ಉತ್ತರ ಕನ್ನಡ: ಜಲಸಾಹಸಿ ಚಟುವಟಿಕೆಗಳಿಗೆ ಮತ್ತೆ ಅವಕಾಶ; ಗರಿಗೆದರಿದ ಪ್ರವಾಸೋದ್ಯಮ
ಕಾರವಾರ, ಸೆಪ್ಟೆಂಬರ್ 24: ರಾಜ್ಯದಲ್ಲಿ ಪ್ರವಾಸೋದ್ಯಮಕ್ಕೆ ಹೆಸರುವಾಸಿಯಾದ ಜಿಲ್ಲೆಗಳಲ್ಲಿ ಉತ್ತರ ಕನ್ನಡ ಸಹ ಒಂದು. ತಾನು ಹೊಂದಿರುವ ಹತ್ತು ಹಲವು ಪ್ರವಾಸಿ ತಾಣಗಳಿಂದಲೇ ಪ್ರವಾಸಿಗರ ಹಾಟ್ ಫೇವರಿಟ್ ಆಗಿರುವ ಜಿಲ್ಲೆಯ ಕಡಲತೀರಗಳಿಗೆ ಪ್ರತಿವರ್ಷ ಲಕ್ಷಾಂತರ ಪ್ರವಾಸಿಗರು ಭೇಟಿ ನೀಡುತ್ತಾರೆ.
ಸದ್ಯ ಕೊರೊನಾ ಲಾಕ್ಡೌನ್ ಬಳಿಕ ಪ್ರವಾಸಿ ತಾಣಗಳು ಅನ್ಲಾಕ್ ಆಗಿದ್ದರೂ ಸಹ, ಯಾವುದೇ ರೀತಿಯ ಜಲಸಾಹಸ ಕ್ರೀಡೆಗಳಿಗೆ ಅವಕಾಶ ಇಲ್ಲದಿದ್ದರಿಂದ ಹೆಚ್ಚಿನ ಪ್ರವಾಸಿಗರು ಬರದೇ ಪ್ರವಾಸೋದ್ಯಮ ಮಂಕಾಗಿತ್ತು. ಆದರೆ ಇದೀಗ ಉತ್ತರ ಕನ್ನಡ ಜಿಲ್ಲಾಡಳಿತ ಇದೀಗ ನದಿ ಹಾಗೂ ಸಮುದ್ರ ತೀರಗಳಲ್ಲಿ ವಾಟರ್ ಸ್ಪೋರ್ಟ್ಸ್ ನಡೆಸಲು ಅವಕಾಶ ನೀಡಿದೆ.
ಉತ್ತರ ಕನ್ನಡ ಜಿಲ್ಲೆಯ ಕರಾವಳಿಯಲ್ಲಿ ಕಾರವಾರ, ಗೋಕರ್ಣ, ಹೊನ್ನಾವರ ಹಾಗೂ ಮುರ್ಡೇಶ್ವರ ಸೇರಿ ಹತ್ತಾರು ಕಡಲತೀರಗಳಿವೆ. ಇಲ್ಲಿನ ಬೀಚ್ಗಳಲ್ಲಿ ನೀರಿಗಿಳಿದು ಆಟವಾಡಿ ಎಂಜಾಯ್ ಮಾಡುವುದಕ್ಕೆ ಅಂತಾನೇ ರಾಜ್ಯ, ಹೊರರಾಜ್ಯಗಳಿಂದಲೂ ಪ್ರವಾಸಿಗರು ಇಲ್ಲಿನ ಕಡಲತೀರಗಳಿಗೆ ಭೇಟಿ ನೀಡುತ್ತಾರೆ.
ಅಲ್ಲದೇ ದಾಂಡೇಲಿ, ಜೋಯಿಡಾ ಭಾಗಗಳಿಗೆ ಕಾಳಿ ನದಿಯಲ್ಲಿನ ವಿವಿಧ ಜಲಸಾಹಸ ಕ್ರೀಡೆಗಳನ್ನು ಆಡುವುದಕ್ಕೆ ಎಂದೇ ದೂರದೂರುಗಳಿಂದ ಪ್ರವಾಸಿಗರು ಆಗಮಿಸುತ್ತಾರೆ. ಆದರೆ ಅನ್ಲಾಕ್ ಜಾರಿಯಾಗಿದ್ದರೂ ಸಹ ಕೊರೊನಾ ಕಾರಣದಿಂದ ಜಲಸಾಹಸ ಕ್ರೀಡೆಗಳಿಗೆ ಬ್ರೇಕ್ ಹಾಕಿದ್ದು, ಪ್ರವಾಸಿಗರ ಸಂಖ್ಯೆ ಇಳಿಮುಖವಾಗುವಂತಾಗಿತ್ತು.
ಇದೀಗ ಕೊರೊನಾ ಪ್ರಕರಣಗಳ ಸಂಖ್ಯೆ ನಿಯಂತ್ರಣಕ್ಕೆ ಬರುತ್ತಿರುವ ಹಿನ್ನಲೆ ಜಲಸಾಹಸ ಕ್ರೀಡೆಗಳನ್ನು ನಡೆಸಲು ಜಿಲ್ಲಾಡಳಿತ ಹಸಿರು ನಿಶಾನೆ ನೀಡಿದ್ದು, ಕೊರೊನಾ ಮಾರ್ಗಸೂಚಿಗಳ ಪಾಲನೆಯೊಂದಿಗೆ ವಾಟರ್ ಸ್ಪೋರ್ಟ್ಸ್ ಆಯೋಜಿಸುವಂತೆ ಸೂಚನೆ ನೀಡಿದೆ.
ಇನ್ನು ಉತ್ತರ ಕನ್ನಡ ಜಿಲ್ಲೆಯ ಕಾರವಾರ ರವೀಂದ್ರನಾಥ ಠಾಗೋರ್ ಕಡಲತೀರ, ಗೋಕರ್ಣದ ಓಂ ಬೀಚ್, ಕುಡ್ಲೇ ಬೀಚ್ ಹಾಗೂ ಮುರ್ಡೇಶ್ವರ ಕಡಲತೀರಗಳಲ್ಲಿ ಹಿಂದಿನಿಂದಲೂ ಜಲಸಾಹಸ ಕ್ರೀಡೆಗಳನ್ನು ನಡೆಸಲಾಗುತ್ತಿತ್ತು. ಬೋಟ್ ರೈಡ್, ಜೆಟ್ ಸ್ಕೀ ಸೇರಿದಂತೆ ದಾಂಡೇಲಿ, ಜೋಯಿಡಾ ಭಾಗಗಳಲ್ಲಿ ಕಾಳಿ ನದಿಯಲ್ಲಿ ರಿವರ್ rafting, ಕಯಾಕಿಂಗ್ನಂತಹ ವಾಟರ್ ಸ್ಪೋರ್ಟ್ಸ್ಗಳನ್ನು ಆಯೋಜಿಸಲಾಗುತ್ತಿತ್ತು.
ಆದರೆ ಕಳೆದ ವರ್ಷ ಕೊರೊನಾ ಸೋಂಕು ಕಾರಣದಿಂದ ಕೇವಲ ಮೂರು ತಿಂಗಳು ಮಾತ್ರ ವಾಟರ್ ಸ್ಪೋರ್ಟ್ಸ್ ನಡೆಸಲಾಗಿದ್ದು, ಅಲ್ಲಿಂದ ಸ್ಥಗಿತಗೊಳಿಸಲಾಗಿತ್ತು. ಇದರಿಂದಾಗಿ ಜಿಲ್ಲೆಯ ಪ್ರವಾಸೋದ್ಯಮ ಸಂಪೂರ್ಣ ನೆಲಕಚ್ಚಿದ್ದು ಜಲಸಾಹಸ ಕ್ರೀಡೆಗಳನ್ನು ನಡೆಸುತ್ತಿದ್ದವರು ನಷ್ಟ ಅನುಭವಿಸುವಂತಾಗಿತ್ತು.
ಪ್ರತಿವರ್ಷ ಮಳೆಗಾಲದ ಬಳಿಕ ಬಹುತೇಕ 9 ತಿಂಗಳುಗಳ ಕಾಲ ಜಲಸಾಹಸ ಕ್ರೀಡೆಗಳನ್ನು ನಡೆಸುತ್ತಿದ್ದವರಿಗೆ ಕೊರೊನಾ ಶಾಕ್ ನೀಡಿದ್ದು, ಇದೀಗ ಮತ್ತೆ ಅನುಮತಿ ನೀಡಿರುವುದಕ್ಕೆ ಆಯೋಜಕರು ಸಂತಸಗೊಂಡಿದ್ದಾರೆ. ಈಗಾಗಲೇ ಜಲಸಾಹಸ ಕ್ರೀಡೆಗಳನ್ನು ಪ್ರಾರಂಭಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಈ ಬಾರಿಯಾದರೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುವ ನಿರೀಕ್ಷೆಯಲ್ಲಿದ್ದಾರೆ.
ಕಾಳಿ
ನದಿಯಲ್ಲಿ
ಮರಳುಗಾರಿಕೆಗೆ
ಅಕ್ಟೋಬರ್ನಿಂದ
ಅವಕಾಶ?
ಕಳೆದ
ಮೂರು
ವರ್ಷಗಳಿಂದ
ಸ್ಥಗಿತಗೊಂಡಿದ್ದ
ಕಾಳಿ
ನದಿಯಲ್ಲಿ
ಮರಳು
ತೆಗೆಯುವ
ಚಟುವಟಿಕೆಗೆ
ಮತ್ತೆ
ಅನುಮತಿ
ಸಿಗಲಿದ್ದು,
ಅಕ್ಟೋಬರ್ನಿಂದ
ಮರಳುಗಾರಿಕೆಗೆ
ಅನುಮತಿ
ಕೊಡುವ
ಸಾಧ್ಯತೆ
ಇದೆ
ಎನ್ನಲಾಗಿದೆ.
ಪರಿಸರ ಸೂಕ್ಷ್ಮವಲಯ ಎನ್ನುವ ಕಾರಣಕ್ಕೆ 2018ರಿಂದ ಕಾಳಿ ನದಿಯಲ್ಲಿ ಮರಳು ತೆಗೆಯುವುದನ್ನು ಸ್ಥಗಿತ ಗೊಳಿಸಲಾಗಿತ್ತು. ಕಾಳಿ ನದಿಯಲ್ಲಿ ಮರಳು ತೆಗೆಯುವುದರಿಂದ ಜಲಚರಗಳಿಗೆ ಸಮಸ್ಯೆ ಆಗಲಿದ್ದು, ಮೀನುಗಾರಿಕೆ ಇನ್ನಿತರ ಚಟುವಟಿಕೆಗೆ ಸಮಸ್ಯೆ ಆಗಲಿದೆ ಎಂದು ಮರಳುಗಾರಿಕೆಯನ್ನು ಬಂದ್ ಮಾಡಲಾಗಿತ್ತು. ಮರಳುಗಾರಿಕೆ ಬಂದ್ ಮಾಡಿದ ನಂತರ ಮರಳುಗಾರಿಕೆಯನ್ನೇ ನಂಬಿಕೊಂಡಿದ್ದ ಹಲವರು ಉದ್ಯೋಗ ಕಳೆದುಕೊಂಡು ಬೀದಿಗೆ ಬಿದ್ದಿದ್ದರು.
Recommended Video
ಜೂನ್ನಿಂದ ಸೆಪ್ಟೆಂಬರ್ ಅಂತ್ಯದವರೆಗೆ ಮಳೆಗಾಳ ಇರುವ ಹಿನ್ನಲೆಯಲ್ಲಿ ಮರಳು ತೆಗೆಯಲು ಅವಕಾಶ ಕೊಟ್ಟರೆ, ಜಲಚರಗಳಿಗೆ ಸಮಸ್ಯೆ ಆಗಲಿದೆ ಎಂದು ಮರಳುಗಾರಿಕೆಯನ್ನು ಬಂದ್ ಮಾಡಲಾಗಿರುತ್ತದೆ. ಈ ಹಿನ್ನಲೆಯಲ್ಲಿ ಜಿಲ್ಲಾ ಮಟ್ಟದ ಜಿಲ್ಲಾಧಿಕಾರಿಗಳ ನೇತೃತ್ವದ ಏಳು ಸದಸ್ಯದ ಸಿಆರ್ಝೆಡ್ ಸಮಿತಿಯ ಮುಂದೆ ವಿಷಯವನ್ನು ಇಟ್ಟು ಅಂತಿಮ ಅನುಮತಿ ಪಡೆದು ಅಕ್ಟೋಬರ್ ತಿಂಗಳಿನಿಂದ ಮರಳು ತೆಗೆಯಲು ಅನುಮತಿ ಕೊಡುವ ಸಾಧ್ಯತೆ ಇದೆ ಎನ್ನಲಾಗಿದೆ.