ಜಾಕೆಟ್ ಧರಿಸಿದವರಿಗೆ ಮಾತ್ರ ದರ್ಶನ ಭಾಗ್ಯ; ನಡುಗಡ್ಡೆಗೆ ದೋಣಿಯಲ್ಲಿ ಪ್ರಯಾಣಿಸಿದ ಭಕ್ತರು
ಕಾರವಾರ, ಜನವರಿ 10: ತಾಲೂಕಿನ ಕೂರ್ಮಗಡ ನಡುಗಡ್ಡೆಯ ಪ್ರಸಿದ್ಧ ನರಸಿಂಹ ಸ್ವಾಮಿ ಜಾತ್ರಾ ಮಹೋತ್ಸವ ಶುಕ್ರವಾರ ಭದ್ರತೆಯ ನಡುವೆ ನಡೆಯಿತು. ವಿವಿಧ ಭಾಗಗಳಿಂದ ಆಗಮಿಸಿದ್ದ ಭಕ್ತರು ದೋಣಿಗಳಲ್ಲಿ ನಡುಗಡ್ಡೆಗೆ ತೆರಳಿ ದೇವರ ದರ್ಶನ ಪಡೆದರು.
ಕಳೆದ ಬಾರಿ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ವಾಪಸ್ ಆಗುತ್ತಿದ್ದ ದೋಣಿ ಮುಗುಚಿ 16 ಜನರು ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಈ ಬಾರಿ ಬಿಗಿ ಬಂದೋಬಸ್ತ್ ನಡುವೆ ಜಾತ್ರೆಯನ್ನು ಆಯೋಜನೆ ಮಾಡಲಾಗಿತ್ತು.
ಲೈಫ್ ಜಾಕೆಟ್ ಇದ್ದವರಿಗೆ ಮಾತ್ರ ಅವಕಾಶ
ಜಾತ್ರೆಗೆ ತೆರಳಲು ಬೈತಖೋಲ್ ಮೀನುಗಾರಿಕಾ ಬಂದರು, ಮಾಜಾಳಿ ಹಾಗೂ ದೇವಭಾಗ್ ಜಂಗಲ್ ರೆಸಾರ್ಟ್ ಜಟ್ಟಿಯಿಂದ ಮಾತ್ರ ತೆರಳಲು ಅವಕಾಶ ಮಾಡಿಕೊಡಲಾಗಿತ್ತು. ಅಲ್ಲದೇ ಲೈಫ್ ಜಾಕೆಟ್ ಇದ್ದವರಿಗೆ ಮಾತ್ರ ಬೋಟ್ಗಳಲ್ಲಿ ತೆರಳುವಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿತ್ತು. ಶುಕ್ರವಾರ ಬೆಳಿಗ್ಗೆಯೇ ದೋಣಿ, ಬೋಟ್ಗಳು ತೆರಳುವ ಸ್ಥಳದಲ್ಲಿ ಪೊಲೀಸ್, ಕಂದಾಯ ಹಾಗೂ ಮೀನುಗಾರಿಕಾ ಇಲಾಖೆ ಸಿಬ್ಬಂದಿ ಮೊಕ್ಕಾಂ ಹೂಡಿದ್ದರು. ಪ್ರತಿಯೊಬ್ಬರಿಗೂ ಲೈಫ್ ಜಾಕೆಟ್ ಹಾಕಿಸಿ ಅನುಮತಿ ಇದ್ದ ಬೋಟ್ಗಳಲ್ಲಿ ಮಾತ್ರ ತೆರಳಲು ಅವಕಾಶ ಮಾಡಿಕೊಟ್ಟರು. ಲೈಫ್ ಜಾಕೆಟ್ ಇಲ್ಲದವರಿಗೆ ಅವಕಾಶ ಮಾಡಿಕೊಡಲಿಲ್ಲ.
ಮತ್ತೆ ಬಂತು ‘ಕೂರ್ಮಗಡ ಜಾತ್ರೆ'; ಬಿಡದೇ ಕಾಡುವ ದೋಣಿ ದುರಂತದ ಕರಾಳ ನೆನಪು
ಹರಕೆ ಈಡೇರಿಸಲು ಕುಟುಂಬ ಸಮೇತ ಹೋಗುವ ಜನ
ಕೂರ್ಮಗಡ ನರಸಿಂಹ ಸ್ವಾಮಿ ಮೀನುಗಾರರ ಆರಾಧ್ಯ ದೈವ ಎಂದೇ ಪ್ರಸಿದ್ಧಿ. ಪ್ರತಿ ವರ್ಷ ಮೀನುಗಾರರು ತಮ್ಮ ಹರಕೆಯನ್ನು ಈಡೇರಿಸಲು ಕುಟುಂಬ ಸಮೇತ ಜಾತ್ರೆಗೆ ಬೋಟ್ಗಳನ್ನು ತೆಗೆದುಕೊಂಡು ಹೋಗುತ್ತಾರೆ. ತಮ್ಮ ಬೋಟ್ಗಳಲ್ಲಿ ತೆರಳುವ ಜನರಿಂದ ಹಣ ಪಡೆಯುವುದಿಲ್ಲ. ಈ ಬಾರಿ ಲೈಫ್ ಜಾಕೆಟ್ ನಿಗದಿತ ಪ್ರಮಾಣದಲ್ಲಿ ಇಲ್ಲದ ಪರಿಣಾಮ ಮೀನುಗಾರರು ಎಲ್ಲಾ ಜನರನ್ನು ಕರೆದುಕೊಂಡು ಹೋಗಲು ಆಗದೇ ಪರದಾಡಿದರು. ಕೊನೆಗೆ ಅಧಿಕಾರಿಗಳ ಅನುಮತಿ ಪಡೆದು, ಈಜು ಬರುವ ಮೀನುಗಾರರು ತಾವು ಲೈಫ್ ಜಾಕೆಟ್ ಹಾಕಿಕೊಳ್ಳದೇ ಬೋಟ್ ಏರಿ ಬರುವ ಇತರರಿಗೆ ಲೈಫ್ ಜಾಕೆಟ್ ನೀಡಿ ಕರೆದುಕೊಂಡು ಹೋದರು.
ಜಾತ್ರೆಗೆ ಬರುವವರ ಸಂಖ್ಯೆಯಲ್ಲಿ ಇಳಿಕೆ
ಸಮುದ್ರದ ಮಧ್ಯದಲ್ಲಿ, ಕೂರ್ಮಗಡ ಜಟ್ಟಿಯ ಬಳಿ ಯಾವುದೇ ಅವಘಡ ಆಗದಂತೆ ಕರಾವಳಿ ಕಾವಲು ಪಡೆಯ ಮೂರು ಬೋಟ್ಗಳು ಗಸ್ತು ತಿರುಗುತ್ತಿದ್ದು, ಪೊಲೀಸರೇ ಪ್ರತಿ ದೋಣಿ, ಬೋಟ್ಗಳಿಂದ ಜನರನ್ನು ಇಳಿಸಿಕೊಂಡು ಯಾವುದೇ ಅವಘಡ ಆಗದಂತೆ ದೇವರ ದರ್ಶನಕ್ಕೆ ತೆರಳಲು ಅವಕಾಶ ಮಾಡಿಕೊಟ್ಟರು. ಈ ಬಾರಿ ಎಲ್ಲಾ ಬೋಟ್ಗಳಿಗೆ ಜಾತ್ರೆಗೆ ಹೋಗಲು ಅವಕಾಶ ಕೊಡದ ಪರಿಣಾಮ, ಜೊತೆಗೆ ಕಳೆದ ಬಾರಿ ನಡೆದ ದುರ್ಘಟನೆಯ ಭಯ ಜನರಲ್ಲಿ ಕಾಡುತ್ತಿದ್ದರಿಂದ ಜಾತ್ರೆಗೆ ಆಗಮಿಸುವ ಜನರ ಸಂಖ್ಯೆ ಸಂಪೂರ್ಣ ಕಡಿಮೆಯಾಗಿತ್ತು. ಇದೇ ಪ್ರಥಮ ಬಾರಿಗೆ ಇಷ್ಟೊಂದು ಕಡಿಮೆ ಸಂಖ್ಯೆಯಲ್ಲಿ ಜನರು ಜಾತ್ರೆಗೆ ಆಗಮಿಸಿರುವುದು ಎಂದು ಮೀನುಗಾರರು ಬೇಸರ ವ್ಯಕ್ತಪಡಿಸಿದರು.
ಕಾರವಾರ ದೋಣಿ ದುರಂತ : ಸಾವಿನ ಸಂಖ್ಯೆ 13ಕ್ಕೆ ಏರಿಕೆ
ದೇವರ ದರ್ಶನ ಪಡೆದ ಶಾಸಕಿ
ಕೂರ್ಮಗಡ ನರಸಿಂಹ ಸ್ವಾಮಿ ಜಾತ್ರೆಗೆ ಕಾರವಾರ- ಅಂಕೋಲಾ ಕ್ಷೇತ್ರದ ಶಾಸಕಿ ರೂಪಾಲಿ ನಾಯ್ಕ ಆಗಮಿಸಿ ದರ್ಶನ ಪಡೆದರು. ಕೋಡಿಭಾಗದಿಂದ ದೇವರನ್ನು ದೋಣಿಯಲ್ಲಿ ನಡುಗಡ್ಡೆಗೆ ತರುವ ಮುಂಚಿತವಾಗಿಯೇ ಶಾಸಕಿ ತೆರಳಿದ್ದರು. ದೇವರು ಆಗಮಿಸುತ್ತಿದಂತೆ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದರು. ಇದಕ್ಕೂ ಮೊದಲು ಶಾಸಕರು ಜಿಲ್ಲಾಡಳಿತ ಜಾತ್ರೆಗೆ ತೆರಳುವ ಭಕ್ತರ ಸುರಕ್ಷತೆಗೆ ಕೈಗೊಂಡ ಕ್ರಮದ ಬಗ್ಗೆ ಜಟ್ಟಿಯಲ್ಲಿ ಅಧಿಕಾರಿಗಳಿಂದ ಮಾಹಿತಿ ಪಡೆದರು. ಜೊತೆಗೆ ಎಲ್ಲರಿಗೂ ಲೈಫ್ ಜಾಕೆಟ್ ಹಾಕಿಕೊಂಡು ಸುರಕ್ಷಿತವಾಗಿ ತೆರಳಿ ಎಂದು ಮನವಿ ಮಾಡಿದರು.