ಏಪ್ರಾನ್ ಖರೀದಿಯಲ್ಲೂ ಅಕ್ರಮ; ಉತ್ತರ ಕೊಟ್ಟ ಶಿಕ್ಷಣ ಸಚಿವರು
ಉತ್ತರ ಕನ್ನಡ, ಮಾರ್ಚ್.28: ಏಪ್ರಾನ್ ಖರೀದಿಯಲ್ಲಿ ಉತ್ತರ ಕನ್ನಡ ಜಿಲ್ಲಾ ಪಂಚಾಯತಿ ಮತ್ತು ತಾಲೂಕು ಪಂಚಾಯತಿ ಅಧಿಕಾರಿಗಳು ಮತ್ತು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರ ಪಾತ್ರ ಇರುವುದು ತನಿಖೆ ವೇಳೆ ದೃಢಪಟ್ಟಿದೆ.
2013-14ನೇ ಸಾಲಿನಲ್ಲಿ ಅಕ್ಷರ ದಾಸೋಹ ಯೋಜನೆ ಅಡಿ ಸುರಕ್ಷತೆ ಮತ್ತು ಶುಚಿತ್ವವನ್ನು ಕಾಪಾಡುವ ಉದ್ದೇಶದಿಂದ ಅಗ್ನಿ ನಂದಕ ಏಪ್ರಾನ್ ಗಳನ್ನು ಖರೀದಿ ಮಾಡಲಾಗಿತ್ತು. ಇದರಲ್ಲಿ ಭಾರೀ ಅಕ್ರಮ ನಡೆದಿರುವ ಶಂಕೆ ಹಿನ್ನೆಲೆ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖಾ ತಂಡವನ್ನು ರಚನೆ ಮಾಡಲಾಗಿತ್ತು.
ಕನ್ನಡ ಶಾಲೆ ಮುಚ್ಚದಂತೆ ಕನ್ನಡಪರ ಹೋರಾಟಗಾರರ ಪ್ರತಿಭಟನೆ
ಇದೀಗ ನಿವೃತ್ತ ನ್ಯಾಯಾಧೀಶರ ನೇತೃತ್ವದ ತಂಡವು ಸರ್ಕಾರಕ್ಕೆ ಸಲ್ಲಿಸಿದ ವರದಿಯಲ್ಲಿ ಅಕ್ರಮ ನಡೆದಿರುವುದು ಸ್ಪಷ್ಟವಾಗಿದೆ. ಅಲ್ಲದೇ ಶಾಲಾ ಹಂತದಲ್ಲೇ ಏಪ್ರಾನ್ ಖರೀದಿಯಾಗಿದ್ದು, ಕ್ಷೇತ್ರ ಶಿಕ್ಷಣಾಧಿಕಾರಿ, ಜಿಲ್ಲಾ ಉಪ ನಿರ್ದೇಶಕರು ವಿಚಾರಣಾಧಿಕಾರಿಗಳನ್ನು ದೋಷಮುಕ್ತಗೊಳಿಸಲಾಗಿದೆ.
ಏಪ್ರಾನ್ ಖರೀದಿ ಅಕ್ರಮದಲ್ಲಿ ಉತ್ತರ ಕನ್ನಡ ಮತ್ತು ಶಿರಸಿ ಶೈಕ್ಷಣಿಕ ಜಿಲ್ಲೆಗಳ ಜಿಲ್ಲಾ ಪಂಚಾಯತಿ, ತಾಲೂಕು ಪಂಚಾಯತಿ, ಎಸ್ ಡಿಎಂಸಿ ಅಧ್ಯಕ್ಷರು, ಸದಸ್ಯರ ವಿರುದ್ಧ ನಿಯಮಾನುಸಾರ ಶಿಸ್ತುಕ್ರಮ ತೆಗೆದುಕೊಳ್ಳುವಂತೆ ವಿಚಾರಣಾಧಿಕಾರಿಗಳು ಶಿಫಾರಸ್ಸು ಮಾಡಿದ್ದಾರೆ. ಒಂದು ವರ್ಷದ ಹಿಂದೆಯೇ ಕಾರವಾರ ಜಿಲ್ಲಾ ಪಂಚಾಯತಿ ಹಾಗೂ 11 ತಾಲೂಕುಗಳಲ್ಲಿ ಅಕ್ಷರ ದಾಸೋಹ ಕಾರ್ಯಕ್ರಮಗಳ ಅಡಿ ಕಾರ್ಯ ನಿರ್ವಹಿಸುತ್ತಿರುವ ಸಹಾಯಕ ನಿರ್ದೇಶಕರಿಗೆ ಕಾರಣ ಕೇಳಿ ನೋಟಿಸ್ ನೀಡಲಾಗಿದೆ. ಹೀಗಿದ್ದರೂ ಅವರ ವಿರುದ್ಧ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಹೇಳಲಾಗುತ್ತಿದೆ.
ಶಾಲಾ ಹಂತದಲ್ಲೇ ಖರೀದಿ ನಡೆದಿದ್ದು ಹೆಚ್ಚುವರಿಯಾಗಿ ಪಾವತಿಯಾದ ಹಣವನ್ನು ಮುಖ್ಯ ಶಿಕ್ಷಕರಿಂದ ವಸೂಲಿ ಮಾಡಲು ತೀರ್ಮಾನಿಸಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.
ಇನ್ನು, ಏಪ್ರಾನ್ ಖರೀದಿಯಲ್ಲಿ ಅಕ್ರಮ ನಡೆದಿರುವ ಬಗ್ಗೆ ತಿಳಿಯುತ್ತಿದ್ದಂತೆ ಸರ್ಕಾರಕ್ಕೆ ನಷ್ಟವಾದ ಹಣವನ್ನು ಆಯಾ ಶಾಲಾ ಮುಖ್ಯಸ್ಥರಿಂದ ಶೇ.15ರಷ್ಟು ಬಡ್ಡಿದರದಲ್ಲಿ ವಸೂಲಿ ಮಾಡಲು ಉತ್ತರ ಕನ್ನಡ ಜಿಲ್ಲಾ ಪಂಚಾಯತಿ ಶಿಕ್ಷಣ ಆರೋಗ್ಯ ಸ್ಥಾಯಿ ಸಮಿತಿ ಸೂಚಿಸಿರುವುದು ತಿಳಿದು ಬಂದಿದೆ.
ಅಕ್ಷರ ದಾಸೋಹ ಕಾರ್ಯಕ್ರಮದ ಅಡಿ ಶಾಲೆಯಲ್ಲಿ ಅಡುಗೆಯವರ ಸಂಖ್ಯೆಗೆ ಅನುಗುಣವಾಗಿ ತಲಾ 1 ಸಾವಿರ ರೂಪಾಯಿ ನಿಗದಿಗೊಳಿಸಿ ಶಿರಸಿ ಮತ್ತು ಉತ್ತರ ಕನ್ನಡ ತಾಲೂಕು ಪಂಚಾಯತಿ ವತಿಯಿಂದ ಅಕ್ಷರ ದಾಸೋಹ ಖಾತೆಗೆ ನೇರವಾಗಿ 43 ಲಕ್ಷ 24 ಸಾವಿರ ಹಣವನ್ನು ಜಮೆ ಮಾಡಲಾಗಿತ್ತು.