"ಜೀವನದ ಅತ್ಯಮೂಲ್ಯ ಸಮಯ ಜೈಲಿನಲ್ಲೇ ಕಳೆದೆ, ಇನ್ನಾದರೂ ಬದುಕಬೇಕು"
ಭಟ್ಕಳ, ನವೆಂಬರ್ 18: ಶಂಕಿತ ಉಗ್ರನಾಗಿ ಜೈಲು ಸೇರಿ 2017ರಲ್ಲಿ ಬಿಡುಗಡೆಯಾಗಿದ್ದ ತಾಲೂಕಿನ ಮುಗ್ದಮ್ ಕಾಲೋನಿ ನಿವಾಸಿ ಶಬ್ಬೀರ್ ಗಂಗೊಳ್ಳಿ ಯಾನೆ ಶಬ್ಬೀರ್ ಮೌಲಾನಾಗೆ ಪಾಸ್ ಪೋರ್ಟ್ ನೀಡಲು ಭಟ್ಕಳ ಪೊಲೀಸರು ಅಡ್ಡಗಾಲು ಹಾಕಿರುವ ಮಾಹಿತಿ ಬೆಳಕಿಗೆ ಬಂದಿದೆ.
ಜೈಲಿನಿಂದ ಬಿಡುಗಡೆಗೊಂಡು ಒಂದೂವರೆ ವರ್ಷ ಕಳೆದ ಬಳಿಕ ವಿದೇಶದಲ್ಲಿ ಉದ್ಯೋಗ ಕಂಡುಕೊಳ್ಳಲು ಪಾಸ್ ಪೋರ್ಟ್ ಗೆ ಅರ್ಜಿ ಸಲ್ಲಿಸಿದ್ದ ಶಬ್ಬೀರ್ ದಾಖಲಾತಿ ಪರಿಶೀಲನೆಯ ಸಂಬಂಧ ಪೊಲೀಸರ ಮುಂದೆ ಹಾಜರಾಗಿದ್ದು, ಪೊಲೀಸರು ನಕಾರ ಸೂಚಿಸಿದ್ದಾರೆ.
ಪತಿ ಹತ್ಯೆಯಾಗುತ್ತಿದ್ದಂತೆಯೇ ಸೆರೆಸಿಕ್ಕ ಮೋಸ್ಟ್ ವಾಂಟೆಡ್ ಬಗ್ದಾದಿ ಪತ್ನಿ
2008ರಲ್ಲಿ ಮಂಗಳೂರು ಉಳ್ಳಾಲದ ಮನೆಯೊಂದರ ಮೇಲೆ ದಾಳಿಗೆ ಸಂಬಂಧಿಸಿದಂತೆ ಶಬ್ಬೀರ್ 13ನೇ ಆರೋಪಿಯಾಗಿ ಶಂಕಿತ ಉಗ್ರರ ಪಟ್ಟಿ ಸೇರಿದ್ದ. ಭಟ್ಕಳ ಜಾಲಿ ಸಮುದ್ರ ತೀರದ ಬೆಹ್ರೀನ್ ಹೌಸ್ ನಲ್ಲಿ ಈತ ಯುವಕರಿಗೆ ಜಿಹಾದಿ ಬೋಧನೆ ಮಾಡಿದ್ದ ಬಗ್ಗೆ ಆರೋಪ ಹೊರಿಸಲಾಗಿತ್ತು. ನಂತರ ಆತ ಪುಣೆಗೆ ಪಲಾಯನಗೈದು ಮಾವನೊಂದಿಗೆ ವಾಸವಾಗಿದ್ದ. 2008ರ ಡಿಸೆಂಬರ್ ನಲ್ಲಿ ಖೋಟಾ ನೋಟು ಚಲಾವಣೆಯ ಆರೋಪದ ಮೇರೆಗೆ ಪುಣೆಯ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದರು.
ಅಲ್ಲದೇ ಉಗ್ರರ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವುದಕ್ಕೆ ಸಂಬಂಧಿಸಿದಂತೆ ಈತ ಅರೆಬಿಕ್ ಬರಹಗಳುಳ್ಳ ಕೆಲವು ಪ್ರತಿಗಳನ್ನು ಇಟ್ಟುಕೊಂಡಿದ್ದ ಬಗ್ಗೆ ಪ್ರತ್ಯೇಕ ಪ್ರಕರಣ ದಾಖಲಿಸಲಾಗಿತ್ತು. ಖೋಟಾ ನೋಟು ಪ್ರಕರಣದಲ್ಲಿ ಪುಣೆ ನ್ಯಾಯಾಲಯ 5 ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಈ ತೀರ್ಪಿನ ವಿರುದ್ಧ ಶಬ್ಬೀರ್ ಹೈಕೋರ್ಟ್ ಮೆಟ್ಟಿಲನ್ನು ಏರಿದ್ದನಾದರೂ ಆ ಹೊತ್ತಿಗೆ ಕೆಳ ನ್ಯಾಯಾಲಯ ನೀಡಿದ ಜೈಲು ಶಿಕ್ಷೆಯ ಅವಧಿ ಮುಗಿದ ಕಾರಣ ಖೋಟಾನೋಟು ಆರೋಪದ ಸಂಬಂಧ ನ್ಯಾಯಾಲಯದ ಹೋರಾಟವನ್ನು ಅಲ್ಲಿಗೇ ನಿಲ್ಲಿಸಿ ಆತ ಮನೆ ಸೇರಿಕೊಳ್ಳಲು ಆಸಕ್ತನಾಗಿದ್ದ. ಅರೇಬಿಕ್ ಬರಹ ಪ್ರಕರಣದಲ್ಲಿ ಈತನನ್ನು ನ್ಯಾಯಾಲಯ ನಿರ್ದೋಷಿ ಎಂದು ತೀರ್ಪಿತ್ತಿತು.
ಜಮ್ಮು-ಕಾಶ್ಮೀರದಲ್ಲಿ ಲಷ್ಕರ್ ಸಂಘಟನೆಯ ಇಬ್ಬರು ಉಗ್ರರ ಬಂಧನ
ವಿಶೇಷ ಎಂದರೆ ಜೈಲಿನಲ್ಲಿದ್ದ ಅವಧಿಯಲ್ಲಿಯೇ ನಡೆದ ಬೆಂಗಳೂರು ಚಿನ್ನಸ್ವಾಮಿ ಸ್ಟೇಡಿಯಂ ಸ್ಫೋಟ ಪ್ರಕರಣದಲ್ಲಿಯೂ ಆರೋಪಿಯಾಗಿದ್ದ ಈತನನ್ನು ನಂತರ ನ್ಯಾಯಾಲಯ ನಿರಪರಾಧಿ ಎಂದು ಹೇಳಿತ್ತು. ಕೊನೆಯದಾಗಿ ಭಟ್ಕಳ ಜಾಲಿ ಬೀಚ್ ಜಿಹಾದಿ ಬೋಧನೆ ಪ್ರಕರಣದಲ್ಲಿಯೂ ಈತ ಆರೋಪ ಮುಕ್ತನಾಗಿ ಮನೆಗೆ ಬಂದಿದ್ದನು.
ಪಾಸ್ ಪೋರ್ಟ್ ಗೆ ಪೊಲೀಸರು ಅಡ್ಡಗಾಲು ಹಾಕುತ್ತಿರುವುದಕ್ಕೆ ಸಂಬಂಧ ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಶಬ್ಬೀರ್, "ಜೀವನದ ಅಮೂಲ್ಯ ಸಮಯವನ್ನು ಜೈಲಿನಲ್ಲಿ ಕಳೆದಿದ್ದೇನೆ. ಇದೀಗ ಭಟ್ಕಳದಲ್ಲಿ ಕೆಲಸ ಹುಡುಕಿಕೊಳ್ಳಲು ಕಷ್ಟವಾಗುತ್ತಿದೆ. ಬೇರೆ ದೇಶಕ್ಕೆ ಹೋಗಿ ಕೆಲಸ ಹುಡುಕಿಕೊಳ್ಳೋಣ ಎಂದರೆ ಪಾಸ್ ಪೋರ್ಟ್ ಸಮಸ್ಯೆ ಎದುರಾಗಿದೆ. ನಾವು ಬಡವರಾಗಿದ್ದು, ಮನೆಯವರಿಗೆ ನಾನೇ ಆಧಾರ. ಪೊಲೀಸರು ನಿಮಗೆ ಪಾಸ್ ಪೋರ್ಟ್ ಸಾಧ್ಯವಿಲ್ಲ ಎಂದಿದ್ದಾರೆ. ಈಗ ಏನು ಮಾಡುವುದು ಗೊತ್ತಾಗುತ್ತಿಲ್ಲ" ಎಂದು ಹೇಳಿದ್ದಾರೆ.