ಮಾರಿಕಾಂಬಾ ಜಾತ್ರೆ; ಶಿರಸಿ ದೇವಸ್ಥಾನದ ಅಧ್ಯಕ್ಷರಿಗೆ ಪೊಲೀಸ್ ಭದ್ರತೆ
ಶಿರಸಿ, ಮಾರ್ಚ್ 5: ಇಲ್ಲಿನ ಪ್ರಸಿದ್ಧ ಮಾರಿಕಾಂಬಾ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಡಾ.ವೆಂಕಟೇಶ ನಾಯ್ಕ ಅವರಿಗೆ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಅವರಿಗೆ ಪೊಲೀಸ್ ಇಲಾಖೆ ಗನ್ ಮ್ಯಾನ್ ಭದ್ರತೆ ನೀಡಿದೆ.
ಮಾರಿಕಾಂಬಾ ದೇವಸ್ಥಾನದ ಅಧ್ಯಕ್ಷರಾದ ನಂತರ ದೇವಸ್ಥಾನದ ಅಭಿವೃದ್ಧಿಗೆ ನಾನಾ ಯೋಜನೆಗಳನ್ನು ವೆಂಕಟೇಶ ನಾಯ್ಕ ಕೈಗೆತ್ತಿಕೊಂಡಿದ್ದರು. ಅಲ್ಲದೇ, ಹಲವು ಹಗರಣಗಳನ್ನು ಸಹ ಬಯಲಿಗೆ ಎಳೆಯಲು ಮುಂದಾಗಿದ್ದರು. ಈ ಹಿನ್ನೆಲೆಯಲ್ಲಿ ಕೆಲ ತಿಂಗಳಿನಿಂದ ವೆಂಕಟೇಶ್ ನಾಯ್ಕರಿಗೆ ಬೆದರಿಕೆ ಪತ್ರಗಳು ಬಂದಿದ್ದವು.
ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವದ ಸಂಭ್ರಮ
ದೇವಸ್ಥಾನದಲ್ಲಿ ಆಡಳಿತ ಮಂಡಳಿ ಅಧ್ಯಕ್ಷರು ಕೂರುವ ಕುರ್ಚಿಯ ಕೆಳಗೆ ವಾಮಾಚಾರ ಮಾಡಿಸಿ, ವಸ್ತುಗಳನ್ನಿಟ್ಟು ಹೆದರಿಸುವ ಕಾರ್ಯವೂ ನಡೆದಿತ್ತು. ಈ ಬಾರಿಯ ಜಾತ್ರೆಯ ದಿನಾಂಕ ಘೋಷಣೆಯಾದ ತಕ್ಷಣ ವೆಂಕಟೇಶ್ ನಾಯ್ಕರ ಮನೆಯ ಮುಂದೆ ಸಹ ಕುಂಬಳಕಾಯಿ ಒಡೆದು ವಾಮಾಚಾರ ನಡೆಸಿ, ಹೆದರಿಸುವ ಪ್ರಯತ್ನ ಮಾಡಲಾಗಿತ್ತು. ತನಗೆ ಜೀವ ಬೆದರಿಕೆ ಇದ್ದು, ಮನೆಯ ಬಳಿ ಸಂಶಯಾಸ್ಪದವಾಗಿ ಕೆಲವರು ಓಡಾಡುತ್ತಿದ್ದಾರೆ. ಸಿಸಿಟಿವಿಯಲ್ಲಿ ಈ ದೃಶ್ಯಗಳು ಸಹ ಸೆರೆಯಾಗಿದ್ದು, ಭದ್ರತೆ ಕೊಡುವಂತೆ ಹಾಗೂ ಆರೋಪಿಗಳನ್ನು ಬಂಧಿಸುವಂತೆ ಪೊಲೀಸ್ ಇಲಾಖೆಗೆ ವೆಂಕಟೇಶ್ ನಾಯ್ಕ ಅವರು ಮನವಿ ಮಾಡಿಕೊಂಡಿದ್ದರು.
ಈ ಬಗ್ಗೆ ಪರಿಶೀಲನೆ ನಡೆಸಿದ ಪೊಲೀಸ್ ಅಧಿಕಾರಿಗಳು, ವೆಂಕಟೇಶ್ ನಾಯ್ಕರಿಗೆ ಕಳೆದ ಮೂರು ದಿನಗಳಿಂದ ಓರ್ವ ಗನ್ ಮ್ಯಾನ್ ಒದಗಿಸಿದ್ದಾರೆ. ಮಾರಿಕಾಂಬಾ ದೇವರ ಜಾತ್ರಾ ಮಹೋತ್ಸವ ರಾಜ್ಯದಲ್ಲಿಯೇ ದೊಡ್ಡ ಜಾತ್ರಾ ಮಹೋತ್ಸವವಾಗಿದ್ದು, ಈ ವೇಳೆ ಯಾವುದೇ ಸಮಸ್ಯೆ ಎದುರಾಗಬಾರದು ಎನ್ನುವ ನಿಟ್ಟಿನಲ್ಲಿ ವೆಂಕಟೇಶ್ ನಾಯ್ಕರಿಗೆ ಇಲಾಖೆ ಭದ್ರತೆ ನೀಡಿದೆ.