ಯಥಾಸ್ಥಿತಿಯತ್ತ ಜೀವನ; ಕೊರೊನಾ ಭಯದಿಂದ ರಿಲ್ಯಾಕ್ಸ್ ಆದರಾ ಜನ?
ಕಾರವಾರ, ಆಗಸ್ಟ್ 12: ಕೆಲವೇ ದಿನಗಳ ಹಿಂದೆ ಕೊರೊನಾ ಎಂದು ಹೆಸರು ಹೇಳಿದರೆ ಸಾಕು ಜನರು ಹೆದರಿ ಕಂಗಾಲಾಗುತ್ತಿದ್ದರು. ಮನೆಯಿಂದಲೇ ಹೊರ ಬರದ ಪರಿಸ್ಥಿತಿ ಎಲ್ಲೆಡೆಯೂ ನಿರ್ಮಾಣವಾಗಿತ್ತು. ಆದರೆ ಇದೀಗ ಜನರು ಭಯದಿಂದಲೂ ಸ್ವಲ್ಪ ರಿಲಾಕ್ಸ್ ಆದಂತೆ ಕಾಣುತ್ತಿದೆ. ಕೊರೊನಾ ಬಗ್ಗೆ ಭೀತಿ ಬಿಟ್ಟು ಮುಂಜಾಗ್ರತೆ ತೆಗೆದುಕೊಳ್ಳುವವರು ಹೆಚ್ಚಿದ್ದಾರೆ. ಜಿಲ್ಲೆಯಲ್ಲಿ ಜನಜೀವನ ಯಥಾಸ್ಥಿತಿಗೆ ತಿರುಗುತ್ತಿದೆ.
ಚೀನಾದಿಂದ ಭಾರತಕ್ಕೆ ಕಾಲಿಟ್ಟ ಕೊರೊನಾ ಸೋಂಕು ಇಡೀ ದೇಶದ ಆರ್ಥಿಕ ವ್ಯವಸ್ಥೆಯನ್ನೇ ಹಾಳುಮಾಡಿತ್ತು. ಕೊರೊನಾ ಸೋಂಕು ತಡೆಗಟ್ಟಲು ಸತತ ಮೂರ್ನಾಲ್ಕು ತಿಂಗಳುಗಳ ಕಾಲ ಲಾಕ್ ಡೌನ್ ಮಾಡಲಾಗಿತ್ತು. ಜನರು ಮನೆಯಿಂದ ಹೊರಗೆ ಬರದಂತೆ ಕಠಿಣ ಕ್ರಮ ಕೈಗೊಳ್ಳಲಾಗಿತ್ತು. ಇದರ ನಡುವೆ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು, ಹಲವರು ಸೋಂಕಿನಿಂದ ಪ್ರಾಣ ಕಳೆದುಕೊಂಡಿದ್ದರು. ಕೊರೊನಾ ಬಂದರೆ ಪ್ರಾಣವೇ ಹೊರಟು ಹೋಗುತ್ತದೆ ಎಂದು ಜನರು ಭೀತಿಗೊಳಗಾಗಿದ್ದು ಒಂದೆಡೆಯಾಗಿದ್ದರೆ, ಸರ್ಕಾರದ ಕೆಲ ಕಠಿಣ ಕ್ರಮಗಳಿಂದ ಆರ್ಥಿಕ ವ್ಯವಸ್ಥೆಯ ಮೇಲೆ ದೊಡ್ಡ ಪರಿಣಾಮವೇ ಬೀರಿತ್ತು.
ಮೊದ ಮೊದಲು ಇದ್ದ ಭಯ ಈಗ ಇಲ್ಲ
ಸರ್ಕಾರ ಇದನ್ನೆಲ್ಲ ಮನಗಂಡು ಲಾಕ್ ಡೌನ್ ಅನ್ನು ಹಂತ ಹಂತವಾಗಿ ತೆರವು ಮಾಡಿದರೂ ಜನಜೀವನ ಯಥಾ ಸ್ಥಿತಿಗೆ ಬಂದಿರಲಿಲ್ಲ. ಅಲ್ಲದೇ ಕೊರೊನಾ ಸೋಂಕಿತರ ಸಂಖ್ಯೆ ಸಹ ಹೆಚ್ಚಾಗುತ್ತಿತ್ತು. ಆದರೆ ಕಳೆದ ಒಂದು ವಾರಗಳಿಂದ ಕೊರೊನಾಗೆ ಜನರು ಡೋಂಟ್ ಕೇರ್ ಎನ್ನುತ್ತಿದ್ದಾರೆ. ಜನಜೀವನ ಯಥಾಸ್ಥಿತಿಗೆ ಬಂದಿದ್ದು, ಕೊರೊನಾ ಎಂದರೆ ಮೊದ ಮೊದಲು ಇದ್ದ ಭಯ ಈಗ ಇಲ್ಲವಾಗಿದೆ.
ಕೊರೊನಾ ವೈರಸ್ ಕುರಿತಾದ ಸುಳ್ಳು ಸುದ್ದಿ: ಮುಂಚೂಣಿಯಲ್ಲಿ ಭಾರತ
ಆತ್ಮಸ್ಥೈರ್ಯವೇ ಯಥಾಸ್ಥಿತಿಗೆ ಕಾರಣ
ಕೊರೊನಾ ಸೋಂಕಿನ ಕಡಿವಾಣಕ್ಕೆ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅಗತ್ಯವಾಗಿತ್ತು. ಸದ್ಯ ಜನರೂ ಮಾಸ್ಕ ಧರಿಸಿಕೊಂಡು ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿದ್ದಾರೆ. ಈಗ ಭಯವಿಲ್ಲದೇ ಜನರು ಹಿಂದಿನಂತೆಯೇ ವ್ಯಾಪಾರ- ವಹಿವಾಟಿನಲ್ಲಿ ತೊಡಗಿದ್ದು, ಆರ್ಥಿಕ ಮುಗ್ಗಟ್ಟಿನಿಂದ ಕಂಗಾಲಾಗಿದ್ದ ವರ್ತಕರಿಗೆ ಸ್ವಲ್ಪ ನೆಮ್ಮದಿ ನೀಡಿದಂತಾಗಿದೆ.
ಕೊರೊನಾ ಸೋಂಕಿಗೆ ಒಳಗಾದವರು ತಮಗೆ ಏನೂ ಆಗಿಲ್ಲ, ಕೊರೊನಾ ಬಂದು ಹೋಗಿದ್ದೇ ಗೊತ್ತಾಗಲಿಲ್ಲ ಎಂದು ಜನರಲ್ಲಿ ಆತ್ಮಸ್ಥೈರ್ಯ ತುಂಬಿದ್ದೆ ಜನಜೀವನ ಯಥಾಸ್ಥಿತಿಗೆ ಬರಲು ಕಾರಣ ಎನ್ನಲಾಗಿದೆ.
ಧೈರ್ಯ ತುಂಬಿದ ವಿಡಿಯೋಗಳು
ಈ ಹಿಂದೆ ಸೋಂಕು ತಗುಲಿದವರು ಉಸಿರಾಟದ ಸಮಸ್ಯೆಗೊಳಗಾಗಿ ಪರದಾಟ ನಡೆಸುವ, ಸಾಮಾಜಿಕ ಜಾಲತಾಣದಲ್ಲಿ ಬಂದಿದ್ದ ವಿಡಿಯೋಗಳನ್ನು ಮಾತ್ರ ನೋಡಿ ಜನರು ಕೊರೊನಾ ಬಂದರೆ ನಮಗೂ ಇದೇ ಸ್ಥಿತಿ ಬರುತ್ತದೆ ಎನ್ನುವ ಆತಂಕದಲ್ಲಿದ್ದರು. ಆದರೆ, ಸೋಂಕಿಗೆ ಒಳಗಾದ ಹಲವರು ಕೊರೊನಾದಿಂದ ಯಾವುದೇ ಸಮಸ್ಯೆ ಸೃಷ್ಟಿಯಾಗುವುದಿಲ್ಲ ಎಂದು ಧೈರ್ಯ ತುಂಬಿದ್ದು ಸದ್ಯ ಜನರ ಮನಸ್ಸಿನಿಂದ ಕೊರೊನಾ ಸ್ವಲ್ಪ ದೂರ ಹೋಗುವಂತೆ ಮಾಡಿದೆ
ವಿಶ್ವದ ಮೊದಲ ಕೊರೊನಾ ಲಸಿಕೆಗೆ 20 ದೇಶಗಳಿಂದ ಬೇಡಿಕೆ: ರಷ್ಯಾ
ಚುರುಕುಗೊಳ್ಳಬೇಕಿದೆ ಪ್ರವಾಸೋದ್ಯಮ ಚಟುವಟಿಕೆ
ಜಿಲ್ಲೆಯ ಮಟ್ಟಿಗೆ ಪ್ರವಾಸೋದ್ಯಮ ಎನ್ನುವುದು ಜೀವಾಳ. ಆದರೆ ಕೊರೊನಾ ಭಯದಿಂದ ಪ್ರವಾಸೋದ್ಯಮದ ಮೇಲೆ ಸಾಕಷ್ಟು ಪರಿಣಾಮ ಬೀರಿತ್ತು. ಜನರ ಓಡಾಟವೇ ಕಡಿಮೆಯಾಗಿದ್ದರಿಂದ ಪ್ರವಾಸೋದ್ಯಮ ಚಟುವಟಿಕೆ ಸಹ ಬಂದ್ ಆಗಿತ್ತು. ಸದ್ಯ ಪ್ರವಾಸೋದ್ಯಮ ಚಟುವಟಿಕೆ ಸಹ ಪ್ರಾರಂಭವಾಗಿದೆ.
ಹಲವು ದಿನಗಳಿಂದ ಮುಚ್ಚಿದ್ದ ಪ್ರವಾಸಿ ತಾಣಗಳಲ್ಲಿನ ಹೋಟೆಲ್, ರೆಸಾರ್ಟ್, ಲಾಡ್ಜ್ ಗಳು ಬಾಗಿಲು ತೆರೆದಿವೆ. ಪ್ರವಾಸಿಗರ ಸಂಖ್ಯೆ ಸದ್ಯದ ಮಟ್ಟಿಗೆ ಸಾಕಷ್ಟು ಕಡಿಮೆಯಿದ್ದು, ಸೆಪ್ಟೆಂಬರ್ ವೇಳೆ ಪ್ರವಾಸೋದ್ಯಮ ಎಂದಿನಂತೆ ಪ್ರಾರಂಭವಾಗಲಿದೆ ಎನ್ನಲಾಗಿದೆ. ಜಿಲ್ಲೆಯಲ್ಲಿ ಪ್ರವಾಸೋದ್ಯಮ ಚಟುವಟಿಕೆಯಿಂದ ಸಾವಿರಾರು ಜನರು ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಉದ್ಯೋಗ ಕಂಡುಕೊಂಡಿದ್ದರು. ಜನಜೀವನ ಯಥಾಸ್ಥಿತಿ ಆಗುತ್ತಿರುವಂತೆ ಪ್ರವಾಸೋದ್ಯಮ ಚಟುವಟಿಕೆಗಳು ಹಿಂದಿನಂತೆಯೇ ಆಗಲಿ ಎನ್ನುವುದು ಪ್ರವಾಸಿ ತಾಣಗಳಲ್ಲಿ ಉದ್ಯೋಗ ಮಾಡುತ್ತಿದ್ದವರ ಅಭಿಪ್ರಾಯವಾಗಿದೆ.