ಸಿದ್ದಾಪುರದಲ್ಲಿ ಮಂಗನ ಕಾಯಿಲೆಗೆ ಒಬ್ಬರು ಬಲಿ; ಜನರಲ್ಲಿ ಆತಂಕ
ಸಿದ್ದಾಪುರ, ಫೆಬ್ರವರಿ 29: ಕಳೆದ ವರ್ಷ ರಾಜ್ಯದಲ್ಲಿ ಮರಣ ಮೃದಂಗ ಬಾರಿಸಿದ್ದ ಮಂಗನಕಾಯಿಲೆ ಈ ವರ್ಷ ಕೂಡ ನಿಧಾನವಾಗಿ ಆವರಿಸುತ್ತಿದ್ದು, ಈ ಕಾಯಿಲೆಗೆ ಜಿಲ್ಲೆಯ ಒಬ್ಬರು ಬಲಿಯಾಗಿದ್ದಾರೆ.
ಸಿದ್ದಾಪುರದ ಕ್ಯಾದಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಮಂಗನಕಾಯಿಲೆ ಕಂಡುಬಂದಿದ್ದು, ಕಾಯಿಲೆಗೆ ಗಿಳಸೆ ಗ್ರಾಮ ವ್ಯಾಪ್ತಿಯ ಸಮೀಪದ ಹಳ್ಳಿಯ ಅಂದಾಜು 64 ವರ್ಷ ಪ್ರಾಯದ ವ್ಯಕ್ತಿಯೋರ್ವರು ನಿನ್ನೆ ರಾತ್ರಿ ಸಾವನ್ನಪ್ಪಿದ್ದಾರೆ. ಕಳೆದ ಕೆಲವು ದಿನಗಳಿಂದ ತಾಲೂಕಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರಿಗೆ ರೋಗ ಉಲ್ಬಣವಾಗಿ ಶಿವಮೊಗ್ಗದ ನಂಜಪ್ಪ ಆಸ್ಪತ್ರೆಗೆ ಒಯ್ಯಲಾಗಿತ್ತು. ಆದರೆ ಅಲ್ಲಿಯೂ ಚಿಕಿತ್ಸೆಗೆ ಸ್ಪಂದಿಸದ ಕಾರಣ ಮಣಿಪಾಲ ಆಸ್ಪತ್ರೆಗೆ ಕೊಂಡೊಯ್ಯುವಾಗ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ. ಅವರಿಗೆ ಮಂಗನಕಾಯಿಲೆ ಇರುವುದನ್ನ ಆರೋಗ್ಯ ಇಲಾಖೆ ಮೂಲಗಳು ಖಚಿತಪಡಿಸಿವೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಮೂವರಿಗೆ ಮಂಗನ ಕಾಯಿಲೆ ಸೋಂಕು
ಇದೇ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಸತತ 3 ಬಾರಿ ಲಸಿಕೆ ತೆಗೆದುಕೊಂಡ ಮಹಿಳೆಯೊಬ್ಬರಲ್ಲಿ ಕೂಡ ಮಂಗನಕಾಯಿಲೆ ಕಾಣಿಸಿಕೊಂಡಿದ್ದು, ಅವರೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಲಸಿಕೆ ಪಡೆದರೂ ಮಂಗನಕಾಯಿಲೆ ಉಲ್ಬಣಿಸುತ್ತಿದ್ದು, ಸರ್ಕಾರ ಈ ಕುರಿತು ಗಮನಹರಿಸಿ ರೋಗ ಉಲ್ಬಣವಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಈ ಕುರಿತು ಸ್ಪಷ್ಟನೆ ನೀಡಿರುವ ಜಿಲ್ಲಾಧಿಕಾರಿ ಡಾ.ಹರೀಶ್ ಕುಮಾರ್, "ಮೃತಪಟ್ಟ ವ್ಯಕ್ತಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ಮಂಗನ ಕಾಯಿಲೆ ಇರುವ ಕುರಿತು ಇಲಾಖೆಯಿಂದ ವರದಿ ಪಡೆಯಲಾಗುವುದು. ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿ ಪರಿಹಾರ ನೀಡುವ ನಿರ್ಧಾರ ಕೈಗೊಳ್ಳಲಾಗುವುದು. ಮಂಗನ ಕಾಯಿಲೆ ಬಗ್ಗೆ ಈಗಾಗಲೇ ಆರೋಗ್ಯ ಇಲಾಖೆ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ದಯವಿಟ್ಟು ಸಾರ್ವಜನಿಕರು ಲಸಿಕೆ ತೆಗೆದುಕೊಳ್ಳಬೇಕು" ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.