ಅರ್ಧ ಶತಕಕ್ಕೆ ಬಂದು ನಿಂತಿದೆ ಉತ್ತರ ಕನ್ನಡದ ಕೊರೊನಾ ಸೋಂಕಿತರ ಸಂಖ್ಯೆ
ಕಾರವಾರ, ಮೇ 18: ಜಿಲ್ಲೆಯಲ್ಲಿ ಇಂದು ಮತ್ತೆ ಎಂಟು ಜನರಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ. ಜಿಲ್ಲೆಯ ಭಟ್ಕಳ ಮೂಲದ ಇಬ್ಬರಿಗೆ, ಹೊನ್ನಾವರ ಮೂಲದ ನಾಲ್ವರಿಗೆ ಹಾಗೂ ಮುಂಡಗೋಡ ಮೂಲದ ಇಬ್ಬರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.
ಇಂದು ಧೃಢಪಟ್ಟ ಎಂಟು ಜನರಲ್ಲಿ ಏಳು ಜನ ಮುಂಬೈನಿಂದ ವಾಪಸ್ ಜಿಲ್ಲೆಗೆ ಬಂದಿದ್ದು, ಭಟ್ಕಳ ಮೂಲದ ಎರಡು ವರ್ಷದ ಬಾಲಕಿಗೆ ಸೋಂಕಿತರ ಸಂಪರ್ಕದಿಂದ ಸೋಂಕು ತಗುಲಿದೆ. ಹೊನ್ನಾವರದ ನಾಲ್ವರು ಸೋಂಕಿತರು ಒಂದೇ ಕುಟುಂಬದವರಾಗಿದ್ದು ಎಲ್ಲರೂ ಮುಂಬೈನಿಂದ ಬಂದ ನಂತರ ಪಟ್ಟಣದ ಪ್ರಭಾತ್ ನಗರದಲ್ಲಿ ಇರುವ ಸಾಂಸ್ಥಿಕ ಕ್ವಾರಂಟೈನ್ ನಲ್ಲಿ ಇದ್ದರು. ಇದೀಗ ಪ್ರಭಾತ್ ನಗರವನ್ನು ಸೀಲ್ ಡೌನ್ ಮಾಡಲಾಗಿದೆ.
ಭಟ್ಕಳದ ಜೊತೆ ಕುಮಟಾಕ್ಕೂ ಕೊರೊನಾಘಾತ: ಉತ್ತರ ಕನ್ನಡದಲ್ಲಿ ಎರಡು ಹೊಸ ಪ್ರಕರಣ
ಮುಂಬೈ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದ ಮುಂಡಗೋಡ ತಾಲೂಕಿನ ಇಬ್ಬರಿಗೆ ಸೋಂಕು ದೃಢಪಟ್ಟಿದ್ದು, ಸೋಂಕಿತರ ಎರಡು ಗ್ರಾಮದಲ್ಲಿ ಜನರ ಓಡಾಟವನ್ನು ನಿರ್ಬಂಧಿಸಲಾಗಿದೆ. ಇದಲ್ಲದೇ ಮುಂಬೈನಿಂದ ವಾಪಸ್ ಬಂದು ಮುರಡೇಶ್ವರದ ಸಾಂಸ್ಥಿಕ ಕ್ವಾರಂಟೈನ್ ನಲ್ಲಿದ್ದ ವ್ಯಕ್ತಿಗೆ ಸೋಂಕು ತಗುಲಿದ್ದು ಜಿಲ್ಲೆಗೆ ಸಾಕಷ್ಟು ಸಂಖ್ಯೆಯಲ್ಲಿ ಮಹಾರಾಷ್ಟ್ರದಿಂದ ಬಂದಿರುವ ಹಿನ್ನೆಲೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗಲಿದೆ. ಈ ಒಂದು ಸಂಗತಿ ಜಿಲ್ಲಾಡಳಿತಕ್ಕೆ ದೊಡ್ಡ ತಲೆ ನೋವಾಗಿದೆ.
ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಅರ್ಧ ಶತಕಕ್ಕೆ ಬಂದು ತಲುಪಿದೆ. ಸದ್ಯ 40 ಸಕ್ರಿಯ ಪ್ರಕರಣಗಳು ಜಿಲ್ಲೆಯಲ್ಲಿ ಇದ್ದು, ಒಟ್ಟು ಸೋಂಕಿತರ ಸಂಖ್ಯೆ 51 ಆಗಿದೆ. 11 ಮಂದಿ ಈಗಾಗಲೇ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಓರ್ವ ಮಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ಕಾರವಾರದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ 30 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದವರು ಆಯಾ ತಾಲೂಕು ಆಸ್ಪತ್ರೆಯಲ್ಲೇ ಇದ್ದಾರೆ.