ಆನಂದ್ ಅಸ್ನೋಟಿಕರ್ ಮಾನಸಿಕ ಆರೋಗ್ಯ ಪ್ರಶ್ನಿಸಿದ ಬಿಜೆಪಿ!
ಕಾರವಾರ, ಏಪ್ರಿಲ್ 06; "ಆನಂದ್ ಅಸ್ನೋಟಿಕರ್ ದೈಹಿಕವಾಗಿ ಬಹಳ ಸದೃಢರಿದ್ದಾರೆ. ಅದರ ಬಗ್ಗೆ ಮಾತೇ ಇಲ್ಲ. ಆದರೆ ಮಾನಸಿಕವಾಗಿ ಅವರು ಖಬರಸ್ತಾನ ಸೇರಿ ಎಷ್ಟೋ ವರ್ಷಗಳಾಗಿಬಿಟ್ಟಿದೆ" ಎಂದು ಉತ್ತರ ಕನ್ನಡ ಬಿಜೆಪಿ ಜಿಲ್ಲಾ ಮಾಧ್ಯಮ ವಕ್ತಾರ ನಾಗರಾಜ ನಾಯಕ ಹೇಳಿದ್ದಾರೆ.
"ಅವ್ನು ಸತ್ರೇನು.... ಬದುಕಿದ್ರೇನು.... ನಂಗ್ಯಾಕೆ" ಎಂದು ಸಂಸದ ಅನಂತಕುಮಾರ ಹೆಗಡೆ ಅವರ ವಿರುದ್ಧ ಮಾಜಿ ಸಚಿವ ಹಾಗೂ ಜೆಡಿಎಸ್ ನಾಯಕ ಆನಂದ್ ಅಸ್ನೋಟಿಕರ್ ಅವರು ನೀಡಿದ್ದ ಹೇಳಿಕೆಗೆ ಬಿಜೆಪಿ ತಿರುಗೇಟು ನೀಡಿದೆ. "ಈ ಹಿಂದೆ ಸಂಸದರನ್ನು ಕುಲ ದೇವ್ರು ಎಂದು ಇವರೇ ಹೇಳಿದ್ದರು. ಯಾರಾದರೂ ಕುಲ ದೇವ್ರು ಸಾಯ್ಲಿ ಎಂದು ಬಯಸುತ್ತಾರಾ?" ಎಂದು ನಾಗರಾಜ ನಾಯಕ ಪ್ರಶ್ನಿಸಿದರು.
ಅವ್ನು ಸತ್ರೇನು, ಬದುಕಿದ್ರೇನು, ನನಗ್ಯಾಕೆ ಬೇಕು?": ಸಂಸದ ಹೆಗಡೆ ಕುರಿತು ನಾಲಿಗೆ ಹರಿಬಿಟ್ಟ ಮಾಜಿ ಸಚಿವ
"ಇಂಥ ಊಳಿಡುವಂಥ ಕೂಗು ಬರುತ್ತದೆ ಎಂದು ಜಿಲ್ಲೆಯ ಜನತೆ ನಿರೀಕ್ಷಿಸಿರಲಿಲ್ಲ. ಇವರ ತಂದೆ ವಸಂತ ಅಸ್ನೋಟಿಕರ್ ಅವರು ಮೃತಪಟ್ಟಾಗ ಪಕ್ಷಾತೀತವಾಗಿ ಎಲ್ಲರೂ ಮರುಗಿದ್ದರು. ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರಿಗೆ ಇತ್ತೀಚೆಗೆ ಕೋವಿಡ್ ಸೋಂಕು ತಗುಲಿದಾಗ ಪ್ರಧಾನಿ ಮೋದಿಯವರು ಕರೆ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ಇಂಥ ರಾಜಕೀಯ ಸಂಸ್ಕೃತಿ, ಸಭ್ಯತೆ ನಮಗೆ ಬೇಕು" ಎಂದರು.
ರಾಜಕೀಯ ನಿವೃತ್ತಿ ಪಡೆಯಲಿದ್ದಾರಾ ಸಂಸದ ಅನಂತಕುಮಾರ ಹೆಗಡೆ?
"ಬಾಂಗ್ಲಾ ಪ್ರತ್ಯೇಕಿಸುವ ಸಂದರ್ಭದಲ್ಲಿ ಸ್ವತಃ ವಾಜಪೇಯಿಯವರು ಇಂದಿರಾ ಗಾಂಧಿಯವರನ್ನು ಮಾ ದುರ್ಗಾ ಎಂದು ಕರೆದಿದ್ದರು. ಗಾಂಧಿ, ಸುಭಾಷ್ ಚಂದ್ರ ಬೋಸ್, ಅಂಬೇಡ್ಕರ್ ಅವರ ನಡುವೆ ಅಭಿಪ್ರಾಯ ಬೇಧಗಳಿದ್ದರೂ ಗಾಂಧಿ ಮೃತರಾದ ಸಂದರ್ಭದಲ್ಲಿ ಅಂಬೇಡ್ಕರ್ ಅವರು ಬಹಳಷ್ಟು ಮರುಕಪಟ್ಟಿದ್ದರು" ಎಂದು ತಿಳಿಸಿದರು.
"ಸುಭಾಷ್ ಚಂದ್ರ ಬೋಸ್ ಅವರು ಕೂಡ ವೈಯಕ್ತಿಕವಾಗಿ ಗಾಂಧೀಜಿಯವರನ್ನು ಗೌರವಿಸುತ್ತಿದ್ದರು. ಟ್ಯಾಗೋರ್ ಮತ್ತು ಗಾಂಧೀ ನಡುವೆ ಹಲವು ವೈರುಧ್ಯಗಳಿದ್ದರೂ ಗಾಂಧೀಜಿ ಟ್ಯಾಗೋರ್ ಅವರಿಗೆ ಗುರುದೇವ ಎಂದಿದ್ದರು. ಟ್ಯಾಗೋರ್ ಗಾಂಧಿಯವರನ್ನು ಮಹಾತ್ಮ ಎಂದಿದ್ದರು. ಇಷ್ಟೆಲ್ಲ ಇತಿಹಾಸ ಇರುವ ನಾಡಿನಲ್ಲಿ, ವಿರೋಧ ಪಕ್ಷದ ಗುಲಾಬ್ ನಬಿ ಆಜಾದ್ ಅವರು ಲೋಕಸಭೆಯಿಂದ ನಿರ್ಗಮಿಸುತ್ತಿದ್ದಾಗ ನರೇಂದ್ರ ಮೋದಿಯವರು ಅವರನ್ನು ಸ್ವಂತ ಅಣ್ಣ- ತಮ್ಮ ಎಂಬಂತೆ ಭಾವಪೂರ್ವಕವಾಗಿ ಕಣ್ಣೀರು ಹಾಕಿದ್ದರು. ಇದು ಸಮಾಜಕ್ಕೆ ಮಾದರಿಯಾಗುವಂಥದ್ದು" ಎಂದರು.
ಬಾಯ್ಬಿಟ್ರೆ ದೇಶಭಕ್ತಿ ಮಾತನಾಡುವ ಸಂಸದ ಹೆಗಡೆ, ವಿಧಾನಸಭಾಧ್ಯಕ್ಷರು: ಯೋಧನ ಅಂತ್ಯಸಂಸ್ಕಾರದಿಂದ ದೂರ
"ನಮ್ಮ ಜಿಲ್ಲೆಯ ರಾಜಕಾರಣಿಗಳಲ್ಲಿ ಒಳ್ಳೆಯ ಸಂಸ್ಕೃತಿ, ಸಭ್ಯತೆ ಇರುವವರು ಇದ್ದಾರೆ. ನಮ್ಮ ನಡುವೆ ಪಕ್ಷ ಭೇದವಿದೆಯೇ ಹೊರತು ವೈಯಕ್ತಿಕವಾಗಿ ಯಾವುದೇ ದ್ವೇಷ ಇಲ್ಲ. ಹೀಗಿರುವಾಗ ಅನಾರೋಗ್ಯಕ್ಕೆ ಒಳಗಾಗಿರುವ ಸಂಸದರನ್ನು ಈ ರೀತಿ ಸತ್ತರೆ ಒಳ್ಳೆಯದಿತ್ತು ಎಂದು ವಿಘ್ನ ಸಂತೋಷ ಪಡುವುದನ್ನು ಖಂಡಿಸುತ್ತೇವೆ" ಎಂದು ಹೇಳಿದರು.
"ಆನಂದ್ ಈ ಕ್ಷೇತ್ರದ ಮಾಜಿ ಶಾಸಕ, ಸಚಿವರಾಗಿದ್ದವರು. ಇಲ್ಲಿನ ಯುವ ಸಮುದಾಯಕ್ಕೆ ಅವರು ಮಾದರಿಯಾಗಬೇಕಿತ್ತು. ಇನ್ನೊಬ್ಬನ ಚಿತೆಯಲ್ಲಿ ಬೀಡಿ ಹಚ್ಚಿಕೊಳ್ಳುವುದು ಬಾಲಿಶವಾದದ್ದು. ಯಾರಾದರೂ ಹಿಂದುಗಳು, ಮೀನುಗಾರರು ಸತ್ತಾಗ ನಮ್ಮ ಸಂಸದರು ಇರುತ್ತಾರೆ ಎಂದು ಅವರು ಹೇಳಿದ್ದಾರೆ. ಸಂಸದರ ಹಿಂದುತ್ವದ ಬಗ್ಗೆ ಎಲ್ಲರಿಗೂ ತಿಳಿದೇ ಇದೆ. ಆನಂದ್ ಬೌದ್ಧಿಕವಾಗಿ ದಿವಾಳಿಯಾಗಿದ್ದಾರೆ" ಎಂದು ಆರೋಪಿಸಿದ್ದಾರೆ.
Recommended Video
"ಈ ಜಿಲ್ಲೆಯ ಜನರಿಗೆ ಹೀಗಾಗಬೇಕು, ಹಾಗಾಗಬೇಕು ಎಂದು ಎಷ್ಟು ಮನವಿ ನೀಡಿದ್ದಿರಿ? ಬೇಕಾಬಿಟ್ಟಿ ಶಬ್ದಗಳಿಂದ ಮಾತನಾಡುವುದು ಪ್ರಜಾಪ್ರಭುತ್ವದ ಸಭ್ಯ ಸಂಸ್ಕೃತಿಯಲ್ಲ. ಜನರನ್ನು ಅವರು ಪ್ರಚೋದಿಸುತ್ತಿದ್ದಾರೆ. ಜಿಲ್ಲೆಯ ಜನತೆ ಇಂಥ ಹೇಳಿಕೆಗಳಿಗೆ ಬೆಲೆ ನೀಡಬಾರದು. ಇಂಥ ಉಢಾಪೆ ಮಾತುಗಳನ್ನು ಜನತೆ ನಿರ್ಲಕ್ಷಿಸಬೇಕು. ಮುಂದೆ ಚುನಾವಣೆಯಲ್ಲಿ ಜನತಾ ಪ್ರಭುಗಳೇ ಇವರಿಗೆ ಬುದ್ಧಿ ಕಲಿಸುತ್ತಾರೆ" ಎಂದು ಭವಿಷ್ಯ ನುಡಿದರು.