ಯಕ್ಷಗಾನ ಕ್ಷೇತ್ರದ ಖ್ಯಾತ ಭಾಗವತ ನೆಬ್ಬೂರು ನಾರಾಯಣ ಹೆಗಡೆ ಇನ್ನಿಲ್ಲ
ಕಾರವಾರ, ಮೇ.11:ಯಕ್ಷಗಾನ ಕ್ಷೇತ್ರದ ಖ್ಯಾತ ಮತ್ತು ಹಿರಿಯ ಭಾಗವತ, ತಾಲೂಕಿನ ಹಣಗಾರ ನಿವಾಸಿ ನೆಬ್ಬೂರು ನಾರಾಯಣ ಹೆಗಡೆ (83) ಇಂದು ಶನಿವಾರ ಬೆಳಗ್ಗೆ ಶಿರಸಿ ತಾಲೂಕಿನ ನೆಬ್ಬೂರಿನ ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನರಾದರು. ಅವರಿಗೆ ಪತ್ನಿ, ಪುತ್ರ ಹಾಗೂ ಪುತ್ರಿ ಇದ್ದಾರೆ.
1956-57 ರ ಸಮಯದಲ್ಲಿ ಯಕ್ಷಗಾನದ ಆಸಕ್ತಿಯನ್ನು ಬೆಳೆಸಿಕೊಂಡ ಅವರು ಕೆರೆಮನೆ ಮೇಳವನ್ನು ಸೇರಿದರು. ಅಲ್ಲಿಂದ ಪ್ರಾರಂಭವಾದ ಅವರ ಯಕ್ಷಗಾನ ಪಯಣ 2010ರವರೆಗೂ ಅದೇ ಮೇಳದಲ್ಲಿ ಪ್ರಧಾನ ಭಾಗವತರಾಗಿ ಮುಂದುವರಿದಿತ್ತು.
ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ
ಕೆರೆಮನೆ ಶಿವರಾಮ ಹೆಗಡೆ, ಮಹಾಬಲ ಹೆಗಡೆ ಅವರಲ್ಲಿ ಭಾಗವತಿಕೆ ಅಭ್ಯಾಸ ಮಾಡಿದ ಅವರು, ಪ್ರಾಚಾರ್ಯ ನಾರ್ಣಪ್ಪ ಉಪ್ಪೂರ ಭಾಗವತರು ಕೆರೆಮನೆ ಮೇಳದಲ್ಲಿ ಇರುವಾಗ ಅವರೊಂದಿಗೆ ಸಂಗೀತಗಾರರಾಗಿ ಇದ್ದರು. ಅವರನ್ನು ತಮ್ಮ ಗುರುವಿಗೆ ಸಮ ಎಂದು ಭಾಗವತರೇ ಹೇಳುತ್ತಿದ್ದರು.
ಭಾವನಾತ್ಮಕ ಆಖ್ಯಾನಗಳಾದ ಕರ್ಣಪರ್ವ, ನಳದಮಯಂತಿ, ಹರಿಶ್ಚಂದ್ರ, ರಾಮನಿರ್ಯಾಣದಂತಹ ಪ್ರಸಂಗಗಳನ್ನು ಜನಮಾನಸದಲ್ಲಿ ಅಚ್ಚಳಿಯದಂತೆ ಮಾಡಿದ ಕೀರ್ತಿ ನೆಬ್ಬೂರು ಅವರಿಗೆ ಸಲ್ಲುತ್ತದೆ. ಕಲೆ ಎಂಬುದು ಆರಾಧನೆಯೇ ಹೊರತು ಗಳಿಗೆಯ ಭಾಗವಲ್ಲ ಎಂದು ತಾವು ಇರುವಷ್ಟು ದಿನವೂ ಅನುಸರಿಸಿಕೊಂಡು ಬಂದವರು.
ಗೆಜ್ಜೆ ಕಟ್ಟಿ ಕುಣಿಯುವಾಗಲೇ ಪ್ರಾಣಬಿಟ್ಟ ಯಕ್ಷಗಾನ ಕಲಾವಿದ ಚಂದ್ರಹಾಸ ಹುಡುಗೋಡು
ಭಾಗವತರ ಸೇವೆಯನ್ನು ಗುರುತಿಸಿ ಸಂದ ಪ್ರಶಸ್ತಿ- ಪುರಸ್ಕಾರಗಳು ಅನೇಕ. ಇಳಿವಯಸ್ಸಿನಲ್ಲೂ ಉತ್ಸಾಹದ ಚಿಲುಮೆ ಆಗಿದ್ದ ಅವರು ಅಭಿಮಾನಿಗಳ ಆಗ್ರಹಕ್ಕೆ ಮಣಿದು ಆಟ-ಕೂಟದಲ್ಲಿ ಭಾಗವಹಿಸುತ್ತಿದ್ದರು. ಅವರ ನಿಧನದಿಂದಾಗಿ ಉತ್ತರ ಕನ್ನಡ ಪರಂಪರೆಯ ಕೊಂಡಿ ಕಳಚಿದಂತಾಗಿದೆ.
ನೆಬ್ಬೂರು ನಾರಾಯಣ ಭಾಗವತರ ಆತ್ಮಕಥನವು 'ನೆಬ್ಬೂರಿನ ನಿನಾದ' ಎಂಬ ಶಿರೋನಾಮೆಯಡಿ 2007 ರಂದು ಪ್ರಕಟಿಸಲ್ಪಟ್ಟಿವೆ. ಡಾ. ಜಿ.ಎಸ್. ಭಟ್ಟ ಅವರು ಇದರ ಸಂಪಾದಕರು. ಶ್ರೀ ನೆಬ್ಬೂರರ ಷಷ್ಟ್ಯಬ್ಧ ಅಭಿನಂದನ ಸಮಿತಿ ಶಿರಸಿ ಇದರ ಪ್ರಕಾಶಕರು. ಕೆರೆಮನೆ ಶಂಭು ಹೆಗ್ಗಡೆಯವರು 'ನಿನಾದದ ನಿಷ್ಕರ್ಷೆ' ಎಂಬ ತಲೆಬರಹದಡಿ ನೆಬ್ಬೂರರ ಬಗೆಗೆ ಈ ಆತ್ಮಕಥನದಲ್ಲಿ ಅನಿಸಿಕೆಗಳನ್ನು ಅಕ್ಷರ ರೂಪಕ್ಕಿಳಿಸಿರುತ್ತಾರೆ.
ಮೊನ್ನೆ ಮೊನ್ನೆಯವರೆಗೂ ಭಾಗವತಿಕೆ ಮಾಡಿದ್ದ ನೆಬ್ಬೂರು ನಾರಾಯಣ ಭಾಗವತರು ಶನಿವಾರ ಬೆಳಗ್ಗೆ ದೇವರ ಪೂಜೆಗಾಗಿ ಹೂವು ಕೊಯ್ಯಲು ಹೋದ ಸಂದರ್ಭದಲ್ಲೇ ಕುಸಿದು ಬಿದ್ದು ಸಾವಿಗೀಡಾದರು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದ ಅವರು ಅತ್ಯಂತ ಮೃಧು ಸ್ವಭಾವದವರಾಗಿದ್ದರು.