ಕಾರವಾರದಲ್ಲೂ ಮಳೆಯೋ ಮಳೆ; ಮುಂಜಾಗ್ರತಾ ಕ್ರಮ ವಹಿಸದ ಅಧಿಕಾರಿ ವಜಾ
ಕಾರವಾರ, ಜುಲೈ 23: ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಭಾರಿ ಮಳೆ ಸುರಿಯುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ಐದು ತಾಲೂಕುಗಳ ಅಂಗನವಾಡಿ ಹಾಗೂ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ ತಾಲೂಕುಗಳ ಅಂಗನವಾಡಿ ಹಾಗೂ ಶಾಲೆಗಳಿಗೆ ಇಂದು ಒಂದು ದಿನ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಭಟ್ಕಳದಲ್ಲಿ ಕಾಲೇಜುಗಳಿಗೂ ರಜೆ ಘೋಷಿಸಿ ಉಪವಿಭಾಗಾಧಿಕಾರಿ ಆದೇಶಿಸಿದ್ದಾರೆ. ಇನ್ನುಳಿದಂತೆ ಆಯಾ ತಾಲೂಕುಗಳ ತಹಶೀಲ್ದಾರರಿಗೆ ಸಂದರ್ಭಕ್ಕಾನುಸಾರವಾಗಿ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.
ಕರಾವಳಿಯಲ್ಲಿ ಮುಂದುವರಿದಿದೆ ಮಳೆ; ಗುಡ್ಡ ಕುಸಿದು 2 ಮನೆ ಜಖಂ
ಮೂವರಿಗೆ ನೋಟಿಸ್: ಮಳೆಯಿಂದಾಗಿ ಹಾನಿಯಾಗುವ ಪ್ರದೇಶಗಳ ಮೇಲೆ ನಿಗಾ, ಸ್ವಚ್ಛತೆ ಸೇರಿದಂತೆ ತುರ್ತು ಕ್ರಮ ಕೈಗೊಳ್ಳಬೇಕಾದ ಜವಾಬ್ದಾರಿ ನೀಡಿ, ಕೇಂದ್ರ ಸ್ಥಾನ ತೊರೆಯದಂತೆ ಆದೇಶಿಸಿದ್ದರೂ ಕರ್ತವ್ಯಲೋಪ ಎಸಗಿದ ಮೂವರು ಅಧಿಕಾರಿಗಳಿಗೆ ನೋಟೀಸ್ ಜಾರಿ ಮಾಡಿ, ಓರ್ವರನ್ನು ಕರ್ತವ್ಯದಿಂದ ವಜಾಗೊಳಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಹೊನ್ನಾವರ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಚ್.ವೈ.ಮಣ್ಣವಡ್ಡರ ಅವರನ್ನು ಕರ್ತವ್ಯಲೋಪ ಎಸಗಿದ ಹಿನ್ನೆಲೆಯಲ್ಲಿ ವಜಾಗೊಳಿಸಿದ್ದು, ಭಟ್ಕಳ, ಕುಮಟಾ ಹಾಗೂ ಅಂಕೋಲಾ ಪುರಸಭೆ ಮುಖ್ಯಾಧಿಕಾರಿಗಳಾದ ಡಿ.ದೇವರಾಜ, ಸುರೇಶ ಎಂ.ಕೆ ಹಾಗೂ ಬಿ.ಪ್ರಹ್ಲಾದ ಎಂಬುವರಿಗೆ ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ್ ಕಾರಣ ಕೇಳಿ ನೋಟೀಸ್ ಜಾರಿ ಮಾಡಿದ್ದಾರೆ.