ಹಳಿಯಾಳದಲ್ಲಿ ಕಿತ್ತೂರು ರಾಣಿ ಚನ್ನಮ್ಮ ಪ್ರತಿಮೆ ಅನಾವರಣಗೊಳಿಸಲು ಪ್ರತಿಭಟನೆ
ಕಾರವಾರ, ಆಗಸ್ಟ್ 29: ಕಿತ್ತೂರು ರಾಣಿ ಚನ್ನಮ್ಮ ಪ್ರತಿಮೆಗೆ ಮುಚ್ಚಲಾಗಿರುವ ಟಾರ್ಪಲ್ ತೆರವುಗೊಳಿಸಿ, ಪ್ರತಿಮೆ ಅನಾವರಣಗೊಳಿಸಬೇಕೆಂದು ಆಗ್ರಹಿಸಿ ಮರಾಠರೂ ಸೇರಿದಂತೆ ಕನ್ನಡಪರ ಸಂಘಟನೆಗಳು ಹಳಿಯಾಳದಲ್ಲಿ ಪ್ರತಿಭಟನೆ ನಡೆಸುತ್ತಿವೆ.
ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘದ ಆವರಣದಲ್ಲಿ ಸಂಘದವರಿಂದಲೇ ಒಂದೂವರೆ ತಿಂಗಳ ಹಿಂದೆ ಪ್ರತಿಮೆ ಪ್ರತಿಷ್ಠಾಪಿಸಲಾಗಿತ್ತು. ಈ ಬಗ್ಗೆ ಅನುಮತಿಗೆ ನಗರಸಭೆಗೆ ಅರ್ಜಿ ಸಲ್ಲಿಸಲಾಗಿತ್ತು. ಜತೆಗೆ, ಸಾರ್ವಜನಿಕರ ಆಕ್ಷೇಪಣೆಗೂ ಸಂಘದಿಂದ ಆಹ್ವಾನ ನೀಡಲಾಗಿತ್ತು. ಯಾರ ತಕರಾರು ಕೂಡ ಇರಲಿಲ್ಲ. ಆದರೆ, ನಗರಸಭೆಯಿಂದ ಅನುಮತಿ ದೊರೆಯುವುದು ವಿಳಂಬವಾಗಿದ್ದು, ಈ ಕಾರಣಕ್ಕೆ ಅನಾವರಣಗೊಂಡ ಎರಡು ಮೂರು ದಿನಗಳಲ್ಲೇ ಪ್ರತಿಮೆಯನ್ನು ಟಾರ್ಪಲ್ ನಿಂದ ಮುಚ್ಚಿಡಲಾಗಿದೆ.
ಬೆಳಗಾವಿ ರಾಯಣ್ಣ ಪುತ್ಥಳಿ ಪ್ರತಿಷ್ಠಾಪನೆ ವಿವಾದಕ್ಕೆ ತೆರೆ
ಈ ಬಗ್ಗೆ ಹಲವು ಬಾರಿ ನಗರಸಭೆಯ ಅಧಿಕಾರಿಗಳನ್ನು ಕೇಳಿದರೆ, ನಾಳೆ ತೆಗೆಯುತ್ತೇವೆ ಎಂದು ಒಂದೂವರೆ ತಿಂಗಳನ್ನು ಕಳೆದಿದ್ದಾರೆ. ಕಿತ್ತೂರಿನ ಆಸ್ಥಾನಕ್ಕೆ ಒಳಪಟ್ಟಿರುವ ಹಳಿಯಾಳದಲ್ಲಿ ಚನ್ನಮ್ಮ ಪ್ರತಿಮೆಗೆ ಟಾರ್ಪಲ್ ಮುಚ್ಚಿಟ್ಟು ಸ್ಥಳೀಯ ಆಡಳಿತದಿಂದ ಅವಮಾನ ಮಾಡಲಾಗಿದೆ ಎಂದು ಆರೋಪಿಸಿ ಸ್ಥಳೀಯರು ವನಶ್ರೀ ವೃತ್ತದಲ್ಲಿ ಪ್ರತಿಭಟನೆಗಿಳಿದಿದ್ದಾರೆ.
ಜಯ ಕರ್ನಾಟಕ ಸಂಘಟನೆ, ಕರ್ನಾಟಕ ರಕ್ಷಣಾ ವೇದಿಕೆ, ನಾರಿಕರ ವೆದಿಕೆ, ಜೀಜಾಮಾತಾ ಕ್ಷತ್ರೀಯ ಮರಾಠಾ ಮಹಿಳಾ ಮಂಡಳ, ನವನಿರ್ಮಾಣ ಸೇನೆ, ಪಂಚಾಯತಿ ಕಾವಲು ಸಂಘ, ಜನಸ್ಪಂದನ ಸಂಸ್ಥೆ ಸೇರಿದಂತೆ ಅನೇಕ ಸಂಘಟನೆಗಳಿಂದ ಪ್ರತಿಭಟನೆ ನಡೆಯುತ್ತಿದ್ದು, ಪ್ರತಿಮೆ ಅನಾವರಣಗೊಳಿಸಲು ಆಗ್ರಹಿಸಿದ್ದಾರೆ. ನಿನ್ನೆಯಷ್ಟೇ ಬೆಳಗಾವಿಯ ಪೀರನವಾಡಿಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಮರುಸ್ಥಾಪನೆ ವಿವಾದ ಭುಗಿಲೆದ್ದಿದ್ದು, ಸಂಜೆ ಸಂಧಾನ ಸಭೆ ನಡೆಸಿ ವಿವಾದಕ್ಕೆ ತೆರೆ ಎಳೆದಿದ್ದನ್ನು ಇಲ್ಲಿ ಸ್ಮರಿಸಬಹುದು.