ಲಾರಿ ಚಾಲಕನಿಂದ ಸಚಿವನಾಗಿ ಹೆಬ್ಬಾರ್ ನಡೆದು ಬಂದ ದಾರಿ...
ಕಾರವಾರ, ಫೆಬ್ರವರಿ 06: 1957ರ ಜೂನ್ 4ರಂದು ಶೇವಕಾರದಲ್ಲಿ ಕಾವೇರಿ ಹಾಗೂ ಮಹಾಬಲೇಶ್ವರ ಹೆಬ್ಬಾರ ದಂಪತಿಯ ಒಂಬತ್ತು ಮಕ್ಕಳಲ್ಲಿ ಕೊನೆಯವರಾಗಿ ಜನಿಸಿದವರು ಶಿವರಾಮ ಹೆಬ್ಬಾರ್. ಬಾಲ್ಯದಿಂದಲೇ ಚಟುವಟಿಕೆಯಿಂದ ಕೂಡಿದ್ದ ಹೆಬ್ಬಾರ್ ನಡೆದು ಬಂದ ದಾರಿ ಅತ್ಯಂತ ರೋಚಕವಾಗಿದೆ.
ಓದಿನಲ್ಲಿ ಉತ್ತಮ ವಿದ್ಯಾರ್ಥಿಯಾಗಿದ್ದ ಹೆಬ್ಬಾರ್, ಉದ್ಯೋಗ ಹುಡುಕುವ ನಿಟ್ಟಿನಲ್ಲಿ ತಮ್ಮ ಅಣ್ಣನ ಲಾರಿಗೆ ಚಾಲಕನಾಗಿ ವೃತ್ತಿ ಪ್ರಾರಂಭಿಸಿ ದೇಶದ ಉದ್ದಗಲ ಲಾರಿ ಚಾಲಕರಾಗಿ ಸಂಚರಿಸಿದರು. ಮೂರು ಬಾರಿ ಯಲ್ಲಾಪುರ- ಮುಂಡಗೋಡ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿರುವ ಶಾಸಕ ಶಿವರಾಮ ಹೆಬ್ಬಾರ್ ಇಂದು ರಾಜ್ಯದ ಸಚಿವರಾವಿ ಪ್ರಮಾಣವಚನ ಸ್ವೀಕರಿಸಿದರು. ಅಂದಿನಿಂದ ಇಂದಿನವರೆಗೆ ಅವರು ನಡೆದು ಬಂದ ಹಾದಿ ಇಲ್ಲಿದೆ...
ಲಾರಿ ಚಾಲಕರಾಗಿದ್ದ ಹೆಬ್ಬಾರ್
ಸುಮಾರು ಐದು ವರ್ಷ ಲಾರಿ ಚಾಲಕರಾಗಿ ಕೆಲಸ ಮಾಡಿದರು ಶಿವರಾಮ ಹೆಬ್ಬಾರ್. ನಂತರ ಮಿತ್ರ, ಗುಳ್ಳಾಪುರದ ಶ್ರೀಕಾಂತ ಶೆಟ್ಟಿ ಹಾಗೂ ವಿ.ಜಿ.ನಾಯ್ಕ ಜೊತೆಗೂಡಿ ಟಿಂಬರ್ ವ್ಯವಹಾರಕ್ಕೆ ಕೈಹಾಕಿದರು. ಅಲ್ಲಿಯೂ ಯಶಸ್ಸು ಸಾಧಿಸಿದ ನಂತರ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡ ಹೆಬ್ಬಾರ್, ಗುಳ್ಳಾಪುರ, ಅರಬೈಲು, ಇಡಗುಂದಿ ಮುಂತಾದ ಗ್ರಾಮೀಣ ಭಾಗದಲ್ಲಿ ಪೂರೈಕೆಯಾಗುತ್ತಿದ್ದ ಸರಕಾರಿ ಸಾರಾಯಿ ವಿರುದ್ಧ ಹೋರಾಟ ಆರಂಭಿಸಿದರು. ಅಲ್ಲಿಯ ಸಂಘಟನೆ ಹಾಗೂ ನಾಯಕತ್ವದ ಗುಣದಿಂದಾಗಿ ಹೆಬ್ಬಾರ್ ಬೆಳಕಿಗೆ ಬರತೊಡಗಿದರು.
ಕುತೂಹಲಕ್ಕೆ ಕಾರಣವಾದ ಶಿವರಾಮ್ ಹೆಬ್ಬಾರ್ ಖಾತೆ ವಿಚಾರ
ಎಪಿಎಂಸಿ ಮೂಲಕ ರಾಜಕೀಯ ಪ್ರವೇಶ
1983 ಆಗಸ್ಟ್ 12 ರಂದು ಯಲ್ಲಾಪುರ ಎ.ಪಿ.ಎಮ್.ಸಿ ಮೂಲಕ ಶಿವರಾಮ ಹೆಬ್ಬಾರ್ ರಾಜಕೀಯ ಪ್ರವೇಶ ಮಾಡಿದರು. ಎ.ಪಿ.ಎಮ್.ಸಿ ಅಧ್ಯಕ್ಷರಾಗಿ 10 ವರ್ಷ ಸೇವೆ ಸಲ್ಲಿಸಿದ್ದಾರೆ. 10 ವರ್ಷ ಕೆ.ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕರಾಗಿ ಸೇವೆ ಹಾಗೂ ರಾಜ್ಯ ಅಪೆಕ್ಸ್ ಬ್ಯಾಂಕ್ ನಿರ್ದೇಶಕರಾಗಿ, ಬಿಜೆಪಿ ಜಿಲ್ಲಾಧ್ಯಕ್ಷರಾಗಿ 6 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಬಿಜೆಪಿ ಪಕ್ಷದ ಸಂಘಟನೆಗೆ ಅಪಾರ ಕೊಡುಗೆಯನ್ನು ನೀಡಿದ್ದಾರೆ.
2001ರಲ್ಲಿ ಕಾಂಗ್ರೆಸ್ ಸೇರ್ಪಡೆ
ಯಾವುದೋ ಕಾರಣಕ್ಕೆ ಬಿಜೆಪಿ ಮೇಲೆ ಮುನಿಸಿಕೊಂಡಿದ್ದ ಹೆಬ್ಬಾರ್, 2001ರಲ್ಲಿ ದೊಡ್ಡ ಪ್ರಮಾಣದ ಅನುಯಾಯಿಗಳೊಂದಿಗೆ ಮಾಜಿ ಸಂಸದೆ ಮಾರ್ಗರೇಟ್ ಆಳ್ವ ನೇತೃತ್ವದಲ್ಲಿ ಧರ್ಮಸಿಂಗ್ ಮುಖ್ಯಮಂತ್ರಿಯಾಗಿದ್ದಾಗ ಯಲ್ಲಾಪುರದ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಗೊಂಡರು. ಯಲ್ಲಾಪುರ, ಮುಂಡಗೋಡ, ಬನವಾಸಿ, ಶಿರಸಿ, ಅಂಕೋಲಾಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಬಲವಾಗಿ ಸಂಘಟಿಸಿದರು.
ನೂತನ ಸಚಿವರ ಪ್ರಮಾಣ ವಚನ: ಯಾರಿಗೆ ಯಾವ ಖಾತೆ?
2008ರಲ್ಲಿ ಮೊದಲ ಚುನಾವಣೆ
2008ರಲ್ಲಿ ಮೊದಲ ಬಾರಿಗೆ ಯಲ್ಲಾಪುರ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಶಿವರಾಮ ಹೆಬ್ಬಾರ್, ಬಿಜೆಪಿ ಅಭ್ಯರ್ಥಿ ವಿ.ಎಸ್.ಪಾಟೀಲ ಎದುರು ಸೋಲು ಕಂಡರು. ನಂತರ 2013ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ವಿ.ಎಸ್.ಪಾಟೀಲ ಅವರನ್ನು ಸೋಲಿಸಿ ಶಾಸಕರಾದರು. 2018ರ ವಿಧಾನಸಭಾ ಚುನಾವಣೆಯಲ್ಲಿ ಅಲ್ಪ ಮತಗಳ ಅಂತರದಲ್ಲಿ ಮತ್ತೊಮ್ಮೆ ವಿ.ಎಸ್.ಪಾಟೀಲ್ ಎದುರು ಗೆಲುವು ಸಾಧಿಸಿದರು. ಈ ಅವಧಿಯಲ್ಲಿ ಕಾಂಗ್ರೆಸ್ ಪಕ್ಷ ಅವರಿಗೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಹುದ್ದೆಯನ್ನು ನೀಡಿತು. 6 ತಿಂಗಳು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷರಾಗಿ ಹೆಬ್ಬಾರ್ ಸೇವೆ ಸಲ್ಲಿಸಿದ್ದಾರೆ.