'ಸಿಎಂ ಮಾತು ಉಳಿಸಿಕೊಂಡಿಲ್ಲ':ಉತ್ತರ ಕನ್ನಡ ವಾಟ್ಸಪ್ ಗ್ರೂಪ್ಗಳಲ್ಲಿ ಪೋಸ್ಟ್ ವೈರಲ್
ಕಾರವಾರ, ಫೆಬ್ರವರಿ 08:ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಶುಕ್ರವಾರ ಸಮ್ಮಿಶ್ರ ಸರ್ಕಾರದ ಎರಡನೇ ಬಜೆಟ್ ಮಂಡಿಸುತ್ತಿದ್ದಂತೆ, ಉತ್ತರ ಕನ್ನಡ ಜಿಲ್ಲೆಯ ಸಾಮಾಜಿಕ ಜಾಲತಾಣಗಳ ಗ್ರೂಪ್ಗಳಲ್ಲಿ ಸಂದೇಶವೊಂದು ಫಾರ್ವರ್ಡ್ ಆಗಲು ಶುರುವಾಗಿದೆ.
ಸಿಎಂ ಕುಮಾರಸ್ವಾಮಿಯವರು, ವಿಧಾನಸಭಾ ಚುನಾವಣೆಯ ಪ್ರಚಾರಕ್ಕಾಗಿ ಜಿಲ್ಲೆಯ ಕುಮಟಾ ತಾಲ್ಲೂಕಿಗೆ ಭೇಟಿ ನೀಡಿದ್ದರು. ಅಂದು ಅವರು, 'ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಎರಡು ತಿಂಗಳ ಒಳಗೆ, ಖುದ್ದು ಒಂದು ವಾರಗಳ ಕಾಲ ಇಲ್ಲೇ ವಾಸ್ತವ್ಯ ಮಾಡಿ ಜಿಲ್ಲೆಯ ಅರಣ್ಯ ಅತಿಕ್ರಮಣ ಸಮಸ್ಯೆಯನ್ನು ಬಗೆಹರಿಸಿ ಕೊಡುತ್ತೇವೆ' ಎಂದು ಸಾರ್ವಜನಿಕವಾಗಿ ಹೇಳಿಕೆ ನೀಡಿದ್ದರು.
ಕರ್ನಾಟಕ ಬಜೆಟ್ 2019 : ಸಿದ್ದರಾಮಯ್ಯ, ಬಿಎಸ್ವೈ ಕ್ಷೇತ್ರಕ್ಕೆ ಬಂಪರ್
ಆದರೆ ಅಧಿಕಾರಕ್ಕೆ ಬಂದು ಎರಡು ಬಜೆಟ್ ಮಂಡಿಸಿದರೂ ಸಿಎಂ ತಮ್ಮ ಮಾತನ್ನು ಉಳಿಸಿಕೊಂಡಿಲ್ಲೆಂದು ಇದೀಗ ಸಂದೇಶಗಳು ಹರಿದಾಡುತ್ತಿವೆ.
ಜಿಲ್ಲೆಯ ಬಿಜೆಪಿ ಶಾಸಕರು ನಿಯೋಗದೊಂದಿಗೆ ತೆರಳಿ ಅರಣ್ಯ ಅತಿಕ್ರಮಣ ಸಮಸ್ಯೆಯ ಬಗ್ಗೆ ಸಿಎಂ ಅವರಿಗೆ ಮನವಿಯನ್ನು ಕಳೆದ ವರ್ಷ ಸಲ್ಲಿಸಿದ್ದರು. ಸದನದಲ್ಲೂ ಧ್ವನಿ ಎತ್ತಿದ್ದರು. ಆದರೆ, ಈವರೆಗೆ ಅರಣ್ಯ ಅತಿಕ್ರಮಣದಾರರ ಸಮಸ್ಯೆ ಬಗೆಹರಿದಿಲ್ಲ.
ಕರ್ನಾಟಕ ವಿಧಾನಸಭೆ ಅಧಿವೇಶನ LIVE : ಬಜೆಟ್ ಮಂಡಿಸುತ್ತಿರುವ ಸಿಎಂ
ಜೆಡಿಎಸ್ ಪಕ್ಷದಿಂದ ಟಿಕೆಟ್ ಪಡೆದು, ಯಲ್ಲಾಪುರ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಎ.ರವೀಂದ್ರ ನಾಯ್ಕ ಅವರೇ ಅರಣ್ಯ ಅತಿಕ್ರಮಣದಾರರ ಸಮಸ್ಯೆ ಬಗೆಹರಿಸುವಂತೆ ಇತ್ತೀಚೆಗೆ ಜಿಲ್ಲೆಯಲ್ಲಿ ಬೃಹತ್ ಹೋರಾಟ ನಡೆಸಿದ್ದರು. ಈ ಬಗ್ಗೆಯೂ ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶಗಳು ಹರಿದಾಡುತ್ತಿವೆ.