ಮಕ್ಕಳ ಜಗಳಕ್ಕೆ ಪೋಷಕರ ಕಿತ್ತಾಟ: ವೈರಲ್ ಆಯ್ತು ವಿಡಿಯೋ
ಕಾರವಾರ, ಫೆ.22: ಮಕ್ಕಳ ಜಗಳಕ್ಕೆ ಪೋಷಕರು ಚಪ್ಪಲಿ, ಕಲ್ಲು ಹಿಡಿದು ಹೊಡೆದಾಡಿಕೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲ್ಲೂಕಿನ ಹಾರವಾಡದ ಗಾಬೀತವಾಡ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.
ಮೂರು ದಿನದ ಹಿಂದೆ ಗಾಬೀತವಾಡ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮೂರನೇ ತರಗತಿಯ ಮಕ್ಕಳ ನಡುವೆ ಗಲಾಟೆ ನಡೆದಿದೆ. ಇದಾದ ಬಳಿಕ ಬುಧವಾರ ಶಾಲೆ ಬಿಟ್ಟ ಸಂದರ್ಭದಲ್ಲಿ ವಿದ್ಯಾರ್ಥಿಯೊಬ್ಬರ ತಾಯಿ ಸುರೇಖಾ ಎಂಬುವವರು ಮತ್ತೊಬ್ಬ ವಿದ್ಯಾರ್ಥಿಗೆ ಚಪ್ಪಲಿಯಿಂದ ಹೊಡೆದಿದ್ದಾಳೆ.
ಈ ವಿಷಯ ತಿಳಿದ ಊರಿನ ಪ್ರಮುಖರು ಚಪ್ಪಲಿಯಿಂದ ಹೊಡೆಸಿಕೊಂಡ ವಿದ್ಯಾರ್ಥಿ ಹಾಗೂ ಆಕೆಯ ತಾಯಿ ಕಾಂಚನ ಎಂಬುವವರೊಂದಿಗೆ ಶಾಲೆಗೆ ತೆರಳಿ ಘಟನೆಯ ಕುರಿತು ಶಿಕ್ಷಕರಿಗೆ ಪ್ರಸ್ನಿಸಿದ್ದು, ಈ ಬಗ್ಗೆ ಶಾಲಾಭಿವೃದ್ಧಿ ಸಮಿತಿ ಪೋಷಕರ ಸಭೆ ಕರೆದಿದೆ. ಆದರೆ ಸಭೆಗೆ ಚಪ್ಪಲಿಯಿಂದ ಹಲ್ಲೆ ಮಾಡಿದ್ದ ಸುರೇಖಾ ಚೀಲದಲ್ಲಿ ಕಲ್ಲು ತುಂಬಿಕೊಂಡು ಬಂದಿದ್ದು, ಅದನ್ನು ಖಂಡಿಸಿ ಹಲವರು ಆಕೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕ್ಷಮೆ ಕೇಳುವಂತೆ ಒತ್ತಾಯಿಸಿದ್ದಾರೆ. ಆದರೆ ಇದಕ್ಕೆ ಒಪ್ಪದ ಆಕೆ ಚೀಲದಲ್ಲಿ ತುಂಬಿಕೊಂಡು ಬಂದಿದ್ದ ಕಲ್ಲಿನಿಂದ ಸಭೆಗೆ ಬಂದ ಪೋಷಕರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.
ಇದರಿಂದ ಸಿಟ್ಟಿಗೆದ್ದ ಇತರ ವಿದ್ಯಾರ್ಥಿಗಳ ಪೋಷಕರಲ್ಲಿ ಕೆಲ ಮಹಿಳೆಯರು ಸುರೇಖಾಗೆ ಹೊಡೆದಿದ್ದಾರೆ. ಇದು ತೀವ್ರವಾಗಿದ್ದು, ಗಲಾಟೆ ಸುಧಾರಿಸಿಕೊಳ್ಳದಷ್ಟು ಮಟ್ಟಕ್ಕೆ ತಲುಪಿದೆ. ಘಟನೆಯ ತೀವ್ರತೆ ಅರಿತ ಶಾಲೆಯ ಶಿಕ್ಷಕರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಬಂದು ಶಾಂತಿ ಸಂಧಾನ ನಡೆಸಿದ್ದಾರೆ. ಗಲಾಟೆ ನಡೆಸಿದ ಸುರೇಖಾರಿಂದ ಮುಚ್ಚಳಿಕೆಯನ್ನು ಬರೆಸಿಕೊಂಡು ಪ್ರಕರಣವನ್ನು ಇತ್ಯರ್ಥಗೊಳಿಸಿದ್ದಾರೆ. ಆದರೆ ಮಕ್ಕಳ ಜಗಳಕ್ಕೆ ಪೋಷಕರು ಕಲ್ಲು ತೂರಾಟ ಮಾಡಿಕೊಂಡ ವಿಡಿಯೂ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಖತ್ ಸದ್ದು ಮಾಡುತ್ತಿದೆ.