ್ತು. ಈ ಬಗ್ಗೆ ಪುನೀತ್, 'ದಶಕಗಳ ಹಿಂದೆ ಕಥೆಯೊಂದು ಹುಟ್ಟಿತ್ತು. ನಮ್ಮ ಜನ, ನಮ್ಮ ನೆಲದ ಹಿರಿಮೆಯನ್ನು ಮೆರೆದಿತ್ತು. ನಮ್ಮ ಅಡವಿಯ ಹಸಿರನ್ನು ಜಗತ್ತಿಗೇ ಹರಡಿತ್ತು. ಪೀಳಿಗೆಗೆ ಸ್ಫೂರ್ತಿ ನೀಡಿ ಅಜರಾಮರವಾಗಿತ್ತು. ಆ ಚರಿತ್ರೆ ಮರುಕಳಿಸುವ ಸಮಯವೀಗ ಬಂದಿದೆ' ಎಂದಷ್ಟೇ ನೇತ್ರಾಣಿಯಲ್ಲಿ ಮಾಡಿದ ಸ್ಕೂಬಾ ಡೈವಿಂಗ್ನ ಫೋಟೊವೊಂದರ ಜೊತೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಡಾಕ್ಯಮೆಂಟರಿ ಬಿಡುಗಡೆಯ ಸುಳಿವು ನೀಡಿದ್ದರು.
|
ಕುತೂಹಲ ಮೂಡಿಸಿದ್ದ ಡಾಕ್ಯುಮೆಂಟರಿ
ಈ ಡಾಕ್ಯುಮೆಂಟರಿ ಪಿಆರ್ಕೆ ಪ್ರೊಡಕ್ಷನ್ಸ್ ಹಾಗೂ ಮಡ್ ಸ್ಕಿಪ್ಪರ್ಸ್ ಮೀಡಿಯಾಹೌಸ್ ನಿಂದ ತಯಾರಾಗಿತ್ತು. ಆದರೆ ಡಾಕ್ಯುಮೆಂಟರಿಯಲ್ಲಿ ಏನಿತ್ತು?, ಯಾಕಾಗಿ ಮಾಡಲಾಗಿತ್ತು? ಎಂಬ ಬಗ್ಗೆ ಪುನೀತ್ ಆಗಲಿ, ಅವರ ತಂಡವಾಗಲಿ ಎಲ್ಲಿಯೂ ಮಾಹಿತಿ ಹಂಚಿಕೊಂಡಿರಲಿಲ್ಲ. ದುರಾದೃಷ್ಟವಶಾತ್ ಡಾಕ್ಯುಮೆಂಟರಿ ಬಿಡುಗಡೆಗೂ ಮುನ್ನ ಪುನೀತ್ ಅಗಲಿರುವುದು ನಿಜಕ್ಕೂ ಉತ್ತರ ಕನ್ನಡ ಜಿಲ್ಲೆಯ ಜನತೆಗೆ, ಅವರ ಅಭಿಮಾನಿಗಳಿಗೆ ಆಘಾತ ನೀಡಿದೆ.