ಹೊನ್ನಾವರದಲ್ಲಿ ಪೊಲೀಸರ ಹದ್ದಿನ ಕಣ್ಣು: ಬೇಕಾಬಿಟ್ಟಿ ಸಂಚಾರಕ್ಕೆ ಬ್ರೇಕ್!
ಕಾರವಾರ, ಏಪ್ರಿಲ್ 25: ಜಿಲ್ಲೆಯ ಹೊನ್ನಾವರದಲ್ಲಿ ಕೊರೊನಾ ವೈರಸ್ ಲಾಕ್ಡೌನ್ ನಿಯಮವನ್ನು ಗಾಳಿಗೆ ತೂರಿ ವಾಹನ ಚಲಾಯಿಸುತ್ತಿದ್ದ ಸವಾರರಿಗೆ ಪಾಸ್ ರದ್ದುಪಡಿಸುವುದಾಗಿ ಪೊಲೀಸರು ಖಡಕ್ ಎಚ್ಚರಿಕೆ ರವಾನಿಸಿದ್ದಾರೆ.
ಅಗತ್ಯ ವಸ್ತುಗಳ ಪೂರೈಕೆಗಾಗಿ ಕೆಲವು ಜನರು ತಾಲೂಕಾಡಳಿತದಿಂದ ಪಾಸ್ ಪಡೆದಿದ್ದಾರೆ. ಇದರ ಮಧ್ಯೆ ಕೆಲ ವ್ಯಕ್ತಿಗಳು ಪಾಸ್ ಪಡೆಯದೇ ಬೇಕಾಬಿಟ್ಟಿಯಾಗಿ ಸಂಚರಿಸುವುದು ಕಂಡು ಬಂದ ಹಿನ್ನೆಲೆಯಲ್ಲಿ ಶನಿವಾರ ಪೊಲೀಸರು ರಸ್ತೆಗಿಳಿದು ಕಾರ್ಯಾಚರಣೆ ನಡೆಸಿದರು.
ಆರೆಂಜ್ ಜೋನ್ನಿಂದ ಗ್ರೀನ್ ಜೋನ್ನತ್ತ ದಾವಣಗೆರೆ
ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಪ್ರತಿಯೊಂದು ವಾಹನವನ್ನು ತಡೆದು, ಪಾಸ್ಗಳನ್ನು ಪರಿಶೀಲಿಸಿ ಅನಗತ್ಯವಾಗಿ ಸಂಚರಿಸುತ್ತಿರುವ ವ್ಯಕ್ತಿಗಳಿಗೆ ಬಂದ ದಾರಿಯಲ್ಲೇ ಹಿಂದಿರುಗುವಂತೆ ಎಚ್ಚರಿಸಿದರು.
ಇವೆಲ್ಲದರ ಮಧ್ಯೆ ಹಲವರು ಪಾಸ್ ಮನೆಯಲ್ಲಿದೆ ಎಂದು ಸಬೂಬು ನೀಡುವ ಮೂಲಕ ಡ್ರಾಮಾ ನಡೆಸಿದರು. ಇದಕ್ಕೆ ಜಗ್ಗದ ಪೊಲೀಸರು ಲಾಠಿ ರುಚಿ ತೋರಿಸಿ ಮನೆಗೆ ಕಳುಹಿಸಿದ್ದಾರೆ.
ಸರ್ಕಾರ ಲಾಕ್ ಡೌನ್ ಕುರಿತು ಕೆಲವೊಂದು ಅಗತ್ಯತೆಗಳಿಗೆ ಸ್ವಲ್ಪ ಸಡಿಲಿಕೆ ಮಾಡಿದ್ದೇ ತಡ, ಜನತೆ ಕೊರೊನಾ ಭಯ ಮರೆತು ಬೇಜವಾಬ್ದಾರಿ ತೊರುತ್ತಾ ಇಲ್ಲಸಲ್ಲದ ಸಬೂಬೂ ಹೇಳುತ್ತಾ ತಿರುಗುವ ಪ್ರಸಂಗಗಳೇ ಹೆಚ್ಚಾಗಿ ಕಂಡುಬರುತ್ತಿದೆ.
ಪೊಲೀಸ್ ಇಲಾಖೆ ಜನ ಸಂಚಾರ ಇನ್ನಷ್ಟು ತಗ್ಗಿಸುವ ಉದ್ದೇಶದಿಂದ ಆಗಾಗ ಕಾರ್ಯಾಚರಣೆಗೆ ಇಳಿದರೂ ಜನರು ಮಾತ್ರ ಬೇಕಾಬಿಟ್ಟಿ ಸಂಚರಿಸುವುದು ನಿಲ್ಲಿಸುತ್ತಿಲ್ಲ.
ಕೈಯಲ್ಲೊಂದೆರಡು ಮೆಡಿಸಿನ್ ಸ್ಲಿಪ್ ಹಿಡಿದು ಪೇಟೆಗೆ ಮೀನು, ಮಾಂಸ ತರಲು ಕಳ್ಳಬೆಕ್ಕಿನಂತೆ ತಪ್ಪಿಸಿಕೊಂಡು ಓಡಾಡುವವರು ಒಂದೆಡೆಯಾದರೆ, ಇದರ ಮಧ್ಯೆ ನಿಜವಾಗಿಯೂ ಸಂಕಷ್ಟದಲ್ಲಿ ತುರ್ತು ಪರಿಸ್ಥಿತಿಯಲ್ಲಿರುವವರು ಪರಿತಪಿಸುವಂತಾಗಿದೆ.
ಕೆಲವೊಂದು ತುರ್ತು ಅನಾರೋಗ್ಯ ಪರಿಸ್ಥಿತಿಯಲ್ಲಿರುವವರು ಅಥವಾ ಸಣ್ಣಪುಟ್ಟ ಅನಾರೋಗ್ಯದ ಸಮಸ್ಯೆಯಿಂದ ಬಳಲುತ್ತಿರುವವರು ಖಾಕಿ ಭಯದಿಂದ ಹೊನ್ನಾವರಕ್ಕೆ ಕಾಲಿಡಲು ಹೆದರುತ್ತಿದ್ದಾರೆ.