ಪರೇಶ್ ಮೆಸ್ತಾ ಪ್ರಕರಣದ ಎ1 ಆರೋಪಿಗೆ ವಕ್ಫ್ ಬೋರ್ಡ್ ಉಪಾಧ್ಯಕ್ಷ ಪಟ್ಟ: ಬಿಜೆಪಿಯಲ್ಲಿ ಆಕ್ರೋಶ
ಕಾರವಾರ, ಆಗಸ್ಟ್, 12: ಪರೇಶ್ ಮೆಸ್ತಾ ಸಾವಿನ ಪ್ರಕರಣ ಇಡೀ ಉತ್ತರ ಕನ್ನಡ ಜಿಲ್ಲೆ ಮಾತ್ರವಲ್ಲದೇ ರಾಜ್ಯದಲ್ಲಿಯೂ ಸದ್ದು ಮಾಡಿತ್ತು. ಕೋಮು, ಗಲಭೆಯಲ್ಲಿ ಮೃತಪಟ್ಟಿದ್ದ ಪರೇಶ್ ಮೆಸ್ತಾನ ಸಾವಿಗೆ ನ್ಯಾಯ ಒದಗಿಸಿ ಎಂದು ಬಿಜೆಪಿ ಹೋರಾಟ ನಡೆಸಿತ್ತು. 2018ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಕರಾವಳಿ ಭಾಗದಲ್ಲಿ ಭರ್ಜರಿ ಜಯ ಗಳಿಸಿತ್ತು.
ಆದರೆ ಬಿಜೆಪಿ ಸರ್ಕಾರದಲ್ಲಿಯೇ ಇದೀಗ ಪರೇಶ್ ಮೆಸ್ತಾ ಸಾವಿನ ಎ1 ಆರೋಪಿಗೆ ಜಿಲ್ಲಾ ವಕ್ಫ್ ಬೋರ್ಡ್ ಉಪಾಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಿರುವುದು ಸಾಕಷ್ಟು ವಿರೋದಕ್ಕೆ ಕಾರಣವಾಗಿದೆ.
2017ರ ಡಿಸೆಂಬರ್ ತಿಂಗಳಿನಲ್ಲಿ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಪಟ್ಟಣದಲ್ಲಿ ಕೋಮು ಗಲಭೆಯೊಂದು ನಡೆದಿತ್ತು. ಗಲಭೆಯಲ್ಲಿ ಪಟ್ಟಣದ ಪರೇಶ್ ಮೆಸ್ತಾ ಎಂಬ ಯುವಕ ನಾಪತ್ತೆಯಾಗಿದ್ದು, ಎರಡು ದಿನಗಳ ನಂತರ ಆತನ ಶವ ಪಟ್ಟಣದ ಕೆರೆಯೊಂದರಲ್ಲಿ ಪತ್ತೆಯಾಗಿತ್ತು.
ಪರೇಶ್ ಮೆಸ್ತಾನನ್ನು ಕೋಮು, ಗಲಭೆಯಲ್ಲಿ ಕೊಲೆ ಮಾಡಲಾಗಿದೆ ಎಂದು ಬಿಜೆಪಿ ವಿರೋಧಿಸಿ ರಾಜ್ಯಾದ್ಯಂತ ಪ್ರತಿಭಟನೆಯನ್ನು ಸಹ ನಡೆಸಿತ್ತು. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ, ಕುಮಟಾ, ಶಿರಸಿ, ಕಾರವಾರದಲ್ಲಿ ಈ ಘಟನೆ ದೊಡ್ಡ ಗಲಭೆಗೆ ಕಾರಣವಾಗಿದ್ದು, ಅಂದಿನ ಕಾಂಗ್ರೆಸ್ ಸರ್ಕಾರ ಪ್ರಕಣವನ್ನು ಸಿಬಿಐ ತನಿಖೆಗೆ ಒಪ್ಪಿಸಿತ್ತು. ಪ್ರಕರಣ ಸಂಬಂಧ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಜಮಾಲ್ ಅಜಾದ್ ಅಣ್ಣಿಗೇರಿ ಎಂಬಾತನನ್ನ ಎ1 ಆರೋಪಿಯನ್ನಾಗಿ ಮಾಡಿ ಬಂಧಿಸಲಾಗಿತ್ತು.
ಬಿಜೆಪಿ ವಿರುದ್ಧ ರಾಜ್ಯದೆಲ್ಲೆಡೆ ಭುಗಿಲೆದ್ದ ಆಕ್ರೋಶ
ಸದ್ಯ ಪ್ರಕರಣವನ್ನು ಕೈಗೆತ್ತಿಗೊಂಡ ಸಿಬಿಐ ಇನ್ನು ತನಿಖೆ ನಡೆಸುತ್ತಿದೆ. ಬಂಧಿತರೆಲ್ಲರೂ ಜಾಮೀನಿನ ಮೇಲೆ ಹೊರಗಡೆ ಬಂದಿದ್ದಾರೆ. ಇದರ ನಡುವೆ ಕೆಲ ದಿನಗಳ ಹಿಂದೆ ಜಿಲ್ಲಾ ವಕ್ಫ್ ಬೋರ್ಡ್ ಉಪಾಧ್ಯಕ್ಷ ಸ್ಥಾನವನ್ನ ಪ್ರಕರಣದ ಎ1 ಆರೋಪಿಯಾಗಿದ್ದ ಅಜಾದ್ ಅಣ್ಣಿಗೇರಿಗೆ ನೀಡಿರುವುದು ಸಾಕಷ್ಟು ವಿರೋಧಕ್ಕೆ ಕಾರಣವಾಗಿದೆ.
ಇದೀಗ ಬಿಜೆಪಿಯಿಂದಲೇ ಆರೋಪಿಗೆ "ಪಟ್ಟ"
ಪರೇಶ್ ಮೆಸ್ತಾ ಹತ್ಯೆ ವಿರುದ್ಧವೇ ಹೋರಾಡಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ಇದೀಗ ಆರೋಪಿಗೆ ಸ್ಥಾನವನ್ನು ಕೊಟ್ಟಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವಿರೋಧ ವ್ಯಕ್ತವಾಗುತ್ತಿದೆ. ಸ್ಥಳೀಯ ಜನಪ್ರತಿನಿಧಿಗಳ ಸಹಕಾರದಿಂದಲೇ ಆರೋಪಿಗೆ ಉಪಾಧ್ಯಕ್ಷ ಸ್ಥಾನವನ್ನ ನೀಡಿದ್ದು, ಬಿಜೆಪಿಗೆ ಏನು ನೈತಿಕತೆ ಇದೆ ಎಂದು ವಿರೋಧಗಳು ವ್ಯಕ್ತವಾಗುವೆ. ಇದು ಚುನಾವಣಾ ಸಂದರ್ಭದಲ್ಲಿ ರಾಜಕೀಯ ಅಸ್ತ್ರ ಸಹ ಆಗುವ ಸಾಧ್ಯತೆ ಇದೆ ಎಂದು ಚರ್ಚೆಗಳು ನಡೆಯುತ್ತಿವೆ.
ಸರ್ಕಾರದ ವಿರುದ್ಧ ಭುಗಿಲೆದ್ದ ಆಕ್ರೋಶಗಳು
ಅಜಾದ್ ಅಣ್ಣಿಗೇರಿಯನ್ನು ಜಿಲ್ಲಾ ವಕ್ಫ್ ಬೋರ್ಡ್ ಉಪಾಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಿರುವುದರಿಂದ ಸರ್ಕಾರದ ವಿರುದ್ಧ ಆಕ್ರೋಶಗಳು ಭುಗಿಲೆದ್ದಿವೆ. ಇದಲ್ಲದೇ ಇದು ಬಿಜೆಪಿಯಲ್ಲೂ ವಿರೋಧಕ್ಕೆ ಕಾರಣವಾಗಿದೆ. ಜಿಲ್ಲಾ ವಕ್ಫ್ ಬೋರ್ಡ್ ಸದಸ್ಯರ ಪಟ್ಟಿಯಲ್ಲಿ ಬೇರೆ ಪಕ್ಷದ ಅಜಾದ್ ಅಣ್ಣಿಗೇರಿ ಹಾಗೂ ಕೆ.ಹೆಚ್ ಕರೀಂ ಹಾಜಿ ಅವರನ್ನು ನೇಮಕ ಮಾಡಿದೆ. ಆದ್ದರಿಂದ ಪದಾಧಿಕಾರಿಗಳನ್ನು ಬದಲಿಸುವಂತೆ ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷ ಮಹಮ್ಮದ್ ಅನೀಷ್ ತಹಶೀಲ್ದಾರ್ ಮುಜರಾಯಿ ಸಚಿವರಿಗೆ ಮನವಿ ಮಾಡಿಕೊಂಡಿದ್ದಾರೆ.
ಅಭ್ಯರ್ಥಿಗಳಿಂದಲೇ ಪಕ್ಷದ ನಡೆಗೆ ಅಸಮಾಧಾನ
ನನ್ನನ್ನು ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಬೇರೆ ಪಕ್ಷದ ಇಬ್ಬರನ್ನು ನೇಮಕ ಮಾಡಿರುವುದು ಬಿಜೆಪಿ ಪಕ್ಷದ ಅಭ್ಯರ್ಥಿಗಳ ಅಸಮಾಧಾನಕ್ಕೆ ಕಾರಣವಾಗಿದೆ. ಕೂಡಲೇ ಜಿಲ್ಲಾ ಬಿಜೆಪಿ ಪದಾಧಿಕಾರಿಗಳು ಸಲ್ಲಿಸಿದ ಸದಸ್ಯರ ಪಟ್ಟಿಯನ್ನು ಪರಿಗಣಿಸಬೇಕು. ನಂತರ ವಕ್ಫ್ ಬೋರ್ಡ್ ಸಲಹಾ ಸಮಿತಿ ಸದಸ್ಯರನ್ನು ನೇಮಕ ಮಾಡುವಂತೆ ಸಚಿವರಿಗೆ ಅನೀಷ್ ತಹಶೀಲ್ದಾರ್ ಮನವಿ ಮಾಡಿಕೊಂಡಿದ್ದಾರೆ.
ಒಟ್ಟಿನಲ್ಲಿ ಅಂದು ರಾಜ್ಯಾದ್ಯಂತ ಪರೇಶ್ ಸಾವಿನ ನ್ಯಾಯಕ್ಕಾಗಿ ಹೋರಾಟ ನಡೆಸಿದ್ದ ಬಿಜೆಪಿ, ಇಂದು ಅವರದ್ದೆ ಸರ್ಕಾರದಲ್ಲಿ ಪ್ರಕರಣದ ಎ1 ಆರೋಪಿಗೆ ವಕ್ಫ್ ಬೋರ್ಡ್ನಲ್ಲಿ ಸ್ಥಾನಮಾನ ನೀಡಿದೆ. ಇದು ಕಾಂಗ್ರೆಸ್ ಪಕ್ಷಕ್ಕೆ ರಾಜಕೀಯ ಅಸ್ತ್ರವಾಗಿ ಸಿಕ್ಕಂತಾಗಿದ್ದು, ಬಿಜೆಪಿ ಈ ಬಗ್ಗೆ ಮುಂದಿನ ದಿನಗಳಲ್ಲಿ ಯಾವ ಕ್ರಮಕ್ಕೆ ಮುಂದಾಗಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.
Recommended Video