ಭಾರತೀಯ ಸಂಸ್ಕೃತಿ ಪುನರುಜ್ಜೀವನಕ್ಕಾಗಿ ಗೋಕರ್ಣದಲ್ಲಿ ಪರಂಪರಾ ವಿವಿ ಸ್ಥಾಪನೆ
ಕಾರವಾರ, ಸೆಪ್ಟೆಂಬರ್ 9: ಆಧುನಿಕ ಶಿಕ್ಷಣದ ನಡುವೆ ನಮ್ಮ ಭಾರತೀಯ ಸಂಸ್ಕೃತಿ, ಪರಂಪರೆ ನಶಿಸಿ ಹೋಗುತ್ತಿದೆ. ಪಾಶ್ಚಿಮಾತ್ಯ ಸಂಸ್ಕೃತಿಯತ್ತ ಯುವ ಪಿಳಿಗೆ ಆಕರ್ಷಿತವಾದ ಕಾರಣ ವ್ಯವಸ್ಥೆ ಕೂಡ ಅದಕ್ಕೆ ಪೂರಕವಾಗುತ್ತಿದೆ. ಆದರೆ ನಮ್ಮ ದೇಶದ ಪರಂಪರೆ ಹಾಗೂ ಹಿಂದೂ ಸಂಸ್ಕೃತಿಯ ಉಳುವಿಗಾಗಿ ಪಣತೊಟ್ಟು ದೇಶದಲ್ಲಿಯೇ ಎಲ್ಲೂ ಸಿಗದಂತಹ ಗುರುಕುಲ ಶಿಕ್ಷಣ ಪ್ರಾರಂಭಿಸಿದ್ದ ಗೋಕರ್ಣದ ವಿಷ್ಣು ಗುಪ್ತ ವಿದ್ಯಾ ಪೀಠ ಇದೀಗ ಪರಂಪರಾ ವಿವಿ ಸ್ಥಾಪನೆಗೆ ಮುಂದಾಗಿದೆ.
ಗೋಕರ್ಣದ ವಿಷ್ಣುಗುಪ್ತ ವಿದ್ಯಾಪೀಠ ಹಿಂದೂ ಸಂಸ್ಕೃತಿಯ ಉಳಿವಿಗೆ ಪಣ ತೊಟ್ಟಿದೆ. ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ನೇತೃತ್ವದಲ್ಲಿ ವಿಷ್ಣುಗುಪ್ತ ವಿದ್ಯಾಪೀಠದಲ್ಲಿ ಗುರುಕುಲ ಶಿಕ್ಷಣ ನಡೆಯುತ್ತಿದೆ. ಇಲ್ಲಿ 64 ವಿದ್ಯೆಗಳನ್ನು ಕಲಿಸಲಾಗುತ್ತಿದೆ. ಆಧುನಿಕ ಶಿಕ್ಷಣದೊಂದಿಗೆ, ದೇಶದ ಸಂಸ್ಕೃತಿ, ಧಾರ್ಮಿಕ, ಪಾರಂಪರಿಕ ಶಿಕ್ಷಣ ಒದಗಿಸುತ್ತಿದೆ. ಈಗಾಗಲೇ ಕಾರ್ಯಾರಂಭ ಮಾಡಿರುವ ಗುರುಕುಲಗಳು ಕಳೆದ ಎರಡು ವರ್ಷದಿಂದ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ನಾಡಿನ ಮೂಲೆ ಮೂಲೆಗಳಿಂದ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಿದೆ.
ದುಡ್ಡಿನಾಸೆಗೆ ಸ್ವಾಮೀಜಿಯೊಂದಿಗೆ ಸಂಬಂಧ ಕಲ್ಪಿಸಿ ಅಪಪ್ರಚಾರ : ಪತಿ ಮೇಲೆ ದೂರಿದ ಪತ್ನಿ
ಋಷಿಯುಗ ಮತ್ತು ನವಯುಗ ಶಿಕ್ಷಣದ ಸಮನ್ವಯದೊಂದಿಗೆ ಗುರುಕುಲಗಳು ಕಾರ್ಯ ನಿರ್ವಹಿಸುತ್ತಿವೆ. ಪರಂಪರಾ ಗುರುಕುಲದಲ್ಲಿ ವಿದ್ಯಾರ್ಥಿಗಳು ಆರು ವರ್ಷದಲ್ಲಿ 18 ಭಾರತೀಯ ವಿದ್ಯೆಗಳ ಪೂರ್ವಶಿಕ್ಷಣ ಪಡೆಯಲಿದ್ದು, ಪರಂಪರಾ ವಿಶ್ವವಿದ್ಯಾನಿಲಯಲ್ಲಿ ಇವುಗಳ ಉನ್ನತ ಅಧ್ಯಯನಕ್ಕೆ ಅವಕಾಶ ಇರುತ್ತದೆ. ಇದರ ಪಠ್ಯಕ್ರಮ ಸೇರಿದಂತೆ ಸಮಗ್ರ ರೂಪರೇಷೆ ಅಭಿವೃದ್ಧಿಪಡಿಸಿ ಕೇಂದ್ರ ಸರ್ಕಾರಕ್ಕೆ ವಿಸ್ತ್ರತ ಯೋಜನಾ ವರದಿ ಸಲ್ಲಿಸಲಾಗಿದೆ.
15 ವರ್ಷಗಳ ವಿಸ್ತ್ರತ ಯೋಜನೆ
ಮಹತ್ವಾಕಾಂಕ್ಷಿ ವಿಶ್ವವಿದ್ಯಾಪೀಠ 15 ವರ್ಷಗಳ ವಿಸ್ತ್ರತ ಯೋಜನೆಯಾಗಿದ್ದು, ಇದು ಪೂರ್ಣವಾಗಿ ಕಾರ್ಯಗತಗೊಂಡಾಗ ಭಾರತೀಯ ಪದ್ಧತಿಯ ಸಮಗ್ರ ಶಿಕ್ಷಣವನ್ನು 25 ಸಾವಿರ ವಿದ್ಯಾರ್ಥಿಗಳು ಕಲಿಯಲು ಅವಕಾಶ ಮಾಡಿಕೊಡಲಾಗುತ್ತದೆ. ಈಗಾಗಲೇ 150 ಕೋಟಿ ರೂಪಾಯಿ ವೆಚ್ಚದಲ್ಲಿ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿ ಮಾಹಿತಿ ನೀಡಿದ್ದಾರೆ.
ಗುರುಕುಲ ಮಾದರಿಯ ಶಿಕ್ಷಣ
ಇನ್ನು ಕಳೆದ ಎರಡು ವರ್ಷದಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿದ ಮಕ್ಕಳ ಪೈಕಿ 450 ವಿದ್ಯಾರ್ಥಿಗಳಿಗಷ್ಟೆ ಅವಕಾಶ ಸಿಕ್ಕಿದೆ. ಆದರೆ ಈಗ ದಾಖಲಾಗಿರುವ ವಿದ್ಯಾರ್ಥಿಗಳಿಗಿಂತ ಎರಡು ಪಟ್ಟು ವಿದ್ಯಾರ್ಥಿಗಳು ಅವಕಾಶ ಸಿಗದೆ ವಾಪಸ್ಸ್ ಆಗಿದ್ದಾರೆ. ಅಂತವರಿಗೆ ಮುಂದಿನ ದಿನಗಳಲ್ಲಿ ಇದೇ ಪ್ರದೇಶದಲ್ಲಿ ಶಿಕ್ಷಣ ನೀಡಲು ಸಕಲ ವ್ಯವಸ್ಥೆ ಕಲ್ಪಿಸಲಾಗಿದೆ. ಇದರಿಂದ ದೇಶದ ಪರಂಪರೆಯನ್ನು ಈ ರಾಮಾಯಣ, ಮಹಾಭಾರತದ ಕಾಲದ ವಿದ್ಯೆಯ ಜೊತೆಗೆ ಕುದುರೆ ಸವಾರಿ ಸೇರಿದಂತೆ ಈ ಹಿಂದಿನ ಗುರುಕುಲ ಮಾದರಿಯ ಶಿಕ್ಷಣ ಪಡೆಯಲು ಸಾಧ್ಯವಾಗಿದೆ. ಸ್ವಾಮೀಜಿಯವರ ಮುಂದಾಲೋಚನೆಯಿಂದಾಗಿ ನಶಿಸಿಹೋಗುತ್ತಿದ್ದ ಶಿಕ್ಷಣವನ್ನು ಮರಳಿ ಪಡೆಯುವಂತಾಗಿದೆ ಎನ್ನುತ್ತಾರೆ ಸ್ಥಳೀಯರಾದ ರಮೇಶ್ ಪಂಡಿತ್.
ಪ್ರಕೃತಿ ವಿಕೋಪ ನಿವಾರಣೆಗೆ ಮಹಾಯಾಗ
ಇನ್ನು ಸ್ವಾಮೀಜಿಯವರ ಗುರುಕುಲ ಚಾತುರ್ಮಾಸ್ಯ ಅಂಗವಾಗಿ ಲೋಕಕಲ್ಯಾಣಾರ್ಥವಾಗಿ ಎರಡು ತಿಂಗಳಿಂದ ನಡೆಯುತ್ತಿರುವ ಸಹಸ್ರ ಚಂಡಿ ಮಹಾಯಾಗದ ಪೂರ್ಣಾಹುತಿ ಸೆಪ್ಟಂಬರ್ 9ರಂದು ಗೋಕರ್ಣದ ವಿಷ್ಣುಗುಪ್ತ ವಿಶ್ವವಿದ್ಯಾಪೀಠದಲ್ಲಿ ನಡೆಯಲಿದೆ. ಲೋಕಕಲ್ಯಾಣಾರ್ಥವಾಗಿ ಮತ್ತು ದೇಶಕ್ಕೆ ಹಾಗೂ ವಿಶ್ವಕ್ಕೆ ಎದುರಾಗಿರುವ ವಿಕೋಪ ನಿವಾರಣೆಗೆ ಸಂಕಲ್ಪಿಸಿ ಈ ಮಹಾಯಾಗ ನಡೆಯುತ್ತಿದ್ದು, ಚಾತುರ್ಮಾಸ್ಯ ಸೇವಾಸಮಿತಿ ಕಾರ್ಯಾಧ್ಯಕ್ಷರು ಮತ್ತು ಗೋಕರ್ಣ ಶ್ರೀ ಮಹಾಬಲೇಶ್ವರ ದೇವಸ್ಥಾನದ ಉಪಾಧಿವಂತ ಮಂಡಳಿಯ ಪ್ರಮುಖರಾದ ಪರಮೇಶ್ವರ ಮಾರ್ಕಾಂಡೇಯ, ವೇದಮೂರ್ತಿ ಅಮೃತೇಶ ಹಿರೇ ಭಟ್ ಅಧ್ವರ್ಯದಲ್ಲಿ ಮಹಾಯಾಗ ಜರಗುತ್ತಿದೆ.
ಚಾತುರ್ಮಾಸ್ಯ ವ್ರತ ಸಂಪನ್ನ
ಇದರೊಂದಿಗೆ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಯವರು ಆಷಾಢ ಹುಣ್ಣಿಮೆಯಂದು 29ನೇ ಚಾತುರ್ಮಾಸ್ಯವನ್ನು ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠದಲ್ಲಿ ಗುರುಕುಲ ಚಾತುರ್ಮಾಸ್ಯವಾಗಿ ಆರಂಭಿಸಿದ್ದು, ಇದು ಭಾದ್ರಪದ ಹುಣ್ಣಿಮೆಯಂದು ಸೆಪ್ಟೆಂಬರ್ 10ಕ್ಕೆ ಸಂಪನ್ನಗೊಳ್ಳಲಿದೆ. ಗಂಗಾವಳಿ ನದಿಯನ್ನು ದಾಟಿ ಬಳಿಕ ಶ್ರೀ ಮಲ್ಲಿಕಾರ್ಜುನ ದೇವರ ದರ್ಶನ ಪಡೆದು ಸೀಮೋಲ್ಲಂಘನ ಕೈಗೊಳ್ಳಲಿದ್ದಾರೆ. ಈ ಸೀಮೋಲ್ಲಂಘನದೊಂದಿಗೆ ಸ್ವಾಮೀಜಿಯವರ ಚಾತುರ್ಮಾಸ್ಯ ವ್ರತ ಸಂಪನ್ನಗೊಳ್ಳಲಿದೆ.
ಆಧುನಿಕತೆ ಭರಾಟೆಯಲ್ಲಿ ಮಾಯವಾಗುತ್ತಿದ್ದ ಗುರುಕುಲ ಶಿಕ್ಷಣಕ್ಕೆ ಒತ್ತು ನೀಡುವುದರ ಜೊತೆ ವಿಶ್ವ ವಿದ್ಯಾಲಯ ಪ್ರಾರಂಭವಾಗುತ್ತಿರುವುದು ನಿಜಕ್ಕೂ ಒಳ್ಳೆಯ ಬೆಳವಣಿಗೆ. ಮುಂದಿನ ದಿನಗಳಲ್ಲಿ ವಿದ್ಯಾಪೀಠದಲ್ಲಿ ಹೆಚ್ಚಿನ ಮಕ್ಕಳು ಕಲಿತು ದೇಶದ ಸಂಸ್ಕೃತಿ ಪರಂಪರೆ ಉಳಿಸಿ ಬೆಳೆಸುವ ಕಾರ್ಯವಾಗಬೇಕಿದೆ.