ಎರಡು ವರ್ಷವಾಯ್ತು, ಹೊನ್ನಾವರದ ಪರೇಶ್ ಮೇಸ್ತಾ ಪ್ರಕರಣ ಏನಾಯ್ತು?
ಕಾರವಾರ, ಡಿಸೆಂಬರ್ 14: ಜಿಲ್ಲೆಯ ಹೊನ್ನಾವರ ಪಟ್ಟಣದಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದ ಪರೇಶ್ ಮೇಸ್ತಾ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿ ಎರಡು ವರ್ಷ ಸಂದಿತು. ಆದರೆ, ಸಾವಿನ ಪ್ರಕರಣದ ಹಿಂದಿನ ಸತ್ಯ ಮಾತ್ರ ಇನ್ನೂ ಹೊರಗೆ ಬರದಿರುವುದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ.
ಕಳೆದ 2017ರ ಡಿಸೆಂಬರ್ 6ರಂದು ಹೊನ್ನಾವರ ಪಟ್ಟಣದಲ್ಲಿ ನಡೆದಿದ್ದ ಕೋಮು ಗಲಭೆ ವೇಳೆ ಪಟ್ಟಣದ ಉದ್ಯಮ ನಗರ ನಿವಾಸಿಯಾಗಿದ್ದ 19 ವರ್ಷದ ಪರೇಶ್ ಮೇಸ್ತಾ ನಾಪತ್ತೆಯಾಗಿದ್ದ. ಡಿಸೆಂಬರ್ 8ರಂದು ಪರೇಶ್ ಮೇಸ್ತಾ ಮೃತದೇಹ ಪಟ್ಟಣದ ಕೆರೆಯೊಂದರಲ್ಲಿ ಪತ್ತೆಯಾಗಿತ್ತು.
ಕೋಮುಗಲಭೆ ವೇಳೆ ಕೊಲೆ ಮಾಡಿದ್ದ ಶಂಕೆ
ಕೋಮುಗಲಭೆ ವೇಳೆಯೇ ಅನ್ಯಕೋಮಿನ ಜನರು ಕೊಲೆ ಮಾಡಿರಬಹುದೆಂದು ಆರೋಪಿಸಿ ಜಿಲ್ಲೆಯಾದ್ಯಂತ ಪ್ರತಿಭಟನೆ ನಡೆದು, ಹಲವೆಡೆ ಗಲಭೆಗೆ ಸಹ ಕಾರಣವಾಗಿತ್ತು. ಘಟನೆ ನಡೆದ ವೇಳೆಯಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿತ್ತು. ಬಿಜೆಪಿ ನಾಯಕರು ಬೀದಿಗಿಳಿದು, 'ರಾಜ್ಯ ಸರ್ಕಾರದ ಮೇಲೆ ತಮಗೆ ನಂಬಿಕೆ ಇಲ್ಲ. ಸಿಬಿಐ ತನಿಖೆಗೆ ವಹಿಸಬೇಕು' ಎಂದು ಒತ್ತಾಯ ಮಾಡಿದ್ದರ ಪರಿಣಾಮ 2017ರ ಡಿಸೆಂಬರ್ 13ರಂದು ಸಿಬಿಐ ತನಿಖೆಗೆ ಪ್ರಕರಣವನ್ನು ವಹಿಸಿತ್ತು. ಆದರೆ, ಸಿಬಿಐ ತನಿಖೆ ವಹಿಸಿ ಎರಡು ವರ್ಷವಾದರೂ ಇಂದಿಗೂ ಪರೇಶ್ ಮೇಸ್ತಾ ಸಾವಿನ ಹಿಂದೆ ಯಾರಿದ್ದಾರೆ ಎನ್ನುವ ಸತ್ಯ ಹೊರ ಬಂದಿಲ್ಲ. ಸಿಬಿಐ ಅಧಿಕಾರಿಗಳು ಹಲವು ಬಾರಿ ಹೊನ್ನಾವರ, ಕುಮಟಾಕ್ಕೆ ಭೇಟಿ ನೀಡಿ, ಹಲವರನ್ನು ವಿಚಾರಣೆ ನಡೆಸಿದ್ದರು. ಅಲ್ಲದೇ, ಪರೇಶ್ ಮೇಸ್ತಾ ಮನೆಗೆ ಭೇಟಿ ನೀಡಿ ಮನೆಯವರನ್ನು ಕೂಡ ವಿಚಾರಣೆಗೊಳಪಡಿಸಿದ್ದರು. ತನಿಖೆ ಕೈಗೆತ್ತುಕೊಂಡು ಸಾಕಷ್ಟು ಸಮಯವಾದರೂ ಸಿಬಿಐ ಅಧಿಕಾರಿಗಳು ಸತ್ಯ ಹೊರಹಾಕುವಲ್ಲಿ ವಿಳಂಬ ಮಾಡಿದ್ದಾರೆ.
ಹಿಂಸಾರೂಪಕ್ಕೆ ತಿರುಗಿದ ಪ್ರತಿಭಟನೆ
ಸದ್ಯ ಕೇಂದ್ರದಲ್ಲೂ ಬಿಜೆಪಿ ಸರ್ಕಾರವಿದ್ದು, ರಾಜ್ಯದಲ್ಲೂ ಬಿಜೆಪಿ ಸರ್ಕಾರವಿದೆ. ಪರೇಶ್ ಮೇಸ್ತಾ ಕುಟುಂಬಕ್ಕೆ ನ್ಯಾಯ ಕೊಡಿಸಿ ಎಂದು ಹೋರಾಟ ಮಾಡಿದ ಬಿಜೆಪಿ ಎರಡು ಕಡೆ ಅಧಿಕಾರದಲ್ಲಿರುವುದರಿಂದ ಇನ್ನಾದರೂ ಶೀಘ್ರದಲ್ಲಿ ಸಾವಿನ ಹಿಂದಿನ ರಹಸ್ಯ ಹೊರಹಾಕಲಿ ಎನ್ನುವುದು ಜಿಲ್ಲೆಯ ಜನರ ಆಗ್ರಹ.
ಪರೇಶ್ ಮೇಸ್ತಾ ಸಾವಿನ ಪ್ರಕರಣದ ನ್ಯಾಯಕ್ಕಾಗಿ ಆಗ್ರಹಿಸಿ ಜಿಲ್ಲೆಯ ಕುಮಟಾ, ಕಾರವಾರ ಹಾಗೂ ಶಿರಸಿಯಲ್ಲಿ ನಡೆದಿದ್ದ ಪ್ರತಿಭಟನೆ ಹಿಂಸಾತ್ಮಕ ರೂಪಕ್ಕೆ ತಿರುಗಿತ್ತು. ಈ ಸಂದರ್ಭದಲ್ಲಿ ನೂರಾರು ಯುವಕರ ಮೇಲೆ ಪ್ರಕರಣ ದಾಖಲಾಗಿತ್ತು. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಪ್ರಕರಣ ಹಿಂಪಡೆಯಲಾಗುವುದು ಎನ್ನುವ ಆಶ್ವಾಸನೆಯನ್ನೂ ನೀಡಿದ್ದರು.ಪರೇಶ್ ಮೇಸ್ತ ಹತ್ಯೆ ಪ್ರಕರಣ : ಸಿಬಿಐನಿಂದ ಎಫ್ಐಆರ್
ಗಲಭೆ ಪ್ರಕರಣ ಹಿಂಪಡೆಯುವ ಮಾಹಿತಿಯೇ ಇಲ್ಲ
ಆದರೆ, ಬಿಜೆಪಿ ಸರ್ಕಾರ ಆಡಳಿತದಲ್ಲಿದೆ. ಮುಖ್ಯಮಂತ್ರಿಯಾಗಿ ಬಿ.ಎಸ್.ಯಡಿಯೂರಪ್ಪ ಅಧಿಕಾರ ವಹಿಸಿಕೊಂಡ ಪ್ರಾರಂಭದಲ್ಲಿ ಪರೇಶ್ ಮೇಸ್ತಾ ಗಲಭೆ ಪ್ರಕರಣ ಸಂಬಂಧ ದೂರು ದಾಖಲಾಗಿದ್ದವರ ಮೇಲೆ ಪ್ರಕರಣ ಹಿಂಪಡೆಯುತ್ತಾರೆ ಎನ್ನುವ ಮಾತುಗಳು ಕೇಳಿ ಬಂದಿದ್ದವು. ಆದರೆ, ಸರ್ಕಾರ ಆಡಳಿತಕ್ಕೆ ಬಂದು ಮೂರು ತಿಂಗಳುಗಳೇ ಕಳೆದಿವೆ. ಇನ್ನೂ ಪ್ರಕರಣ ಹಿಂಪಡೆಯುವ ಬಗ್ಗೆ ಯಾವ ಮಾಹಿತಿಯೂ ಸಿಕ್ಕಿಲ್ಲ. ಪ್ರಕರಣ ದಾಖಲಿಸಿಕೊಂಡವರು ಮಾತ್ರ ನ್ಯಾಯಾಲಯಕ್ಕೆ ಅಲೆಯುವಂತಾಗಿದ್ದು, ಸರ್ಕಾರ ಯಾವಾಗ ಪ್ರಕರಣ ಹಿಂಪಡೆಯುತ್ತದೆಯೋ ಎಂದು ಕಾಯುತ್ತಿದ್ದಾರೆ. ಸಿಬಿಐ ತನಿಖೆ ಮಾಡಿದ ವಿಳಂಬವನ್ನು ನಮ್ಮ ಮೇಲೆ ಸರ್ಕಾರ ಮಾಡದಿರಲಿ ಎನ್ನುತ್ತಿದ್ದಾರೆ ಪ್ರಕರಣ ಎದುರಿಸುತ್ತಿರುವ ಯುವಕರು.
ಆರೋಪಿಗಳ ಶಿಕ್ಷೆಗೆ ಕುಟುಂಬದ ಒತ್ತಾಯ
ಮಗನ ಸಾವಿನ ತನಿಖೆಯನ್ನು ಸಿಬಿಐಗೆ ವಹಿಸಿ ಎರಡು ವರ್ಷಗಳು ಕಳೆದಿವೆ. ಆದರೆ, ಏನಾಗಿದೆ ಎನ್ನುವ ಸತ್ಯ ಇಂದಿಗೂ ಹೊರ ಬರದಿರುವುದು ನಮ್ಮಿಡೀ ಕುಟುಂಬಕ್ಕೆ ಬೇಸರ ತಂದಿದೆ. ಸಿಬಿಐ ಅಧಿಕಾರಿಗಳು ತನಿಖೆ ಮಾಡಿದ್ದಾರೆ. ಅವರನ್ನು ದೂರುವುದಿಲ್ಲ. ಆದರೆ, ಆದಷ್ಟು ಶೀಘ್ರದಲ್ಲಿ ಸತ್ಯ ಏನೆಂದು ತಿಳಿಸಲಿ. ಆರೋಪಿಗಳಿಗೆ ಶಿಕ್ಷೆಯಾಗಲಿ ಎಂದು ಕೇಳಿಕೊಳ್ಳುತ್ತಿದ್ದಾರೆ ಪರೇಶ್ ತಂದೆ ಕಮಲಾಕರ್ ಮೇಸ್ತಾ.