ನವೆಂಬರ್ 24 ಕ್ಕೆ ಕಾರವಾರ ಬಂದ್ಗೆ ವಾಟಾಳ್ ನಾಗರಾಜ್ ಕರೆ
ಬೆಂಗಳೂರು, ನವೆಂಬರ್ 16: ಇದೇ ತಿಂಗಳ 24ಕ್ಕೆ ಕಾರವಾರ ಬಂದ್ ಮಾಡಲಾಗುವುದು ಎಂದು ಕನ್ನಡ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಕರೆ ನೀಡಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಗಡಿ ಕಾರವಾರವನ್ನು ಸರ್ಕಾರಗಳು ಸಂಪೂರ್ಣವಾಗಿ ನಿರ್ಲಕ್ಷಿಸಿವೆ, ಈ ನಿರ್ಲಕ್ಷಕ್ಕೆ ವಿರುದ್ಧವಾಗಿ ನವೆಂಬರ್ 24ರಂದು ಕಾರವಾರ ಬಂದ್ ಆಚರಿಸಲಾಗುವುದು ಎಂದು ಅವರು ಹೇಳಿದರು.
ರಾಜ್ಯದ ಗಡಿಭಾಗಗಳು ಸರ್ಕಾರದ ಗಮನ ಇಲ್ಲದೆ ಅನಾಥವಾಗಿವೆ. ಯಾವ ಸರ್ಕಾರಕ್ಕೂ ಗಡಿ ಜಿಲ್ಲೆಗಳ ಬಗ್ಗೆ ಕಾಳಜಿಯೇ ಇಲ್ಲ ಎಂದು ವಾಟಾಳ್ ನಾಗರಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸೀಬರ್ಡ್ಗೆ ಕಾರವಾರದಲ್ಲಿ ಅವಕಾಶ ನೀಡಲಾಯಿತು. ಆದರೆ ಅಲ್ಲಿನ ಜನರಿಗೆ ಪರಿಹಾರವಾಗಲಿ, ಉದ್ಯೋಗವಾಗಲೀ ಕೊಡಲಿಲ್ಲ. ಸೀಬರ್ಡ್ನಲ್ಲಿ ಕೆಲಸ ಮಾಡುವವರು ಯಾರೂ ಕರ್ನಾಟಕದವರಲ್ಲ. ಅಲ್ಲಿರುವ ಪರಭಾಷಿಗರನ್ನು ಅವರವರ ರಾಜ್ಯಕ್ಕೆ ಕಳುಹಿಸಬೇಕು, ಕರ್ನಾಟಕದವರಿಗೆ ಅಲ್ಲಿ ಅವಕಾಶ ನೀಡಬೇಕು ಎಂದು ಅವರು ಆಗ್ರಹಿಸಿದರು.
ಉತ್ತರ ಕನ್ನಡ ಜಿಲ್ಲೆಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು ಜೊತೆಗೆ ಎರಡು ಮಂತ್ರಿ ಸ್ಥಾನವನ್ನು ನೀಡಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸಹಾಯ ಮಾಡಬೇಕು ಎಂದು ವಾಟಾಳ್ ಒತ್ತಾಯಿಸಿದರು.ಸ
ನವೆಂಬರ್ 10 ರಿಂದ ಬೆಳಗಾವಿ ಅಧಿವೇಶನ ಆರಂಭವಾಗುತ್ತಿದ್ದು, ಇದು ಕೇವಲ ಟೂರ್ ಅಧಿವೇಶನದಂತಾಗಿದೆ. ಯಾವುದೇ ಮಹತ್ವದ ಚರ್ಚೆಗಳು ಆಗಲ್ಲ. ಈ ಬಾರಿಯ ಅಧಿವೇಶನದಲ್ಲಿ ಸಮಗ್ರ ಉತ್ತರ ಕರ್ನಾಟಕ ಮತ್ತು ಗಡಿನಾಡಿನ ಬಗ್ಗೆ ಶ್ವೇತಪತ್ರ ಹೊರಡಿಸಬೇಕು ಎಂದು ಅವರು ಆಗ್ರಹಿಸಿದರು.