ಕಾರವಾರ- ಅಂಕೋಲಾ ಕ್ಷೇತ್ರ: ಸ್ವತಂತ್ರವಾಗಿ ಕಣಕ್ಕಿಳಿಯಲು ಸಿದ್ಧತೆ; ಆನಂದ್ ಅಸ್ನೋಟಿಕರ್
ಕಾರವಾರ, ಸೆಪ್ಟೆಂಬರ್ 29: "ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾರವಾರ- ಅಂಕೋಲಾ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದಿಂದ ಕಣಕ್ಕೆ ಇಳಿದರೆ ಕಷ್ಟವಾಗಲಿದೆ. ಈ ನಿಟ್ಟಿನಲ್ಲಿ ಸ್ವತಂತ್ರವಾಗಿ ಕಣಕ್ಕೆ ಇಳಿಯಲು ಸಿದ್ಧತೆ ಮಾಡಿಕೊಳ್ಳುತ್ತೇನೆ," ಎಂದು ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಹೇಳಿದ್ದಾರೆ.
ಕಾರವಾರ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, "ಕಳೆದ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಕಣಕ್ಕೆ ಇಳಿದು ಈ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷಕ್ಕೆ ಎಷ್ಟು ಬೆಂಬಲ ಇದೆ ಎನ್ನುವುದನ್ನು ನೋಡಿದ್ದೇನೆ. ಜೆಡಿಎಸ್ ಪಕ್ಷ ಗಟ್ಟಿ ಮಾಡುವುದು ಕಷ್ಟವಿದೆ. ಈ ನಿಟ್ಟಿನಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಮಾರ್ಗದರ್ಶನ ಪಡೆದೇ ಸ್ವತಂತ್ರವಾಗಿ ಕಣಕ್ಕೆ ಇಳಿಯುವುದಕ್ಕೆ ನಿರ್ಧರಿಸಲಿದ್ದೇನೆ," ಎಂದಿದ್ದಾರೆ.
ಡಿಕೆಶಿಗೆ ಕಿರಿಕಿರಿ ಕೊಡಲು ಸಿದ್ದರಾಮಯ್ಯ ಹೀಗೆ ಮಾತನಾಡುತ್ತಿದ್ದಾರೆ- ಸಚಿವ ಹೆಬ್ಬಾರ್
ಮಧು ಬಂಗಾರಪ್ಪ ಸಹೋದರ ಇದ್ದಂತೆ
"ನನಗೆ ಮಧು ಬಂಗಾರಪ್ಪ ಸಹೋದರ ಇದ್ದಂತೆ, ಅದಕ್ಕಾಗಿಯೇ ಅವರನ್ನು ಭೇಟಿ ಮಾಡಲು ಹೋಗಿದ್ದೆ. ಕಾಂಗ್ರೆಸ್ ಸೇರುವ ಉದ್ದೇಶವಿಲ್ಲ. ಆದರೂ ಮುಂದಿನ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ನಿಂದ ಜಿಲ್ಲೆಯಿಂದ ಸ್ಪರ್ಧಿಸಲು ಪಕ್ಷ ಸೇರುವಂತೆ ಹೇಳಿದ್ದರು. ಇನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಹ ನನಗೆ ಆಪ್ತರಿದ್ದಾರೆ. ಆದರೆ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಕ್ಕೆ ಸೇರುವ ಪ್ರಯತ್ನ ನಡೆಸಿಲ್ಲ, ಮುಂದಿನ ದಿನದಲ್ಲಿ ಆಗುವ ಬದಲಾವಣೆ ನೋಡಿ ನಿರ್ಧರಿಸಲಿದ್ದೇನೆ," ಎಂದಿದ್ದಾರೆ.
ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಆಗಲಿ
"ಕಾರವಾರದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಶೀಘ್ರದಲ್ಲೇ ಆಗಬೇಕು. ಗೋವಾದಲ್ಲಿನ ಬಾಂಬೋಲಿ ಆಸ್ಪತ್ರೆಯಂತೆ ನಿರ್ಮಾಣವಾಗಲು ಯೋಜನಾ ವರದಿ ಮಾಡುವಂತೆ ಜಿಲ್ಲೆಯ ಜನಪ್ರತಿನಿಧಿಗಳು ಪ್ರಯತ್ನ ನಡೆಸಬೇಕು. ಆರೋಗ್ಯ ಸಚಿವರು ಸದನದಲ್ಲಿ ಕಾರವಾರ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣದ ಬಗ್ಗೆ ಹೇಳಿದ್ದಾರೆ. ಸದ್ಯ ಜಿಲ್ಲಾಸ್ಪತ್ರೆ ಮೇಲ್ದರ್ಜೆಗೆ ಏರಿಸಲು ನೂತನ ಆಸ್ಪತ್ರೆ ನಿರ್ಮಾಣವಾಗುತ್ತಿದ್ದು, ಶೀಘ್ರದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಸರ್ಕಾರ ಅನುದಾನ ಮಂಜೂರು ಮಾಡಬೇಕು," ಎಂದು ಆಗ್ರಹಿಸಿದರು.
"ನಾನು ಜಿಲ್ಲಾಸ್ಪತ್ರೆ ಮೇಲ್ದರ್ಜೆಗೆ ಏರಿಸುವ ಕಾಮಗಾರಿ ಶಂಕುಸ್ಥಾಪನೆ ಆಗದಿರುವ ಬಗ್ಗೆ ಧ್ವನಿ ಎತ್ತಿದ್ದಕ್ಕೆ ಇಂದು ಕಾಮಗಾರಿ ಪ್ರಾರಂಭವಾಗಿದೆ. ಇಲ್ಲದಿದ್ದರೆ ಇನ್ನೂ ಆರು ತಿಂಗಳಾದರೂ ಕಾಮಗಾರಿ ಪ್ರಾರಂಭವಾಗುತ್ತಿರಲಿಲ್ಲ. ನನ್ನ ಜೊತೆ ಧ್ವನಿ ಎತ್ತಿದ ಹಾಗೂ ಲೋಕಾಯುಕ್ತಕ್ಕೆ ದೂರು ನೀಡಿದ ಮಾಧವ ನಾಯಕರಿಗೂ ಧನ್ಯವಾದ ಸಲ್ಲಿಸುತ್ತೇನೆ. ಶಾಸಕಿ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿದ ಬಗ್ಗೆ ಇನ್ನೂ ನನಗೆ ತನಿಖೆಗೆ ಕರೆದಿಲ್ಲ. ಒಂದೊಮ್ಮೆ ಕರೆದರೆ ಅದಕ್ಕೆ ಸ್ಪಂದಿಸುತ್ತೇನೆ," ಎಂದಿದ್ದಾರೆ.
ಶಾಸಕನಾದರೆ ಕಮಿಷನ್ ರಾಜಕೀಯ ಮಾಡುವುದಿಲ್ಲ
"ನಾನು ಈ ಹಿಂದೆ ಕ್ಷೇತ್ರದಲ್ಲಿ ಶಾಸಕನಾಗಿದ್ದ ವೇಳೆಯಲ್ಲಿ ಕಮಿಷನ್ ರಾಜಕೀಯವನ್ನು ಮಾಡಿರಲಿಲ್ಲ. ಕಾಮಗಾರಿಗಳಿಗೆ ಕಮಿಷನ್ ನಿಗದಿಪಡಿಸುವ ಕೆಲಸ ಮಾಡಿರಲಿಲ್ಲ. ಮುಂದಿನ ಬಾರಿ ಶಾಸಕನಾದರೂ ಇಂತಹ ಕೆಲಸಕ್ಕೆ ಕೈ ಹಾಕುವುದಿಲ್ಲ," ಎಂದು ಆನಂದ್ ಅಸ್ನೋಟಿಕರ್ ಹೇಳಿದರು.
"ಸದ್ಯ ಕಾಮಗಾರಿಗಳಿಗೆ ಕಮಿಷನ್ ಕೊಡುವಂತೆ ಗುತ್ತಿಗೆದಾರರಿಗೆ ಒತ್ತಡ ಹಾಕುವ ಬಗ್ಗೆ ಹಲವರಿಂದ ಆರೋಪ ಕೇಳಿ ಬಂದಿದೆ. ಕ್ಷೇತ್ರದಲ್ಲಿ ಕಳೆದ ಮೂರು ಅವಧಿಯಲ್ಲಿ ಮೂರು ಶಾಸಕರನ್ನು ಜನರು ನೋಡಿದ್ದಾರೆ. ಯಾರ ಸಂದರ್ಭದಲ್ಲಿ ಕಮಿಷನ್ ರಾಜಕೀಯ ನಡೆಯಿತು ಎನ್ನುವುದು ಜನರಿಗೆ ತಿಳಿದಿದೆ. ನಾನು ಶಾಸಕನಾಗಿದ್ದ ವೇಳೆಯಲ್ಲಿ ಕಮಿಷನ್ ರಾಜಕೀಯಕ್ಕೆ ಆದ್ಯತೆ ಕೊಟ್ಟಿರಲಿಲ್ಲ. ಕೆಲಸ ಮಾಡಿ ಕ್ಷೇತ್ರದ ಜನರಿಗೆ ಸಹಾಯ ಆಗಲು ಮೊದಲ ಆದ್ಯತೆ ನೀಡಿದ್ದೆ. ಮುಂದೆ ಒಂದೊಮ್ಮೆ ಕ್ಷೇತ್ರದಿಂದ ಶಾಸಕನಾಗಿ ಜನರು ಆಯ್ಕೆ ಮಾಡಿದರೆ ಈ ಕಮಿಷನ್ ರಾಜಕೀಯಕ್ಕೆ ಬ್ರೇಕ್ ಹಾಕುತ್ತೇನೆ," ಎಂದು ಹೇಳಿದರು.
ತಾಯಿಯ ಅನಾರೋಗ್ಯದಿಂದ ಸಾರ್ವಜನಿಕವಾಗಿ ದೂರ
"ನನ್ನ ತಾಯಿ ಶುಭಲತಾ ಅಸ್ನೋಟಿಕರ್ರಿಗೆ ಎರಡೂ ಕಿಡ್ನಿ ವೈಫಲ್ಯವಾಗಿದ್ದು, ಇದೇ ವೇಳೆ ಹೃದಯಾಘಾತವಾಗಿ ಐದು ಕಡೆ ಸ್ಟಂಟ್ ಹಾಕಲಾಗಿದೆ. ಸದ್ಯ ಅವರ ಸ್ಥಿತಿ ಗಂಭೀರವಾಗಿಯೇ ಇದೆ ಎಂದು ಆನಂದ್ ಹೇಳಿದರು. ತಾಯಿಯ ಅನಾರೋಗ್ಯದಿಂದ ಸಾರ್ವಜನಿಕವಾಗಿ ದೂರ ಉಳಿದಿದ್ದೇನೆ. ಇನ್ನು ಮೂರು ತಿಂಗಳು ಟ್ರೀಟ್ಮೆಂಟ್ ನೀಡಬೇಕಿದೆ. ಪ್ರತಿನಿತ್ಯ ಡಯಾಲಿಸಿಸ್ ಕಾರವಾರದಲ್ಲಿಯೇ ಮಾಡಿಸುತ್ತಿದ್ದು, ಅವರು ಚೇತರಿಕೆ ಕಂಡ ನಂತರ ಸಕ್ರಿಯ ರಾಜಕಾರಣಕ್ಕೆ ಬರಲು ಚಿಂತನೆ ನಡೆಸಿದ್ದೇನೆ," ಎಂದು ಹೇಳಿದರು.
Recommended Video