ಹಳಿಯಾಳದಲ್ಲಿ ಲಾಕ್ ಡೌನ್ ನಡುವೆ ನಮಾಜ್; 20 ಮಂದಿ ಬಂಧನ
ಕಾರವಾರ, ಏಪ್ರಿಲ್ 02: ಲಾಕ್ ಡೌನ್ ನಿಷೇಧಾಜ್ಞೆ ಇದ್ದರೂ ಮಸೀದಿಯಲ್ಲಿ ನಮಾಜ್ ಮಾಡಿರುವ 20 ಮಂದಿಯನ್ನು ಪೊಲೀಸರು ಬಂಧಿಸಿ, ಪ್ರಕರಣ ದಾಖಲಿಸಿದ್ದಾರೆ.
ಹಳಿಯಾಳದಲ್ಲಿ ನಿಷೇಧಾಜ್ಞೆ ಉಲ್ಲಂಘನೆ ಮಾಡಿ ಮಸೀದಿಯಲ್ಲಿ ಗುಂಪಾಗಿ ನಮಾಜ್ ಮಾಡಲಾಗಿದೆ. ಕೊರೊನಾ ಸೋಂಕು ಹರಡದಂತೆ ತಡೆಗಟ್ಟಲು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಹಾಗೂ ಅಗತ್ಯ ವಸ್ತುಗಳಿಗೆ, ತುರ್ತು ಪರಿಸ್ಥಿತಿಯನ್ನು ಹೊರತುಪಡಿಸಿ ಬೇರೆ ಯಾವ ಸಂದರ್ಭದಲ್ಲೂ ಮನೆಯಿಂದ ಹೊರ ಬರದಂತೆ ಆದೇಶವಿದ್ದರೂ ಅದನ್ನು ಉಲ್ಲಂಘನೆ ಮಾಡಿ ನಮಾಜ್ ಮಾಡಲಾಗಿದೆ. ಹೀಗಾಗಿ ಎಲ್ಲರನ್ನೂ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ವಿದೇಶದಿಂದ ಬಂದವರಿಂದಲೇ ಸೋಂಕು ಹೆಚ್ಚು: ಉತ್ತರ ಕನ್ನಡ ಡಿಸಿ
ಎಂಟು ಜನ ಭಾಗಿ: ದೆಹಲಿಯ ನಿಜಾಮುದ್ದೀನ್ ನಲ್ಲಿ ನಡೆದ ಮರ್ಕಜ್ ಗೆ ಜಿಲ್ಲೆಯಿಂದ 25 ಮಂದಿ ತೆರಳಿದ್ದರು ಎಂಬ ಪಟ್ಟಿ ಜಿಲ್ಲೆಗೆ ಬಂದಿದೆ. ಆದರೆ, ಇದರಲ್ಲಿ ಎಂಟು ಜನ ಮರ್ಕಜ್ ನಲ್ಲಿ ಭಾಗವಹಿಸಿದ್ದವರನ್ನು ಗುರುತಿಸಲಾಗಿದ್ದು, ಇಬ್ಬರ ಗಂಟಲಿನ ದ್ರವದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಉಳಿದವರನ್ನು ಸ್ಕ್ರೀನ್ ಮಾಡಲಾಗಿದೆ. ಇನ್ನಿತರರ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ತಿಳಿಸಿದ್ದಾರೆ.
ದಾಂಡೇಲಿಯಲ್ಲಿ ಕೊರೊನಾ ವೈರಸ್ ಗೆ ಸಂಬಂಧಿಸಿದಂತೆ ನಕಲು ಸುದ್ದಿ ಹರಿಬಿಟ್ಟ ಆರೋಪದ ಮೇರೆಗೆ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ. ಈ ಇಬ್ಬರು ಯಾರದ್ದೋ ಭಾವಚಿತ್ರವನ್ನು ಬಳಸಿಕೊಂಡು ಕೊರೊನಾ ಸೋಂಕಿತರು ಎಂದು ಸುಳ್ಳು ಸುದ್ದಿ ಹರಿಬಿಟ್ಟಿದ್ದರು.