ಕಾರವಾರದಲ್ಲಿ ರಾಷ್ಟ್ರಮಟ್ಟದ ಕಬಡ್ಡಿ ಟೂರ್ನಿ ಜ.23 ರಿಂದ
ಕಾರವಾರ, ಜನವರಿ 22: ಅಖಿಲ ಭಾರತ ಆಹ್ವಾನಿತ 'ಎ' ಗ್ರೇಡ್ ತಂಡಗಳ ರಾಷ್ಟ್ರಮಟ್ಟದ ಪುರುಷರ ಕಬಡ್ಡಿ ಚಾಂಪಿಯನ್ಶಿಪ್ 'ಸತೀಶ್ ಸೈಲ್ ಕೃಷ್ಣಗಿರಿ ಟ್ರೋಫಿ- 2018' ಉತ್ತರಕನ್ನಡ ಜಿಲ್ಲೆಯ ಕಾರವಾರದ ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿ ಜ. 23ರಿಂದ 25ರವರೆಗೆ ನಡೆಯಲಿದೆ.
ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಪ್ರೊ ಕಬಡ್ಡಿ ಯು ಮುಂಬಾ ತಂಡದ ತರಬೇತುದಾರ ರವಿ ಶೆಟ್ಟಿ ಅವರು ಈ ವಿಷಯ ತಿಳಿಸಿದ್ದು, 'ಉತ್ತರಕನ್ನಡ ಜಿಲ್ಲೆಯಲ್ಲಿಯೇ ಪ್ರಥಮ ಬಾರಿಗೆ ರಾಷ್ಟ್ರಮಟ್ಟದ ಕಬಡ್ಡಿ ಟೂರ್ನಿಯನ್ನು ಕಾರವಾರದಲ್ಲಿ ಆಯೋಜಿಸುತ್ತಿದ್ದೇವೆ ಎಂದು ಹೇಳಿದರು.
ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಕಬಡ್ಡಿ ಪಟುಗಳನ್ನು ಹೊಂದಿರುವ ಒಎನ್ಜಿಸಿ ದೆಹಲಿ, ಭಾರತ್ ಪೆಟ್ರೋಲಿಯಂ, ಸೆಂಟ್ರಲ್ ರೈಲ್ವೆ, ಸೆಂಟ್ರಲ್ ರೈಲ್ವೆ ಮುಂಬೈ ವಿಭಾಗ, ಮಹಿಂದ್ರಾ ಆಂಡ್ ಮಹಿಂದ್ರಾ, ವಿಜಯಾ ಬ್ಯಾಂಕ್, ಕೇಂದ್ರೀಯ ಅಬಕಾರಿ, ದಕ್ಷಿಣ ಮಧ್ಯ ರೈಲ್ವೆ ಸಿಖಂದರ್ಬಾದ್, ಹರಿಯಾಣದ ಚೋಟುರಂ ಸ್ಟೇಡಿಯಮ್, ಗೋವಾ ರಾಜ್ಯದ ಕಬಡ್ಡಿ ಅಸೋಸಿಯೇಷನ್ನ ತಂಡ ಹಾಗೂ ರಾಜ್ಯ ಮಟ್ಟದಲ್ಲಿ ಸಾಧನೆಗೈದ ಸ್ಥಳೀಯ ಕಬಡ್ಡಿ ಆಟಗಾರರನ್ನು ಒಳಗೊಂಡ ಕಾಮತ್ ಪ್ಲಸ್ ಬೋರ್ಕರ್ ವಾರಿಯರ್ಸ್ ಮತ್ತು ಉತ್ತರಕನ್ನಡ ಜಿಲ್ಲಾ ಕಬಡ್ಡಿ ತಂಡಗಳು ಟೂರ್ನಿಯಲ್ಲಿ ಭಾಗವಹಿಸಲಿವೆ' ಎಂದರು.
'ಟೂರ್ನಿ ವಿಜೇತ ತಂಡಕ್ಕೆ ರೂ. 3.5 ಲಕ್ಷ, ದ್ವಿತೀಯ ಪ್ರಶಸ್ತಿ ಪಡೆದ ತಂಡಕ್ಕೆ ರೂ. 2 ಲಕ್ಷ, ತೃತೀಯ ಹಾಗೂ ನಾಲ್ಕನೆಯ ಬಹುಮಾನ ರೂ. 1 ಲಕ್ಷ ನಗದು ನೀಡಲಾಗುವುದು. ಪಂದ್ಯದ ಉದ್ಘಾಟನಾ ದಿನ ವಿಶೇಷ ಆಕರ್ಷಣೆಯಾಗಿ ಗೋವಾ ರಾಜ್ಯ ಮಹಿಳಾ ಕಬಡ್ಡಿ ತಂಡ ಹಾಗೂ ಉತ್ತರಕನ್ನಡ ಜಿಲ್ಲಾ ಮಹಿಳಾ ಕಬಡ್ಡಿ ತಂಡಗಳ ನಡುವೆ ಪಂದ್ಯವನ್ನು ಆಯೋಜಿಸಲಾಗಿದೆ' ಎಂದು ಮಾಹಿತಿ ನೀಡಿದರು.
ಜ. 23ರಂದು ಸಂಜೆ 7ಕ್ಕೆ ಗಣಿ ಮತ್ತು ಭೂ ವಿಜ್ಞಾನ ಸಚಿವ ವಿನಯ ಕುಲಕರ್ಣಿ ಅವರು ಟೂರ್ನಿಯನ್ನು ಉದ್ಘಾಟಿಸಲಿದ್ದು, ಜ. 25ರ ರಾತ್ರಿ 10.30ರ ಸಮಾರೋಪ ಸಮಾರಂಭದಲ್ಲಿ ಉತ್ತರಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಉಪಸ್ಥಿತರಿರಲಿದ್ದಾರೆ. ಶಾಸಕ ಸತೀಶ್ ಸೈಲ್ ಎರಡೂ ದಿನದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಳ್ಳಲಿದ್ದಾರೆ ಎಂದು ತಿಳಿಸಿದರು.