ಕೋವಿಡ್ ನಿಯಂತ್ರಣ; ಉತ್ತರ ಕನ್ನಡದಲ್ಲಿ ವ್ಯಾಪಾರ ವಹಿವಾಟು ಅವಧಿ ಕಡಿತ
ಕಾರವಾರ, ಮೇ 07; " ಕೋವಿಡ್ ಎರಡನೇ ಅಲೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಸಾರ್ವಜನಿಕರ ವ್ಯಾಪಾರ-ವಹಿವಾಟಿಗೆ ಈ ಹಿಂದೆ ಮಾಡಲಾಗಿದ್ದ ಬೆಳಗ್ಗೆ 6 ರಿಂದ 12ರ ಸಮಯವನ್ನು ಮತ್ತೆ ಮೇ 7 ರಿಂದ ಬೆಳಗ್ಗೆ 6 ರಿಂದ 10 ರವರೆಗೆ ಮಾತ್ರ ಅವಕಾಶ ಕಲ್ಪಿಸಿ ನಿರ್ಣಯ ತೆಗೆದುಕೊಳ್ಳಲಾಗಿದೆ" ಎಂದು ಕಾರ್ಮಿಕ ಹಾಗೂ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಜಿಲ್ಲೆಯಲ್ಲಿ ಕೋವಿಡ್-19 ನಿಯಂತ್ರಣಕ್ಕಾಗಿ ಕೈಗೊಳ್ಳಲಾದ ಮುಂಜಾಗ್ರತಾ ಕ್ರಮಗಳ ಕುರಿತು ಗುರುವಾರ ಅವರು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು. "ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಕೋವಿಡ್-19 ಎರಡನೇ ಅಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹೀಗಾಗಿ ಆಯಾ ಜಿಲ್ಲೆಯ ಪರಿಸ್ಥಿತಿಗೆ ಅನುಗುಣವಾಗಿ ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ತಿಳಿಸಿದ್ದಾರೆ" ಎಂದರು.
ಕಾರವಾರ: ಮದುವೆ ಹಿಂದಿನ ದಿನವೇ ಕೊರೊನಾ ಸೋಂಕಿಗೆ ವರ ಬಲಿ!
"ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಕೋವಿಡ್ ನಿಯಂತ್ರಣಕ್ಕಾಗಿ ಲಾಕ್ಡೌನ್ ಮಾಡಲು ನಿರ್ಣಯ ತೆಗೆದುಕೊಳ್ಳಲಾಗುತ್ತಿದೆ. ಆದರೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸ್ವಲ್ಪ ಮಟ್ಟಿಗೆ ನಿಯಂತ್ರಣದಲ್ಲಿದೆ. ಆದರೆ ಸಾರ್ವಜನಿಕರ ವ್ಯಾಪಾರ-ವಹಿವಾಟಿಗೆ ಈ ಹಿಂದೆ ಸರಕಾರ ನಿಗದಿಪಡಿಸಿದ್ದ ಬೆಳಿಗ್ಗೆ 6 ರಿಂದ ಮಧ್ಯಾಹ್ನ 12 ರವರೆಗಿನ ಸಮಯದಲ್ಲಿ ಜನ ಸಂದಣಿ ಹೆಚ್ಚಾಗುತ್ತಿದ್ದು, ಈ ಸಂದರ್ಭದಲ್ಲಿ ಜನರ ನಿರ್ವಹಣೆ ತುಂಬಾ ಕಷ್ಟವಾಗುತ್ತಿದೆ" ಎಂದು ಹೇಳಿದರು.
"ಕೋವಿಡ್-19 ಎರಡನೇ ಅಲೆಯ ಸಂಪೂರ್ಣ ನಿರ್ವಹಣೆಗೆ ಜಿಲ್ಲಾಡಳಿತದಿಂದ ಪೂರ್ವ ತಯಾರಿ ಮಾಡಿಕೊಂಡಿದ್ದು, ಕೋವಿಡ್ ತಡೆಯುವ ಶಕ್ತಿ, ಆಕ್ಸಿಜನ್ ನಿಯಂತ್ರಣ ಮತ್ತು ಸಂಗ್ರಹಿಸುವ ಶಕ್ತಿಯಿದೆ. ಹೀಗಾಗಿ ಇದೆಲ್ಲದರ ಆಧಾರದ ಮೇಲೆ ಜಿಲ್ಲೆಯಲ್ಲಿ ಮೇ 7 ರಿಂದ ಪ್ರತಿದಿನ ಬೆಳಗ್ಗೆ 6 ರಿಂದ 10 ರವರೆಗೆ ಮಾತ್ರ ಸಾರ್ವಜನಿಕರಿಗೆ ವ್ಯಾಪಾರ-ವಹಿವಾಟ ಮಾಡಲು ಅವಕಾಶ ನೀಡಲಾಗಿದೆ" ಎಂದು ತಿಳಿಸಿದರು.
ಕೋವಿಡ್: ಕಾರವಾರ ನೌಕಾನೆಲೆ ಆಸ್ಪತ್ರೆಯಲ್ಲಿ ಆಕ್ಸಿಜನ್ ಬೆಡ್ ವ್ಯವಸ್ಥೆ
"ಜನರು ಈ ನಿರ್ಣಯಕ್ಕೆ ಸರಿಯಾಗಿ ಸ್ಪಂದಿಸದಿದ್ದರೆ ಅನಿವಾರ್ಯವಾಗಿ ಜಿಲ್ಲೆಯಲ್ಲಿ ಸಂಪೂರ್ಣ ಲಾಕ್ಡೌನ್ ಘೋಷಿಸಬೇಕಾಗುತ್ತದೆ. ಜಿಲ್ಲೆಯ ಜನರು ಇದ್ಯಾವುದಕ್ಕೂ ಅವಕಾಶ ಕೊಡಬಾರದು. ಅನಗತ್ಯವಾಗಿ ಮನೆಯಿಂದ ಹೊರಗಡೆ ಬರಬಾರದು. ತಪ್ಪದೇ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಮಾಸ್ಕ್ ಧರಿಸುವ ಮೂಲಕ ಪ್ರತಿಯೊಬ್ಬರೂ ಕೈಗಳಿಗೆ ಸಾನಿಟೈಸ್ ಮಾಡಿಕೊಳ್ಳಬೇಕು. ಈಗಾಗಲೇ ಕೋವಿಡ್ ಲಕ್ಷಣಗಳಿರುವವರು ಹಾಗೂ ಹೋಮ್ ಐಸೋಲೇಶನ್ನಲ್ಲಿ ಇರುವವರು ತಮ್ಮ ವೈದ್ಯಕೀಯ ಪರಿಕ್ಷೆಯ ವರದಿ ಬರುವವರೆಗೆ ಸ್ವಲ್ಪ ಸಮಯ ಕುಟುಂಬದ ಸದಸ್ಯರಿಂದ ದೂರವಿರಬೇಕು. ಈ ಮೂಲಕ ಜನರು ಕೋವಿಡ್ ನಿಯಂತ್ರಣಕ್ಕಾಗಿ ಜಿಲ್ಲಾಡಳಿತ ಹಾಗೂ ಸರಕಾರದೊಂದಿಗೆ ಕೈ ಜೋಡಿಸಬೇಕು" ಎಂದು ಮನವಿ ಮಾಡಿದರು.
ಕೊರೊನಾ 'ಹಾಟ್ಸ್ಪಾಟ್’ ಆಗುತ್ತಿದೆ ಕಾರವಾರ!
"ಜಿಲ್ಲೆಯಲ್ಲಿ ಆಕ್ಸಿಜನ್ ಸಮಸ್ಯೆ ಉದ್ಭವಿಸಬಾರದು ಎಂಬ ಉದ್ದೇಶದಿಂದ ಜಿಲ್ಲೆಯ ಯಲ್ಲಾಪುರ, ಶಿರಸಿ, ಕುಮಟಾದಲ್ಲಿ ಆಕ್ಸಿಜನ್ ಉತ್ಪಾದನಾ ಘಟಕ ಸ್ಥಾಪನೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಜಿಲ್ಲೆಯಲ್ಲಿ 561 ಆಕ್ಸಿಜನ್ ಬೆಡ್ಗಳಿವೆ. ಈ ಪೈಕಿ 272 ಬೆಡ್ಗಳು ಬಳಕೆಯಾಗುತ್ತಿದ್ದು, 289 ಬೆಡ್ಗಳು ಲಭ್ಯ ಇವೆ. ಜಿಲ್ಲೆಯಲ್ಲಿ ಒಟ್ಟಾರೆ 61 ವೆಂಟಿಲೇಟರ್ಗಳಿವೆ. ಈ ಪೈಕಿ 14 ಬಳಕೆಯಾಗುತ್ತಿದ್ದು, 47 ಲಭ್ಯ ಇವೆ. ಅದಲ್ಲದೇ 11 ಟನ್ಷ್ಟು ಆಕ್ಸಿಜನ್ ಸಂಗ್ರಹಣ ಮಾಡಿಕೊಳ್ಳವ ವ್ಯವಸ್ಥೆ ಮಾಡಿಕೊಳ್ಳಲಾಗಿದೆ" ಎಂದು ಸಚಿವರು ವಿವರಣೆ ನೀಡಿದೆ.
"ಕೋವಿಡ್ ನಿಯಂತ್ರನಕ್ಕಾಗಿ ಆರೋಗ್ಯ ಸಿಬ್ಬಂದಿ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತರನ್ನು ಸಂಪೂರ್ಣವಾಗಿ ಬಳಸಿಕೊಳ್ಳಬೇಕು. ಕೋವಿಡ್ ತೀವ್ರತೆ ಇರುವವರನ್ನು ಮಾತ್ರ ಜಿಲ್ಲಾ ಕೇಂದ್ರ ಕಾರವಾರಕ್ಕೆ ಕಳುಹಿಸುವಂತೆ ಜಿಲ್ಲೆಯ ಎಲ್ಲ ತಾಲೂಕಾ ಆಸ್ಪತ್ರೆಯ ವೈದ್ಯರಿಗೂ ಸೂಚನೆ ನೀಡಲಾಗಿದೆ" ಎಂದರು.
Recommended Video
"ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕಾಗಿ ಜಿಲ್ಲಾಧಿಕಾರಿ ಒಳಗೊಂಡಂತೆ ಒಂದು ತಂಡ ಹಾಗೂ ಜಿಲ್ಲಾ ಆರೋಗ್ಯ ಅಧಿಕಾರಿಯನ್ನು ಒಳಗೊಂಡಂತೆ ಮತ್ತೊಂದು ತಂಡವನ್ನು ರಚಿಸಲಾಗಿದೆ. ಈ ಎರಡು ತಂಡಗಳು ಸಮನ್ವಯತೆ ಆಧಾರದ ಮೇಲೆ ಕಾರ್ಯ ನಿರ್ವಹಿಸಲಿವೆ. ಆರೋಗ್ಯದ ಏನೇ ಸಮಸ್ಯೆಗಳಿದ್ದರೂ ಡಿಹೆಚ್ಒ ಅವರ ನೇತೃತ್ವದ ತಂಡ ಅಂತಿಮ ನಿರ್ಣಯ ಕೈಗೊಳ್ಳಲಿದೆ. ಅಗತ್ಯ ವಸ್ತುಗಳ ಪೂರೈಕೆಗೆ ಜಿಲ್ಲಾಧಿಕಾರಿ ನೇತೃತ್ವದ ತಂಡ ಕಾರ್ಯ ನಿರ್ವಹಿಸಲಿದೆ" ಎಂದು ಹೇಳಿದರು.