ವಿರೋಧ ಲೆಕ್ಕಿಸದ ಭಟ್ಕಳ ಆಡಳಿತ; ಕೋವಿಡ್ ನಡುವೆ ಅಮ್ಯೂಸ್ಮೆಂಟ್ ಪಾರ್ಕ್ ಗೆ ಪರವಾನಗಿ
ಕಾರವಾರ, ನವೆಂಬರ್ 27: ಭಟ್ಕಳದ ಪುರಸಭೆ ವ್ಯಾಪ್ತಿಯಲ್ಲಿ ಕೋವಿಡ್ ಕಾರಣದಿಂದ ಅಮ್ಯೂಸ್ಮೆಂಟ್ ಪಾರ್ಕ್ (ಮಕ್ಕಳಿಗಾಗಿ ಆಟಿಕೆ ವಸ್ತುಗಳ ಪ್ರದರ್ಶನ ಮೇಳ) ತೆರೆಯಲು ಅವಕಾಶ ನೀಡಬಾರದೆಂದು ಪುರಸಭೆ ವಾರ್ಡ್ ಸದಸ್ಯರು, ಸ್ಥಳೀಯರು ಮನವಿ ಮಾಡಿದ್ದರೂ ತಾಲೂಕಾಡಳಿತ ಪರವಾನಗಿ ನೀಡಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಪುರಸಭೆಯ ವಾರ್ಡ್ ನಂ.6ರ ವ್ಯಾಪ್ತಿಯಲ್ಲಿನ ರಾಷ್ಟ್ರೀಯ ಹೆದ್ದಾರಿ 66 ಮತ್ತು ಜೈನ್ ಲಾಡ್ಜ್ ಪಕ್ಕದಲ್ಲಿನ ಮೈದಾನದಲ್ಲಿ ಅಮ್ಯೂಸ್ಮೆಂಟ್ ಪಾರ್ಕ್ ನಿರ್ಮಾಣ ಮಾಡಲಾಗಿದ್ದು, ಕಳೆದ 15 ದಿನದಿಂದ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಇವೆಲ್ಲವನ್ನು ಗಮನಿಸಿದ ಪರಸಭೆಯ ಸದಸ್ಯರು ಉಪವಿಭಾಗಾಧಿಕಾರಿಗೆ ಪಾರ್ಕ್ ನಡೆಸಲು ಪರವಾನಗಿ ನೀಡದಂತೆ ತಕರಾರು ಅರ್ಜಿ ಸಲ್ಲಿಸಿದ್ದರು.
ಮದುವೆಗೆ 200ಕ್ಕೂ ಹೆಚ್ಚು ಮಂದಿ ಸೇರುವಂತಿಲ್ಲ
ಆದರೆ, ತಾಲೂಕಾಡಳಿತ ಏಕಪಕ್ಷೀಯವಾಗಿ ನಿರ್ಧಾರ ಕೈಗೊಂಡಿದ್ದು, ಇದಕ್ಕೆ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೊರೊನಾ ಪ್ರಕರಣ ಸದ್ಯ ಮೇಲ್ನೋಟಕ್ಕೆ ಇಳಿಕೆಯಲ್ಲಿದ್ದರೂ ಜಾಗೃತೆ ವಹಿಸಬೇಕಾಗಿದೆ. ಇದೇ ಕಾರಣಕ್ಕೆ ಶಾಲೆಗಳನ್ನು ತೆರೆಯಲು ಕೂಡ ಸರ್ಕಾರ ಈವರೆಗೆ ಅವಕಾಶ ನೀಡಿಲ್ಲ. ಆದರೆ ಪಟ್ಟಣದಲ್ಲಿ ಮಾತ್ರ ಮಕ್ಕಳ ಮನರಂಜನೆಗಾಗಿ ಅಮ್ಯೂಸ್ಮೆಂಟ್ ಪಾರ್ಕ್ ತೆರೆಯಲು ತಾಲೂಕಾಡಳಿತ ಅವಕಾಶ ನೀಡಿ ಪೇಚಿಗೆ ಸಿಲುಕಿದೆ.
ಪರವಾನಗಿ ಪತ್ರದಲ್ಲಿ ಕೋವಿಡ್ ನಿಯಂತ್ರಣಕ್ಕೆ ಸರ್ಕಾರದ ಕಟ್ಟುನಿಟ್ಟಿನ ಮಾರ್ಗಸೂಚಿಯ್ವನಯ ಜನರು ಬಂದು ತೆರಳುವಂತೆ ಸೂಚನೆ ನೀಡಿದ್ದಾರೆಂಬ ಮಾಹಿತಿಯಿದೆ. ಆದರೆ ಅಮ್ಯೂಸ್ಮೆಂಟ್ ಪಾರ್ಕ್ ನಿರ್ಮಾಣಗೊಂಡಿರುವುದು ಮಕ್ಕಳ ಮನರಂಜನೆಗಾಗಿದ್ದು, ಅದೆಷ್ಟರ ಮಟ್ಟಿಗೆ ಪಾಲಕರು ತಮ್ಮ ಮಕ್ಕಳನ್ನು ಕರೆದುಕೊಂಡು ಬಂದು ತೆರಳಲು ಸಾಧ್ಯ ಎಂಬ ಪ್ರಶ್ನೆ ಎದುರಾಗಿದೆ. ಅಮ್ಯೂಸ್ಮೆಂಟ್ ಪಾರ್ಕ್ಗೆ ಭೇಟಿ ನೀಡುವುದೋ, ಬಿಡುವುದೋ ಎಂಬ ತೀರ್ಮಾನ ಸಾರ್ವಜನಿಕರಿಗೇ ಬಿಟ್ಟಿದ್ದಾದರೂ, ಈಗ ಪರವಾನಗಿ ನೀಡಿ ಪ್ರಾರಂಭಿಸಿದ ಬಳಿಕ ಸಹಜವಾಗಿಯೇ ಜನರು ಅದಕ್ಕೆ ಆಕರ್ಷಿತರಾಗಲಿದ್ದಾರೆ.
ಮನೆಗೆ ಹೋಗಿ ಸಂಚಾರಿ ಪೊಲೀಸರು ಸಂಗ್ರಹಿಸಿದ್ದು 18 ಕೋಟಿ ದಂಡ!
ಅಲ್ಲದೇ, ಈ ಪಾರ್ಕ್ ಹೆಚ್ಚಿನದಾಗಿ ಮಕ್ಕಳಿಗಾಗಿಯೇ ಸಿದ್ಧವಾಗುತ್ತಿರುವುದರಿಂದ, ಶಾಲೆಗಳಿಲ್ಲದೇ ಮನೆಯಲ್ಲೇ ಮಂಕಾಗಿ ಕೂತಿರುವ ಮಕ್ಕಳು ಹಟ ಹಿಡಿದು ಪಾರ್ಕ್ ಗೆ ತೆರಳಲಿದ್ದಾರೆ. ಪಾರ್ಕ್ ನಲ್ಲಿ ಉಂಟಾಗುವ ಜನಜಂಗುಳಿಯಲ್ಲಿ ಮಾಸ್ಕ್ ಧರಿಸುವಿಕೆ, ಸಾಮಾಜಿಕ ಅಂತರ ಸೇರಿದಂತೆ ಕೋವಿಡ್ ನಿಯಮಗಳು ಪಾಲನೆ ಸಾಧ್ಯವೇ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.
ನನ್ನ ವಾರ್ಡ್ ನಲ್ಲಿ ಅಮ್ಯೂಸ್ಮೆಂಟ್ ಪಾರ್ಕ್ ನಿರ್ಮಾಣ ಆಗಿದೆ. ಜನಜಂಗುಳಿಯಿಂದ ಕೂಡಿರುವ ಈ ಪಾರ್ಕ್ ನಲ್ಲಿ ಮಕ್ಕಳು ಕೇಂದ್ರ ಬಿಂದುವಾಗಿದ್ದಾರೆ. ಕೋವಿಡ್ ನ ಮಾರ್ಗಸೂಚಿ ಅದೆಷ್ಟರ ಮಟ್ಟಿಗೆ ಇಲ್ಲಿ ಪಾಲನೆ ಆಗಲಿದೆ? ಮಕ್ಕಳ ಆರೋಗ್ಯ ಜವಾಬ್ದಾರಿ ಕಾಪಾಡಲು ಸಾಧ್ಯವೇ ಎಂಬ ಅಂಶದ ಮೇಲೆ ಪರವಾನಗಿ ನೀಡಬಾರದೆಂದು ಮನವಿ ಮಾಡಿದ್ದೇನೆ. ಈ ಪಾರ್ಕ್ ನಡೆಸಲು ಸಾರ್ವಜನಿಕರ ಹಿತದೃಷ್ಟಿಯಿಂದ ನನ್ನ ತೀವ್ರ ವಿರೋಧವಿದೆ ಎಂದು ಹೇಳಿದ್ದಾರೆ ಪುರಸಭೆ ವಾರ್ಡ್ ನಂ.6ರ ಸದಸ್ಯ ಮೊಹಿದ್ದೀನ್ ಅಲ್ತಾಫ್ ಖರೂರಿ.