ಕಾರವಾರದಲ್ಲಿ ಲಾಕ್ಡೌನ್ ಇದೆಯಾ? ಶಿವರಾಮ್ ಹೆಬ್ಬಾರ್ ಸ್ಪಷ್ಟನೆ
ಕಾರವಾರ, ಜುಲೈ 14: ಜಿಲ್ಲೆಯಲ್ಲಿ ಮತ್ತೆ ಲಾಕ್ಡೌನ್ ಇಲ್ಲ. ಈಗಾಗಲೇ ಬಹುತೇಕ ಎಲ್ಲಾ ತಾಲೂಕಿನಲ್ಲೂ ಮಧ್ಯಾಹ್ನ 2 ಗಂಟೆಯಿಂದ ಸ್ವಯಂ ಲಾಕ್ಡೌನ್ ಮಾಡುತ್ತಿದ್ದು, ಅದಕ್ಕೆ ಜಿಲ್ಲಾಡಳಿತ ಬೆಂಬಲ ನೀಡಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್ ಸ್ಪಷ್ಟಪಡಿಸಿದ್ದಾರೆ.
Recommended Video
ಲಾಕ್ಡೌನ್ ಸಂಬಂಧ ಮುಖ್ಯಮಂತ್ರಿಗಳ ಜೊತೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ವಿಡಿಯೋ ಸಂವಾದ ನಡೆಸಿ ನಂತರ ಮಾಧ್ಯಮದವರ ಜೊತೆ ಮಾತನಾಡಿದ ಅವರು, "ಜಿಲ್ಲೆಯಲ್ಲಿ ಭಟ್ಕಳದಲ್ಲಿ ಮಾತ್ರ ಮಧ್ಯಾಹ್ನ ಎರಡು ಗಂಟೆಯಿಂದ ಜಿಲ್ಲಾಡಳಿತ ಲಾಕ್ಡೌನ್ ಮಾಡುವ ಆದೇಶ ಹೊರಡಿಸಿದ್ದು, ಇದನ್ನು ಮುಂದುವರೆಸಲಿದ್ದೇವೆ" ಎಂದಿದ್ದಾರೆ. "ಯಾರಿಗೇ ರೋಗ ಲಕ್ಷಣ ಕಂಡು ಬಂದರೆ ಅಂಥವರಿಗೆ ಪರೀಕ್ಷೆ ಮಾಡಿಸಲಾಗುವುದು. ಜಿಲ್ಲೆಯ ನಾಗರೀಕರಿಗೆ ಕೈ ಮುಗಿದು ಕೇಳಿಕೊಳ್ಳುತ್ತೇನೆ, ಏನಾದರು ಸಮಸ್ಯೆ ಕಂಡುಬಂದಲ್ಲಿ ಆಡಳಿತ, ಆರೋಗ್ಯ ಇಲಾಖೆ ಸಿಬ್ಬಂದಿ ಗಮನಕ್ಕೆ ತನ್ನಿ. ಇಲ್ಲದಿದ್ದರೆ ಉಳಿದವರಿಗೆ ಸಮಸ್ಯೆಗೆ ಕಾರಣರಾಗುತ್ತೀರಿ" ಎಂದು ಶಿವರಾಮ್ ಹೆಬ್ಬಾರ್ ಮನವಿ ಮಾಡಿದ್ದಾರೆ.
ವಿಡಿಯೋ ಮಾಡಿ ಹರಿಬಿಟ್ಟ ಕೊರೊನಾ ಸೋಂಕಿತ: ಸ್ಪಷ್ಟನೆ ನೀಡಿದ ಕ್ರಿಮ್ಸ್
ಮತ್ತಷ್ಟು ವೇಗವಾಗಿ ಪರೀಕ್ಷೆ
ಈವರೆಗೆ ಜಿಲ್ಲೆಯಲ್ಲಿ 663 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಅದರಲ್ಲಿ 254 ಮಂದಿ ಸೋಂಕಿತರು ಗುಣಮುಖರಾಗಿದ್ದಾರೆ. ಉಳಿದವರು ಕ್ರಿಮ್ಸ್ ಹಾಗೂ ವಿವಿಧೆಡೆಯ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಭಟ್ಕಳದಲ್ಲಿ 212 ಜನರ ಸೋಂಕಿತರು ಪತ್ತೆಯಾಗಿದ್ದು, ಅದರಲ್ಲಿ ಹೊರ ದೇಶ, ಹೊರ ರಾಜ್ಯದಿಂದ ಬಂದವರೇ ಹೆಚ್ಚು. ಭಟ್ಕಳದಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಲಾಕ್ಡೌನ್ ಮಾಡಿದ್ದು, ಅಲ್ಲಿ ಇನ್ನೂ ಹೆಚ್ಚಿನ ಜಾಗ್ರತೆ ವಹಿಸಿ ವೇಗವಾಗಿ ಪರೀಕ್ಷೆಗಳನ್ನು ಮಾಡಿಸಲಿದ್ದೇವೆ ಎಂದರು.
ಮೂರು ಹಂತದಲ್ಲಿ ಪರೀಕ್ಷೆ
ಜಿಲ್ಲೆಯಲ್ಲಿ ಮೂರು ಹಂತದಲ್ಲಿ ಪರೀಕ್ಷೆಗಳನ್ನು ನಡೆಸಲಿದ್ದೇವೆ. ಮೊದಲ ಹಂತದಲ್ಲಿ, ಸಾವನ್ನಪ್ಪಿದವರ ಪರೀಕ್ಷೆಯನ್ನು ತ್ವರಿತವಾಗಿ ಮಾಡಲಿದ್ದೇವೆ. ಮೃತಪಟ್ಟವರ ಶವಸಂಸ್ಕಾರ ಬೇಗ ಮಾಡಬೇಕಾಗಿರುವುದರಿಂದ ಎರಡು ಗಂಟೆಯಲ್ಲಿ ವರದಿ ನೀಡುವಂತೆ ತಿಳಿಸಲಾಗಿದೆ. ಎರಡನೇ ಹಂತದಲ್ಲಿ, ಪೊಲೀಸ್ ಠಾಣೆ, ತಹಶೀಲ್ದಾರ್ ಕಚೇರಿ, ಸಂಸ್ಥೆಗಳು, ಬ್ಯಾಂಕ್ಗಳು ಹೀಗೆ ಸಾರ್ವಜನಿಕ ಸೇವೆ ಮಾಡುವ ಸ್ಥಳದಲ್ಲಿ ಉದ್ಯೋಗಿಗಳಿಗೆ ಸೋಂಕು ತಗುಲಿದರೆ ಅಲ್ಲಿನವರ ಪರೀಕ್ಷೆ ಮಾಡಿಸಿ ಬೇಗ ವರದಿ ಕೊಡಲು ತಿಳಿಸಿದ್ದೇವೆ. ಒಂದೊಮ್ಮೆ ಬ್ಯಾಂಕಿನ ಒಂದೆರಡು ಸಿಬ್ಬಂದಿಗೆ ಸೋಂಕು ದೃಢಪಟ್ಟರೆ ಇಡೀ ಬ್ಯಾಂಕ್ ಸೀಲ್ ಡೌನ್ ಮಾಡಬೇಕಾಗಿರುವುದರಿಂದ, ಅಲ್ಲಿನವರಿಗೆ ಬೇಗ ವರದಿ ಕೊಡಲು ಆದ್ಯತೆ ನೀಡಲಾಗಿದೆ. ಮೂರನೇ ಹಂತದಲ್ಲಿ, ವಯಸ್ಸಾದವರಿಗೆ ಮೊದಲ ಆದ್ಯತೆ, ನಂತರ ಉಳಿದವರಿಗೆ ಪರೀಕ್ಷೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಗುತ್ತಿಗೆ ಆಧಾರದ ಮೇಲೆ ನೇಮಕಾತಿಗೆ ಅನುಮತಿ
ಜಿಲ್ಲೆಯಲ್ಲಿ ಖಾಲಿ ಇರುವ ಎಎನ್ ಎಂಗಳನ್ನು ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಿಕೊಳ್ಳಲು ಆರೋಗ್ಯ ಇಲಾಖೆಯ ಅಧೀನ ಕಾರ್ಯದರ್ಶಿಗಳು ವಿಡಿಯೋ ಸಂವಾದದಲ್ಲಿ ಅನುಮತಿ ನೀಡಿದ್ದಾರೆ. ಅಲ್ಲದೇ, ಲ್ಯಾಬ್ ಟೆಕ್ನೀಷಿಯನ್ ಗಳ ನೇಮಕಾತಿ ಜೊತೆಗೆ, ಮುಖ್ಯವಾಗಿ ಬೇಕಾಗಿರುವ ಹೃದ್ರೋಗ ತಜ್ಞರನ್ನು ನೇಮಕ ಮಾಡಿಕೊಳ್ಳಲು ಅನುಮತಿ ನೀಡಿದ್ದಾರೆ. ಈವರೆಗೆ ಜಿಲ್ಲೆಯಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಅದಕ್ಕೆ ಕಾರಣ ಆಶಾ ಕಾರ್ಯಕರ್ತೆಯರಿಂದ ಹಿಡಿದು ಜಿಲ್ಲಾಧಿಕಾರಿಗಳವರೆಗೆ ಪಡುತ್ತಿರುವ ಶ್ರಮವಾಗಿದೆ. ಮುಂದಿನ ದಿನಗಳಲ್ಲಿ ಜನರಿಗೆ ಯಾವುದೇ ಸಮಸ್ಯೆ ಆಗದಂತೆ ಸರ್ಕಾರ, ಜಿಲ್ಲಾಡಳಿತ ಕೊರೊನಾ ಎದುರಿಸಲಿದೆ ಎಂದು ಭರವಸೆ ನೀಡಿದ್ದಾರೆ.
ಶಾಸಕರ ನಿಧಿಯಿಂದ ಆಂಬುಲೆನ್ಸ್ ಖರೀದಿ
ಜಿಲ್ಲೆಗೆ ಆಂಬುಲೆನ್ಸ್ ಅಗತ್ಯವಿದ್ದು, ಈಗಾಗಲೇ ಇರುವ ಆಂಬುಲೆನ್ಸ್ ಜೊತೆ 13 ಹೆಚ್ಚುವರಿ ಆಂಬುಲೆನ್ಸ್ ಅಗತ್ಯವಿದೆ. ಅದನ್ನು ಕೊಡುವಂತೆ ಸರ್ಕಾರಕ್ಕೆ ಮನವಿ ಮಾಡಿಕೊಳ್ಳಲಾಗಿದೆ. ಜಿಲ್ಲೆಯ ಎಲ್ಲಾ ಶಾಸಕರ ನಿಧಿಯಿಂದ ಎರಡೆರಡು ಆಂಬುಲೆನ್ಸ್ ಖರೀದಿಗೆ ಮನವಿ ಮಾಡಿಕೊಂಡಿದ್ದು, ಎಲ್ಲರೂ ಇದಕ್ಕೆ ಒಪ್ಪಿಗೆ ನೀಡಿದ್ದಾರೆ. ಈ ಬಗ್ಗೆ ಸ್ಪೀಕರ್ ಹಾಗೂ ಸಂಸದರ ಬಳಿ ಸಹ ಮಾತನಾಡುತ್ತೇನೆ ಎಂದು ಸಚಿವ ಶಿವರಾಮ್ ಹೆಬ್ಬಾರ್ ತಿಳಿಸಿದ್ದಾರೆ. ಸದ್ಯ ಜನರ ಜೀವ ಮುಖ್ಯ. ಶಾಸಕರ ನಿಧಿ ಇತರೆ ಬಳಕೆಗಿಂತ ಆಂಬುಲೆನ್ಸ್ ಖರೀದಿಗೆ ಉಪಯುಕ್ತವಾಗಲಿದ್ದು, ಈ ನಿಟ್ಟಿನಲ್ಲಿ ಖರೀದಿ ಮಾಡಲು ನಿರ್ಧರಿಸಿದ್ದೇವೆ. ಸರ್ಕಾರಕ್ಕೂ ತಿಳಿಸಲಾಗಿದೆ ಎಂದು ಹೇಳಿದ್ದಾರೆ.
ಕಾರವಾರ: ಯಾರ ಸಂಪರ್ಕ, ಟ್ರಾವೆಲ್ ಹಿಸ್ಟರಿ ಇಲ್ಲದೇ ದೃಢಪಡುತ್ತಿದೆ ಕೊರೊನಾ ವೈರಸ್