ಅಂಕೋಲಾ ಹೆದ್ದಾರಿಯಲ್ಲಿ 700ಕ್ಕೂ ಹೆಚ್ಚು ಲಾರಿಗಳು ಸ್ತಬ್ಧ!
ಕಾರವಾರ, ಜುಲೈ 26: ಕಳೆದ ನಾಲ್ಕು ದಿನಗಳಿಂದ ರಾಷ್ಟ್ರೀಯ ಹೆದ್ದಾರಿ- 63ರ ಅಂಕೋಲಾ- ಹುಬ್ಬಳ್ಳಿ ಮಾರ್ಗದ ಅರಬೈಲ್ನಲ್ಲಿ ಹೆದ್ದಾರಿ ಕುಸಿತ ಮತ್ತು ಸುಂಕಸಾಳ ಹೆದ್ದಾರಿ ಸಂಪೂರ್ಣ ನೀರಿನಲ್ಲಿ ಮುಳುಗಡೆ ಆಗಿರುವುದರಿಂದ ಕರಾವಳಿ ಮತ್ತು ಬಯಲುಸೀಮೆ ಸಂಪರ್ಕ ಕಡಿತಗೊಂಡಿದೆ.
ಹೀಗಾಗಿ ಈ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ಸರಕು ಸಾಗಾಣಿಕೆಯ 700ಕ್ಕೂ ಹೆಚ್ಚು ಲಾರಿಗಳು ಅಂಕೋಲಾ ತಾಲೂಕಿನ ಬಾಳೇಗುಳಿಯಲ್ಲಿ ಸಾಲು ಸಾಲಾಗಿ ನಿಂತಿವೆ.
ಮಂಗಳೂರು, ಕೇರಳಗಳಿಂದ ಸರಕನ್ನು ತುಂಬಿಕೊಂಡು ಮಹಾರಾಷ್ಟ್ರ, ಆಂಧ್ರಪ್ರದೇಶ, ಗುಜರಾತ್, ಹುಬ್ಬಳ್ಳಿ ಮತ್ತು ಬೆಳಗಾವಿ ಭಾಗಗಳಿಗೆ ಸಾಗುವ ಲಾರಿಗಳು ಕಳೆದ ಮೂರು ದಿನದಿಂದ ಹಟ್ಟಿಕೇರಿಯ ಐಆರ್ಬಿ ಟೋಲ್ಗೇಟ್ನಿಂದ ಅಂಕೋಲಾ ಅಜ್ಜಿಕಟ್ಟಾದವರೆಗೆ ಸುಮಾರು 10 ಕಿ.ಮೀ ಹೆದ್ದಾರಿಯ ಎರಡು ಬದಿಯಲ್ಲಿ ಲಂಗರು ಹಾಕಿವೆ.
ಈ ಹೆದ್ದಾರಿ ತಕ್ಷಣ ಆರಂಭವಾಗದಿದ್ದರೆ ವಾಣಿಜ್ಯೋದ್ಯಮದ ಮೇಲೆ ಭಾರಿ ಪರಿಣಾಮ ಬೀರಲಿದೆ. ಮಂಗಳೂರು ಬಂದರಿನಿಂದ ಅನಿಲ ತುಂಬಿದ ಟ್ಯಾಂಕರ್ಗಳು ಈ ಹೆದ್ದಾರಿ ಮೂಲಕವೇ ಸಾಗಬೇಕು. ಇದನ್ನು ಬಿಟ್ಟರೆ ಬೇರಾವ ದಾರಿ ಇಲ್ಲ. ಇಂತಹ ಅನೀಲ ತುಂಬಿದ ನೂರಾರು ಟ್ಯಾಂಕರ್ ಇಲ್ಲಿ ಸಿಲುಕಿಕೊಂಡಿದೆ. ಇತರ ವಸ್ತುಗಳ ಲಾರಿಗಳು ಸಿಲುಕಿಕೊಡಿವೆ. ಮುಂದಿನ ಒಂದು ವಾರವಾದರೂ ಈ ಹೆದ್ದಾರಿ ಆರಂಭವಾಗುವುದು ಕಷ್ಟಸಾಧ್ಯ ಎಂದು ರಾಷ್ಟ್ರೀಯ ಹೆದ್ದಾರಿ ಇಲಾಖೆ ಅಧಿಕಾರಿಗಳು ಹೇಳುತ್ತಿದ್ದಾರೆ.
Recommended Video
"ಇಲ್ಲಿ ನಿಲ್ಲಿಸಿಟ್ಟ ಲಾರಿಯ ಚಾಲಕ ಮತ್ತು ಕ್ಲೀನರ್ಗಳು ಲಾರಿಯಲ್ಲಿಯೇ ಅಡುಗೆ ತಯಾರಿಸಿಕೊಂಡು ಊಟ ಮಾಡುತ್ತಿದ್ದರೆ, ಇನ್ನೂ ಕೆಲವರು ಹೋಟೆಲ್ಗಳಲ್ಲಿ ಊಟ ಮಾಡುತ್ತಿದ್ದಾರೆ. ಮೂರು ದಿನಗಳಿಂದ ಲಾರಿ ನಿಲ್ಲಿಸಿಕೊಂಡು ಹೆದ್ದಾರಿ ಮೇಲೆ ವಾಸ್ತವ್ಯ ಮಾಡಿರುವುದರಿಂದ ಒಂದೆರಡು ದಿನಕ್ಕೆ ಆಗುವಷ್ಟು ತಂದಿರುವ ಅಕ್ಕಿ- ಬೇಳೆ ಮತ್ತು ಕೈಯಲ್ಲಿರುವ ಹಣವೂ ಖಾಲಿ ಆಗಿದೆ. ನಾವು ಉಪವಾಸ ಉಳಿಯುವ ಸ್ಥಿತಿ ಬಂದೊದಗಿದೆ,'' ಎಂದು ಲಾರಿ ಚಾಲಕರು ಹೇಳಿಕೊಳ್ಳುತ್ತಿದ್ದಾರೆ.