ಪಾಕ್ ಮಹಿಳೆ ಬಳಿ ಭಟ್ಕಳದ ಆಧಾರ್, ಹೈದರಾಬಾದ್ ವೋಟರ್ ಐಡಿ!
ಕಾರವಾರ, ಜುಲೈ 04; ಪಾಕಿಸ್ತಾನ ಮೂಲದ ಮಹಿಳೆ ಅಕ್ರಮವಾಗಿ ಭಟ್ಕಳ ತಾಲೂಕಿನಲ್ಲಿ ವಾಸವಿದ್ದ ಹಾಗೂ ಭಾರತೀಯ ಪೌರತ್ವ ಇಲ್ಲದೇ ದಾಖಲೆಗಳನ್ನು ಮಾಡಿಕೊಂಡಿದ್ದ ಪ್ರಕರಣದ ತನಿಖೆ ಚುರುಕುಗೊಂಡಿದೆ. ಈಕೆಗೆ ದಾಖಲೆಗಳನ್ನು ಮಾಡಿಕೊಟ್ಟವರ ಶೋಧ ಕಾರ್ಯಕ್ಕೆ ಇದೀಗ ಪೊಲೀಸರು ಮುಂದಾಗಿದ್ದಾರೆ.
2015ರಿಂದ ಅಕ್ರಮವಾಗಿ ಭಟ್ಕಳ ತಾಲೂಕಿನ ನವಾಯತ್ ಕಾಲೋನಿಯಲ್ಲಿ ನೆಲೆಸಿದ್ದ ಪಾಕಿಸ್ತಾನ ಮೂಲದ ಖತೀಜಾ ಮೆಹರಿನ್ (32) ಅನ್ನು ಪೊಲೀಸರು ಜೂನ್ 9ರಂದು ಬಂಧಿಸಿದ್ದರು. ಪಾಕಿಸ್ತಾನದ ಪೌರತ್ವ ಹೊಂದಿದ್ದ ಈಕೆ, ಕಳ್ಳ ಮಾರ್ಗದ ಮೂಲಕ ಭಟ್ಕಳಕ್ಕೆ ಕಳೆದ ಕೆಲ ವರ್ಷಗಳ ಹಿಂದೆಯೇ ಆಗಮಿಸಿ ವಾಸವಾಗಿದ್ದಳು ಎಂಬುದು ಆರೋಪ.
'ಭಟ್ಕಳ ಭಾರತದ ಮಿನಿ ಪಾಕಿಸ್ತಾನ'; ಕಿಡಿ ಹೊತ್ತಿಸಿದ ಟ್ವೀಟ್
ನವಾಯತ್ ಕಾಲೋನಿಯ ಜಾವೀದ್ ಮೊಹಿದ್ದೀನ್ ಎಂಬಾತನನ್ನು ದುಬೈನಲ್ಲಿ ವಿವಾಹವಾಗಿ, 2014ರಲ್ಲಿ 3 ತಿಂಗಳು ವಿಸಿಟಿಂಗ್ ವೀಸಾದ ಮೇಲೆ ಭಾರತಕ್ಕೆ ಬಂದು ಹಿಂತಿರುಗಿದ್ದಳು. ಪುನಃ 2016ರ ಪ್ರಾರಂಭದಲ್ಲಿ ಕಳ್ಳ ಮಾರ್ಗವಾಗಿ ಭಾರತಕ್ಕೆ ನುಸುಳಿ ಬಂದು ತನ್ನ ಗಂಡನ ಮನೆಯಾದ ನವಾಯತ ಕಾಲೋನಿಯಲ್ಲಿ ವಾಸವಾಗಿದ್ದಳು ಎನ್ನಲಾಗಿತ್ತು.
ನಾವಿಕರ ಹನಿ ಟ್ರ್ಯಾಪ್ ಕೇಸ್, ಪಾಕಿಸ್ತಾನಿ ಕೈ ಸೇರದ ಗೌಪ್ಯ ಮಾಹಿತಿ
ಆದರೆ, ಈಕೆ ಸುಳ್ಳು ದಾಖಲೆಗಳನ್ನು ಸ್ಥಳೀಯ ಸಂಸ್ಥೆಗಳಿಗೆ ನೀಡಿ ರೇಷನ್ ಕಾರ್ಡ್, ಜನನ ಪ್ರಮಾಣಪತ್ರ, ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಚುನಾವಣಾ ಗುರುತಿನ ಚೀಟಿಯನ್ನು ಪಡೆದುಕೊಂಡಿದ್ದಳು ಎಂಬುದು ಪೊಲೀಸ್ ದಾಳಿಯ ವೇಳೆ ತಿಳಿದುಬಂದಿತ್ತು. ಅವುಗಳ ಸಮೇತ ಆಕೆಯನ್ನು ವಶಕ್ಕೆ ಪಡೆದಿದ್ದ ಪೊಲೀಸರು, ವಿದೇಶಿ ಕಾಯ್ದೆ ಉಲ್ಲಂಘನೆ ಮತ್ತು ಇತರೆ ಐಪಿಸಿ ಪ್ರಕರಣಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೂ ಹಾಜರುಪಡಿಸಿದ್ದರು. ನಂತರದಲ್ಲಿ ನ್ಯಾಯಾಂಗ ಬಂಧನಕ್ಕೆ ನೀಡಲಾಗಿತ್ತು.
ಮಂಗಳೂರು; ಗಾಂಜಾ ಸಾಗಣೆ ಮಾಡುತ್ತಿದ್ದ ವೈದ್ಯೆಯ ಬಂಧನ
ಪ್ರಕರಣದಲ್ಲಿ ಭಾರತದ ಪೌರತ್ವ ಪಡೆಯದಿದ್ದರೂ ಹೇಗೆ ಭಾರತೀಯ ಪ್ರಮುಖ ದಾಖಲೆಗಳನ್ನು ಪಡೆದುಕೊಂಡಳು? ಎಂಬ ಬಗ್ಗೆ ತನಿಖೆಗೆ ಇಳಿದ ಪೊಲೀಸರಿಗೆ ಸಾಕಷ್ಟು ಅಚ್ಚರಿ ಮೂಡಿಸಿದೆ. ಮಹಿಳೆ ಬಳಿ ಇದ್ದ ಆಧಾರ್ ಕಾರ್ಡ್ನಲ್ಲಿ ಭಟ್ಕಳದ ವಿಳಾಸವಿದ್ದರೆ, ಚುನಾವಣಾ ಗುರುತಿನ ಚೀಟಿ ಹೈದರಾಬಾದ್ ವಿಳಾಸದಲ್ಲಿದೆ. ರೇಷನ್ ಕಾರ್ಡ್ ಬೆಂಗಳೂರು ವಿಳಾಸದ್ದಾಗಿದೆ.
ದಿಕ್ಕು ತಪ್ಪಿಸುವ ನಿಟ್ಟಿನಲ್ಲಿ ಬೇರೆ ಬೇರೆ ಕಡೆಗಳ ವಿಳಾಸ ನೀಡಿ ಈ ದಾಖಲೆಗಳನ್ನು ಮಾಡಿಕೊಳ್ಳಲಾಗಿದೆ ಎನ್ನಲಾಗಿದ್ದು, ಮೂರೂ ದಾಖಲೆಗಳನ್ನು ಪೌರತ್ವ ಇಲ್ಲದಿದ್ದರೆ ಹೇಗೆ ಮಾಡಿಕೊಡಲಾಯಿತು ಎಂಬ ಪ್ರಶ್ನೆ ಎಲ್ಲರಿಗೂ ಕಾಡತೊಡಗಿದೆ. ಹೀಗಾಗಿ ಇದರ ಹಿಂದೆ ವ್ಯವಸ್ಥಿತ ಜಾಲವೊಂದು ಕಾರ್ಯನಿರ್ವಹಿಸುತ್ತಿದೆಯೇ? ಎನ್ನುವ ಬಗ್ಗೆ ಪೊಲೀಸರು ತನಿಖೆಗೆ ಇಳಿದಿದ್ದಾರೆ. ಇನ್ನು ಮೂರೂ ದಾಖಲೆಗಳು ಬೇರೆ ಬೇರೆ ವಿಳಾಸದಲ್ಲಿ ಇರಲು ಕಾರಣವಾದರೂ ಏನು? ಎಂಬ ವಿಚಾರದ ಪತ್ತೆಗೆ ಕೂಡ ಪೊಲೀಸರು ಮುಂದಾಗಿದ್ದು, ಈಗಾಗಲೇ ತಾಲೂಕಿನ ಅನೇಕರನ್ನು ಈ ಸಂಬಂಧ ವಿಚಾರಣೆಗೆ ಒಳಪಡಿಸಲಾಗಿದೆ.
ಗಂಭೀರವಾಗಿ ಪರಿಗಣಿಸಿದ್ದೇವೆ: "ಪಾಕಿಸ್ತಾನಿ ಮಹಿಳೆಗೆ ದಾಖಲೆಗಳನ್ನು ಸೃಷ್ಟಿ ಮಾಡಿಕೊಟ್ಟ ಪ್ರಕರಣವನ್ನು ಇಲಾಖೆ ಗಂಭೀರವಾಗಿ ಪರಿಗಣಿಸಿದೆ" ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ತಿಳಿಸಿದ್ದಾರೆ.
"ದೇಶದ ಪೌರತ್ವ ಪಡೆಯದೇ ಅಕ್ರಮವಾಗಿ ಪಾಕಿಸ್ತಾನಿ ಮಹಿಳೆ ವಾಸವಿದ್ದ ಪ್ರಕರಣವನ್ನು ಜಿಲ್ಲಾ ಪೊಲೀಸರು ಬೇಧಿಸಿದ ನಂತರ ಮಹಿಳೆ ಬಳಿ ಇದ್ದ ದಾಖಲೆಗಳನ್ನು ಪರಿಶೀಲನೆ ನಡೆಸಿದಾಗ ಮೂರು ಕಡೆ ದಾಖಲೆಗಳನ್ನ ಮಾಡಿಕೊಂಡಿರುವುದು ತಿಳಿದು ಬಂದಿದೆ. ದಾಖಲೆಗಳನ್ನು ಸ್ಥಳೀಯವಾಗಿ ಮಾಡಿಕೊಟ್ಟವರು ಯಾರು? ಎನ್ನುವುದರ ಬಗ್ಗೆ ತನಿಖೆ ನಡೆದಿದ್ದು, ಇದೊಂದು ಕ್ರಿಮಿನಲ್ ಅಪರಾಧವಾಗಿದೆ" ಎಂದಿದ್ದಾರೆ.
"ದೇಶದ ಭದ್ರತೆ ನಿಟ್ಟಿನಲ್ಲಿ ಈ ಪ್ರಕರಣ ಸಾಕಷ್ಟು ಮಹತ್ವ ಪಡೆದುಕೊಂಡಿದ್ದು, ಈ ಹಿನ್ನಲೆಯಲ್ಲಿ ತನಿಖೆ ಚುರುಕುಗೊಳಿಸಲಾಗಿದೆ. ಶೀಘ್ರದಲ್ಲಿಯೇ ಅಕ್ರಮವಾಗಿ ದಾಖಲೆಗಳನ್ನು ಮಾಡಿಕೊಟ್ಟವರನ್ನು ವಶಕ್ಕೆ ಪಡೆಯಲಿದ್ದೇವೆ" ಎಂದು ತಿಳಿಸಿದ್ದಾರೆ.