ಭಟ್ಕಳ: ‘ಡಿಜಿಟಲ್ ಇಂಡಿಯಾ’ ಪರಿಕಲ್ಪನೆ ನಾಚಿಸುವಂತಿದೆ ಈ ಊರಿನ ಪರಿಸ್ಥಿತಿ
ಕಾರವಾರ, ಜೂನ್ 9: ಭಾರತ ಡಿಜಿಟಲ್ ಆಗುತ್ತಿದೆಯೆಂದು ಸರ್ಕಾರಗಳು ಹೇಳುತ್ತಿವೆಯಾದರೂ, ಭಟ್ಕಳ ತಾಲ್ಲೂಕಿನ ಕೋಣಾರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಹಾಗೂ ಅದರ ಸುತ್ತಮುತ್ತಲಿನ ಗ್ರಾಮಗಳಲ್ಲಿ ಜನ ಈಗಲೂ ನೆಟ್ವರ್ಕ್ಗಳಿಲ್ಲದೆ ಪರಿತಪಿಸುತ್ತಿದ್ದಾರೆ. ತುರ್ತು ಪರಿಸ್ಥಿತಿ, ಆರೋಗ್ಯ ಹದಗೆಟ್ಟ ಸಂದರ್ಭದಲ್ಲಿ ಯಾರನ್ನಾದರೂ ಸಂಪರ್ಕಿಸಲೂ ಸಾಧ್ಯವಾಗುತ್ತಿಲ್ಲ. ಅನಿವಾರ್ಯ ಸಂದರ್ಭಗಳಲ್ಲಿ ಯುವಕರು ಮರವನ್ನೇರಿ ನೆಟ್ವರ್ಕ್ಗಾಗಿ ಹುಡುಕಾಡುವ ಪರಿಸ್ಥಿತಿ ಇಲ್ಲಿದೆ.
ಮೊಬೈಲ್ ನೆಟ್ವರ್ಕ್ ಟವರ್ ಅಗತ್ಯವಾಗಿದೆ
ಭಟ್ಕಳ ತಾಲೂಕಿನ ಗ್ರಾಮೀಣ ಭಾಗವಾದ ಕೋಣಾರ ಗ್ರಾಮ ಪಂಚಾಯತಿ ವ್ಯಾಪ್ತಿಯು ಕಾಡಿನಿಂದಲೇ ಕೂಡಿದ್ದು, ಕೃಷಿ ಜಮೀನು ಸಹಿತ ಕೂಲಿ ಕೆಲಸ ಮಾಡಿಕೊಂಡಿರುವ ಜನರೇ ಹೆಚ್ಚು ಇಲ್ಲಿ ವಾಸವಿದ್ದಾರೆ. ಸರಿಸುಮಾರು 300- 400 ಮನೆಗಳಿರುವ ಈ ಪ್ರದೇಶದಲ್ಲಿ ಮಧ್ಯಮ ವರ್ಗದ ಜನರೇ ಹೆಚ್ಚಿದ್ದು, ಇತ್ತೀಚಿನ ದಿನಗಳಲ್ಲಿ ಮೊಬೈಲ್ ನೆಟ್ವರ್ಕ್ ಟವರ್ ಅಗತ್ಯವಾಗಿದೆ. ಪ್ರಸ್ತುತ ಲಾಕ್ಡೌನ್ ಕಾರಣ ಶಾಲಾ- ಕಾಲೇಜುಗಳು ತೆರೆಯದೇ ವಿದ್ಯಾರ್ಥಿಗಳಿಗೆ ಆನ್ಲೈನ್ ಶಿಕ್ಷಣ ಪ್ರಾರಂಭವಾಗಿದೆ. ಇನ್ನು ಮಹಾನಗರಗಳಲ್ಲಿ ಉದ್ಯೋಗಕ್ಕಿದ್ದವರು ಹಳ್ಳಿಗಳಿಗೆ ವಾಪಸ್ಸಾಗಿ, ವರ್ಕ್ ಫ್ರಮ್ ಹೋಮ್ನಲ್ಲಿದ್ದಾರೆ. ಹೀಗಾಗಿ ಈ ಸಮಯದಲ್ಲಿ ನೆಟ್ವರ್ಕ್ ಅತ್ಯವಶ್ಯವಾಗಿದೆ. ಆದರೆ ಇಲ್ಲಿ ಒಂದು ದೂರವಾಣಿ ಕರೆ ಮಾಡಲು ಕೂಡ ಸಿಗ್ನಲ್ ಲಭ್ಯವಾಗದಮತ ಪರಿಸ್ಥಿತಿ ಇದೆ.
ಸಂಸದರು, ಶಾಸಕರಿಗೆ ಮನವಿ
ಈ ಭಾಗದಲ್ಲಿ ಒಂದು ಸಮರ್ಪಕವಾದ ಮೊಬೈಲ್ ನೆಟ್ವರ್ಕ್ ಟವರ್ ಸ್ಥಾಪಿಸಿ, ಸುತ್ತಲಿನ ಹಳ್ಳಿಗಳಿಗೆ ಮೊಬೈಲ್ ನೆಟ್ವರ್ಕ್ ಸಿಗುವಂತೆ ಕನಿಷ್ಠ ಸೌಲಭ್ಯವನ್ನಾದರೂ ಒದಗಿಸಬೇಕೆಂಬುದು ಜನರ ಬಹುವರ್ಷಗಳ ಬೇಡಿಕೆಯಾಗಿದೆ. ಕಳೆದ ಎರಡು ವರ್ಷಗಳ ಹಿಂದಿನಿಂದಲೂ ಈ ಬಗ್ಗೆ ಸಂಸದರು, ಶಾಸಕರು ಸೇರಿದಂತೆ ಅನೇಕರಿಗೆ ಮನವಿಯನ್ನೂ ಸಲ್ಲಿಸಿದ್ದಾರೆ. ಎಂಟು ತಿಂಗಳ ಹಿಂದೆ ನೆಟ್ವರ್ಕ್ ಟವರ್ ಸ್ಥಾಪಿಸಿಕೊಡುವ ಭರವಸೆಯನ್ನೂ ಶಾಸಕರು ನೀಡಿದ್ದರು. ಆದರೆ ಮತ್ತೆ ಈ ಬಗ್ಗೆ ಯಾವುದೇ ಸುದ್ದಿಯಿಲ್ಲ ಎನ್ನುತ್ತಾರೆ ಗ್ರಾಮಸ್ಥರು.
ಒಂದು ವೇಳೆ ಇಲ್ಲಿ ಟವರ್ ಸ್ಥಾಪಿಸಿದರೆ ಕೋಣಾರ ಗ್ರಾಮದ ಜೊತೆಗೆ ಸುತ್ತಮುತ್ತಲಿನ ಮಜಿರೆಗಳಾದ ಕುಂಟವಾಣಿ, ಹಡೀನ್, ಬೀಳುರಮನೆ, ಕೋಟಖಂಡ ಭಾಗಗಳಿಗೆ ಇದರ ಪ್ರಯೋಜನ ಸಿಗಲಿದೆ.
ತುರ್ತು ಸಂದರ್ಭದಲ್ಲಿ ದೇವರೇ ಗತಿ
ನೆಟ್ವರ್ಕ್ ಸಮಸ್ಯೆ ಈ ಗ್ರಾಮಕ್ಕೆ ಬಹುವಾಗಿ ಹೊಡೆತ ಕೊಡುತ್ತಿದ್ದು, ಗ್ರಾಮೀಣ ಭಾಗದ ಜನರ ತುರ್ತು ಪರಿಸ್ಥಿತಿ, ಅನಾರೋಗ್ಯದಂತಹ ಸಂದರ್ಭದಲ್ಲಿ ನಗರಕ್ಕೆ ಬರಬೇಕಾದರೆ ಅಥವಾ ಹಳ್ಳಿಗಳಲ್ಲಿನ ಕುಟುಂಬಸ್ಥರನ್ನು ನಗರ ಭಾಗದ ಜನರು ಸಂಪರ್ಕಿಸಲು ಅಸಾಧ್ಯದಂತಹ ಸಂಗತಿಗಳು ಕಣ್ಣಮುಂದೆ ಕಾಣಸಿಗುತ್ತವೆ. ಇಂತಹ ಸಂದರ್ಭದಲ್ಲಿ ದೇವರೇ ಗತಿ ಎಂಬಂತಹ ಪರಿಸ್ಥಿತಿ ಇಲ್ಲಿದೆ.
ಮರವನ್ನೇರಿದ ವಿಡಿಯೋ ವೈರಲ್
ಇನ್ನು ಈ ಬಗ್ಗೆ ಮನವಿ ಕೊಟ್ಟು ಬೇಸತ್ತಿರುವ ಗ್ರಾಮದ ಕೆಲ ಯುವಕರು, ಜನಪ್ರತಿನಿಧಿಗಳ ಕಣ್ತೆರೆಸುವ ಉದ್ದೇಶದಿಂದ ಗ್ರಾಮಸ್ಥರು ನೆಟ್ವರ್ಕ್ ಹುಡುಕಾಡಲು ಮಾಡುವ ಹರಸಾಹಸವನ್ನು ವಿಡಿಯೋ ಚಿತ್ರೀಕರಣ ಮಾಡಿ ಫೇಸ್ಬುಕ್ನಲ್ಲಿ ಹರಿಬಿಟ್ಟಿದ್ದಾರೆ. ಆಳೆತ್ತರದ ಮರವನ್ನೇರಿದ ಯುವಕನೋರ್ವ ಮರದ ತುಂಡಿಗೆ ನೆಟ್ವರ್ಕ್ ಆಂಟೆನಾ ಸಿಗ್ನಲ್ ಹಿಡಿದು ಹುಡುಕಾಟ ನಡೆಸಿ, ಲ್ಯಾಂಡ್ಲೈನ್ ಫೋನ್ಗೆ ಸಿಗ್ನಲ್ ಸಿಗುವಂತೆ ಮಾಡಿರುವ ದೃಶ್ಯಾವಳಿ ಈ ವಿಡಿಯೋದಲ್ಲಿ ಸೆರೆಯಾಗಿದೆ. ಇಷ್ಟು ಸಾಹಸ ಮಾಡಿದರೆ ಮಾತ್ರ ನೆಟ್ವರ್ಕ್ ಬರಲಿದ್ದು, ದೂರವಾಣಿ ಸಂಪರ್ಕ ಸಾಧ್ಯವಾಗಲಿದೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.
Recommended Video