ಬಾಣಂತಿ ಗೀತಾ ಸಾವಲ್ಲಿ ನಿರ್ಲಕ್ಷವಾಗಿಲ್ಲ, ಸರ್ಜನ್ ನಿರ್ದೋಷಿ ಎಂದ ವರದಿ
ಕಾರವಾರ, ಡಿಸೆಂಬರ್ 13: ಬಾಣಂತಿ ಗೀತಾ ಬಾನಾವಳಿ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರವಾರದ ಜಿಲ್ಲಾ ಆಸ್ಪತ್ರೆಯ ಸರ್ಜನ್ ಆಗಿದ್ದ ಡಾ.ಶಿವಾನಂದ್ ಕುಡ್ತರಕರ್ ಅಥವಾ ಅವರ ತಂಡದ ವೈದ್ಯಕೀಯ ಸಿಬ್ಬಂದಿಯಿಂದ ಶಸ್ತ್ರ ಚಿಕಿತ್ಸೆಯ ವೇಳೆ ನಿರ್ಲಕ್ಷವಾಗಿರಲಿಲ್ಲ ಎಂದು ತಜ್ಞರ ತನಿಖಾ ವರದಿ ಹೇಳಿದ್ದು, ಈ ವರದಿ ಇದೀಗ ಜಿಲ್ಲಾಡಳಿತದ ಕೈ ಸೇರಿದೆ.
ಕಾರವಾರ ಜಿಲ್ಲಾ ಆಸ್ಪತ್ರೆಯಲ್ಲಿ ಹೆರಿಗೆಯಾದ ನಂತರ ಸೆಪ್ಟೆಂಬರ್ 3ರಂದು ಸಂತಾನ ಶಕ್ತಿ ಹರಣ ಶಸ್ತ್ರ ಚಿಕಿತ್ಸೆ ಮಾಡುವ ವೇಳೆ ಸರ್ವೋದಯ ನಗರದ ಗೀತಾ ಬಾನಾವಳಿ ಎನ್ನುವ ಬಾಣಂತಿ ಮಹಿಳೆ ಮೃತಪಟ್ಟಿದ್ದರು. ಶಸ್ತ್ರ ಚಿಕಿತ್ಸೆ ಮಾಡಲು ಮುಂದಾಗಿದ್ದ ಸರ್ಜನ್ ಕುಡ್ತರಕರ್ ನಿರ್ಲಕ್ಷತನದಿಂದಲೇ ಬಾಣಂತಿ ಸಾವನ್ನಪ್ಪಿದ್ದಾಳೆ ಎಂದು ಬಾಣಂತಿ ಕುಟುಂಬಸ್ಥರು ಹಾಗೂ ಸ್ಥಳೀಯರು ಆರೋಪಿಸಿದ್ದರು.
ನಿರ್ಲಕ್ಷದಿಂದ ಬಾಣಂತಿ ಮೃತಪಟ್ಟಿಲ್ಲ
ಬಾಣಂತಿ ಸಾವಿನ ಪ್ರಕರಣ ಸಂಬಂಧ ನ್ಯಾಯಕ್ಕಾಗಿ ಆಗ್ರಹಿಸಿ ದೊಡ್ಡ ಹೋರಾಟವೇ ನಡೆದ ಹಿನ್ನಲೆಯಲ್ಲಿ ವಿಷಯ ಮುಖ್ಯಮಂತ್ರಿಯವರೆಗೂ ತಲುಪಿ, ಸೂಕ್ತ ಮಾಹಿತಿ ನೀಡಲು ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದರು. ಈ ಹಿನ್ನಲೆಯಲ್ಲಿ ಈ ಹಿಂದೆ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದ ಮೊಹಮ್ಮದ್ ರೋಷನ್ ನೇತೃತ್ವದಲ್ಲಿ ತಜ್ಞ ವೈದ್ಯರನ್ನೊಳಗೊಂಡ ಸಮಿತಿಯನ್ನು ರಚಿಸಿ ತನಿಖೆ ನಡೆಸಲಾಗಿತ್ತು. ತಜ್ಞರ ತಂಡ ಘಟನೆ ಸಂಬಂಧ ಕೂಲಂಕುಷವಾಗಿ ವಿಚಾರಣೆ ನಡೆಸಿ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಿದ್ದು, ವರದಿಯಲ್ಲಿ ವೈದ್ಯ ಶಿವಾನಂದ್ ಕುಡ್ತರಕರ್ ಅವರ ನಿರ್ಲಕ್ಷದಿಂದ ಬಾಣಂತಿ ಮೃತಪಟ್ಟಿಲ್ಲ ಎಂದು ತಿಳಿಸಲಾಗಿದೆ.
ಸಿಇಒ ನೇತೃತ್ವದ ತಜ್ಞರ ತಂಡದ ವರದಿ
ಈ ಬಗ್ಗೆ ಅಧಿಕೃತವಾಗಿ ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ಮಾಹಿತಿ ನೀಡಿದ್ದು, ಬಾಣಂತಿ ಸಾವಿಗೆ ನಿರ್ಲಕ್ಷತನವೇ ಕಾರಣವೇ? ಸಾವನ್ನು ತಡೆಯುವ ಸಾಧ್ಯತೆ ಇತ್ತೆ? ಅನಸ್ತೇಶಿಯಾ ಕೊಟ್ಟ ನಂತರ ಬಾಣಂತಿ ಸಾವನ್ನಪ್ಪಿದ್ದಾರಾ? ಎನ್ನುವ ಕುರಿತು ತನಿಖೆ ನಡೆದಿರುವುದಾಗಿ ಸಿಇಒ ನೇತೃತ್ವದ ತಜ್ಞರ ತಂಡ ವರದಿಯಲ್ಲಿ ಉಲ್ಲೇಖಿಸಿದೆ. ಸರ್ಜನ್ ಕುಡ್ತರಕರ್ ಅವರ ವೈಯಕ್ತಿಕ ನಿರ್ಲಕ್ಷತನದಿಂದಾಗಲಿ ಅಥವಾ ಅವರ ತಂಡದ ಸಿಬ್ಬಂದಿಯಿಂದಾಗಲಿ ಶಸ್ತ್ರ ಚಿಕಿತ್ಸೆಯ ವೇಳೆ ನಿರ್ಲಕ್ಷವಾಗಿಲ್ಲ ಎಂದು ವರದಿ ಹೇಳಿದೆ ಎಂದು ತಿಳಿಸಿದ್ದಾರೆ. ಅಲ್ಲದೇ, ಈ ಸಾವಿಗೆ ಕುಡ್ತರಕರ್ ಒಬ್ಬರನ್ನೇ ಹೊಣೆಗಾರರನ್ನಾಗಿ ಬೊಟ್ಟು ಮಾಡಿ ತೋರಿಸುವುದು ಕೂಡ ತಪ್ಪು ಹಾಗೂ ಯಾವುದೇ ಶಸ್ತ್ರಚಿಕಿತ್ಸೆಯ ವೇಳೆ ಅರವಳಿಕೆ ತಜ್ಞರು ಸ್ಥಳದಲ್ಲಿದ್ದರೆ ಒಳ್ಳೆಯದು ಎಂದು ಆ ತಂಡದ ತಜ್ಞರು ಸಲಹೆಯನ್ನೂ ನೀಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಮರಣೋತ್ತರ ಪರೀಕ್ಷಾ ವರದಿಗಾಗಿ ಕಾಯುತ್ತಿರುವ ಪೊಲೀಸರು
ಇನ್ನು, ಗೀತಾ ಬಾನಾವಳಿ ಸಾವಿನ ಪ್ರಕರಣದಲ್ಲಿ ವೈದ್ಯರ ನಿರ್ಲಕ್ಷದಿಂದಲೇ ಸಾವು ಸಂಭವಿಸಿದೆ ಎನ್ನುವ ಆರೋಪ ಕೇಳಿ ಬಂದ ಹಿನ್ನಲೆಯಲ್ಲಿ ಮರಣೋತ್ತರ ಪರೀಕ್ಷೆಯನ್ನೂ ನಡೆಸಲಾಗಿತ್ತು. ಮರಣೋತ್ತರ ಪರೀಕ್ಷೆಗಾಗಿ ದೇಹದ ಭಾಗಗಳನ್ನು ಮಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಿದ್ದು, ಇಲ್ಲಿಯವರೆಗೂ ವರದಿ ಬಂದಿಲ್ಲ. ಈಗಾಗಲೇ ಪ್ರಕರಣ ಸಂಬಂಧ ಡಾ.ಶಿವಾನಂದ ಕುಡ್ತರಕರ್ ವಿರುದ್ಧ ಕಾರವಾರ ನಗರ ಠಾಣೆಯಲ್ಲಿ ದೂರು ದಾಖಲಾಗಿದ್ದು, ಮುಂದಿನ ಕ್ರಮಕ್ಕಾಗಿ ಪೊಲೀಸರು ಮರಣೋತ್ತರ ಪರೀಕ್ಷೆಗಾಗಿ ಕಾಯುತ್ತಿದ್ದಾರೆ ಎನ್ನಲಾಗಿದೆ.
ಈವರೆಗೆ ನಮಗೆ ಅವರ ವರದಿ ಬಂದಿಲ್ಲ
ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ಮಾಹಿತಿ ನೀಡಿದ್ದು, 'ಶಸ್ತ್ರ ಚಿಕಿತ್ಸೆಯ ವೇಳೆ ವೈದ್ಯಕೀಯ ನಿರ್ಲಕ್ಷ್ಯವೇನಾದರೂ ಆಗಿದೆಯೇ? ಎಂಬ ಬಗ್ಗೆ ಮೆಡಿಕಲ್ ಬೋರ್ಡ್ ನಿರ್ಧಾರ ಮಾಡಬೇಕಿದೆ. ಅವರು ನಮಗೆ ವರದಿ ನೀಡಬೇಕಿದೆ. ಈವರೆಗೆ ನಮಗೆ ಅವರ ವರದಿ ಬಂದಿಲ್ಲ. ಅವರ ವರದಿಯ ಆಧಾರದ ಮೇಲೆ ದಾಖಲಾಗಿರುವ ಪ್ರಕರಣದ ಕುರಿತು ಮುಂದುವರಿಯುತ್ತೇವೆ' ಎಂದು ತಿಳಿಸಿದ್ದಾರೆ.