ರಾತ್ರಿಯ ತನಕ ಮತ ಎಣಿಕೆ; ಕಾದು ಕಾದು ಸುಸ್ತಾದ ಜನ!
ಕಾರವಾರ, ಡಿಸೆಂಬರ್ 31; ಬುಧವಾರ ಜಿಲ್ಲೆಯ ಗ್ರಾಮ ಪಂಚಾಯತಿ ಚುನಾವಣೆಗಳ ಮತ ಎಣಿಕೆ ತೀರಾ ಮಂದಗತಿಯಲ್ಲಿ ನಡೆದು, ಮುಂಜಾನೆಯಿಂದ ಮಧ್ಯರಾತ್ರಿಯವರೆಗೂ ಅಭ್ಯರ್ಥಿಗಳು ಹಾಗೂ ಅವರ ಬೆಂಬಲಿಗರ ತಾಳ್ಮೆ ಪರೀಕ್ಷೆ ನಡೆಯಿತು.
ಸುಡು ಬಿಸಿಲು, ಕಿಕ್ಕಿರಿದ ಜನಸಂದಣಿ, ನೂಕು ನುಗ್ಗಲು ನಡುವೆಯೇ ಫಲಿತಾಂಶ ಈಗ ಬರುತ್ತೆ, ಆಗ ಬರುತ್ತೆ ಎಂದು ಬೆಳಗ್ಗಿನಿಂದಲೇ ಕಾಯಲಾರಂಭಿಸಿದ್ದರು. ಮಧ್ಯಾಹ್ನನದ ಸುಮಾರಿಗೆ ಒಂದಷ್ಟು ಗ್ರಾಮ ಪಂಚಾಯತಿಗಳ ಫಲಿತಾಂಶ ದೊರೆಯಿತಾದರೂ, ನಿರೀಕ್ಷಿತ ವೇಗ ಮತ ಎಣಿಕೆಗೆ ಇರದೇ ಇದ್ದಿದ್ದರಿಂದ, ಇಳಿ ಸಂಜೆಯಾಗಿ, ಹೊತ್ತು ಮುಳುಗಿ ಕತ್ತಲಾದರೂ ಬಹುತೇಕ ಅಭ್ಯರ್ಥಿಗಳ ಫಲಿತಾಂಶ ಬಾಕಿಯೇ ಉಳಿದಿತ್ತು.
ಸತತ 9ನೇ ಬಾರಿಗೆ ಗೆದ್ದ ಸಚಿವ ಶಿವರಾಮ್ ಹೆಬ್ಬಾರ್ ಅವರ ರಾಜಕೀಯ ಗುರು
ಹೊತ್ತು ಮುಳುಗಿ ಕತ್ತಲಾಗುತ್ತಲೇ, "ಇದು ಸರಹೊತ್ತಿನ ಸಂತೆಯ ಲೆಕ್ಕ, ಅಷ್ಟು ಸುಲಭಕ್ಕೆ, ಸರಿಯಾದ ಹೊತ್ತಿಗೆ ಇದೆಲ್ಲ ಮುಗಿದು ಜನ ಉಂಡು ಮಲಗುವ ಮೊದಲೇ ನಾವು ಊರಸೇರಬಹುದಾದ ಸಾಧ್ಯತೆ ಇಲ್ಲ" ಎಂದು ಹಳ್ಳಿಗಳಿಂದ ಬಂದಿದ್ದ ಬಹುತೇಕ ಹುರಿಯಾಳುಗಳು ಮತ್ತು ಅವರ ಬೆಂಬಲಿಗರು ಮಾತನಾಡಿಕೊಂಡರು.
ಲೋಕಲ್ ಫೈಟ್: ಉತ್ತರ ಕನ್ನಡದಲ್ಲಿ ಕಾಂಗ್ರೆಸ್ ಹಿಂದಿಕ್ಕಿದ ಬಿಜೆಪಿ
ಫಲಿತಾಂಶದ ನಿರೀಕ್ಷೆಯಲ್ಲಿ ಕಾದ ಜನ
ಬುಧವಾರ ಬೆಳಗ್ಗೆಯೇ ಮತ ಎಣಿಕೆ ಕೇಂದ್ರಗಳ ಬಳಿ ಸಾವಿರಾರು ಸಂಖ್ಯೆಯಲ್ಲಿ ಜನರು ಸೇರಿದ್ದರು. ಎಲ್ಲರೂ ಸಹ ಫಲಿತಾಂಶದ ನಿರೀಕ್ಷೆಯಲ್ಲಿಯೇ ಇದ್ದರು. ಫಲಿತಾಂಶ ಬರುವ ಮೊದಲೇ ಅಲ್ಲಿಂದ ಕಾಲುಕೀಳಬಹುದಾದ ಅವಕಾಶ ಬಹುತೇಕರಿಗೆ ಇರಲಿಲ್ಲವಾದರೂ, ಅಲ್ಲಿದ್ದ ಬಹುತೇಕರಲ್ಲಿ ಹೇಳತೀರದ ಅಸಹನೆ ಎಂಬುದು ಹಗಲಿಡೀ ಕಂಡುಬರಲಿಲ್ಲ. ಆದರೆ, ಹೊತ್ತು ಮುಳುಗಿ ಕತ್ತಲಾಗುತ್ತಲೇ ಬಾಕಿ ಉಳಿದ ಫಲಿತಾಂಶಕ್ಕಾಗಿ ಕಾಯುತ್ತಿದ್ದವರು ಸಿಡಿಮಿಡಿಗೊಂಡರು.
ಅಧಿಕಾರಿಗಳ ವಿರುದ್ಧ ಆಕ್ರೋಶ
ಕುಮಟಾದಲ್ಲಿ ಮತ ಎಣಿಕೆ ವಿಳಂಬ ಆಗಿದ್ದಕ್ಕೆ ಎಣಿಕಾ ಕೇಂದ್ರದ ಎದುರು ಸೇರಿದ್ದ ಜನರು ಆಕ್ರೋಶ ವ್ಯಕ್ತಪಡಿಸಿದರು. ಡಾ. ಎ. ಬಾಳಿಗಾ ಕಾಲೇಜಿನಲ್ಲಿ ಮತ ಎಣಿಕೆ ನಡೆಯಿತು. ಐದು ಗಂಟೆಯಿಂದ ಫಲಿತಾಂಶಕ್ಕಾಗಿ ಕಾಯುತ್ತಿದ್ದರೂ ಫಲಿತಾಂಶ ಬಾರದ ಕಾರಣ ತಾಲೂಕು ಆಡಳಿತದ ವಿರುದ್ಧ ಅಭ್ಯರ್ಥಿಗಳು, ಬೆಂಬಲಿಗರು ಆಕ್ರೋಶಗೊಂಡರು. ಇದರಿಂದಾಗಿ ಮತ ಎಣಿಕಾ ಸ್ಥಳದಲ್ಲಿ ಬಿಗುವಿನ ವಾತಾವರಣವೂ ನಿರ್ಮಾಣವಾಯಿತು. ತಹಶೀಲ್ದಾರ್ ವಿ. ಎಸ್. ಕಡಕಬಾವಿ, ಸಿಪಿಐ ಪರಮೇಶ್ವರ ಗುನಗಾ ಜನರ ಮನವೊಲಿಕೆಗೆ ಪ್ರಯತ್ನ ನಡೆಸಿದರು.
ಫೋನ್ ಕರೆಗಳ ಕಿರಿಕಿರಿ
ಎಣಿಕೆ ಕೇಂದ್ರಗಳ ಬಳಿ ಇದ್ದ ಜನರಿಗೆ ಹಗಲಿಡೀ ಮತ್ತು ಮಧ್ಯರಾತ್ರಿಯವರೆಗೂ ಕಾಡಿದ ಒಂದೇ ಒಂದು ಸಮಸ್ಯೆ ಎಂದರೆ ಫೋನ್ ಕಾಲ್ಗಳು. ತಾಲೂಕಿನ ಮತ್ತು ರಾಜ್ಯದ ಮೂಲೆ ಮೂಲೆಯಿಂದಲೂ ಜನ ಏನಾಯಿತು?, ಏನಾಯಿತು? ಎಂದು ಪದೇ ಪದೇ ಫೋನ್ ಮಾಡಿ ಕೇಳುತ್ತಿದ್ದರು. ಅಲ್ಲಿದ್ದವರು ಸಂಜೆಯವರೆಗೂ ತಾಳ್ಮೆಯಿಂದಲೇ ಉತ್ತರಿಸಿದರಾದರೂ, ಸಂಜೆಯ ಬಳಿಕ ತಾಳ್ಮೆ ಕಳೆದುಹೋಗಿ ಬಯ್ಯಲಾರಂಭಿಸಿ ಬಿಟ್ಟರು. ಒಟ್ಟಾರೆ ಆಮೆ ಓಟದಂತ ಮತ ಎಣಿಕೆಯಿಂದಾಗಿ ನೆರೆದಿದ್ದ ಜನರು ಹೈರಾಣಾದರು.
ದಣಿದ ಹೋದ ಅಧಿಕಾರಿ, ಸಿಬ್ಬಂದಿ
ರಾತ್ರಿಯವರೆಗೂ ಮತ ಎಣಿಕೆ ನಡೆದ ಕಾರಣ ಅಧಿಕಾರಿ, ಸಿಬ್ಬಂದಿ ದಣಿದು ಹೋದರು. ಎಣಿಕೆ ಪೂರ್ಣಗೊಳ್ಳುವಷ್ಟರಲ್ಲಿ ಸಹನೆ ಕಳೆದುಕೊಂಡಿದ್ದರು. ಕೆಲವು ಅಧಿಕಾರಿಗಳಂತೂ ಸಹೋದ್ಯೋಗಿಗಳ ಮೇಲೆ ರೇಗಾಡುತ್ತಿದ್ದರೆ, ಇನ್ನು ಕೆಲವರು ಅಭ್ಯರ್ಥಿಗಳಿಂದಾಗಿ ಕುಪಿತಗೊಂಡಿದ್ದರು. ಆದರೂ ರಾತ್ರಿಯವರೆಗೂ ಎಣಿಕೆ ಕಾರ್ಯ ಪೂರ್ಣಗೊಳಿಸಲು ಶ್ರಮ ಪಟ್ಟರು.
Recommended Video