ಕಡಿಮೆ ರೇಟಿಗೆ ಕೊಟ್ಟರೂ ಮರಳು ಖರೀದಿ ಮಾಡುವವರಿಲ್ಲ!
ಕಾರವಾರ, ಜನವರಿ 22; ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳಿನಿಂದ ಮರಳಿಗೆ ಬೇಡಿಕೆ ಕುಸಿಯುತ್ತಿದೆ. ಮರಳು ಖರೀದಿ ಮಾಡುವವರೇ ಇಲ್ಲದಂತಾಗಿರುವ ಹಿನ್ನಲೆಯಲ್ಲಿ ಒಂದೆಡೆ ಬೆಲೆ ಕುಸಿದಿದ್ದರೆ, ಇನ್ನೊಂದೆಡೆ ಪರವಾನಗಿ ಹೊಂದಿರುವವರು ಮರಳು ತೆಗೆಯುವುದನ್ನು ಸಹ ನಿಲ್ಲಿಸುವಂತಾಗಿದೆ.
ಕೆಲ ತಿಂಗಳ ಹಿಂದೆ ಮರಳುಗಾರಿಕೆಗೆ ಅನುಮತಿ ಕೊಡದ ಸಂದರ್ಭದಲ್ಲಿ ಮರಳಿಗೆ ಬೇಡಿಕೆ ಹೆಚ್ಚಾಗಿತ್ತು. ಮರಳು ತೆಗೆಯಲು ಅನುಮತಿ ಕೊಡದಿದ್ದರಿಂದ ಕಟ್ಟಡ ಕಟ್ಟಲು ಆಗುತ್ತಿಲ್ಲ, ಅಭಿವೃದ್ಧಿ ಚಟುವಟಿಕೆಗೆ ಸಾಕಷ್ಟು ಹಿನ್ನಡೆಯಾಗಿದೆ ಎನ್ನುವ ಆರೋಪಗಳು ಕೇಳಿ ಬಂದಿತ್ತು. ಅಂತಿಮವಾಗಿ ಮರಳು ತೆಗೆಯುವುದಕ್ಕೆ ಅನುಮತಿ ಕೊಡಲಾಯಿತು.
ಕಾರವಾರ: ಮರಳು ರಾಶಿ ಸಂಗ್ರಹವಾಗಿ ಹಿಂದಕ್ಕೆ ಸರಿದ ಸಮುದ್ರ
ಈ ಸಂದರ್ಭದಲ್ಲಿ ಪ್ರಾರಂಭದ ಕೆಲ ದಿನಗಳ ಕಾಲ ಮರಳಿಗೆ ಸಿಕ್ಕಾಪಟ್ಟೆ ಬೇಡಿಕೆ ಸೃಷ್ಟಿಯಾಗಿತ್ತು. ಜಿಲ್ಲೆಯ ಗಂಗಾವಳಿ, ಶರಾವತಿ, ಅಘನಾಶಿನಿ ನದಿಯಲ್ಲಿ ಮರಳ ತೆಗೆಯುವುದಕ್ಕೆ ಅವಕಾಶ ಕೊಟ್ಟಿದ್ದು, ಕರಾವಳಿ ಭಾಗದಿಂದ ಜಿಲ್ಲೆಯ ಘಟ್ಟದ ಮೇಲಿನ ತಾಲೂಕುಗಳಿಗೆ ಪ್ರತಿನಿತ್ಯ ಮರಳು ಸಾಗಿಸುತ್ತಿದ್ದರಿಂದ ಸಾಕಷ್ಟು ಬೇಡಿಕೆ ಸೃಷ್ಟಿಯಾಗಿತ್ತು.
ವಿಶೇಷ ವರದಿ; ಬಜೆಟ್ನಲ್ಲಿ ಘೋಷಣೆಯಾಗಿದ್ದು, ಅನುಷ್ಠಾನವಾಗಿದ್ದು?
ಕಳೆದ ಒಂದು ತಿಂಗಳಿನಿಂದ ಮರಳಿನ ಬೇಡಿಕೆ ದಿಢೀರ್ ಕುಸಿದಿದೆ. ಹಲವೆಡೆ ಮರಳು ತೆಗೆದು ಹಾಕಿದ್ದರೂ ಖರೀದಿ ಮಾಡುವವರು ಇಲ್ಲದಂತಾಗಿದೆ. ಇನ್ನು ಮರಳು ಖರೀದಿ ಮಾಡಲು ಜನರು ಮುಂದೆ ಬರದ ಹಿನ್ನಲೆಯಲ್ಲಿ ಅಧಿಕೃತ ಪರವಾನಗಿ ಹೊಂದಿದವರು ಮರಳು ತೆಗೆಯುವುದನ್ನು ನಿಲ್ಲಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ಮರಳು ಮಾರಾಟಕ್ಕೆ, ಕೊಳ್ಳುವುದಕ್ಕೆ ಬರುತ್ತಿದೆ ಮೊಬೈಲ್ ಆ್ಯಪ್
ಮರಳು ಖರೀದಿಗೆ ಹಿಂದೇಟು
ಕೋವಿಡ್ ಕಾರಣದಿಂದ ಅಭಿವೃದ್ಧಿ ಚಟುವಟಿಕೆಗಳಿಗೆ ಸಾಕಷ್ಟು ಹಿನ್ನಡೆಯಾಗಿದ್ದು, ಸರ್ಕಾರದಿಂದ ಅಭಿವೃದ್ಧಿ ಕಾಮಗಾರಿಗಳಿಗೂ ಹಣ ಬಿಡುಗಡೆ ಮಾಡುವ ಪ್ರಮಾಣ ಕಡಿಮೆಯಾಗಿದೆ. ಜೊತೆಗೆ ಸಾರ್ವಜನಿಕರಲ್ಲೂ ಆರ್ಥಿಕ ಸಮಸ್ಯೆ ಸೃಷ್ಟಿಯಾಗಿದ್ದು, ಹೊಸ ಕಾಮಗಾರಿಗಳಿಗೆ ಮುಂದಾಗದ ಹಿನ್ನಲೆಯಲ್ಲಿ ಮರಳು ಖರೀದಿ ಮಾಡಲು ಹಿಂದೇಟು ಹಾಕುತ್ತಿದ್ದಾರೆ.
ಮರಳಿಗೆ ಬೇಡಿಕೆ ತಗ್ಗಿದೆ
vಮರಳು ತೆಗೆಯಲು ಅಧಿಕೃತ ಪರವಾನಗಿ ಹೊಂದಿದವರು ಸರ್ಕಾರಕ್ಕೆ ರಾಜಧನ ತುಂಬಿ ಮರಳನ್ನು ತೆಗೆದು ಮಾರಾಟ ಮಾಡುತ್ತಿದ್ದರು. ಇದರ ನಡುವೆ ಕೆಲವರು ವಾಮ ಮಾರ್ಗವಾಗಿ ಯಾವುದೇ ಪರವಾನಗಿ ಪಡೆಯದೇ ಬೇಕಾಬಿಟ್ಟಿ ಮರಳು ತೆಗೆದು ಕಡಿಮೆ ಬೆಲೆಯಲ್ಲಿ ಮಾರಾಟ ಮಾಡಿದ್ದರಿಂದ ಮರಳಿಗೆ ಸದ್ಯ ಡಿಮ್ಯಾಂಡ್ ಕಡಿಮೆಯಾಗಿದೆ. ಮರಳು ತೆಗೆಯಲು ಅನುಮತಿ ನೀಡಿದ ಸಮಯದಲ್ಲಿ ಈ ಹಿಂದೆ ಪ್ರತಿನಿತ್ಯ ಮರಳು ಖರೀದಿ ಮಾಡಲು ಡಿಮ್ಯಾಂಡ್ ಇತ್ತು. ಆದರೆ, ಈಗ ಕಡಿಮೆ ಬೆಲೆಗೆ ಮರಳನ್ನು ತೆಗೆದುಕೊಂಡು ಹೋಗಿ ಎಂದರೂ ಖರೀದಿ ಮಾಡಲು ಯಾರೂ ಮುಂದಾಗುತ್ತಿಲ್ಲ.
ಸ್ಟಾಕ್ಯಾರ್ಡ್ ಮರಳಿಗೂ ಬೇಡಿಕೆ ಇಲ್ಲ
ಮರಳಿಗೆ ಕೃತಕ ಡಿಮ್ಯಾಂಡ್ ಸೃಷ್ಟಿ ಮಾಡಿ ಸಾರ್ವಜನಿಕರಿಗೆ ದುಬಾರಿ ಹಣಕ್ಕೆ ಮಾರಾಟ ಮಾಡಲಾಗುತ್ತಿದೆ ಎನ್ನುವ ಆರೋಪ ಕೇಳಿ ಬಂದಿತ್ತು. ಈ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಹಳಿಯಾಳ, ಶಿರಸಿ, ಭಟ್ಕಳ ಹಾಗೂ ಜೊಯಿಡಾದಲ್ಲಿ ಜಿಲ್ಲಾಡಳಿತ ಸ್ಟಾಕ್ ಯಾರ್ಡ್ಗಳನ್ನು ನಿರ್ಮಿಸಿತ್ತು. ಪ್ರತಿ ಪರವಾನಿಗೆ ಹೊಂದಿದವರು ನಿರ್ಧಿಷ್ಟ ಪ್ರಮಾಣದಲ್ಲಿ ಮರಳನ್ನು ಸ್ಟಾಕ್ ಯಾರ್ಡ್ಗೆ ಕೊಡಬೇಕು ಎಂದು ಸೂಚಿಸಲಾಗಿತ್ತು. ಕಡಿಮೆ ಬೆಲೆಯಲ್ಲಿ ಸ್ಟಾಕ್ ಯಾರ್ಡ್ಗಳಿಂದ ಜನರಿಗೆ ಮರಳು ಕೊಡುವ ಕಾರ್ಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಜಿಲ್ಲಾಡಳಿತ ಮಾಡುತ್ತಿತ್ತು.
Recommended Video
ಖರೀದಿ ಮಾಡುವವರೇ ಇಲ್ಲ
ಸದ್ಯ ಸರ್ಕಾರಿ ಸ್ಟಾಕ್ ಯಾರ್ಡ್ಗಳಲ್ಲೂ ಸಹ ಮರಳಿಗೆ ಬೇಡಿಕೆ ಕಡಿಮೆಯಾಗಿದೆ. ಶಿರಸಿ ಸ್ಟಾಕ್ ಯಾರ್ಡ್ನಲ್ಲಿ ಮರಳನ್ನೇ ಖರೀದಿ ಮಾಡುವವರಿಲ್ಲದಂತಾಗಿದೆ. ಇನ್ನು ಇತರೆ ಸ್ಟಾಕ್ ಯಾರ್ಡ್ಗಳಲ್ಲೂ ಬೇಡಿಕೆ ಸಂಪೂರ್ಣ ಕುಸಿದಿದ್ದು, ಇನ್ನು ಕೆಲ ದಿನಗಳ ಕಾಲ ಇದೇ ಪರಿಸ್ಥಿತಿ ಮುಂದುವರಿಯಬಹುದು ಎನ್ನುವುದು ಕೆಲವರ ಅಭಿಪ್ರಾಯವಾಗಿದೆ.