ನೋಡಬನ್ನಿ ಭಟ್ಕಳದ ರಂಜಾನ್ ಪೇಟೆಯ ಸಡಗರವ
ಕಾರವಾರ, ಜೂನ್.13 : ರಂಜಾನ್ ಉಪವಾಸ ವ್ರತಾಚರಣೆ ಬುಧವಾರ 28ನೇ ದಿನಕ್ಕೆ ಕಾಲಿಟ್ಟಿದ್ದು, ಇನ್ನು ಮೂರು ದಿನದಲ್ಲಿ ಈದ್-ಉಲ್-ಫಿತರ್ ಆಚರಿಸಲು ಜಿಲ್ಲೆಯ ಮುಸ್ಲಿಂ ಸಮುದಾಯದವರು ಸಜ್ಜಾಗುತ್ತಿದ್ದಾರೆ.
ಇನ್ನೊಂದೆಡೆ ಭಟ್ಕಳ ಪಟ್ಟಣದ ಮುಖ್ಯ ರಸ್ತೆಯಲ್ಲಿ ತೆರೆದುಕೊಂಡಿರುವ ರಂಜಾನ್ ಪೇಟೆ ಜನರನ್ನು ಆಕರ್ಷಿಸುತ್ತಿದೆ.
ದೇಶದೆಲ್ಲೆಡೆ ತೆರೆದುಕೊಂಡ ಇಫ್ತಾರ್ ಕೂಟದ ಸಂಭ್ರಮ
ಪ್ರತಿವರ್ಷ ರಂಜಾನ್ ಮಾಸದ ಉಪವಾಸ ವ್ರತಾಚರಣೆ ಆರಂಭವಾಗಿ 10 ದಿನಗಳ ಬಳಿಕ ಭಟ್ಕಳ ಪುರಸಭೆಯವರು ಮುಖ್ಯರಸ್ತೆಯಲ್ಲಿ ತಾತ್ಕಾಲಿಕವಾಗಿ ರಂಜಾನ್ ಪೇಟೆಗೆಂದೇ ನೂರಾರು ಅಂಗಡಿಗಳನ್ನು ಹರಾಜು ಹಾಕಿ ವ್ಯಾಪಾರ ವಹಿವಾಟಿಗೆ ಅನುವು ಮಾಡಿಕೊಡುತ್ತಾರೆ.
ಆಕರ್ಷಣೆಯ ವಸ್ತುಗಳು
ಭಟ್ಕಳದ ರಂಜಾನ್ ಪೇಟೆಯಲ್ಲಿ ಅಂಗಡಿ ತೆರೆಯುವುದಕ್ಕೆಂದೇ ದೂರದೂರುಗಳಿಂದ ಬರುವ ವ್ಯಾಪಾರಸ್ಥರು ತಮ್ಮ ವಹಿವಾಟನ್ನು ನಡೆಸಿ ಆದಷ್ಟು ವ್ಯಾಪಾರ ಮಾಡಿಕೊಳ್ಳುತ್ತಾರೆ. ಏನಿದೆ ಅಲ್ಲಿ ಎಂದು ರಂಜಾನ್ ಪೇಟೆಗೆ ತೆರಳಿದರೆ ಅಲ್ಲಿ ಜನಜಾತ್ರೆಯೇ ಸೇರಿರುತ್ತದೆ.
ಆಟಿಕೆ ಸಾಮಾನುಗಳ ಅಂಗಡಿ, ಪ್ಲಾಸ್ಟಿಕ್ ಸರಂಜಾಮು, ಬಳೆ, ರಿಬ್ಬನ್, ಜುಮಕಿ ಅಂಗಡಿ, ಪಾತ್ರೆ, ಪಾದರಕ್ಷೆ ಬಟ್ಟೆ, ಸೀರೆ, ಬೆಲ್ಟ್, ರೆಡಿಮೇಡ್ ಶರ್ಟ್ಸ್, ಪ್ಯಾಂಟ್, ಜೀನ್ಸ್ ಪ್ಯಾಂಟ್, ಎಲೆಕ್ಟ್ರಾನಿಕ್ ವಸ್ತುಗಳು ಹಾಗೂ ಆಲಂಕಾರಿಕ ವಸ್ತುಗಳು ಸೇರಿದಂತೆ ದಿನಬಳಕೆಯ ವಸ್ತುಗಳು ಮಾರಾಟವಾಗುತ್ತವೆ.
ಮಿಠಾಯಿ, ಪೇಡಾ, ಸಿಹಿತಿನಿಸು, ಐಸ್ ಕ್ರೀಂ, ಜ್ಯೂಸ್, ಸಮೋಸ, ಬಟಾಟಾ ವಡಾ, ಪಾವ್ ಬಾಜಿಯ ರುಚಿಯನ್ನೂ ರಂಜಾನ್ ಪೇಟೆಯಲ್ಲಿ ಸವಿಯಬಹುದು.
ಸಂಜೆ ಜನಸಂದಣಿ ಹೆಚ್ಚು
ಬೆಳಗ್ಗೆ ರಂಜಾನ್ ಪೇಟೆ ಮಂದಗತಿಯಲ್ಲಿ ಇದ್ದರೆ, ಸಂಜೆ ಐದಾಗುತ್ತಿದ್ದಂತೆ ಜನಸಂದಣಿ ಹೆಚ್ಚುತ್ತಾ ಹೋಗುತ್ತದೆ. ರಾತ್ರಿ 12ಗಂಟೆವರೆಗೂ ಪೇಟೆ ತೆರೆದಿರುತ್ತದೆ.
ಸಂಜೆ ಆಗುತ್ತಿದ್ದಂತೆ ಕುಟುಂಬದವರೊಂದಿಗೆ, ಸ್ನೇಹಿತರೊಂದಿಗೆ ರಂಜಾನ್ ಪೇಟೆಗೆ ತೆರಳುವುದೆಂದರೆ ಇಲ್ಲಿನ ಜನರಿಗೆ ಎಲ್ಲಿಲ್ಲದ ಖುಷಿ.
ಸರ್ವಧರ್ಮೀಯರ ಕೇಂದ್ರ
ಭಟ್ಕಳ ರಂಜಾನ್ ಪೇಟೆ ಕೇವಲ ವ್ಯಾಪಾರ ವಹಿವಾಟಿಗಷ್ಟೇ ಸೀಮಿತವಾಗಿಲ್ಲ. ಪೇಟೆಗೂ, ಜನರಿಗೂ ಒಂದು ರೀತಿಯ ಭಾವನಾತ್ಮಕ ಸಂಬಂಧವಿದೆ. ರಂಜಾನ್ ಪೇಟೆಯಲ್ಲಿ ಹೆಚ್ಚಿನ ಅಂಗಡಿಗಳು ಮುಸ್ಲಿಂ ಸಮುದಾಯದವರದ್ದು. ಆದರೆ ಪೇಟೆಗೆ ಹೋಗುವ ಜನರು ಮಾತ್ರ ಸರ್ವಧರ್ಮೀಯರು.
ಹಿಂದೂ, ಮುಸ್ಲಿಮ್, ಕ್ರಿಶ್ಚಿಯನ್, ಜೈನ್ ಎನ್ನದೇ ಎಲ್ಲಾ ಸಮುದಾಯದವರು ರಂಜಾನ್ ಪೇಟೆಗೆ ತೆರಳಿ ತಮಗೆ ಬೇಕಾದ ವಸ್ತುಗಳನ್ನು ಖರೀದಿ ಮಾಡುತ್ತಾರೆ.
ಪೇಟೆಯಲ್ಲಿ ಖರೀದಿಸುವ ವಸ್ತು ಮಾತ್ರ ಎಷ್ಟು ದಿನ ಬಾಳಿಕೆ ಬರುತ್ತದೆ ಎಂಬುದು ಮುಖ್ಯವಲ್ಲ. ರಂಜಾನ್ ಪೇಟೆಗೆ ಹೋಗಿದ್ದೆವು ಎಂದು ಹೇಳಿಕೊಳ್ಳುವುದೇ ಒಂದು ರೀತಿಯ ಹೆಮ್ಮೆಯ ವಿಷಯ. ನೆರೆಯ ಬೈಂದೂರು, ಕುಂದಾಪುರ, ಹೊನ್ನಾವರ, ಕುಮಟಾ ತಾಲೂಕುಗಳಿಂದಲೂ ಜನರು ರಂಜಾನ್ ಪೇಟೆಗೆ ಬರುತ್ತಾರೆ.
ಭಟ್ಕಳದ ರಂಜಾನ್ ಪೇಟೆ ಇನ್ನು ಕೇವಲ ಮೂರು ದಿನ ಮಾತ್ರ. ಚಂದ್ರದರ್ಶನದ ಬಳಿಕ ಈದ್ ಆಚರಣೆ ಘೋಷಣೆಯಾದ ತಕ್ಷಣವೇ ರಂಜಾನ್ ಪೇಟೆ ಖಾಲಿಯಾಗಲಿದೆ.
ವಹಿವಾಟು ಕುಸಿತ
ಸ್ಥಳೀಯರೂ ಸೇರಿದಂತೆ ದೂರದೂರುಗಳಿಂದ ಬಂದು ರಂಜಾನ್ ಪೇಟೆಯಲ್ಲಿ ಅಂಗಡಿ ಹಾಕಿಕೊಂಡಿರುವ ವ್ಯಾಪಾರಸ್ಥರಲ್ಲಿ ಮಳೆಯಿಂದಾಗಿ ನಿರಾಸೆಯ ಕಾರ್ಮೋಡ ಕವಿದಿತ್ತು. ಆದರೆ, ಕಳೆದ ಎರಡು ಮೂರು ದಿನಗಳಿಂದ ಮಳೆ ಬಿಡುವು ನೀಡಿದ್ದರಿಂದ ರಂಜಾನ್ ಪೇಟೆಯಲ್ಲಿ ಈಗ ಜನಜಂಗುಳಿ ನೆರೆದಿದೆ.