ಮಾತು ಬಾರದ ಈ ಜೋಡಿಗೆ ನಿಮ್ಮದೊಂದು ಶುಭ ಹಾರೈಕೆಯಿರಲಿ
ಕಾರವಾರ, ಜನವರಿ 24: ಮಾತು ಬೆಳ್ಳಿ ಮೌನ ಬಂಗಾರ ಎಂಬ ಮಾತಿದೆ. ಸದಾ ಮೌನವಾಗಿರುವ ಇಬ್ಬರ ದಾಂಪತ್ಯ ಹೇಗಿರಬಹುದು ಎಂದು ಯೋಚಿಸಿದ್ದೀರಾ? ಅಂಥ ಆಲೋಚನೆಯೊಂದು ನಿಜವಾಗಿದೆ. ಪ್ರೀತಿಗೆ ಭಾಷೆ, ಮಾತು ಮುಖ್ಯವಲ್ಲ, ಮನಸ್ಸುಗಳ ಮಿಲನವೇ ಸಾಕು ಎಂಬುದಕ್ಕೆ ಕಾರವಾರದಲ್ಲಿ ಮದುವೆಯೊಂದು ಅದ್ಭುತ ಉದಾಹರಣೆಯಾಗಿದೆ.
ನಗರದ ನಂದನಗದ್ದಾದಲ್ಲಿ ಸಾಂಸ್ಕೃತಿಕ ನಗರಿ ಮೈಸೂರಿನ ಮೂಕ ವರ ಹಾಗೂ ಕರಾವಳಿ ಕಾರವಾರದ ಮೂಕ ವಧು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮೈಸೂರಿನ ಹಿನಕಲ್ ನಿವಾಸಿ ಅನಂತ ಹಾಗೂ ಕಾರವಾರದ ಪ್ರಿಯಾಂಕಾ ಜೋಡಿ ಗೃಹಸ್ಥಾಶ್ರಮ ಪ್ರವೇಶಿಸಿದ ಮೂಕ ಪ್ರೇಮಿಗಳು.
ಮದುವೆಯಾಗಲು ಸಂಬಳ ಎಷ್ಟಿರಬೇಕು? ಪಾಠ ಒಂದು...
ಮಾತು ಬಾರದ ಈ ಇಬ್ಬರ ಊರುಗಳು ಸಾವಿರ ಕಿ.ಮೀ. ದೂರವಿದ್ದರೂ ಪ್ರೀತಿಸಿ, ಸತಿ ಪತಿಗಳಾದರು. ಪ್ರೀತಿಯು ಇಬ್ಬರನ್ನೂ ಒಂದಾಗಿಸಿದ್ದು, ಈ ಪ್ರಣಯ ಪಕ್ಷಿಗಳು ಹಿರಿಯರ ಸಮ್ಮುಖದಲ್ಲಿ ಸಪ್ತಪದಿ ತುಳಿದರು. ಮದುವೆಯ ಸಾರ್ಥಕ ಕ್ಷಣದಲ್ಲಿ ನೂರಾರು ಸ್ನೇಹಿತರು ಭಾಗಿಯಾಗಿದ್ದರು.
ಇತ್ತೀಚೆಗೆ ಭಟ್ಕಳದ ಸಮುದಾಯ ಭವನವೊಂದರ ಉದ್ಘಾಟನೆ ಕಾರ್ಯಕ್ರಮಕ್ಕೆ ಇವರಿಬ್ಬರು ಬಂದಿದ್ದರು. ಈ ಸಂದರ್ಭದಲ್ಲಿ ಇಬ್ಬರಿಗೂ ಪರಿಚಯವಾಗಿತ್ತು. ಪರಿಚಯ ಸ್ನೇಹವಾಗಿ, ಆ ನಂತರ ಸ್ನೇಹ ಪ್ರೀತಿಗೆ ತಿರುಗಿತು. ಈ ಪ್ರೀತಿಯು ಈಗ ಮದುವೆಯವರೆಗೂ ಬಂದಿದೆ.
ಅನಂತ ಇಂಜಿನಿಯರಿಂಗ್ ಕನ್ಸ್ಟ್ರಕ್ಟಿಂಗ್ ಕಂಪೆನಿಯಲ್ಲಿ ಉದ್ಯೋಗಿ
ಮಾತು ಬಾರದ ಇವರಿಬ್ಬರು ಬುದ್ಧಿವಂತರು. ಅನಂತ ಅವರು ಮೈಸೂರಿನ ಹೆಬ್ಬಾಳದ ಸಾಂಡ್ರಿಯಾ ಇಂಜಿನಿಯರಿಂಗ್ ಕನ್ಸ್ಟ್ರಕ್ಟಿಂಗ್ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದಾರೆ. ಪ್ರಿಯಾಂಕಾ ಟೈಲರ್ ವೃತ್ತಿ ನಿರ್ವಹಿಸುತ್ತಿದ್ದಾರೆ. ಅನಂತ ಅವರ ತಂದೆ ಜಯಸೂರ್ಯ ಉಡುಪಿ ಮೂಲದವರು. ತಾಯಿ ಶಾಂತಿ ಶಿವಮೊಗ್ಗ ಜಿಲ್ಲೆಯ ಸಾಗರದವರು.
ಇಬ್ಬರು ಮೂಕ ಮಕ್ಕಳು
ಅವರಿಗೆ ಒಂದು ಗಂಡು- ಒಂದು ಹೆಣ್ಣು, ಹೀಗೆ ಇಬ್ಬರು ಮಕ್ಕಳು. ಇವರಿಬ್ಬರು ಮೂಕರು. ಮಕ್ಕಳು ಮೂಕರು ಎನ್ನುವ ಕಾರಣಕ್ಕೆ ಇವರ ತಂದೆಯು ತಾಯಿಗೆ ವಿಚ್ಛೇದನ ನೀಡಿ, ಇಬ್ಬರು ಮಕ್ಕಳನ್ನು ಬಿಟ್ಟು, ಮತ್ತೊಂದು ಮದುವೆ ಆಗಿದ್ದರು. ಆದರೆ ಮದುವೆ ಆದ ಒಂದೇ ವರ್ಷದಲ್ಲಿ ಕ್ಯಾನ್ಸರ್ ಗೆ ತುತ್ತಾಗಿ ಸಾವನ್ನಪ್ಪಿದ್ದರು.
ಮಗಳಿಗೆ ಮದುವೆ ಮಾಡಿದ್ದಾರೆ
ಎಲ್ ಐಸಿಯಲ್ಲಿ ಆಡಳಿತಾಧಿಕಾರಿ ಆಗಿದ್ದ ಅವರು ತೀರಿಕೊಂಡ ಬಳಿಕ ಈ ಕುಟುಂಬಕ್ಕೆ ಬಿಡಿಗಾಸು ಸಿಗಲಿಲ್ಲ. ಹೀಗಾಗಿ ಅನಂತ ಅವರ ತಾಯಿ ಮೈಸೂರಿಗೆ ತೆರಳಿ, ಇಬ್ಬರು ಮೂಕ ಮಕ್ಕಳಿಗೆ ವಿದ್ಯಾಭ್ಯಾಸ ನೀಡಿದರು. ಇನ್ನು ಮಗಳನ್ನು ಕೇರಳದ ಮೂಕನೊಬ್ಬನ ಜೊತೆ ಮದುವೆ ಮಾಡಿ ಕೊಟ್ಟಿದ್ದಾರೆ.
ಮುಂದಿನ ಬದುಕು ಚೆನ್ನಾಗಿರಲಿ
ಸದ್ಯಕ್ಕೆ ಶಾಂತಿ ಅವರು ಮೈಸೂರಿನ ಹಿನಕಲ್ ನಲ್ಲಿ ಸ್ವಂತ ಮನೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಮಾತು ಆಡದ ಅನಂತ ಮತ್ತು ಪ್ರಿಯಾಂಕಾ ಹಿರಿಯರ ಸಮ್ಮುಖದಲ್ಲಿ ಸಪ್ತಪದಿ ತುಳಿದಿದ್ದಾರೆ. ಮುಂದಿನ ಜೀವನ ಸಂತೋಷವಾಗಿರಲಿ ಎಂಬುದು ಎಲ್ಲರ ಆಶಯವಾಗಿದೆ.